Darshan Thoogudeepa: ಬುಕ್ ಮೈ ಶೋನಲ್ಲಿ ಹೌಸ್ ಫುಲ್: ಥಿಯೇಟರ್ಗೆ ಬಂದು ನೋಡಿದರೆ ಖಾಲಿ ಖಾಲಿ- ದರ್ಶನ್ ಫ್ಯಾನ್ಸ್ ಗರಂ!
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಇಂದು ರೀರಿಲೀಸ್ ಆಗಿದೆ. ಇದನ್ನು ನೋಡಲು ಅಭಿಮಾನಿಗಳು ಥಿಯೇಟರ್ ಬಳಿ ಬಂದು ವಾಪಸ್ ಹೋಗಿದ್ದಾರೆ. ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ಹೇಳಿದ್ದಕ್ಕೆ ಅದೆಷ್ಟೋ ಜನ ಬೆಳಗ್ಗೆ ಥಿಯೇಟರ್ ಬಳಿ ಬಂದು ವಾಪಸ್ ತೆರಳಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳು ಥಿಯೇಟರ್ ಒಳಗಡೆ ಬಂದು ಪರಿಶೀಲನೆ ಮಾಡಿದಾಗ ಥಿಯೇಟರ್ ಖಾಲಿ ಖಾಲಿಯಾಗಿರುವುದನ್ನು ಕಂಡು ಆಕ್ರೋಶ ಹೊರಹಾಕಿದ್ದಾರೆ.
ಹೌದು... ಬುಕ್ ಮೈ ಶೋನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಹೌಸ್ ಫುಲ್ ಎಂದು ತೋರಿಸಿದೆ. ಆದರೆ ಅಭಿಮಾನಿಗಳು ಥಿಯೇಟರ್ ಒಳಗೆ ಬಂದು ಪರಿಶೀಲನೆ ನಡೆಸಿದಾಗ ಥಿಯೇಟರ್ ಖಾಲಿಯಾಗಿರುವುದನ್ನು ಕಂಡು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಕನ್ನಡ ಸಿನಿಮಾಗಳಿಗೆ ಯಾಕೆ ಹೀಗೆ ಮಾಡಲಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನ ಬಹುತೇಕ ಥಿಯೇಟರ್ಗಳಲ್ಲಿ ಸಿನಿಮಾ ರೀರಿಲೀಸ್ ಆಗಿದೆ ಆದರೆ ಅದೆಷ್ಟೋ ಜನ ಸಿನಿಮಾ ನೋಡಲು ಬುಕ್ ಮಾಡಲು ಮುಂದಾದಾಗ ಬುಕ್ ಮೈ ಶೋನಲ್ಲಿ ಹೌಸ್ಫುಲ್ ಎಂದು ತೋರಿಸಲಾಗಿದೆ. ಆದರೆ ಸಿನಿಮಾ ಮಂದಿರಗಳಿಗೆ ಬಂದು ನೋಡಿದಾಗ ಜನರೇ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಇದಕ್ಕೆ ದರ್ಶನ್ ಫ್ಯಾನ್ಸ್ ಗರಂ ಆಗಿದ್ದಾರೆ.

