'ಅವರ ಮನೆ ಊಟಕ್ಕೆ ಹೋಗಿದ್ವಿ':ಸುನೀಲ್-ಮಾಲಾಶ್ರೀ ಮದುವೆ ಬಗ್ಗೆ ನಟನ ಸಹೋದರ ಹೇಳಿದ್ದೇನು?
ನಟ ಸುನೀಲ್ ಹಾಗೂ ನಟಿ ಮಾಲಾಶ್ರೀ ಒಂದು ಕಾಲದಲ್ಲಿ ಜನ ಮೆಚ್ಚಿದ ಜೋಡಿ. ಕನಸಿನ ರಾಣಿ ಮಾಲಾಶ್ರೀ ಯಾರ ಜೊತೆಗೆ ನಟಿಸಿದರೂ ಆ ಸಿನಿಮಾ ಸೂಪರ್ ಹಿಟ್ ಎನ್ನುವ ನಂಬಿಕೆ ಇತ್ತು. ಈ ನಡುವೆ ಸುನೀಲ್ ಹಾಗೂ ಮಾಲಾಶ್ರೀ ಜೋಡಿ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿತ್ತು. ಇವರಿಬ್ಬರ ಸಿನಿಮಾ ಅಂದರೆ ಜನ ಮುಗಿಬಿದ್ದು ನೋಡುತ್ತಿದ್ದರು. ಈಗಲೂ ಇವರಿಬ್ಬರ ನಟನೆಯ ಸಿನಿಮಾಗಳು ಅಥವಾ ಸಿನಿಮಾದ ಹಾಡುಗಳು ಬಂದರೆ ಅಷ್ಟೇ ಪ್ರೀತಿಯಿಂದ ಜನ ನೋಡುತ್ತಾರೆ.
ಯಶಸ್ವಿ ನಾಯಕನಾಗಿ ಸಾಗುತ್ತಿದ್ದ ನಟ ಸುನೀಲ್ ಅವರ ಅಕಾಲಿಕ ಮರಣ ಕನ್ನಡ ಚಿತ್ರರಂಗಕ್ಕೆ ಭರಸಿಡಿಲು ಬಡಿದಂತಾಗಿತ್ತು. ಈ ನಡುವೆ ನಟಿ ಮಾಲಾಶ್ರೀ ಹಾಗೂ ಸುನೀಲ್ ಮದುವೆಯಾಗಲು ನಿರ್ಧರಿಸಿದ್ದರು ಎನ್ನುವ ಸುದ್ದಿ ಕೂಡ ಎಲ್ಲೆಡೆ ಹರಿದಾಡುತ್ತಿತ್ತು. ಈ ಗಾಳಿ ಸುದ್ದಿಯ ಬಗ್ಗೆ ಈವರೆಗೂ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ನಟ ಸುನೀಲ್ ಸಹೋದರ ಮಾಲಾಶ್ರೀ ಹಾಗೂ ಸುನೀಲ್ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

ಹೆಗ್ಗದ್ದೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ನಟ ಸುನೀಲ್ ಸಹೋದರ, ಸುಧೀರ್ ಕುಮಾರ್ ಶೆಟ್ಟಿ, 'ಅವನು ಇಷ್ಟಪಟ್ಟು ಸಿನಿಮಾ ರಂಗಕ್ಕೆ ಹೋದ. ಆದರೆ ನಮಗೆ ಮನಸ್ಸಿನೊಳಗೆ ಒಂದು ಭಯ ಇತ್ತು. ಇವನು ಸಿನಿಮಾ ಮಾಡುತ್ತಾನೋ ಇಲ್ಲವೋ, ಮುಂದೆ ಭವಿಷ್ಯ ಹೇಗಿರುತ್ತದೆ ಎಂದು ನಮ್ಮ ಅಮ್ಮನಿಗೆ, ಅಕ್ಕನಿಗೆ, ನಮಗೆ ಎಲ್ಲರಿಗೂ ಭಯ ಇದ್ದೇ ಇತ್ತು. ಮೊದಲ ಸಿನಿಮಾ ಮಾಡಿದ ಮೇಲೆ ನಮಗೆ ಒಂದು ಧೈರ್ಯ ಬಂತು' ಎಂದರು.
