ಅಣ್ಣ-ತಂಗಿ, ಮುದ್ದಿನ ಮಾವ ಸಿನಿಮಾಗಳ ಖ್ಯಾತಿಯ ನಿರ್ಮಾಪಕ ಕೆ. ಪ್ರಭಾಕರ್ ನಿಧನ
ಬೆಂಗಳೂರು, ಆಗಸ್ಟ್ 28: ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೊಂದು ಆಘಾತಗಳು ನಡೆಯುತ್ತಿದ್ದು, ಕೊರೊನಾ ನಂತರದ ದಿನಗಳಲ್ಲಿ ಸಾವು ನೋವುಗಳು ಹೆಚ್ಚಾಗಿದೆ. ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ವಸ್ತಾರೆ ಸಾವು ಮಾಸುವ ಮುನ್ನವೇ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಕನ್ನಡದ ಜನಪ್ರಿಯ ನಿರ್ದೇಶಕ ಹಾಗೂ ನಿರ್ಮಾಪಕ ಕೆ.ಪ್ರಭಾಕರ್ ವಿಧಿವಶರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಕೆ.ಪ್ರಭಾಕರ್ ಅವರು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ಆಗಸ್ಟ್ 27) ಮಂಗಳವಾರ ಮಧ್ಯಾಹ್ನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಎನ್ಆರ್ ಕಾಲೋನಿಯಲ್ಲಿ ವಾಸವಿದ್ದ ಕೆ.ಪ್ರಭಾಕರ್ ಅವರಿಗೆ 64 ವರ್ಷ ವಯಸ್ಸಾಗಿತ್ತು. ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ಕುಮಾರ್, ಉಪೇಂದ್ರ, ಶಶಿಕುಮಾರ್ ಅವರ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದ ಪ್ರಭಾಕರ್ ಅವರು ಕನ್ನಡಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನೇ ನೀಡಿದ್ದರು.
ಶಿವ ರಾಜ್ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ ನಟನೆಯ ಜನಮೆಚ್ಚಿದ ಜನಪ್ರಿಯ ಸಿನಿಮಾ ಅಣ್ಣ-ತಂಗಿ ಚಿತ್ರಕ್ಕೆ ಇವರೇ ನಿರ್ಮಾಪಕರಾಗಿದ್ದರು. ಅವಳೇ ನನ್ನ ಹೆಂಡ್ತಿ, ಮುದ್ದಿನ ಮಾವ, ತುಂಬಿದ ಮನೆ, ಸೋಲಿಲ್ಲದ ಸರದಾರ, ಎಲ್ಲರಂಥಲ್ಲ ನನ್ನ ಗಂಡ, ಲವ-ಕುಶ ಸೇರಿದಂತೆ ಹತ್ತಾರು ಚಿತ್ರಗಳನ್ನು ಕೆ.ಪ್ರಭಾಕರ್ ನಿರ್ಮಾಣ ಮಾಡಿದ್ದರು.
ಒಂದು ಕಾಲದಲ್ಲಿ ಇವರು ನಿರ್ಮಾಣ ಮಾಡಿರುವ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಎನ್ನುವ ಮಾತ್ತಿತ್ತು. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವ ಕೆ.ಪ್ರಭಾಕರ್ ಅವರ ನಿಧನಕ್ಕೆ ಸ್ಯಾಂಡಲ್ವುಡ್ ಅನೇಕರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications