CCL 2025: ಚಿನ್ನಸ್ವಾಮಿಯಲ್ಲಿ ಕಿಚ್ಚ ಸುದೀಪ್ ಬ್ಯಾಟಿಂಗ್ ನೋಡಿ ಅಭಿಮಾನಿಗಳ ಸಂಭ್ರಮ
ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಹು ನಿರೀಕ್ಷಿತ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) 2025ಕ್ಕೆ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ಟೈಗರ್ಸ್ ಚೆನ್ನೈ ರಿನ್ಹೋಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದರೆ, ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ಮುಖಾಮುಖಿಯಾದವು.
ಟಾಸ್ ಗೆದ್ದ ತೆಲುಗು ವಾರಿಯರ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ 10 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 113 ರನ್ ಗಳಸಿತು. ಸಿಸಿಎಲ್ ಪಂದ್ಯಗಳು 20 ಓವರ್ ಗಳದ್ದಾದರೂ, 10 - 10 ಓವರ್ ಗಳಂತೆ ಆಡಿಸಲಾಗುತ್ತದೆ. ಮೊದಲ 10 ಓವರ್ ಒಂದು ಇನ್ನಿಂಗ್ಸ್ ಬಳಿಕ 10 ಓವರ್ ಒಂದು ಇನ್ನಿಂಗ್ಸ್ ಆಗಿರುತ್ತದೆ.

ಮೊದಲ ಇನ್ನಿಂಗ್ಸ್ನಲ್ಲಿ ಡಾರ್ಲಿಂಗ್ ಕೃಷ್ಣ ತೆಲುಗು ವಾರಿಯರ್ಸ್ ವಿರುದ್ಧ ಅಬ್ಬರಿಸಿದರು. 39 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 80 ರನ್ ಗಳಿಸಿದರು. ಕರಣ್ ಆರ್ಯನ್ 11 ರನ್ ಗಳಿಸಿದರೆ, ರಾಜೀವ್ 1 ರನ್, ಜೆಕೆ 3 ರನ್ ಮತ್ತು ಮಂಜುನಾಥ್ ಗೌಡ 2 ರನ್ ಗಳಿಸಿದರು.
ಕಿಚ್ಚ ಸುದೀಪ್ ಬ್ಯಾಟಿಂಗ್ ಮೋಡಿ
ಬಳಿಕ ಬ್ಯಾಟಿಂಗ್ ಮಾಡಿದ ತೆಲುಗು ವಾರಿಯರ್ಸ್ 10 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 99 ರನ್ ಗಳಿಸುವ ಮೂಲಕ 14 ರನ್ಗಳ ಹಿನ್ನಡೆ ಅನುಭವಿಸಿತು. ನಾಯಕ ಅಖಿಲ್ 31 ಎಸೆತಗಳಲ್ಲಿ 51 ರನ್ ಗಳಿಸಿ ತಂಡಕ್ಕೆ ನೆರವಾದರು.
14 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ ಸ್ಫೋಟಕ ಆರಂಭ ಪಡೆಯಿತು. ಚಂದನ್ ಕುಮಾರ್ 5 ಎಸೆತಗಳಲ್ಲಿ 12 ರನ್ ಗಳಿಸಿದರೆ, ಮಂಜುನಾಥ್ ಗೌಡ 5 ಎಸೆತಗಳಲ್ಲಿ 12 ರನ್ ಗಳಿಸಿದರು.
ಬಳಿಕ ನಾಯಕ ಕಿಚ್ಚ ಸುದೀಪ್ ಬ್ಯಾಟ್ ಹಿಡಿದು ಅಂಕಣಕ್ಕಿಳಿದರು. ಸುದೀಪ್ ಬ್ಯಾಟಿಂಗ್ಗೆ ಬರುತ್ತಿದ್ದಂತೆ ಇಡೀ ಕ್ರೀಡಾಂಗಣದಲ್ಲಿ ಹರ್ಷೋಧ್ಘಾರ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಸುದೀಪ್ ಕೂಡ ಬ್ಯಾಟಿಂಗ್ ಮಾಡಿದರು. 9 ಎಸೆತಗಳಲ್ಲೇ 2 ಬೌಂಡರಿಯೊಂದಗಿ 14 ರನ್ ಗಳಿಸಿದರು. ಈ ಹಂತದಲ್ಲೇ ಅವರು ಕಾಲಿನ ನೋವಿನಿಂದ ಬಳಲುತ್ತಿದ್ದರಿಂದ ರಿಟೈರ್ಡ್ ಹರ್ಟ್ ಆಗಿದ್ದು ಅಭಿಮಾನಿಗಳಿಗೆ ನಿರಾಸೆಯಾಯಿತು.












Click it and Unblock the Notifications