'ಮೊದಲ ಸಿನಿಮಾದಲ್ಲಿ ಶೃತಿ ಅವನಿಗೆ ನಾಯಕಿಯಾಗಿದ್ದರು. ಎರಡನೇ ಸಿನಿಮಾ ತವರು ಮನೆ ಚಿತ್ರದಲ್ಲಿ ಮಾಲಾಶ್ರೀ ಅವರ ಜೊತೆ ನಟನೆ ಮಾಡಿದ. ಅದರಲ್ಲಿ ಶ್ರೀಧರ್ ಹೀರೋ ಆಗಿದ್ದರು. ಇವನು ಮಾಲಾಶ್ರೀ ಅವರ ತಮ್ಮನ ಪಾತ್ರ ಮಾಡಿದ. ಈ ಸಿನಿಮಾದಲ್ಲಿ ಮಾಲಶ್ರೀ ಅವರ ಪರಿಚಯವಾಗಿ ಅವರ ಜೊತೆ ತುಂಬಾ ಸಿನಿಮಾಗಳನ್ನು ಮಾಡಿದ. ಇಬ್ಬರು ಜೊತೆಯಾಗಿ ನಟಿಸಿ ಬೆಳ್ಳಿ ಕಾಲುಂಗರ ಸಿನಿಮಾ ಸಖತ್ ಹಿಟ್ ಆಯ್ತು. ಆ ಸಿನಿಮಾದ ಬಳಿಕ ಸಿನಿಮಾ ರಂಗದಲ್ಲಿ ಎಲ್ಲರ ಪರಿಚಯ ಆಯ್ತು.

ಮಾಲಾಶ್ರೀ ಅವರ ಪರಿಚಯದಿಂದ ಅವನಿಗೆ ಒಂದು ಶಕ್ತಿ ಸಿಕ್ಕಂತಾಯಿತು. ಅದರ ಮೇಲೆ ಅವನು ಹಿಂದೆ ನೋಡಲೇ ಇಲ್ಲ. ಎರಡು ಮೂರು ವರ್ಷದಲ್ಲಿ ಇಪ್ಪತ್ತು-ಮೂವತ್ತು ಸಿನಿಮಾ ಮಾಡಿದ. ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ. ಅವನು ತೆಲುಗಿನಲ್ಲಿ ಪರಿಚಯ ಆದ ಮೇಲೆ ತುಂಬಾ ಒಳ್ಳೆಯ ಅವಕಾಶಗಳು ಬಂದಿದ್ದವು. ಆದರೆ ಇವನು ಒಪ್ಪಲ್ಲಿಲ್ಲ. ನಾನು ಮಾಡಿದರೆ ಕನ್ನಡದಲ್ಲೇ ಮಾಡಬೇಕು ಎಂದು ನಿರ್ಧರಿಸಿ ಬೆಂಗಳೂರಿನಲ್ಲೇ ವಾಸವಿದ್ದು ಸಿನಿಮಾಗಳನ್ನು ಮಾಡುತ್ತಿದ್ದ' ಎಂದು ಹೇಳಿದರು.
ಇನ್ನು ನಟಿ ಮಾಲಶ್ರೀ ಜೊತೆ ಸುನಿಲ್ ಅವರ ಮದುವೆ ಮಾತುಕತೆಯಾಗಿತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಇಬ್ಬರು ಜೊತೆಯಾಗಿ ಎಂಟು-ಒಂಬತ್ತು ಸಿನಿಮಾಗಳನ್ನು ಮಾಡಿದ್ದಾರೆ. ಅವನು ಹೆಚ್ಚಿನ ಸಿನಿಮಾ ಜೊತೆಯಾಗಿ ಮಾಡಿದ್ದು, ಒಂದು ಶೃತಿ ಜೊತೆ, ಒಂದು ಮಾಲಾಶ್ರೀ ಜೊತೆ. ಸಿನಿಮಾದಲ್ಲಿ ಜೊತೆಯಾಗಿ ಮಾಡಿದ ಮೇಲೆ ಜೊತೆಯಾಗಿ ತಿರುಗುವುದು ಸಾಮಾನ್ಯ. ಮನೆಗೆಲ್ಲಾ ಬರುತ್ತಿದ್ದರು. ನನ್ನನ್ನು ಕೂಡ ಬೆಂಗಳೂರಿಗೆ ಬರುವಂತೆ ಒತ್ತಾಯಿಸುತ್ತಾ. ಅವನ ಒತ್ತಾಯದ ಮೇಲೆ ಬೆಂಗಳೂರಿಗೆ ಬರಲು ಒಪ್ಪಿಕೊಂಡೆ, ನಾನು ಬರುವ ಹೊತ್ತಿಗೆ ಅವನು ಖ್ಯಾತ ನಟನಾಗಿದ್ದ'.

'ನಾನು ಕೂಡ ಅವನ ಜೊತೆಗೆ ಸಿನಿಮಾ ಶೂಟಿಂಗ್ಗೆಲ್ಲಾ ಹೋಗುತ್ತಿದ್ದೆ. ನನಗೆ ಗೊತ್ತಿರುವ ಮಟ್ಟಿಗೆ ಅವರಿಬ್ಬರು ಮದುವೆಯಾಗಬೇಕು ಎಂದುಕೊಂಡಿರಲಿಲ್ಲ. ಜೊತೆಯಲ್ಲಿ ನಟಿಸುತ್ತಿದ್ದರು ಅಷ್ಟೇ. ಅವಳು ಕೂಡ ಬೇರೆ ನಟರ ರೀತಿ ನಮ್ಮ ಮನೆಗೆಲ್ಲಾ ಬರುತ್ತಿದ್ದಳು. ನಾವು ಕೂಡ ಅವರ ಮನೆಗೆ ಊಟಕೆಲ್ಲಾ ಹೋಗಿದ್ದೇವು. ಮಾಲಾಶ್ರೀ ನಮ್ಮ ಮನೆಯ ಸದಸ್ಯೆಯ ರೀತಿಯೇ ಇದ್ದಳು. ಆದರೆ ಅವರಿಬ್ಬರ ನಡುವೆ ಮದುವೆಯಾಗುವ ಉದ್ದೇಶ ಇರಲಿಲ್ಲ. ಅವನು ಮರಣ ಆಗುವ ಸ್ವಲ್ಪ ಸಮಯದ ಹಿಂದೆ ಮದುವೆಯಾಗಬೇಕು ಅಂತಾ ನಿರ್ಧರಿಸಿದ್ದ. ಆದರೆ ಕೂಡಲೇ ಅಲ್ಲ ಸಿನಿಮಾಗಳು ಇನ್ನೂ ಆಗಬೇಕಿದೆ ಅಂತಾ ಹೇಳಿದ್ದ' ಎಂದರು.
'ಸುನಿಲ್ಗೆ ತೆಲುಗಿನಿಂದ ಒಳ್ಳೆಯ ಅವಕಾಶಗಳು ಬರುತ್ತಿದ್ದವು. ಅಲ್ಲಿನ ದೊಡ್ಡ ದೊಡ್ಡ ನಟರು ಮಾಲಾಶ್ರೀಯಿಂದಲೇ ಅವನಿಗೆ ಪರಿಚಯವಾಗಿದ್ದು. ಎಲ್ಲರೂ ಅವನನ್ನು ಕರೆಯುತ್ತಿದ್ದರು. ಅಲ್ಲಿ ಒಳ್ಳೆಯ ಅವಕಾಶ ಸಂಭಾವನೆ ಇದೆ ಎಂದು ಕರೆಯುತ್ತಿದ್ದರು. ಆದರೆ ಇವನು ಅಲ್ಲಿಗೆ ಹೋಗುವ ಮನಸ್ಸು ಮಾಡಲಿಲ್ಲ. ನಾವು ಕೂಡ ಅವನಿಗೆ ಹೇಳಿದ್ದೇವು. ಕನ್ನಡದಲ್ಲಿ ಮಾಡು ಜೊತೆಗೆ ಅಲ್ಲಿ ಸಿಕ್ಕುವ ಅವಕಾಶವನ್ನು ಬಳಸಿಕೋ ಅಂತಾ ಹೇಳುತ್ತಿದ್ದೇವು. ಆದರೆ ಅವನು ಮಾಡಿದರೆ ಕನ್ನಡದಲ್ಲೇ ಮಾಡುವುದು ಅಂತಾ ನಿರ್ಧರಿಸಿದ್ದ. ಹೀಗಾಗಿ ಅವನು ಕನ್ನಡದಲ್ಲಿಯೇ ಒಂದು ಮೂರು-ನಾಲ್ಕು ವರ್ಷ ಎಲ್ಲಾ ಶ್ರಮ ಹಾಕಿ ಸಿನಿಮಾಗಳನ್ನು ಮಾಡಿದ' ಎಂದರು.
'ಸುನೀಲ್ನನ್ನು ಶಂಕರ್ನಾಗ್ ಅವರಿಗೆ ಹೋಲಿಕೆ ಮಾಡಲು ಆಗುವುದಿಲ್ಲ. ಆದರೆ ಸುನೀಲ್ ಕೂಡ ತುಂಬಾ ಚುರುಕಾಗಿದ್ದ. ಬೆಂಗಳೂರಿನಲ್ಲೇ ಇದ್ದರೂ ಕೂಡ ತಿಂಗಳಿಗೆ ಒಂದು ಸಾರಿಗೆ ಊರಿಗೆ ಬರುತ್ತಿದ್ದ. ಬರುವಾಗ ಮಾಲಾಶ್ರೀ ಅವರ ಜೊತೆಗೆ ಬರುತ್ತಿದ್ದ. ಇಲ್ಲಿ ದೇವಾಸ್ಥಾನಗಳಿಗೆ ಹೋಗುತ್ತಿದ್ದರು. ಊರಿಗೆ ಬಂದರೆ ಮೂರರಿಂದ ನಾಲ್ಕು ದಿನ ಇರುತ್ತಿದ್ದ. ಇದನ್ನೇ ರೂಢಿ ಮಾಡಿಕೊಂಡಿದ್ದ' ಎಂದು ಹೇಳಿದರು.
ಇನ್ನು ತಮ್ಮ ನಟಿಸಿರುವ ಸಿನಿಮಾಗಳ ಬಗ್ಗೆ ಮಾತನಾಡಿದ ಸುಧೀರ್ ಶೆಟ್ಟಿ ಅವರು, 'ಅವನ ಮೊದಲ ಸಿನಿಮಾ ನನಗೆ ತುಂಬಾ ಇಷ್ಟ. ಅದಾದ ಮೇಲೆ ತುಂಬಾ ಇಷ್ಟವಾಗಿದ್ದು, ಬೆಳ್ಳಿ ಕಾಲುಂಗುರ ಸಿನಿಮಾ. ಅವನ ಬೇರೆ ಸಿನಿಮಾಗಳು ಇಷ್ಟವಾಗಿಲ್ಲ ಅಂತಲ್ಲಾ, ಹೋಲಿಕೆ ಮಾಡಿದರೆ ಈ ಎರಡು ಸಿನಿಮಾಗಳು ತುಂಬಾ ಇಷ್ಟ. ಶೃತಿ ಜೊತೆ ಎರಡು ಸಿನಿಮಾ ಮಾಡಿದ್ದ ಅವುಗಳು ಕೂಡ ನನಗೆ ಇಷ್ಟ ಎಂದ ಅವರು, ತಮ್ಮ ಸುನೀಲ್ ಸಿನಿಮಾ ಚಿತ್ರೀಕರಣಕ್ಕೆ ತಮ್ಮನ್ನು ಕರೆಯುತ್ತಿದ್ದ ನೆನಪುಗಳನ್ನು ಕೂಡ ಸುಧೀರ್ ಕುಮಾರ್ ಶೆಟ್ಟಿ ಹಂಚಿಕೊಂಡರು.












Click it and Unblock the Notifications