ಬಿಗ್ಬಾಸ್ ಮನೇಲಿ ಕುಸ್ತಿ, ಹೊರಗಡೆ ದೋಸ್ತಿ; ಇದೆಲ್ಲ ಬೇಕಿತ್ತಾ ಎಂದ ಜನ
ಕನ್ನಡ ಬಿಗ್ಬಾಸ್ನ ಈ ಸೀಸನ್ನಲ್ಲಿ ಇಬ್ಬರು ಸ್ಪರ್ಧಿಗಳು ಗಲಾಟೆ ಮಾಡಿಕೊಂಡ ಕಾರಣ ಅವರನ್ನು ಮನೆಯಿಂದ ಹೊರಕಳಿಸಿ, ಪ್ರೇಕ್ಷಕರಿಗೆ ದೊಡ್ಡ ಶಾಕ್ ನೀಡಲಾಗಿತ್ತು. ಜಗದೀಶ್ ಹಾಗೂ ರಂಜಿತ್ ಅವರು ಇನ್ನೇನು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದರು. ಪರಿಸ್ಥಿತಿ ಮಿತಿ ಮೀರುವ ಕಾರಣ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿತ್ತು.
ಆದರೆ ಬಿಗ್ಬಾಸ್ನಲ್ಲಿ ಬದ್ಧವೈರಿಗಳಂತೆ ಕಾಣಿಸಿಕೊಂಡಿದ್ದ ಜಗದೀಶ್ ಹಾಗೂ ರಂಜಿತ್ ಇದೀಗ ದೋಸ್ತಿಗಳಂತೆ ಕಾಣಿಸಿಕೊಂಡು ಎಲ್ಲರಿಗೂ ಮತ್ತೆ ಶಾಕ್ ನೀಡಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನಕ್ಕೆ ತೆರಳಿದ್ದ ಜಗದೀಶ್ ಹಾಗೂ ರಂಜಿತ್ ನಗುನಗುತ್ತಾ ದೋಸ್ತಿಗಳಂತೆ ಕಾಣಿಸಿಕೊಂಡಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಕೆಲವರು, ಇದೆಲ್ಲ ಬೇಕಿತ್ತಾ? ಇದೇ ಬಾಂಧವ್ಯ ಮೊದಲೇ ಇದ್ದಿದ್ದರೆ ನೀವು ಬಿಗ್ಬಾಸ್ ಮನೆಯಲ್ಲೇ ಇರುತ್ತಿದ್ರಲ್ಲ? ಎಂದು ಪ್ರಶ್ನಿಸಿದ್ದಾರೆ. ಈ ನಾಟಕ ಆಡೋದಕ್ಕೆ ಬಿಗ್ಬಾಸ್ ಮನೆಯಿಂದ ಹೊರಗೆ ಬರೋದೇನಿತ್ತು ಎಂದು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಬಿಗ್ಬಾಸ್ಗೆ ಜಗದೀಶ್ ಪ್ರಶ್ನೆ: ನಾನು ಬಿಗ್ಬಾಸ್ ಮನೇಲಿ ಪ್ರಾಮಾಣಿಕವಾಗಿ ಆಟ ಆಡಿದ್ದೇನೆ. ಒಂದು ಪದ ಬಳಕೆ ಮಾಡಿದೆ ಎಂದು ಮನೆಯಿಂದ ಹೊರಗೆ ಕಳಿಸಿದ್ರು. ಅದೇ ಕೆಟ್ಟ ಪದಗಳನ್ನು ಚೈತ್ರಾ ಕುಂದಾಪುರ, ತುಕಾಲಿ ಸಂತೋಷ್ ಪತ್ನಿ, ಮಂಜಣ್ಣ ಕೂಡ ಆಡಿದ್ದಾರೆ. ಆದರೆ ಅವರೆಲ್ಲೂ ಒಳಗೇ ಇದ್ದಾರೆ. ನನ್ನ ಮಾತ್ರ ಯಾಕೆ ಹೊರಗೆ ಕಳಿಸಿದ್ರು ಎನ್ನುವುದೇ ನನ್ನ ಪ್ರಶ್ನೆ ಎಂದು ಜಗದೀಶ್ ಕೇಳಿದ್ದಾರೆ.
