ನಮ್ಮ ಇಂಡಸ್ಟ್ರಿ ಸತ್ತು ಹೋಗಿ ಬಿಡುತ್ತಿದೆ ಎನ್ನುವ ಮಾತುಗಳೇ ನೆಗೆಟಿವ್-ಡಾಲಿ ಧನಂಜಯ್
ಬೆಂಗಳೂರು, ಆಗಸ್ಟ್ 26: ಕನ್ನಡ ಚಿತ್ರರಂಗ ದಿನದಿಂದ ದಿನಕ್ಕೆ ಸೊರಗಿ ಹೋಗುತ್ತಿದ್ದು, ಜನ ಕಾತುರದಿಂದ ಕಾಯುತ್ತಿರುವ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಬಿಡುಗಡೆಯಾದ ಚಿತ್ರಗಳನ್ನು ನೋಡಲು ಜನ ಥಿಯೇಟರ್ನತ್ತ ಮುಖ ಮಾಡುತ್ತಿಲ್ಲ. ಕಳೆದ ಹಲವು ತಿಂಗಳಿನಿಂದ ಇದೇ ಪರಿಸ್ಥಿತಿ ಮುಂದುವರಿದಿದೆ. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಸಂಕಷ್ಟ ಎದುರಾಗಿದೆ ಎಂದು ಹಲವು ನಟರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಟ ಡಾಲಿ ಧನಂಜಯ್ ಮಾತ್ರ ಕನ್ನಡ ಚಿತ್ರರಂಗದ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದು, ಏನೇ ಆದರೂ ನಮ್ಮ ಕೆಲಸ ನಿರಂತರವಾಗಿರಬೇಕು ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗ ಹೀಗಿದ್ದರೂ ಡಾಲಿ ಧನಂಜಯ್ ನಾಲ್ಕು ಸಿನಿಮಾಗಳನ್ನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟ ಡಾಲಿ ಧನಂಜಯ್, ನಾವೇ ಇಂಡಸ್ಟ್ರಿಗೆ ಜನ ಬರುತ್ತಿಲ್ಲ..ಅದಾಗುತ್ತಿಲ್ಲ..ಇದಾಗುತ್ತಿಲ್ಲ.. ಅಂದರೆ ಹೇಗೆ..?. ನಮ್ಮ ಇಂಡಸ್ಟ್ರಿ ಸತ್ತು ಹೋಗಿ ಬಿಡುತ್ತಿದೆ ಎನ್ನುವ ಮಾತುಗಳೇ ನೆಗೆಟಿವ್. ಆ ರೀತಿ ಮಾತನಾಡಬಾರದು ಯಾವಾಗಲೂ. ಅದು ಹೇಗೆ ನಮ್ಮ ಕನ್ನಡ ಚಿತ್ರರಂಗ ಸಾಯುತ್ತದೆ ಎಂದು ಧನಂಜಯ್ ಪ್ರಶ್ನೆ ಮಾಡಿದ್ದಾರೆ.

ನಾವು ಚಿತ್ರರಂಗದಲ್ಲಿರುವವರೇ ಪಾಸಿಟಿವ್ ಆಗಿ ಇರಬೇಕು. ನಾವು ಸಿನಿಮಾಕ್ಕೆ ಯಾರು ಬರುತ್ತಿಲ್ಲ ಅಂತಾ ಸಿನಿಮಾ ಮಾಡೋದನ್ನು ನಿಲ್ಲಿಸಿ ಬಿಟ್ಟರೆ ಖಂಡಿತವಾಗಿಯೂ ಅದು ಸತ್ತು ಹೋಗಿ ಬಿಡುತ್ತದೆ. ನಮ್ಮ ಶ್ರಮ ಕೂಡ ನಿರಂತರವಾಗಿರಬೇಕು. ಎಲ್ಲಾ ಕ್ಷೇತ್ರದಲ್ಲಿಯೂ ಸೋಲು-ಗೆಲುವು ಇದ್ದೇ ಇರುತ್ತದೆ. ಆದರೆ ನಿರಂತರ ಶ್ರಮ ಇರಬೇಕು ಎಂದರು.
ನಮ್ಮ ಚಿತ್ರರಂಗದಲ್ಲಿ ನೂರಾರು ಕುಟುಂಬಗಳಿವೆ. ಸಾವಿರಾರು ಕಾರ್ಮಿಕರಿದ್ದಾರೆ. ಸಿನಿಮಾಗಳು ನಡೆಯಬೇಕು. ಪ್ರೇಕ್ಷಕರು ಬರುತ್ತಾರೆ. ಭೀಮ ಮತ್ತು ಕೃಷ್ಣಂ ಪ್ರಣಯ ಸಖಿಗೆ ಬರುತ್ತಿದ್ದಾರಲ್ಲ. ಜನ ಸಿನಿಮಾ ನೋಡುತ್ತಿದ್ದಾರೆ. ಹೀಗಾಗಿ ಸಿನಿಮಾಗಳನ್ನು ನಿರಂತರವಾಗಿ ಮಾಡಬೇಕು. ಜನ ಬರುತ್ತಾರೆ, ನೋಡುತ್ತಾರೆ, ಗೆಲ್ಲಿಸುತ್ತಾರೆ. ಕೆಲವೊಂದು ಸಿನಿಮಾಗಳು ಬೇರೆ ಬೇರೆ ಕಾರಣಗಳಿಂದ ಜನರಿಗೆ ಹತ್ತಿರವಾಗಿರುವುದಿಲ್ಲ. ಕೆಲವೊಂದು ಸಿನಿಮಾಗಳು ಚೆನ್ನಾಗಿರಲ್ಲ ಸೋ ಜನರು ಬಂದಿರುವುದಿಲ್ಲ. ಹೀಗಾಗಿ ನಾವು ಪ್ರೇಕ್ಷಕರನ್ನು ದೂರುವುದರಲ್ಲಿ ಅರ್ಥವೇ ಇಲ್ಲ ಎಂದು ಹೇಳಿದರು.
ನಾನು ಕಲಾವಿದನಾಗಿ ಇಲ್ಲಿ ಬದುಕಬೇಕು ಅಂದರೆ ಹೊಸ ಹೊಸ ಪ್ರತಿಭೆಗಳಿಗೂ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು. ಹೊಸ ನಿರ್ದೇಶಕರು ಬರಬೇಕು..ಹೊಸ ತಂತ್ರಜ್ಞರು ಬರಬೇಕು. ಏನೋ ಒಂದು ಮಾಡುವ ಒದ್ದಾಟ ಇರಬೇಕು. ಸಿನಿಮಾಗಳು ನಡೆಯುತ್ತಿದೆ. ನಿರಂತರವಾಗಿ ಗೆದ್ದಿರುವವರೂ ಯಾರೂ ಇಲ್ಲ. ಸೋಲುಗಳು ಇರುತ್ತದೆ. ಗೆಲುವುಗಳು ಇರುತ್ತದೆ. ಕೆಲಸ ಮಾಡುತ್ತಿರಬೇಕು. ಖಂಡಿತಾ ಚೆನ್ನಾಗಿದ್ದಾಗ ಜನ ಗೆಲ್ಲಿಸುತ್ತಾರೆ ಎಂದು ನಟ ಡಾಲಿ ಧನಂಜಯ್ ಭರವಸೆ ವ್ಯಕ್ತಪಡಿಸಿದರು.












Click it and Unblock the Notifications