ಬುಕ್ ಮೈ ಶೋ ಸ್ಕ್ಯಾಮ್
ಅಲ್ಲದೆ ಗಾಂಧಿನಗರದ ಪ್ರಮುಖ ಚಿತ್ರ ಮಂದಿರಗಳಲ್ಲಿ ಸಿನಿಮಾ ರೀರಿಲೀಸ್ ಆಗೇ ಇಲ್ಲ. ಇದು ದರ್ಶನ್ ಸಿನಿಮಾ ಎನ್ನುವುದಕ್ಕಿಂತ ಒಬ್ಬ ಯೋಧನ ಕನ್ನಡ ಸಿನಿಮಾ ಅಂತ ಜನ ನೋಡಲು ಥಿಯೇಟರ್ಗೆ ಬರುತ್ತಾರೆ. ಸಿನಿಮಾ ಈಗಾಗಲೇ ತೆರೆ ಕಂಡಿದ್ದರೂ ಕೂಡ ಜನರಲ್ಲಿ ಸಿನಿಮಾ ಬಗ್ಗೆ ಹಾಗೂ ಸಿನಿಮಾದ ಕತೆಯ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಮಾತ್ರ ಕಡಿಮೆ ಆಗಿಲ್ಲ. ಆದರೆ ಬುಕ್ ಮೈ ಶೋ ಸ್ಕ್ಯಾಮ್ನಿಂದಾಗಿ ಇಂತಹ ಸಿನಿಮಾಗಳು ಓಡುತ್ತಿಲ್ಲ. ಕೇವಲ ದರ್ಶನ್ ಸಿನಿಮಾ ಮಾತ್ರವಲ್ಲದೆ ಮೊನ್ನೆಯಷ್ಟೇ ತೆರೆ ಕಂಡ ಬೈರತಿ ರಣಗಲ್ ಸಿನಿಮಾ ಕೂಡ ಆನ್ಲೈನ್ನಲ್ಲಿ ಹೌಸ್ಫುಲ್ ಅಂತ ತೋರಿಸಿತ್ತು. ಆದರೆ ಒಳಗೆ ಬಂದು ನೋಡಿದರೆ ಜನನೇ ಇರಲಿಲ್ಲ ಎಂದು ಅಭಿಮಾನಿಗಳು ಸಿಟ್ಟಾಗಿದ್ದಾರೆ. ಕನ್ನಡ ಸಿನಿಮಾಗಳಿಗೆ ಅನ್ಯಾಯ ಆಗ್ತಾಯಿದೆ ಎಂದು ದೂರಿದ್ದಾರೆ.
ಪ್ರತಿಷ್ಠಿತ ಥಿಯೇಟರ್ಗಳಲ್ಲಿ ಕನ್ನಡ ಸಿನಿಮಾಕ್ಕೆ ಅವಮಾನ!
ಹೀಗಾಗಿ ಬೆಂಗಳೂರಿನ ಪ್ರತಿಷ್ಠಿತ ಥಿಯೇಟರ್ಗಳಲ್ಲಿ ಕನ್ನಡ ಸಿನಿಮಾ ನೋಡಲು ಸಾಧ್ಯ ಆಗ್ತಾಯಿಲ್ಲ. ಕನ್ನಡ ಸಿನಿಮಾಗಳಿಗೆ ಅನ್ಯಾಯ ಆಗ್ತಾಯಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಕನ್ನಡ ಸಿನಿಮಾಗಳನ್ನು ನೋಡಲು ಕರ್ನಾಟಕದಲ್ಲಿ ಕನ್ನಡಿಗರಿಗೆ ಸಾಧ್ಯ ಆಗ್ತಾಯಿಲ್ಲ. ಇದನ್ನು ಯಾರು ಮಾಡ್ತಾಯಿದ್ದಾರೆ ಅನ್ನೋದು ನಮಗೆ ಗೊತ್ತಾಗಬೇಕು. ಈ ಸ್ಕ್ಯಾಮ್ ಹಿಂದೆ ಇರುವವರು ಯಾರು ಎಂದು ನಮಗೆ ತಿಳಿಯಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿರುವುದು ಕುಳಿತಿದ್ದಾರೆ.
