Darshan Thoogudeepa: ದರ್ಶನ್ ಕನ್ನಡ ಚಿತ್ರರಂಗಕ್ಕಾಗಿ ಶ್ರಮಪಟ್ಟ ಹುಡುಗ, ಪೂಜೆ ಮಾಡೋದ್ರಲ್ಲಿ ತಪ್ಪೇನಿದೆ...
ಬೆಂಗಳೂರು ಆಗಸ್ಟ್ 14: ಚಿತ್ರರಂಗದ ಏಳ್ಗೆಗಾಗಿ ಇಂದು ಕನ್ನಡ ಚಿತ್ರರಂಗ ಕಲಾವಿದರಿಂದ ವಿಶೇಷ ಪೂಜೆ, ಹೋಮ, ಹವನ ಮಾಡಲಾಯಿತು. ಚಾಮರಾಜಪೇಟೆಯ ಕಲಾವಿದರ ಸಂಘದ ಕಚೇರಿಯಲ್ಲಿ ಹಿರಿಯ ನಟ ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್ ನೇತೃತ್ವದಲ್ಲಿ ಪೂಜೆ ನಡೆದಿದೆ. ಈ ವೇಳೆ ಮಾತನಾಡಿದ ಗಿರಿಜಾ ಲೋಕೇಶ್ ಈ ಪೂಜೆ ದರ್ಶನ್ಗಾಗಿನೇ ಯಾಕೆ ಆಗಿರಬಾರದು ಎಂದು ಪ್ರಶ್ನೆ ಮಾಡಿದ್ದಾರೆ.
ಕಲಾವಿದರ ಕಚೇರಿಯಲ್ಲಿ ಗಣಪತಿ ಹೋಮ ಮಾಡುವ ಮೂಲಕ ಪೂಜೆ ಆರಂಭಿಸಲಾಯಿತು. ಹಿರಿಯ ನಟಿಯರಾದ ವನಿತಾ ವಾಸು, ಪದ್ಮಜಾ, ಗಿರಿಜಾ ಲೋಕೇಶ್, ನಟ ಪ್ರೇಮ್ ಹಾಗೂ ಅಭಿಷೇಕ್ ಅಂಬರೀಶ್ ಸೇರಿದಂತೆ ಹಲವಾರು ಕಲಾವಿದರು ಇದರಲ್ಲಿ ಭಾಗವಹಿಸಿದ್ದರು.

ದರ್ಶನ್ಗಾಗಿ ಯಾಕೆ ಪೂಜೆ ಮಾಡಬಾರದು-ಗಿರಿಜಾ ಲೋಕೇಶ್
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗಿರಿಜಾ ಲೋಕೇಶ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ. 'ದರ್ಶನ್ ಚಿತ್ರರಂಗದ ಅಭಿವೃದ್ಧಿಗೆ ಶ್ರಮಪಟ್ಟಿದ್ದಾನೆ. ಚಿತ್ರರಂಗದ ಅಭಿವೃದ್ಧಿಗೆ ಅವನ ಶ್ರಮ ಇದೆ. ಹೀಗಾಗಿ ಅವನಿಗಾಗಿ ಪೂಜೆ ಮಾಡುವುದರಲ್ಲಿ ತಪ್ಪೇನಿದೆ' ಎಮದು ಅವರು ಪ್ರಶ್ನೆ ಮಾಡಿದ್ದಾರೆ.
ಕಲಾವಿದರೆಲ್ಲರೂ ಸೇರಿ ಮಾಡುವ ಈ ಪೂಜೆ ದರ್ಶನ್ಗಾಗಿ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ ಗಿರಿಜಾ ಲೋಕೇಶ್, 'ನಾನು ಒಬ್ಬ ತಾಯಿಯಾಗಿ ಮಕ್ಕಳಿಗೆ ಒಳ್ಳೆಯದನ್ನು ಬಯಸುತ್ತೇನೆ. ಅವರು ಸಂಕಷ್ಟದಲ್ಲಿ ಇದಾರೆ. ಹಾಗಂತ ಅವರು ಚಿತ್ರರಂಗಕ್ಕಾಗಿ ಪಟ್ಟ ಶ್ರಮವನ್ನು ನಾವು ಮರೆಯಲು ಆಗುವುದಿಲ್ಲ. ಒಳ್ಳೆಯವನಾಗಿದ್ದ ಒಬ್ಬ ವ್ಯಕ್ತಿ ಈ ರೀತಿ ವರ್ತಿಸಿದ್ದಾನೆ ಅಂದರೆ ಅದಕ್ಕೆ ಪರಮಾತ್ಮನೇ ಕಾರಣ. ಎಲ್ಲಾ ತಪ್ಪು ಅವನ ಮೇಲೇ ಹಾಕೋದು. ಕ್ರೌರ್ಯ ಮಾಡೋದಕ್ಕೆ ದರ್ಶನ್ಗೆ ಬುದ್ದಿ ಕೊಟ್ಟಿರೋದು ಆ ದೇವರು' ಎಂದು ಗಿರಿಜಾ ಲೋಕೇಶ್ ಹೇಳಿದ್ದಾರೆ.
'ಎಲ್ಲರಿಗೂ ಒಳ್ಳೆಯ ಜೀವನ ಕಲ್ಪಿಸಿಕೊಡು ಅಂತ ದೇವರಲ್ಲಿ ಪಾರ್ಥನೆ ಮಾಡುತ್ತಿದ್ದೇವೆ. ತಾಯಿ ಮಕ್ಕಳು ಎಷ್ಟೇ ಕೆಟ್ಟವರು ಆದರೂ ಕ್ಷಮಿಸಿಬಿಡುತ್ತಾಳೆ. ಆದರೆ ದ್ವೇಷ ಮಾಡುವುದಿಲ್ಲ. ಒಳ್ಳೆಯದು ಕೆಟ್ಟದು ಮಾಡಿಸುವುದು ಆ ದೇವರು. ಅವನನ್ನು ನಾವು ಪ್ರಶ್ನೆ ಮಾಡಬೇಕು. ಎಲ್ಲರಿಗೂ ಒಳ್ಳೆಯದಾಗಲಿ ಅನ್ನೋದು ನಮ್ಮ ಆಸೆ. ಆದರೆ ಯಾರೇ ಆಗಲಿ ಸಮಾಜಘಾತುಕರಾಗಿರಬಾರದು' ಎಂದು ಹಿರಿಯ ನಟಿ ಗಿರಿಜಾ ಹೇಳಿದ್ದಾರೆ.

