Karnataka Budget 2024: ಸಿದ್ದು ಬಜೆಟ್ನಲ್ಲಿ 'ಬಂಗಾರದ ಮನುಷ್ಯ', 'ಡೇರ್ಡೆವಿಲ್ ಮುಸ್ತಾಫಾ' ಸದ್ದು!
ಬೆಂಗಳೂರು, ಫೆಬ್ರವರಿ.16: ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಮಂಡನೆ ವೇಳೆ ಅವರ ಬಾಯಿಂದ ಬಂದ ಕೆಲವು ವಾಕ್ಯಗಳು ಕನ್ನಡಿಗರ ಗಮನ ಸೆಳೆದಿವೆ. ವಚನಗಳು, ಹಾಡುಗಳು, ಸಾಹಿತ್ಯ, ವಾಕ್ಯ, ಹೇಳಿಗಳನ್ನು ಉಲ್ಲೇಖಿಸುತ್ತಾ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಕೆಲವು ವಾಕ್ಯಗಳು ಕನ್ನಡ ಸಿನಿರಸಿಕನ್ನು ಬಜೆಟ್ನತ್ತ ಆಕರ್ಷಿಸಿದೆ.
ಹೌದು... ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಕೆಲವು ಸಿನಿಮಾ ಸಾಲುಗಳನ್ನು ಅವರು ಪ್ರಸ್ತಾಪಿಸಿದ್ದು ವಿಶೇಷವಾಗಿದೆ. ಕನ್ನಡ ಸಿನಿಮಾ ರಂಗದ ಧ್ರುವತಾರೆ ಡಾ. ರಾಜ್ಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಸಿನಿಮಾದ ಪ್ರಸಿದ್ಧ 'ಆಗದು ಎಂದು ಕೈ ಕಟ್ಟಿ ಕುಳಿತರೆ...' ಹಾಡನ್ನು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ 'ಡೇರ್ಡೆವಿಲ್ ಮುಸ್ತಾಫಾ' ಸಿನಿಮಾದಲ್ಲಿನ ಸಾಮರಸ್ಯವನ್ನು ತಿಳಿಸುವ ಸಾಲುಗಳನ್ನು ಸಿಎಂ ಓದಿದ್ದಾರೆ.

ಬಜೆಟ್ನಲ್ಲಿ 'ಆಗದು ಎಂದು ಕೈ ಕಟ್ಟಿ ಕುಳಿತರೆ...' ಎಂದ ಸಿಎಂ
ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಪ್ರಾರಂಭಿಸುತ್ತಿದ್ದಂಎ ಬಂಗಾರದ ಮನುಷ್ಯ ಸಿನಿಮಾದ ಹಾಡನ್ನು ಉಲ್ಲೇಖಿಸಿದ್ದಾರೆ. "ಆಗದು ಎಂದು.. ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ... ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು.." ಎಂಬ ಖ್ಯಾತ ಹಾಡನ್ನು ಹಾಡಿದ್ದಾರೆ.
ಇದರ ಜೊತೆಗೆ ವರನಟ ರಾಜ್ಕುಮಾರ್ ಅಭಿನಯದ ಹಾಗೂ ಆರ್.ಎನ್.ಜಯಗೋಪಾಲ್ ರಚಿಸಿದ 'ಬಂಗಾರದ ಮನುಷ್ಯ' ಚಿತ್ರದ ಈ ಹಾಡಿನಂತೆ ದೇಶದ ಯಾವುದೇ ಸರ್ಕಾರ ಜಾರಿಗೊಳಿಸದ ಅತ್ಯಂತ ಬೃಹತ್ ಪ್ರಮಾಣದ ನೇರ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಶ್ರೇಯ ನಮ್ಮದಾಗಿದೆ. ನಮ್ಮ ಮಹತ್ವಾಕಾಂಕ್ಷೆಯ ಗ್ಯಾರಂಟಿಗಳು ಜನರ ಆಶೋತ್ತರಗಳನ್ನು ಆಧರಿಸಿವೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಬಜೆಟ್ ಮಂಡನೆಯಲ್ಲಿ ಸಾಮರಸ್ಯದ ಗಾಳಿ!
ಇನ್ನು, ಸಮಾಜ ಕಲ್ಯಾಣ ಇಲಾಖೆ ಬಗೆಗಿನ ಯೋಜನೆಗಳು ಮತ್ತು ಇಲಾಖೆಗೆ ನೀಡಿರುವ ಅನುದಾನವನ್ನು ಓದುವ ಮೊದಲು 'ಡೇರ್ಡೆವಿಲ್ ಮುಸ್ತಾಫಾ' ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಬರೆದ ಸಾಲುಗಳನ್ನು ಓದಿದ್ದಾರೆ. ಶಶಾಂಕ್ ಸೋಗಲ್ ನಿರ್ದೇಶನದ 'ಡೇರ್ಡೆವಿಲ್ ಮುಸ್ತಾಫಾ' ಮೇ 19, 2023 ರಲ್ಲಿ ಬಿಡುಗಡೆಯಾಗಿ, ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು.
ಕೋಮು ಸಾಮರಸ್ಯವನ್ನು ಸಾರುವ ಕಥೆಯನ್ನು ಒಳಗೊಂಡಿದ್ದ ಸಿನಿಮಾಕ್ಕೆ ನಟ ಡಾಲಿ ಧನಂಜಯ್ ಬಂಡವಾಳ ಹೂಡಿದ್ದರು. ಅವರೇ ಸಾಹಿತ್ಯ ಕೂಡ ಬರೆದಿದ್ದರು. "ಒಂದು ತೋಟದಲ್ಲಿ ನೂರು ಹೂವು ಅರಳಲಿ.. ಎಲ್ಲ ಕೂಡಿ ಆಡುವಂಥ ಗಾಳಿ ಬೀಸಲಿ...." ಎಂಬ ಸಾಮರಸ್ಯ ಭರಿತ ಸಾಹಿತ್ಯಕ್ಕೆ ಡಾಲಿ ಲೇಖನಿ ಹಿಡಿದಿದ್ದರು. ಈಗ ಅದೇ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರ ದನಿಯಲ್ಲಿ ರಿಂಗಣಿಸಿದೆ.












Click it and Unblock the Notifications