Dhruva Sarja: ಮಾರ್ಟಿನ್ ಸಿನಿಮಾ ಚನ್ನಾಗಿಲ್ಲ ಎಂದವನಿಗೆ ಧ್ರುವ ಸರ್ಜಾ ಅಭಿಮಾನಿಗಳಿಂದ ಜೀವ ಬೆದರಿಕೆ ಆರೋಪ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರು, ಕಲೆಕ್ಷನ್ ವಿಚಾರದಲ್ಲಿ ಸಿನಿಮಾ ಹಿಂದೆ ಬಿದ್ದಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ನಿರೀಕ್ಷೆ ಮಾಡಿದಷ್ಟು ಚನ್ನಾಗಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಿನಿಮಾ ಚನ್ನಾಗಿಲ್ಲ ಎಂದವರಿಗೆ ಧ್ರುವ ಸರ್ಜಾ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮೂಲಕ ಪರಿಚಿತನಾಗಿರುವ ಸುಧಾಕರ್ ಗೌಡ ಎನ್ನುವವರು ಮಾರ್ಟಿನ್ ಸಿನಿಮಾ ನೋಡಿದ ಬಳಿಕ ಸಿನಿಮಾ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ದೊಡ್ಡ ಮಟ್ಟದ ಬಜೆಟ್ ಹಾಕಿದ್ದರು ಸಿನಿಮಾ ಚನ್ನಾಗಿ ಬಂದಿಲ್ಲ, ಕಾಂತಾರ, ಕೆಜಿಎಫ್ ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ್ದವು, ಮಾರ್ಟಿನ್ ಕನ್ನಡ ಚಿತ್ರರಂಗದ ಮರ್ಯಾದೆ ತೆಗೆಯುವಂತೆ ಮಾಡಿದ್ದಾರೆ. ಧ್ರುವ ಸರ್ಜಾ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ, ಬರಿ ಕಿರುಚುವುದೇ ಸಿನಿಮಾ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಸಿಟ್ಟಿಗೆದ್ದ ಧ್ರುವ ಅಭಿಮಾನಿಗಳು!
ಮಾರ್ಟಿನ್ ಸಿನಿಮಾ ಚನ್ನಾಗಿಲ್ಲ ಎನ್ನುತ್ತಿದ್ದಂತೆ ಕೆಲವು ಧ್ರುವ ಸರ್ಜಾ ಅಭಿಮಾನಿಗಳು ಸಿಟ್ಟಾಗಿದ್ದು, ಸುಧಾಕರ್ ಗೌಡ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸ್ವತಃ ಸುಧಾಕರ್ ಗೌಡ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ದುಡ್ಡು ಕೊಟ್ಟು ಸಿನಿಮಾ ನೋಡಿದ್ದೇನೆ, ಚನಾಗಿಲ್ಲ ಎಂದರೆ ಚನ್ನಾಗಿಲ್ಲ ಎಂದು ಹೇಳುವ ಅಧಿಕಾರ ನನಗೆ, ಅಷ್ಟಕ್ಕೆ ನನಗೆ 500 ಕ್ಕೂ ಹೆಚ್ಚು ಕರೆಗಳು ಬಂದಿದ್ದು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
"More than 500 threat calls from @DhruvaSarja fans"
— Ⓤನೌನ್_ಮಂದಿ💛❤️ (@unknown_trio) October 14, 2024
ಒಂದ್ ರಿವ್ಯೂ ಯಿಂದ ಇಷ್ಟೊಂದೆಲ್ಲ ಆಗತ್ತ?🥲
If it's true, then it's a serious offence @BlrCityPolice #Martin #MartinTheMovie #MartinReview pic.twitter.com/svKkrOI3qw
ನನಗೇನೂ ಧ್ರುವ ಸರ್ಜಾ ಅವರ ಮೇಲೆ ಕೋಪವಿಲ್ಲ, ದ್ವೇಷದಿಂದ ಸಿನಿಮಾ ಚನ್ನಾಗಿಲ್ಲ ಎಂದು ಹೇಳಿಲ್ಲ. ನಾನು ಹಣ ಖರ್ಚು ಮಾಡಿ ಗೆಳೆಯರ ಜೊತೆ ಸಿನಿಮಾ ನೋಡಿದ್ದೇನೆ, ಸಿನಿಮಾ ನೋಡಿ ನನಗೆ ಬೇಸರವಾಗಿದೆ. ಅದಕ್ಕೆ ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೆ, ಅಷ್ಟಕ್ಕೆ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದಿದ್ದಾರೆ. ನಾನು ಬೆದರಿಕೆಗೆ ಹೆದರುವುದಿಲ್ಲ, ವಿಳಾಸವನ್ನು ಕೊಡುತ್ತೇನೆ ಕರೆ ಮಾಡಿದವರು ಬನ್ನಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ.
ದರ್ಶನ್ ಫ್ಯಾನ್ಸ್ ವಿರುದ್ಧ ಆರೋಪ
ಸುಧಾಕರ್ ಗೌಡ ಅವರ ವಿಡಿಯೋ ಬಗ್ಗೆ ಕೆಲವು ಧ್ರುವ ಸರ್ಜಾ ಅಭಿಮಾನಿಗಳು ಮತ್ತೊಂದು ಬಗೆಯ ಆರೋಪ ಮಾಡಿದ್ದಾರೆ. ಸುಧಾಕರ್ ಗೌಡಗೆ ಕರೆ ಮಾಡಿರುವುದು ಧ್ರುವ ಸರ್ಜಾ ಅವರ ನಿಜವಾದ ಅಭಿಮಾನಿಗಳಲ್ಲ, ದರ್ಶನ್ ಅವರ ಅಭಿಮಾನಿಗಳು ಧ್ರುವ ಸರ್ಜಾ ಅಭಿಮಾನಿಗಳೆಂದು ಕರೆ ಮಾಡಿ ಬೆದರಿಕೆ ಹಾಕಿರಬಹುದು. ಮಾರ್ಟಿನ್ ಸಿನಿಮಾ ಯಶಸ್ಸನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕೂಡ ಸೋಷಿಯಲ್ ಮೀಡಿಯಾದಲ್ಲಿ ವಾದಿಸುತ್ತಿದ್ದಾರೆ.
ಮತ್ತೊಂದು ಕಡೆ ಈ ರೀತಿ ಸಿನಿಮಾ ಚನ್ನಾಗಿಲ್ಲ ಎನ್ನುವ ಮಾತ್ರಕ್ಕೆ ಜೀವ ಬೆದರಿಕೆ ಹಾಕುವುದು ಆತಂಕಕಾರಿ ವಿಚಾರ, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಜೀವ ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications