Bigg Boss: ಮದುವೆ ಬಗ್ಗೆ ಚೈತ್ರಾ ಕುಂದಾಪುರ ಅಪ್ಡೇಟ್, ಹುಡುಗ ಯಾರು?
ಕನ್ನಡ ಬಿಗ್ಬಾಸ್ ಸೀಸನ್-11 ರಿಯಾಲಿಟಿ ಶೋನ ಫೈರ್ ಬ್ರ್ಯಾಂಡ್ ಎಂದೇ ಮನೆಮಾತಾಗಿದ್ದ ಚೈತ್ರಾ ಕುಂದಾಪುರ ಅವರು ಸದ್ಯ ಆಟ ಮುಗಿಸಿ ಹೊರಬಂದಿದ್ದಾರೆ. ಭಾನುವಾರ ನಡೆದ ಎಲಿಮಿನೇಷನ್ನಲ್ಲಿ ಚೈತ್ರಾ ಅವರನ್ನು ಹೊರಗೆ ಕಳಿಸಲಾಗಿದೆ. ಹಲವು ತಿಂಗಳವರೆಗೆ ಬಿಗ್ ಬಾಸ್ ಪ್ರೇಕ್ಷಕರಿಗೆ ಫುಲ್ ಮನರಂಜನೆ ನೀಡಿದ್ದ ಚೈತ್ರಾ ಅವರು ಹೊರ ಬಂದ ಕೂಡಲೇ ತಮ್ಮ ಮದುವೆ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಇತ್ತೀಚೆಗೆ ಬಿಗ್ಬಾಸ್ ಮನೆಗೆ ಚೈತ್ರಾ ಅವರ ಕುಟುಂಬಸ್ಥರು ಎಂಟ್ರಿ ಕೊಟ್ಟಾಗಲೂ ಮದುವೆ ವಿಚಾರದ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಆದರೆ ಚೈತ್ರಾ ಅವರು ತಾವು ಮದುವೆಯಾಗುವ ಹುಡುಗನ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಇನ್ನು ಈ ಫೈರ್ ಬ್ರ್ಯಾಂಡ್ ಮದುವೆಯಾಗಲಿರೋ ಹುಡುಗ ಯಾರಪ್ಪಾ? ಎಂದು ಹಲವರು ತಲೆಕೆಡಿಸಿಕೊಂಡಿದ್ದರು. ಈ ಬಗ್ಗೆ ಚೈತ್ರಾ ಸಂದರ್ಶನವೊಂದರಲ್ಲಿ ಮತ್ತೆ ಮಾತನಾಡಿದ್ದಾರೆ.

ನನ್ನ ಮದುವೆ ಯಾವಾಗಲೋ ನಡೆಯಬೇಕಿತ್ತು. ಎಲ್ಲದಕ್ಕೂ ಸಮಯ ಕೂಡಿ ಬರಬೇಕು ಎನ್ನುತ್ತಾರೆ. ಮದುವೆ ಯಾವಾಗ ಎಂದು ನಮ್ಮ ಮನೆಯವರು ನಿರ್ಧಾರ ಮಾಡುತ್ತಾರೆ. ಈ ವಿಚಾರದಲ್ಲಿ ಮನೆಯವರ ನಡುವೆ ಮಾತುಕತೆಗಳು ನಡೆಯಬೇಕಾಗಿದೆ. ಹಾಗಾಗಿ ಎಲ್ಲರೂ ಒಂದೊಳ್ಳೆ ಮುಹೂರ್ತಕ್ಕೆ ಕಾಯುತ್ತಿದ್ದೇವೆ. ನಮ್ಮ ಸಂಪ್ರದಾಯಗಳಲ್ಲಿ ಏನೆಲ್ಲ ನಡೆಯಬೇಕೋ ಮೊದಲು ಅದೆಲ್ಲವೂ ನಡೆದ ಮೇಲೆ ಮದುವೆ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
ಈ ಹಿಂದೆಯೂ ಬಿಗ್ಬಾಸ್ ಮನೆಯಲ್ಲಿ ಚೈತ್ರಾ ಅವರ ಮದುವೆ ಬಗ್ಗೆ ಚರ್ಚೆಯಾಗಿತ್ತು. ಬಿಗ್ಬಾಸ್ ಮನೆಗೆ ಬಂದಿದ್ದ ಚೈತ್ರಾ ತಾಯಿ, ಚೈತ್ರಾಗೆ ಇನ್ನೂ ಮದುವೆ ಮಾಡಿಲ್ಲ. ಮೊದಲಿನಿಂದಲೂ ಅವಳಿಗೆ ಗಂಡು ಹುಡುಕುತ್ತಾ ಇದ್ದೇವೆ. ಈಗ ಚೈತ್ರಾಗೆ ಮದುವೆ ಮಾಡಬೇಕು. ಇನ್ನು ಚೈತ್ರಾ ಬಿಗ್ಬಾಸ್ಗೆ ಹೋಗುವುದು ನಮಗೆ ಗೊತ್ತೇ ಇರಲಿಲ್ಲ. ಈ ವಿಚಾರ ನಮಗೆ ಕೊನೆಯ ಕ್ಷಣದಲ್ಲಿ ಗೊತ್ತಾಯಿತು. ಹಾಗಾಗಿ ಇಲ್ಲಿಂದ ಬಂದ ಮೇಲೆ ಚೈತ್ರಾ ಮದುವೆ ಮಾಡಬೇಕು ಎಂದು ಹೇಳಿದ್ದರು. ಆದರೆ ಚೈತ್ರಾ ಅವರ ಹುಡುಗ ಯಾರು ಎಂಬುದು ಅಲ್ಲಿಯೂ ರಿವೀಲ್ ಆಗಿರಲಿಲ್ಲ.

