Kantara to Kaatera: 'ಥಿಂಕ್ ಲೋಕಲ್ ಗೋ ಗ್ಲೋಬಲ್'! ಬದಲಾಗುತ್ತಾ ಕನ್ನಡ ಚಿತ್ರರಂಗದ ಚಿಂತನೆ?
'ಕಾಟೇರ' ಕನ್ನಡ ಚಿತ್ರರಂಗಕ್ಕೆ 2023 ರಲ್ಲಿ ಹೊಸ ಭರವಸೆ ಕೊಟ್ಟ ಸಿನಿಮಾ. ದರ್ಶನ್ ಸಿನಿ ಬದುಕಿನ ದೊಡ್ಡ ಹಿಟ್ ಆಗುವ ಎಲ್ಲಾ ಲಕ್ಷಣ ತೋರಿದ್ದು, ಚಿತ್ರಮಂದಿರಗಳಲ್ಲಿ ಒಂದು ವಾರದ ನಂತರವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಅಪ್ಪಟ ಮಣ್ಣಿನ ಕತೆಯ ಸಿನಿಮಾದಲ್ಲಿ ದರ್ಶನ್ ನಟಿಸಿ ಗೆದ್ದಿದ್ದಾರೆ. ದರ್ಶನ್ ಅಭಿಮಾನಿಗಳು ಮಾತ್ರವಲ್ಲದೆ ಎಲ್ಲಾ ವರ್ಗಕ್ಕೂ ಸಿನಿಮಾ ಇಷ್ಟವಾಗಿದೆ. ಕುಟುಂಬ ಸಮೇತವಾಗಿ ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಿದ್ದಾರೆ.

ಕೆಜಿಎಫ್ ಯಶಸ್ಸನ್ನು ಕಂಡು ಅನೇಕ ಕನ್ನಡ ನಿರ್ಮಾಪಕ, ನಿರ್ದೇಶಕರು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೋಗಿ ಮಕಾಡೆ ಮಲಗಿರುವುದು ಸತ್ಯ. ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ಮಾತ್ರಕ್ಕೆ ಕೋಟಿ ಕೋಟಿ ಗಳಿಸಲು ಸಾಧ್ಯವಿಲ್ಲ ಎನ್ನುವುದು ಈಗಾಗಲೇ ಗೊತ್ತಾಗಿದೆ.
ಉತ್ತಮ ಕತೆ ಇದ್ದರೆ, ಸಿನಿಮಾ ಚನ್ನಾಗಿದ್ದರೆ ಮಾತ್ರ ಜನ ಮೆಚ್ಚುತ್ತಾರೆ. ಇಲ್ಲವಾದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಪ್ರಚಾರ ಮಾಡಿದರೂ ಜನರನ್ನು ಒಪ್ಪಿಸುವುದು ಕಷ್ಟ.
ಥಿಂಕ್ ಲೋಕಲ್.. ಗೋ ಗ್ಲೋಬಲ್!
ಕಾಟೇರ ಬಳಿಕವಾದ್ರೂ ಕನ್ನಡ ಚಿತ್ರರಂಗದ ದಿಕ್ಕು ಬದಲಾಗುತ್ತಾ ಎನ್ನುವುದನ್ನು ನೋಡಬೇಕಿದೆ. 'ಥಿಂಕ್ ಲೋಕಲ್ ಗೋ ಗ್ಲೋಬಲ್' ಬಗ್ಗೆ ಇನ್ನಾದರೂ ಚಿತ್ರರಂಗ ಚಿಂತಿಸಬೇಕಿದೆ.
'ಕಾಂತಾರಾ' ರಿಷಭ್ ಶೆಟ್ಟಿ ನಿರ್ದೇಶನದ ಜೊತೆಗೆ ನಟನೆ ಮಾಡಿದ್ದ ಸಿನಿಮಾ ಕಡಿಮೆ ನಿರೀಕ್ಷೆಯೊಂದಿಗೆ ಚಿತ್ರಮಂದಿರಕ್ಕೆ ಬಂದಿತ್ತು, ಆದರೆ ನಂತರ ಹೊಸ ಇತಿಹಾಸ ಸೃಷ್ಟಿಸಿತು. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಕಾಂತಾರ ಬಳಿಕ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲೂ ಬಿಡುಗಡೆಯಾಗಿ ಭರ್ಜರಿ ಗೆಲುವು ಕಂಡಿತು. ಕರಾವಳಿ ಸಂಸ್ಕೃತಿ, ಸಂಪ್ರದಾಯ, ಕಂಬಳ, ದೈವ ಕೋಲವನ್ನು ಜನ ಕಣ್ತುಂಬಿಕೊಂಡರು.
ಕಾಂತಾರ ಗೆಲುವು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದಿಕ್ಕು ತೋರಿತು, ನಮ್ಮದೇ ನೆಲದ ಕತೆಗಳನ್ನು ಉತ್ತಮವಾಗಿ ಕಟ್ಟಿಕೊಟ್ಟರೆ ಅದಕ್ಕೆ ವಿಶ್ವ ಮಟ್ಟದಲ್ಲೂ ಮಾರುಕಟ್ಟೆ ಸಿಗುತ್ತದೆ ಎನ್ನುವುದನ್ನು ರಿಷಬ್ ಶೆಟ್ಟಿ ತೋರಿಸಿಕೊಟ್ಟರು. ಅದಾದ ಬಳಿಕ ಬಂದ ಟಗರುಪಲ್ಯ, ಹೊಯ್ಸಳ, ಕ್ಷೇತ್ರಪತಿ ಸಿನಿಮಾ ಕೂಡ ಗಮನ ಸೆಳೆದವು.
ಈಗ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಟೇರ ಕೂಡ ಮಣ್ಣಿನ ಕತೆಯ ಸಿನಿಮಾ, ರೈತರ ಸಮಸ್ಯೆಗಳು, ಭೂ ಸುಧಾರಣಾ ಕಾಯ್ದೆ, ಜಾತಿ ಪದ್ಧತಿಯಂತಹ ಸಮಸ್ಯೆಗಳ ಬಗ್ಗೆ ಬೆಳಕು ಚಲ್ಲುವ ಸಿನಿಮಾ. ಕಾಟೇರ ಕನ್ನಡದಲ್ಲಿ ಮಿಂಚಿದ ಬಳಿಕ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲೂ ಬಿಡುಗಡೆಗೆ ಸಜ್ಜಾಗಿದೆ, ಅಲ್ಲೂ ಕೂಡ ಗೆಲುವು ಪಡೆಯುವ ವಿಶ್ವಾಸವಿದೆ.
ಇನ್ನು ಮುಂದಾದರೂ ಕನ್ನಡದಲ್ಲಿ ಮಣ್ಣಿನ ಕತೆಗಳನ್ನು ಕಮರ್ಷಿಯಲ್ ಆಗಿಯೇ ಕಟ್ಟಿಕೊಡುವ ಬಗ್ಗೆ ಚಿತ್ರರಂಗ ಚಿಂತಿಸಬೇಕಿದೆ.












Click it and Unblock the Notifications