ಪ್ರಮೋಷನ್ ಮಾಡದೇ ಸಿನಿಮಾ ರೀರಿಲೀಸ್
ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಸಿನಿಮಾ ಇಂದು ರೀರಿಲೀಸ್ ಆಗಿದೆ. ಆದರೆ ಈ ಸಿನಿಮಾ ರಿಲೀಸ್ ಆಗಿರುವುದು ಯಾರಿಗೂ ಕೂಡ ಗೊತ್ತಿಲ್ಲ. ಸಿನಿಮಾ ಪ್ರಮೋಷನ್ ಮಾಡದೇ ರೀರಿಲೀಸ್ ಮಾಡಿದ್ದು ತಪ್ಪು ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಥಿಯೇಟರ್ ಮುಂದೆ ಒಂದು ಕಟೌಟ್ ಹಾಕಿಲ್ಲ, ಪ್ರಮೋಷನ್ ಮಾಡಿಲ್ಲ. ಹೀಗೆಲ್ಲಾ ಮಾಡದೇ ಇದ್ದರೆ ಜನರಿಗೆ ಹೇಗೆ ಸಿನಿಮಾ ರೀರಿಲೀಸ್ ಆಗಿದೆ ಅಂತ ಗೊತ್ತಾಗುತ್ತೆ ಅಂತ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ನವಗ್ರಹ ಸಿನಿಮಾ ಭರ್ಜರಿ ಪ್ರದರ್ಶನ
ಇತ್ತೀಚೆಗಷ್ಟೇ ದರ್ಶನ್ ಅವರ ನವಗ್ರಹ ಸಿನಿಮಾವನ್ನು ರೀರಿಲೀಸ್ ಮಾಡಲಾಯಿತು. ಅದನ್ನು ಪ್ರಮೋಷನ್ ಮಾಡಲಾಯಿತು, ಕಟೌಟ್ ಹಾಕಿ ಭರ್ಜರಿಯಾಗಿ ತೆರೆ ಕಂಡ ಸಿನಿಮಾವನ್ನು ಸಾಕಷ್ಟು ಅಭಿಮಾನಿಗಳು ವೀಕ್ಷಿಸಿದ್ದಾರೆ. ಆದರೆ ಸಂಗೋಳ್ಳಿ ರಾಯಣ್ಣ ಸಿನಿಮಾಕ್ಕೆ ಮಾತ್ರ ತುಂಬಾ ಮೋಸ ಆಗಿದೆ ಎಂದು ಫ್ಯಾನ್ಸ್ ಹೇಳಿಕೊಂಡಿದ್ದಾರೆ.
ದರ್ಶನ್ ಸಿನಿಮಾ ನೋಡಲು ಬರುತ್ತಿಲ್ಲ ಜನ!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಸದ್ಯ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದು ಭಾರೀ ಸುದ್ದಿಯಲ್ಲಿದ್ದಾರೆ. ಕಳೆದ ಕೆಲ ತಿಂಗಳಿನಿಂದ ದರ್ಶನ್ ಪ್ರಕರಣ ಚಂದನವನದಲ್ಲಿ ಮಾತ್ರವಲ್ಲದೆ ಸಿನಿ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ದರ್ಶನ್ ಜೈಲಿಗೆ ಹೋದಾಗಿನಿಂದಲೂ ಅವರದ್ದೇ ಸುದ್ದಿ ಕರ್ನಾಟಕದಾದ್ಯಂತ ಮಾತ್ರವಲ್ಲದೆ ದೇಶದ ಹಲವೆಡೆ ಹರಿದಾಡುತ್ತಿದೆ.
ಬೆನ್ನು ನೋವಿನಿಂದ ಸರ್ಜರಿ ಮಾಡಿಸಿಕೊಳ್ಳುವ ಅನಿವಾರ್ಯತೆ ಇದ್ದಿದ್ದರಿಂದ ಜೈಲಿನಿಂದ ಆರು ವಾರ ಮಧ್ಯಂತರ ಜಾಮೀನು ಪಡೆದು ದರ್ಶನ್ ಹೊರ ಬಂದಿದ್ದಾರೆ. ಆರು ವಾರಗಳಲ್ಲಿ ಈಗ ಮೂರು ವಾರಗಳು ಪೂರ್ಣಗೊಂಡಿದ್ದು ದರ್ಶನ್ ಇನ್ನೂ ಕೂಡ ಸರ್ಜರಿ ಮಾಡಿಸಿಕೊಂಡಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಡುವೆ ಅವರ ಸಿನಿಮಾಗಳು ರೀರಿಲೀಸ್ ಆಗುತ್ತಿವೆ. ಆದರೆ ಅವರ ಸಿನಿಮಾಗಳನ್ನು ಪುನ: ವೀಕ್ಷಿಸಲು ಜನ ಚಿತ್ರಮಂದಿರಗಳಿಗೆ ಆಗಮಿಸುತ್ತಿಲ್ಲ ಎನ್ನಲಾಗುತ್ತಿದೆ. ಸಿನಿಮಾ ತೆರೆಕಂಡ ಚಿತ್ರಮಂದಿರಗಳು ಖಾಲಿ ಖಾಲಿಯಾಗಿರುವುದು ಕಂಡು ಬಂದಿದೆ.












Click it and Unblock the Notifications