ಇನ್ನು ಬಿಗ್ಬಾಸ್ ಮನೆಯಲ್ಲಿನ ಜರ್ನಿ ಬಗ್ಗೆಯೂ ಚೈತ್ರಾ ಅವರು ಮಾತನಾಡಿದ್ದು, ಮನೆಯಲ್ಲಿದ್ದ ಇತರರು ಲಿಪ್ಸ್ಟಿಕ್ ಅನ್ನ ಕೈಯಲ್ಲೇ ಹಿಡಿದುಕೊಂಡು ಓಡಾಡುತ್ತಿದ್ರು. ಆದ್ರೆ ನಾನು ಹಾಗಲ್ಲ. ನಾನು ಪದೇ ಪದೇ ಕನ್ನಡಿ ನೋಡ್ಕೊಂಡು ಮೇಕಪ್ ಮಾಡೋಳಲ್ಲ. ಆದರೆ ಅಲ್ಲಿದ್ದ ಕೆಲವರು ಲಿಪ್ಸ್ಟಿಕ್ ಅನ್ನ ಜೇಬಲ್ಲಿ ಇಟ್ಕೊಂಡು ಇರ್ತಿದ್ರು. ನಾನು ಆ ರೀತಿ ಲಿಪ್ಸ್ಟಿಕ್ ಜೊತೆಯಲ್ಲೇ ತಗೊಂಡು ಹೋಗುತ್ತಿರಲಿಲ್ಲ. ಬೇರೆಯವರಂತೆ ಗಂಟೆಗಟ್ಟಲೆ ಮೇಕಪ್ ಮಾಡುತ್ತಿರಲಿಲ್ಲ ಎಂದು ಚೈತ್ರಾ ಹೇಳಿದ್ದಾರೆ.
ನಾನು ಹೊಸ ಅನುಭವದೊಂದಿಗೆ ಹೊರಬಂದಿದ್ದೇನೆ. ಬಿಗ್ಬಾಸ್ ನನಗೆ ಒಳ್ಳೆಯ ಹಾಗೂ ವಿಭಿನ್ನ ಅನುಭವ ನೀಡಿದೆ. ಅಲ್ಲಿ ನಾನು ಅನಿರೀಕ್ಷಿತವಾಗಿ ನರಕಕ್ಕೆ ಹೋದೆ. ಆಗಲೇ ನನ್ನ ಬಿಗ್ಬಾಸ್ ಪ್ರಯಾಣ ಶುರುವಾಗಿ ಅಲ್ಲಿ ಎಲ್ಲವನ್ನೂ ಎದುರಿಸಿದೆ. ನನಗೆ ಬಿಗ್ಬಾಸ್ ಮನೇಲಿ ಅನ್ನದ ಬೆಲೆ, ಒಗ್ಗಟ್ಟಿನ ಬೆಲೆ ನಿಜವಾಗಿ ತಿಳಿಯಿತು. ಅಲ್ಲದೆ ನಾನು ಬದುಕಿನಲ್ಲಿ ಉಳಿಯುವುದು ಹೇಗೆ ಎಂಬ ಪಾಠವನ್ನೂ ಕಲಿತೆ. ಮುಖ್ಯವಾಗಿ ಜೀವನದಲ್ಲಿ ಏರುಪೇರಾದಾಗ ನಿಭಾಯಿಸುವುದು ಹೇಗೆ ಎಂಬುದನ್ನೂ ಚೆನ್ನಾಗಿ ಕಲಿತಿದ್ದೇನೆ ಎಂದು ಚೈತ್ರಾ ಹೇಳಿದ್ದಾರೆ.












Click it and Unblock the Notifications