Darshan Thoogudeepa: ರಾಜಕಾರಣಿಗಳಿಗೆ ಕರೆ ಮಾಡಿ ಸಹಾಯ ಕೇಳಿದ ದರ್ಶನ್ - ವಾಟ್ಸಾಪ್ ಕಾಲ್ ಹಿಸ್ಟರಿ ರಿಟ್ರೀವ್!
ಬೆಂಗಳೂರು ಆಗಸ್ಟ್ 11: ಕನ್ನಡ ಅಭಿಮಾನಿಗಳ ನೆಚ್ಚಿನ ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿದ್ದಾರೆನ್ನುವುದಕ್ಕೆ ಬಲವಾದ ಸಾಕ್ಷಿಗಳು ಸಿಗುತ್ತಲೇ ಇವೆ. ಈ ಪ್ರಕರಣದಲ್ಲಿ ಜೈಲಿನಲ್ಲಿರುವ ದಾಸ ಬಂಧನಕ್ಕೂ ಮುನ್ನ ಸಾಕ್ಷಿಗಳ ನಾಶ ಮಾಡಿದ್ದರು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿ ಬೆಂಬಲಕ್ಕಾಗಿ ರಾಜಕಾರಣಿಗಳ ಮೊರೆ ಹೋದ್ದರು ಡೆವಿಲ್ ಎನ್ನುವ ವಿಚಾರ ಬಯಲಾಗಿದೆ.
ಹೌದು.... ದರ್ಶನ್ ಅವರ ಟೈಮ್ ಅದ್ಯಾಕೋ ಸರಿಯಾಗಿಲ್ಲ. ಅವರ ವಿರುದ್ಧ ಬಗೆದಷ್ಟು ಸಾಕ್ಷಿಗಳು ಸಿಗುತ್ತಲೇ ಇವೆ. ದರ್ಶನ್ ಬಂಧನವಾಗಿ 50 ದಿನಗಳಾದರೂ ಪೊಲೀಸರಿಗೆ ಹಲವಾರು ಸಾಕ್ಷಿಗಳು ಸಿಗುತ್ತಲೇ ಇವೆ. ದರ್ಶನ್ ಬಂಧನಕ್ಕೂ ಮುನ್ನ ಅಂದರೆ ಬೆಂಗಳೂರಿನಿಂದ ಮೈಸೂರಿಗೆ ಡೆವಿಲ್ ಶೂಟಿಂಗ್ಗಾಗಿ ಸಾಗುತ್ತಿದ್ದಾಗ ಕೆಲ ರಾಜಕೀಯ ವ್ಯಕ್ತಿಗಳಿಗೆ ಕರೆ ಮಾಡಿದ್ದರು ಎಂದು ತಿಳಿದು ಬಂದಿದೆ.

ತಮ್ಮ ವಾಟ್ಸಾಪ್ ಮೂಲಕ ಹಲವಾರು ರಾಜಕಾರಣಿಗಳಿಗೆ ಕರೆ ಮಾಡಿದ ದರ್ಶನ್ ತಮ್ಮ ಸಹಾಯಕ್ಕೆ ಬರುವಂತೆ ಕೇಳಿಕೊಂಡಿದ್ದರು. ಹೀಗೆ ಹಲವರಿಗೆ ಕರೆ ಮಾಡಿದ್ದ ಅವರು ಬಳಿಕ ವಾಟ್ಸಾಪ್ ಕರೆಯ ಹಿಸ್ಟ್ರಿಯನ್ನು ಡಿಲೀಟ್ ಮಾಡಿದ್ದರು. ಬಂಧನದ ಬಳಿಕ ದರ್ಶನ್ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದ ಪೊಲೀಸರು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ದರ್ಶನ್ ಆ ದಿನ ಯಾರಿಗೆಲ್ಲಾ ಕರೆ ಮಾಡಿದ್ದರು ಎನ್ನುವ ಬಗ್ಗೆ ವರದಿ ಮಾಡಿದ್ದಾರೆ.
ಸದ್ಯ ಪೊಲೀಸರು ವಾಟ್ಸಪ್ ಕಾಲ್ ಹಿಸ್ಟರಿಯನ್ನು ರಿಟ್ರೀವ್ ಮಾಡಿದ್ದಾರೆ. ಸೋಮವಾರ (ಆಗಸ್ಟ್ 12) ರಿಪೋರ್ಟ್ ಪೊಲೀಸರ ಕೈ ಸೇರಲಿದ್ದು ಇದೊಂದು ದರ್ಶನ್ ವಿರುದ್ಧ ಬಲವಾದ ಸಾಕ್ಷಿಯಾಗಲಿದೆ.

ದರ್ಶನ್ ವಿರುದ್ಧ ಚಿಕ್ಕಣ್ಣ ಸಾಕ್ಷಿ
ದರ್ಶನ್ ವಿರುದ್ಧ ನಟ ಚಿಕ್ಕಣ್ಣ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿರುವ ಪೊಲೀಸರು, ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿದ್ದಾರೆ. ರಾಜರಾಜೇಶ್ವರಿ ನಗರದ ಸ್ಟೋನಿಬ್ರೂಕ್ ರೆಸ್ಟೋರೆಂಟ್ನಲ್ಲಿ ಜೂನ್ ಎಂಟರಂದು ನಡೆದ ಪಾರ್ಟಿಯಲ್ಲಿ ನಟ ದರ್ಶನ್ ಜೊತೆ ಚಿಕ್ಕಣ್ಣ ಭಾಗಿಯಾಗಿದ್ದರು. ಪಾರ್ಟಿ ನಡುವೆಯೇ ಹೊರ ಹೋಗಿದ್ದ ದರ್ಶನ್ ಪಟ್ಟಣಗೆರೆ ಶೆಡ್ನಲ್ಲಿ ನಡೆದ ರೇಣುಕಾಸ್ವಾಮಿ ಹತ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದುಬು ತನಿಖೆಯಲ್ಲಿ ತಿಳಿದು ಬಂದಿದೆ.
ಈ ಹಿನ್ನೆಲೆ ಚಿಕ್ಕಣ್ಣ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಸಿಆರ್ಪಿಸಿ 164 ಅನ್ವಯ ಹೇಳಿಕೆ ದಾಖಲಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇನ್ನೂ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯ ಬಹುತೇಕ ಅಂತಿಮ ಹಂತ ತಲುಪಿದೆ. ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದ್ಯಶ್ಯಾವಳನ್ನು ಸೇರಿ ತಾಂತ್ರಿಕ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸಲಾಗಿದೆ.

ದರ್ಶನ್ ಜೈಲುವಾಸ
ಇನ್ನೂ ದರ್ಶನ್ ಹಾಗೂ ಎಲ್ಲ ಪ್ರಮುಖ ಆರೋಪಿಗಳಿಗೆ ಜೈಲು ವಾಸ ಮುಂದುವರಿದಿದೆ. ಆಗಸ್ಟ್ 14ರವರೆಗೆ ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. ದರ್ಶನ್ ಸೇರಿದಂತೆ 17 ಜನ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇದು ಹೈಪ್ರೊಫೈಲ್ ಕೇಸ್ ಆಗಿದ್ದು ಹಲವು ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಆರೋಪಿಗಳಿಗೆ ಜಾಮೀನು ಸಿಗುವುದು ಕಷ್ಟವಾಗಿದೆ.











Click it and Unblock the Notifications