ಈ ಪೂಜೆ ದರ್ಶನ್ಗಾಗಿನೇ ಅಲ್ಲ- ವನಿತಾ ವಾಸು
ಇದೇ ವೇಳೆ ಹಿರಿಯ ನಟಿ ವನಿತಾ ವಾಸು ಕೂಡ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಒಂದು ಮನೆ ಚೆನ್ನಾಗಿ ನಡೆಯಬೇಕು ಅಂದರೆ ಹಿರಿಯರು ಹೇಗೆ ಇರಬೇಕೋ ಹಾಗೇ ಚಿತ್ರರಂಗಕ್ಕೆ ಹಿರಿಯರು ಇರಬೇಕು. ಪೂಜೆಯಿಂದ ಏನಾಗುತ್ತೆ ಏನಾಗಲ್ಲ ಅನ್ನೋದು ಮುಖ್ಯ ಅಲ್ಲ. ನಾವು ಎಲ್ಲರಿಗೂ ಒಳ್ಳೆಯದಾಗಲಿ ಅಂತ ಪೂಜೆ ಮಾಡ್ತಾಯಿದ್ದೇವೆ. ನಮ್ಮ ಫಿಲ್ಮ ಇಂಡಸ್ಟ್ರಿಗೆ ಒಳ್ಳೆಯದಾಗಲಿ ಅಂತ ಪೂಜೆ ಮಾಡುತ್ತಿದ್ದೇವೆ. ದರ್ಶನ್ ಅವರು ಇಂಡಸ್ಟ್ರಿಯ ಒಂದು ಭಾಗ. ಹೀಗಾಗಿ ಅವರಿಗೂ ಒಳ್ಳೆದಾಗಲಿ ಅನ್ನೋದು ನನ್ನ ಆಸೆ. ಆದರೆ ದರ್ಶನ್ಗಾಗಿನೇ ಈ ಪೂಜೆ ಮಾಡುತ್ತಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಅನ್ನೋದು ನಮ್ಮ ಆಸೆ ಹಾಗೂ ಪ್ರಾರ್ಥನೆ ಎಂದರು.
ಎಲ್ಲಾ ಕಲಾವಿದರಿಗೆ ಒಳ್ಳೆಯದಾಗಲಿ- ನಟ ಪ್ರೇಮ್
ಎಲ್ಲಾ ಕಲಾವಿದರಿಗೆ ಒಳ್ಳೆಯದಾಗಲಿ. ಚಿತ್ರರಂಗಕ್ಕೆ ಒಳ್ಳೆಯದಾಗಲಿ ಅನ್ನೋದಕ್ಕೆ ಪೂಜೆ ಮಾಡಲಾಗುತ್ತಿದೆ. ಇದರಲ್ಲಿ ನಾನು ಭಾಗಿಯಾಗಿದ್ದೇನೆ. ಮನೆಯಿಂದ ಹೊರ ಬರುವಾಗ ನಾವು ಪೂಜೆ ಮಾಡಿ ಬರುತ್ತೇವೆ. ಒಳ್ಳೆದಾಗಲಿ ಅಂತ ಬೇಡಿಕೊಳ್ಳುತ್ತೇವೆ. ಅದು ಪಾಸಿಟಿವಿಟಿ. ಅದೇ ಒಳ್ಳೆಯ ಮನಸ್ಸಿನಿಮದ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ನನ್ನದು' ಎಂದು ಹೇಳಿದರು.

ಪೂಜೆ ಬಳಿಕ ದರ್ಶನ್ ಭೇಟಿಗೆ ಚಿಕ್ಕಣ್ಣ, ಅಭಿಷೇಕ್ ಸಜ್ಜು
ಇನ್ನೂ ಪೂಜೆ ಬಳಿಕ ದರ್ಶನ್ ಭೇಟಿಗೆ ಚಿಕ್ಕಣ್ಣ, ಅಭಿಷೇಕ್ ಸಜ್ಜಾಗಿರುವುದು ಕಂಡು ಬಂದಿದೆ. ಇದೆಲ್ಲಾ ಪೂಜಾ ಕಾರ್ಯಕ್ರಮಗಳ ಬಳಿಕ ಚಿಕ್ಕಣ್ಣ, ಅಭಿಷೇಕ್ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ಜೈಲಿಗೆ ಹೋದಾಗಿನಿಂದಲೂ ಸುಮಲತಾ ಅಂಬರೀಶ್ ಆಗಲಿ ಅಥವಾ ಅಭಿಷೇಕ್ ಆಗಲಿ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿರಲಿಲ್ಲ. ಹೀಗಾಗಿ ಇಂದು ಪೂಜೆ ಬಳಿಕ ಅವರು ಜೈಲಿಗೆ ಭೇಟಿ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications