Chitral Rangaswamy: 'ಬಿಗ್ ಬಾಸ್ ತಂಡ ನನ್ನ ಋಣದಲ್ಲಿದೆ'
ಬಿಗ್ ಬಾಸ್ ತಂಡದಿಂದ ತಮಗಾದ ಅನ್ಯಾಯದ ವಿರುದ್ಧ ಪದೇ ಪದೇ ಧ್ವನಿ ಎತ್ತುತ್ತಿರುವ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ ಮತ್ತೆ ಬಿಗ್ ಬಾಸ್ ವಿರುದ್ಧ ಗುಡುಗಿದ್ದಾರೆ. ಕಳೆದ ಸೀಜನ್ ಬಿಗ್ ಬಾಸ್ನಲ್ಲಿ ಚಿತ್ರಾಲ್ ಅವರನ್ನು ಗ್ರಾಂಡ್ ಓಪನಿಂಗ್ಗೆ ಕರೆದು ವಾಪಸ್ ಕಳುಹಿಸಲಾಗಿತ್ತು. ಈ ಘಟನೆ ಬಳಿಕ ಏನಾಯಿತು ಎನ್ನುವುದರ ಬಗ್ಗೆ ಅವರು ಮಾತನಾಡಿದ್ದು, ಈ ಬಿಗ್ ಬಾಸ್ ತಂಡ ನನ್ನ ಋಣದಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.
'ನಾನು ಬಿಗ್ ಬಾಸ್ ಬಗ್ಗೆ ಮಾತನಾಡಿದಾಗ ನನಗೆ ಬರುವ ನೆಗೆಟಿವ್ ಕಮೆಂಟ್ಸ್ ಏನು ಅಂದರೆ ಇವಳನ್ನು ಕರೆದುಕೊಂಡಿಲ್ಲ ಅದಕ್ಕೆ ಮಾತನಾಡುತ್ತಾಳೆ ಅಂತಾ ಹೇಳುತ್ತಾರೆ. ನಾನು ಸಾಯೋತನಕ ಮಾತನಾಡುತ್ತೇನೆ. ನನಗೆ ಆಗಿರುವುದು ನೆಗೆಟಿವ್ ಅನುಭವ ಅದಕ್ಕೆ ನಾನು ನೆಗೆಟಿವ್ ಮಾತನಾಡುತ್ತೇನೆ. ನನಗೆ ಬಿಗ್ ಬಾಸ್ನ ಸತ್ಯಾಸತ್ಯತೆಗಳು ಗೊತ್ತಾದ ಮೇಲೆ ನಾನು ಅದರ ಬಗ್ಗೆ ಮಾತನಾಡಲೇ ಬೇಕು' ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.

ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ ಅವರು, 'ಕಹಿ ಅನುಭವ ನನಗೆ ಆಗಿರುವುದು ನಾನು ಮಾತನಾಡುತ್ತೇನೆ. ಅಲ್ಲಿ ಏನೇನು ಆಗಿದೆ ಎನ್ನುವುದು ನನಗೆ ಗೊತ್ತು. ನನಗೆ ಅನ್ಯಾಯ ಆಗಿದೆ ನಾನು ಮಾತನಾಡುತ್ತಿದ್ದೇನೆ. ನಿಮ್ಮ ಅಕ್ಕ-ತಂಗಿಯರಿಗೆ ಸುಮ್ಮನೆ ಮನೆಯಲ್ಲಿದ್ದವರಿಗೆ ಕೊನೆಯ ಸ್ಪರ್ಧಿ ಅಂತಾ ಕರೆಸಿ, ಪ್ರಸಾರ ಆಗಲ್ಲ ಅಂತಾನೂ ಹೇಳದೆ ನಮ್ಮನ್ನು ಆ ರೀತಿ ಬಳಸಿಕೊಂಡಿರುವುದು ತಪ್ಪು' ಎಂದರು.
'ಈ ವಿಚಾರದಲ್ಲಿ ನನಗೆ ಹೆಮ್ಮೆ ಏನೂ ಅಂದರೆ ಅಷ್ಟು ದೊಡ್ಡ ಶೋ ಅದು. ಅಂತಹ ಶೋಗೆ ಸಂಭಾವನೆ ಪಡೆಯದೇ ಬಿಟ್ಟಿ ಕಂಟೆಂಟ್ ಕೊಟ್ಟಿದ್ದೇನೆ. ಈ ಶೋಗೆ ಹೋಗಲು ಆರೋಗ್ಯ ತಪಾಸಣೆಗೆ ಹದಿನೈದು ಸಾವಿರ ರೂಪಾಯಿ ಖರ್ಚಾಗಿದೆ. ನನಗೆ ಅವರಿಂದ ಶುರುವಾದ ಡಿಪ್ರೆಶನ್ ಇದ್ಯಾಲಾ ಅದಕ್ಕೆ ಯಾರೂ ಬೆಲೆ ಕಟ್ಟಲಾಗುವುದಿಲ್ಲ' ಎಂದು ಹೇಳಿದರು.

