Darshan Thoogudeepa: ಪ್ರಕರಣ ಹಳ್ಳ ಹಿಡಿಸಲು ಷಡ್ಯಂತ್ರ? ರಿಮಾಂಡ್ ಅರ್ಜಿಯಲ್ಲಿ ಸ್ಫೋಟಕ ಆರೋಪ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಪವಿತ್ರಾ ಗೌಡ, ನಟ ದರ್ಶನ್ ಮತ್ತು ಉಳಿದ ಆರೋಪಿಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ನ್ಯಾಯಾಂಗ ಬಂಧನ ಮುಕ್ತಾಯವಾದ ಹಿನ್ನಲೆಯಲ್ಲಿ ದರ್ಶನ್ ಮತ್ತು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.
ಎಲ್ಲಾ 17 ಆರೋಪಿಗಳನ್ನು 24ನೇ ಎಸಿಎಂಎಂ ಪ್ರಭಾರಿ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶ ವಿಶ್ವನಾಥ ಸಿ.ಗೌಡರ್ ಅಧ್ಯಕ್ಷತೆ ವಹಿಸಿದ್ದು, ಆರೋಪಿಗಳ ಹಾಜರಿರುವಿಕೆಯನ್ನು ದೃಢಪಡಿಸಿದರು.

ಸರ್ಕಾರಿ ವಕೀಲರು ಮತ್ತು ಆರೋಪಿ ದರ್ಶನ್ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿಗಳನ್ನು ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ಸದ್ಯ 14 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ, 3 ಆರೋಪಿಗಳು ತುಮಕೂರಿನ ಕಾರಾಗೃಹದಲ್ಲಿದ್ದಾರೆ.
ಸಂಧಾನಕ್ಕೆ ಭಾರಿ ಯತ್ನ?
ರಿಮಾಂಡ್ ಅರ್ಜಿಯಲ್ಲಿ ಹೊಸ ಆಘಾತಕಾರಿ ವಿಚಾರಗಳು ಬಹಿರಂಗವಾಗಿದೆ. ಆರೋಪಿಗಳ ಪರ ಕೆಲವರು ರೇಣುಕಾಸ್ವಾಮಿ ಕುಟುಂಬವನ್ನು ಸಂಪರ್ಕಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ದರ್ಶನ್ ಮತ್ತು ಉಳಿದ ಆರೋಪಿಗಳು ಹಣಕಾಸು ಮತ್ತು ಅಭಿಮಾನಿಗಳನ್ನು ಹೊಂದಿದ್ದು, ಈ ಪ್ರಭಾವದಿಂದಾಗಿ ಆರೋಪಿಗಳ ಬೆಂಬಲಿಗರು ರೇಣುಕಾಸ್ವಾಮಿ ಮತ್ತು ಅವರ ಕುಟುಂಬವನ್ನು ಸಾಕ್ಷಿ ಹೇಳದಂತೆ ತಡೆಯಲು ಅಥವಾ ಲಂಚ ನೀಡಲು ಪ್ರಯತ್ನ ಮಾಡಬಹುದು ಎಂದು ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ಬೆಂಬಲಿಗರು ಸಾಕ್ಷಿಗಳನ್ನು ಬೆದರಿಸಿರುವ ವರದಿಗಳಿವೆ ಎಂದು ಆರೋಪಿಸಿರುವ ಪೊಲೀಸರು, ಆರೋಪಿಗಳಿಗೆ ಜಾಮೀನು ನೀಡಿದರೆ, ಪ್ರಕರಣದ ಮಹತ್ವದ ಸಾಕ್ಷ್ಯಗಳನ್ನು ನಾಶಪಡಿಸುವ ಅಪಾಯವಿದೆ ಎಂದು ಪೊಲೀಸರು ವಾದಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ರನ್ನು ಭೇಟಿ ಮಾಡಿದ ಬಳಿಕ ನಟ ವಿನೋದ್ ರಾಜ್ ಮತ್ತು ಗಣೇಶ್ ರಾವ್ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡಿದ್ದರು. ವಿನೋದ್ ರಾಜ್ ರೇಣುಕಾಸ್ವಾಮಿ ತಂದೆಗೆ 1 ಲಕ್ಷ ಹಣವನ್ನು ನೀಡಿದ್ದರು. ಇದೆಲ್ಲವನ್ನೂ ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಿಮಾಂಡ್ ಅರ್ಜಿಯಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದೇ ಆರೋಪ ಮಾಡಿದ್ದಾರೆ.
ಮನೆ ಊಟ ಸಿಗದೆ ಕಂಗಾಲಾಗಿರುವ ನಟ ದರ್ಶನ್ಗೆ ಈಗ ಮತ್ತೊಮ್ಮೆ ನ್ಯಾಯಾಲಯ ಶಾಕ್ ಕೊಟ್ಟಿದೆ. ಆಗಸ್ಟ್ 14ರವರೆಗೆ ನಟ ದರ್ಶನ್ ಇನ್ನೂ ಜೈಲಿನಲ್ಲೇ ಇರಬೇಕಾಗುತ್ತದೆ. ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬಳಿಕವೇ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.












Click it and Unblock the Notifications