Actor Jaggesh: ಟೀಕಿಸುವವರನ್ನು ನಾಯಿಗಳು ಎಂದ ನಟ ಜಗ್ಗೇಶ್
ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ನೀಡಿದ್ದ ಹೇಳಿಕೆಗೆ ಭಾರಿ ಟೀಕೆ ವ್ಯಕ್ತವಾಗಿತ್ತು. ಗುರುಪ್ರಸಾದ್ ಲೆಫ್ಟಿಸ್ಟ್, ನನ್ನ ಹೆಸರು ಹಾಳು ಮಾಡಲೆಂದೇ ರಂಗನಾಯಕ ಸಿನಿಮಾ ಮಾಡಿದ್ದ, ನನ್ನ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದುಬಿಟ್ಟ ಎಂದೆಲ್ಲಾ ಮಾತನಾಡಿದ್ದರು ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಆದರೆ ತಮ್ಮ ವಿರುದ್ಧದ ಟೀಕೆಗಳಿಗೆ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದು ಟೀಕೆ ಮಾಡುವವರನ್ನು ನಾಯಿಗಳಿಗೆ ಹೋಲಿಕೆ ಮಾಡಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಆನೆ ನಡೆಯುವಾದ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತದೆ, ಅದಕ್ಕೆ ವೈಜ್ಞಾನಿಕ ಕಾರಣ 'ಭಯ'. ಎರಡನೆಯದು ನಾವು ನೆಲದಷ್ಟೇ ಇದ್ದೇವೆ ಆನೆ ಮಾತ್ರ ಮುಗಿಲೆತ್ತರ ಬೆಳೆದಿದೆ ಎನ್ನುವ ಸಂಕಟ. ತಾತ್ಪರ್ಯ; ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು. ಶ್ವಾನವು ಅವುಗಳ ಕೆಲಸ ಮಾಡದೆ ಬೇರೆ ವಿಧಿಯಿಲ್ಲಾ ಬೊಗಳುತ್ತದೆ. ಆನೆಯಾಗಲು ಯೋಗ ಬೇಕು' ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವೊಮ್ಮೆ ಶ್ವಾನ ತನ್ನನ್ನು ಆನೆಯೆಂದು ಭಾವಿಸುರುತ್ತದೆ ಎಂದು ಎಕ್ಸ್ ಬಳಕೆದಾರರೊಬ್ಬರು ತಿರುಗೇಟು ಕೊಟ್ಟಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿದ್ದು, ಆನೆಯಾದರೂ, ನಾಯಿಯಾದರೂ, ಮನುಷ್ಯನಾದರೂ ಯಾರೂ ಶಾಶ್ವತವಲ್ಲ ಎಂದು ತಿಳಿದರೆ ಸಾಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತದೆ
— ನವರಸನಾಯಕ ಜಗ್ಗೇಶ್ (@Jaggesh2) November 6, 2024
ಅದಕ್ಕೆ Scientific ಕಾರಣ "ಭಯ"
ಎರಡನೆಯದು ಏನು ನಾವು ನೆಲದಷ್ಟೆ ಹೀಗಿದ್ದೇವೆ ಆನೆ ಮಾತ್ರ
ಮುಗಿಲೆತ್ತರ ಬೆಳದಿದೆ ಎಂಬ ಸಂಕಟ.
ತಾತ್ಪಾರ್ಯ: ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು.
ಶ್ವಾನವು ಅವುಗಳ ಕೆಲಸ ಮಾಡದೆ ಬೇರೆ ವಿಧಿಯಿಲ್ಲಾ ಬೊಗಳುತ್ತದೆ.
ಆನೆಯಾಗಲು ಯೋಗ ಬೇಕು😎 pic.twitter.com/pP5UxGWi8T
ಜಗ್ಗೇಶ್ ವಿರುದ್ಧ ಭಾರಿ ಟೀಕೆ
ಗುರುಪ್ರಸಾದ್ಗೆ ಭಯಂಕರ ಕುಡಿತದ ಚಟ ಇತ್ತು, ಆನ್ಲೈನ್ ರಮ್ಮಿ ಬೇರೆ ಆಡಿ ಮೈತುಂಬಾ ಸಾಲ ಮಾಡಿಕೊಂಡಿದ್ದ. ಆತನಿಗೆ ಯಾವುದೋ ರೋಗ ಇತ್ತು, ನಾವು ತಿನ್ನುವ ತಟ್ಟೆಗೆ ಕೈಹಾಕುತ್ತಿದ್ದ ಎಂದು ಜಗ್ಗೇಶ್ ಮಾಧ್ಯಮಗಳಿಗೆ ಹೇಳಿದ್ದರು. ಸತ್ತವರ ಕುಟುಂಬ ನೋವಿನಲ್ಲಿದ್ದಾಗ, ಹಿರಿಯ ನಟನಾಗಿ ಹೀಗೆ ಮಾತನಾಡಬಾರದಿತ್ತು ಎಂದು ಹಲವರು ಟೀಕಿಸಿದ್ದರು.
ಜಗ್ಗೇಶ್ ಸಿನಿಮಾಗಳಲ್ಲಿ ಸತತ ಸೋಲು ಕಂಡಿದ್ದಾಗ, ಅವರನ್ನು ಈ ಜನರೇಷನ್ಗೆ ಪರಿಚಯ ಮಾಡಿಸಿದ್ದೇ ಗುರುಪ್ರಸಾದ್, ಮಠ, ಎದ್ದೇಳು ಮಂಜುನಾಥ ಸಿನಿಮಾಗಳು ಜಗ್ಗೇಶ್ಗೆ ಕನ್ನಡ ಚಿತ್ರರಂಗದಲ್ಲಿ ಮತ್ತೆ ಗೆಲುವು ಕಾಣುವಂತೆ ಮಾಡಿದ್ದವು. ಅಂತಹ ಸಿನಿಮಾ ಕೊಟ್ಟ ನಿರ್ದೇಶಕನಿಗೆ ಹೀಗೆ ಮಾತನಾಡಬಾರದಿತ್ತು ಎಂದು ಹಲವು ನಟರು ಕೂಡ ಪ್ರತಿಕ್ರಿಯೆ ನೀಡಿದ್ದರು.
ಬಿಗ್ ಬಾಸ್ ಮಾಜಿ ಸ್ಪರ್ಧಿ, ಲಾಯರ್ ಜಗದೀಶ್ ಕೂಡ ಜಗ್ಗೇಶ್ ವಿರುದ್ಧ ಕಿಡಿ ಕಾರಿದ್ದರು. ಸತ್ತವರ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಬೇಕು, ನಿಮ್ಮ ಪುರಾಣಗಳನ್ನು ಜನರ ಮುಂದೆ ಹೇಳಲಾ ಎನ್ನುವ ರೀತಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ಈಗ ಜಗ್ಗೇಶ್ ತಮ್ಮ ವಿರುದ್ಧದ ಟೀಕೆಗಳಿಗೆ ಹೀಗೆ ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ಏನೆಲ್ಲಾ ಪ್ರತಿಕ್ರಿಯೆ ಬರುತ್ತದೆ ಎಂದು ಕಾದುನೋಡಬೇಕಿದೆ.












Click it and Unblock the Notifications