Darshan-Prajwal Revanna: ಪರಪ್ಪನ ಅಗ್ರಹಾರದಲ್ಲಿ ದರ್ಶನ್-ಪ್ರಜ್ವಲ್ ರೇವಣ್ಣ ಭೇಟಿ! ಆಗಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್, ಜೈಲಿನಲ್ಲಿ ಕಾಲ ಕಳೆಯಲು ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿಕೊಂಡಿದ್ದಾರೆ. ಯಾರೊಂದಿಗೂ ಹೆಚ್ಚು ಮಾತನಾಡದ ದರ್ಶನ್, ಸದ್ಯ ಮನೆ ಊಟ, ಹಾಸಿಗೆ ಮತ್ತು ಪುಸ್ತಕಗಳನ್ನು ಕೊಡುವಂತೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಇದೇ ಪರಪ್ಪನ ಅಗ್ರಹಾರದಲ್ಲಿ ಪೆನ್ಡ್ರೈವ್ ಪ್ರಕರಣ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಕೂಡ ಇದ್ದಾರೆ. ಜೈಲಿನಲ್ಲಿ ಯಾರೊಂದಿಗೂ ಹೆಚ್ಚ ಮಾತನಾಡದ ಪ್ರಜ್ವಲ್ ರೇವಣ್ಣ ದರ್ಶನ್ರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.

ವೈದ್ಯಕೀಯ ಪರೀಕ್ಷೆ ವೇಳೆ ಭೇಟಿ
ಜೈಲಿನಲ್ಲಿರುವ ಮುಖ್ಯ ವೈದ್ಯಕೀಯ ಅಧಿಕಾರಿಗಳ ಕೊಠಡಿಯಲ್ಲಿ ದರ್ಶನ್ ಮತ್ತು ಪ್ರಜ್ವಲ್ ರೇವಣ್ಣ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ. ಬಳಿಕ ಇಬ್ಬರು ಕೂಡ 10 ನಿಮಿಷಗಳು ಮಾತನಾಡಿದ್ದಾರೆ ಎಂದು ವರದಿಯಾಗಿದೆ. ದರ್ಶನ್ಗೆ ರಾಜಕೀಯ ಮುಖಂಡರ ಜೊತೆ ಮೊದಲಿನಿಂದಲೂ ಪರಿಷಯ ಇದೆ. ಪ್ರಜ್ವಲ್ ಜೊತೆ ಕೂಡ ದರ್ಶನ್ ಪರಿಚವಿದ್ದು, ಜೈಲಿನಲ್ಲಿ ಕೆಲವು ನಿಮಿಷ ಮಾತನಾಡಿದ್ದಾರೆ.
ದರ್ಶನ್ ಮೇಲೆ ವೈದ್ಯಕೀಯ ಸಿಬ್ಬಂದಿ ನಿಗಾ
ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ದರ್ಶನ್ ಹೆಣಗಾಡುತ್ತಿದ್ದಾರೆ. ಹೊರಗಡೆ ಇದ್ದಾಗ ಒಳ್ಳೆಯ ಊಟ ಮಾಡಿಕೊಂಡು, ಜಿಮ್ ಮಾಡುತ್ತಿದ್ದ ದರ್ಶನ್ಗೆ ಜೈಲಿನ ಊಟಕ್ಕೆ ಹೊಂದಿಕೊಳ್ಳಲು ಆಗುತ್ತಿಲ್ಲ, ಇದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರಿದ್ದು, ತೂಕ ಕಳೆದುಕೊಂಡಿದ್ದಾರೆ. ಅಲ್ಲದೆ ಹಾಸಿಗೆಯಿಲ್ಲದೆ ಸರಿಯಾಗಿ ನಿದ್ದೆ ಕೂಡ ಮಾಡಲು ಕಷ್ಟಪಡುತ್ತಿದ್ದಾರೆ ಎಂದು ವರದಿಯಾಗಿದೆ.
ಮನೆ ಊಟ, ಮಲಗಲು ಹಾಸಿಗೆ ಮತ್ತು ಪುಸ್ತಕ ನೀಡುವಂತೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಜುಲೈ 18ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಅದುವರೆಗೂ ದರ್ಶನ್ಗೆ ಜೈಲಿನ ವ್ಯವಸ್ಥೆಗೆ ತಕ್ಕಂತೆ ಇರಬೇಕಾಗುತ್ತದೆ.
ಡೆವಿಲ್ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ದರ್ಶನ್ ಕೈಗೆ ಗಾಯ ಮಾಡಿಕೊಂಡಿದ್ದರು. ಅದಕ್ಕಾಗಿಯೇ ದರ್ಶನ್ ಮೇಲೆ ಜೈಲಿನ ವೈದ್ಯಕೀಯ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಮುಖ್ಯ ವೈದ್ಯಾಧಿಕಾರಿ ಹರ್ಷವರ್ಧನ್ ಮತ್ತು ವೈದ್ಯ ನಾಗರಾಜ್ ದರ್ಶನ್ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಬಲಗೈಯನ್ನು ಮಡಚಲು ಸಾಧ್ಯವಾಗದ ಕಾರಣ ಊಟ ತಿನ್ನಲು ಚಮಚ ಕೊಡುವಂತೆ ಮನವಿ ಮಾಡಿದ್ದಾರೆ. ದರ್ಶನ್ ಅವರ ವೈದ್ಯಕೀಯ ವರದಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಜುಲೈ 18ರಂದು ಹೈಕೋರ್ಟ್ಗೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.












Click it and Unblock the Notifications