'ಒಂದು ವೇಳೆ ನಾನು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದರೆ ರಜತ್ ಇದ್ದ ಹಾಗೆ ಇರುತ್ತಿದೆ. ಅವರೇ ಉಳಿಸಿಕೊಳ್ಳುತ್ತಿದ್ದರು. ಅಲ್ಲಿಗೆ ಹೋಗಿ ಬಂದ ಮೇಲೆ ಇಷ್ಟೊಂದು ಮುಕ್ತವಾಗಿ ಮಾತನಾಡಲು ಆಗುವುದಿಲ್ಲ ಯಾಕೆಂದರೆ ಕಾಂಟ್ರ್ಯಾಕ್ಟ್ಗೆ ಸಹಿ ಹಾಕಿರುತ್ತಿದ್ದೆ. ನನಗೂ ಕಾಂಟ್ರ್ಯಾಕ್ಟ್ಗೆ ಸಹಿ ಮಾಡಿ ಅಂತಾ ಒತ್ತಾಯುಸಿದ್ದರು. ಯಾಕೆಂದರೆ ನನ್ನ ಹಣ ಕೊಡಿ ಅಂತಾ ಕೇಳಿದಾಗ ಅಗ್ರಿಮೆಂಟ್ಗೆ ಸಹಿ ಹಾಕಿ ಅಂತಾ ಹಿಂದೆ ಬಿದ್ದರು. ಅದನ್ನು ನೋಡಿದಾಗ ರಿಜೆಕ್ಷನ್ಗೆ ನನಗೆ ಮೊದಲೇ ಒಪ್ಪಿಗೆ ಇದೆ ಅಂತಾ ಬರೆದಿದ್ದರು'.
'ಒಂದು ಸಲ ಕಾಂಟ್ರ್ಯಾಕ್ಟ್ಗೆ ಸಹಿ ಮಾಡಿದರೆ ನಾನು ಮತ್ತೆಲ್ಲೂ ಅದರ ಬಗ್ಗೆ ಮಾತನಾಡಲು ಆಗುವುದಿಲ್ಲ. ನಾನು ಬಿಗ್ ಬಾಸ್ ಅವರ ಒಪ್ಪಿಗೆಗೆ ಸಹಿ ಹಾಕಿಲ್ಲ. ನನ್ನ ಪೇಮೆಂಟ್ ಕೂಡ ತೆಗೆದುಕೊಂಡಿಲ್ಲ. ಒಂದು ದೊಡ್ಡ ಶೋಗೆ ಉಚಿತ ಕಟೆಂಟ್ ಕೊಟ್ಟಿದ್ದೇನೆ. ನನ್ನ ಋಣದಲ್ಲಿ ಅವರಿದ್ದಾರೆ' ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.












Click it and Unblock the Notifications