ಒಂದಂತೂ ಹೇಳಲು ಇಷ್ಟಪಡುತ್ತೇನೆ. ಬಿಗ್ಬಾಸ್ ಒಂದು ಕನ್ನಡಿ ಇದ್ದ ಹಾಗೆ. ನಮ್ಮ ಭಾವನೆಗಳನ್ನು, ನಮ್ಮ ನಿಜವಾದ ಮುಖವನ್ನು, ಮುಖವಾಡ ಹಾಕಿಕೊಂಡಿದ್ದರೆ ಮುಖವಾಡವನ್ನು ಕಳಚಿ ನಮ್ಮನ್ನು ಜನರ ಮುಂದೆ ತೋರಿಸುವ ದೊಡ್ಡ ಕನ್ನಡಿಯೇ ನಮ್ಮ ಬಿಗ್ಬಾಸ್ ಎಂದು ಹಾಡಿಹೊಗಳಿದ್ದಾರೆ.

ಬಿಗ್ಬಾಸ್ಗೆ ಹೋಗಿಬಂದ ಖುಷಿ ನನಗಂತೂ ಇದೆ. ಅಲ್ಲಿ ನಾನು ಪ್ರಾಮಾಣಿಕವಾಗಿಯೇ ಇದ್ದೆ. ನನ್ನಿಂದ ಸಾಧ್ಯವಾಗಿದ್ದನ್ನು ನಾನು ಮಾಡಿದ್ದೇನೆ ಎಂದಿದ್ದಾರೆ. ಇನ್ನು ಮತ್ತೆ ಬಿಗ್ಬಾಸ್ಗೆ ಹೋಗ್ತೀರಾ? ಅನ್ನೋ ಪ್ರಶ್ನೆಗೆ ನನಗೆ ಅದರ ಮೇಲೆ ನಂಬಿಕೆ ಇಲ್ಲ. ಬಿಗ್ಬಾಸ್ ಒಂದು ಮುಗಿದು ಹೋದ ಅಧ್ಯಾಯ ಎಂದೇ ಹೇಳಲಾಗಿದೆ. ಬಿಗ್ಬಾಸ್ ನನ್ನನ್ನು ಸಾಕಷ್ಟು ಬದಲಾಯಿಸಿದೆ ಎಂದು ಜಗದೀಶ್ ಹೇಳಿದ್ದಾರೆ.
ಬಿಗ್ಬಾಸ್ನಲ್ಲಿ ನನ್ನನ್ನು ದೊಡ್ಡ ಸ್ಟಾರ್ ಮಾಡಿದ್ದಾರೆ. ಬಿಗ್ಬಾಸ್ ಮನೇಲಿ ಎಪ್ಪತ್ತಕ್ಕೂ ಹೆಚ್ಚು ಕ್ಯಾಮರಾಗಳಿವೆ. ನಮಗಾಗಿ ಸಾವಿರಾರು ಜನ ಕೆಲಸ ಮಾಡ್ತಾರೆ. ನನಗೆ ಬಿಗ್ಬಾಸ್ನಿಂದ ಸಿಕ್ಕಿರೋದೆ ಜಾಸ್ತಿ, ಕಳೆದುಕೊಂಡಿದ್ದು ಕಡಿಮೆ ಅಷ್ಟೇ. ಒಟ್ಟಾರೆ ನಿಮ್ಮನ್ನೆಲ್ಲ ರಂಜಿಸಿದ್ದೇನೆ ಎಂದಿದ್ದಾರೆ.
ಇನ್ನು ಬಿಗ್ಬಾಸ್ ಶೋ ಸ್ಕ್ರಿಪ್ಟೆಡ್ ಅಂತಾರೆ. ನೂರಕ್ಕೆ ನೂರರಷ್ಟು ಹೇಳ್ತೀನಿ ಅದು ಸ್ಕ್ರಿಪ್ಟೆಡ್ ಅಲ್ಲ. ಅಲ್ಲಿ ನಾವು ಯಾವುದೇ ನಾಟಕ ಆಡಬೇಕಿಲ್ಲ. ಅಲ್ಲಿ ಯಾವ ಪವರ್ ಕೂಡ ನಡೆಯಲ್ಲ. ನನ್ನ ಪ್ರಕಾರ ಅಲ್ಲಿ ನ್ಯಾಯಕ್ಕೆ, ಧರ್ಮಕ್ಕೆ ಬೆಲೆ ಇದೆ. ಮೊದಲು ನನಗೂ ಬಿಗ್ಬಾಸ್ ಮೇಲೆ ಡೌಟ್ ಇತ್ತು. ಆದರೆ ಅಲ್ಲಿ ಎಲ್ಲವೂ ಪಾರದರ್ಶಕವಾಗಿದೆ ಎಂದು ಬಣ್ಣಿಸಿದ್ದಾರೆ.












Click it and Unblock the Notifications