Hanumantha: ಹನುಮಂತನ ವಿರುದ್ಧ ಗಂಭೀರ ಆರೋಪ- ಸ್ತ್ರೀಶಕ್ತಿ ಗರಂ?
ಸರಿಗಮಪ ಕಾರ್ಯಕ್ರಮದ ಮೂಲಕ ವೀಕ್ಷಕರ ಮನ ಗೆದ್ದ ಹನುಮಂತ ಈಗ ಬಿಗ್ಬಾಸ್ ಮನೆಯಲ್ಲೂ ನೂರು ದಿನಗಳಿಗಿಂತಲೂ ಹೆಚ್ಚು ದಿನ ಇದ್ದು ವಿಜೇತರಾಗಿ ಹೊರಬಂದಿದ್ದಾರೆ. ಹನುಮಂತ ಗುರುತಿಸಿಕೊಂಡಿದ್ದು ಸಮಾಜದಲ್ಲಿ ಖ್ಯಾತಿ ಪಡೆದಿದ್ದು ಹಾಡಿನ ಮೂಲಕ. ಈ ಹಾಡುಗಾರಿಕೆ ಬಿಗ್ಬಾಸ್ ಮನೆಯಲ್ಲಿ ಅವರನ್ನು ಗೆಲ್ಲುವಂತೆ ಮಾಡಿದೆ. ಆದರೆ ಇದೀಗ ಈ ಹಾಡಿನ ಬಗ್ಗೆ ಅಪಶ್ವರ ವ್ಯಕ್ತವಾಗಿದೆ. ಹನುಮಂತನ ಹಾಡಿನಲ್ಲಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಹಾಗಾದರೆ ಹನುಮಂತನ ಯಾವ ಹಾಡಿಗೆ ವಿರೋಧ ವ್ಯಕ್ತವಾಗಿದೆ? ವಿರೋಧ ವ್ಯಕ್ತಪಡಿಸಿದ್ದು ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರಾದ ಹನುಮಂತ ಅವರನ್ನು ಹೋದಕಡೆಗಳಲೆಲ್ಲಾ ಕೊಂಡಾಡಲಾಗುತ್ತಿದೆ. ರೋಡ್ ಶೋ ಕೂಡ ಮಾಡಲಾಗುತ್ತಿದೆ. ಈ ವೇಳೆ ಹನುಮಂತ ಹಾಡಿದ ಹಾಡು ಮಹಿಳೆಯರಿಗೆ ಅವಮಾನ ಮಾಡುವಂತಿದೆ ಎಂದು ಸ್ತ್ರೀಶಕ್ತಿ ದೂರಿದೆ. ಹನುಮಂತ ಹಾಡಿನ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ದೂರಲಾಗಿದೆ. ಇದಕ್ಕೆ ಸಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹನುಮಂತನ ವಿರುದ್ಧ ಗಂಭೀರ ಆರೋಪ- ಅಭಿಮಾನಿಗಳ ಆಕ್ರೋಶ
ಒಬ್ಬರು ಬೆಳೆಯುತ್ತಾರೆ ಅಂದರೆ ಅವನ್ನು ತುಳಿಯುವುದೇ ಕೆಲ ಸಂಘಟನೆಗಳ ಕೆಲಸವಾಗಿ ಬಿಟ್ಟಿದೆ. ಹನುಮಂತ ಯಾವ ಹಾಡಿನಲ್ಲೂ ಮಹಿಳೆಯರಿಗೆ ಅವಮಾನ ಮಾಡಿಲ್ಲ. ಹಾಡು ಹಾಡುವುದು ಅವರ ಕಲೆ. ಅದನ್ನು ಗುರುತಿಸಿ ಇಡೀ ಕರ್ನಾಟಕದ ಜನತೆ ಅವರಿಗೆ ಮತ ನೀಡಿ ಗೆಲ್ಲಿಸಿದ್ದಾರೆ. ಆದರೆ ಇದು ಕೆಲವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಇಂತಹ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಜನ ಕಿಡಿ ಕಾರಿದ್ದಾರೆ.
ಹನುಮಂತ ತಮ್ಮದೇ ಆದ ಶೈಲಿಯಲ್ಲಿ ಹಾಡುಗಳನ್ನು ಸೃಷ್ಟಿಸಿ ಹಾಡುತ್ತಾರೆ. ಈ ಕಲೆ ಅವರಿಗೆ ಚಿಕ್ಕವರಿರುವಾಗಿನಿಂದಲೂ ಬಂದಿದೆ. ಪ್ರತೀ ಶನಿವಾರ ಹನುಮಂತನ ದೇವಸ್ಥಾನಕ್ಕೆ ಹಾಡು ಹಾಡಲು ಹೋಗುತ್ತಿದ್ದ ಹನುಮಂತನಿಗೆ ಇದು ಕರಗತವಾಗಿ ಹೋಗಿದೆ. ಹನುಮಂತ ಒಂದು ಹಾಡು ಹಾಡಿ ಅಂದರೆ ಸಾಕು ಕುರಿಗಾಯಿ ಹನುಮಂತ ಸುಲಲಿತವಾಗಿ ಹಾಡಲು ಶುರು ಮಾಡುತ್ತಾರೆ. ಈ ರೀತಿಯಾಗಿ ಹಾಡು ಸೃಷ್ಟಿ ಮಾಡಲು ಹನುಮಂತನಿಗೆ ಮಾತ್ರ ಸಾಧ್ಯ ಎನ್ನುತ್ತಾರೆ ಅವರ ಅಭಿಮಾನಿಗಳು.
ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ
ಈ ಒಂದು ಕಲೆಯಿಂದಾಗಿನೇ ಹನುಮಂತ ಬಿಗ್ಬಾಸ್ ಮನೆಯಲ್ಲಿ ವಿಜೇತರಾಗಿ ಹೊರಬಂದಿದ್ದಾರೆ. ಅವರಲ್ಲಿರುವ ಕಲೆಯನ್ನು ಗುರುತಿಸಿ ಜನ ಈ ಮಟ್ಟಿಗೆ ಅವರನ್ನು ಬೆಳೆಸಿದ್ದಾರೆ. ಇದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಅವರು ಹಾಡುವ ಹಾಡಿನಲ್ಲಿ ಯಾವುದೇ ತಪ್ಪುಗಳು ಈವರೆಗೂ ಕಂಡು ಬಂದಿಲ್ಲ. ಆದರೆ ಕೆಲ ಜನ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಹನುಮಂತನ ಯಾವ ಹಾಡಿಗೆ ವಿರೋಧ ವ್ಯಕ್ತವಾಗಿದೆ ಅಂದರೆ- 'ಪಾತ್ರಧಾರಿ ನಾವೆಲ್ಲಾ, ಸೂತ್ರಧಾರಿ ಶಿವ ಮೇಲಾ.. ಅವ ಆಡಿಸಿದಂತೆ ಆಡಬೇಕು ನಾವೆಲ್ಲಾ.. ನಿನಗೆ ಕೈ-ಕಾಲು ಕೊಟ್ಟ.. ಕಣ್ಣು ಮೂಗು ಬಾಯಿ ಇಟ್ಟ.. ಸುಂದರವಾದ ರೂಪ ಕೊಟ್ಟ.. ಇದಕ್ಕೆ ಇಟ್ಟಾನು ಹಲ್ಲಿನ ಸೆಟ್ಟಾ..' ಈ ಹಾಡು ಹಾಗೂ ಮಹಿಳೆಯರ ಕುರಿತಾದ ಕೆಲ ಹಾಡುಗಳಿಗೆ ವಿರೋಧ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಈ ಹಾಡುಗಳಿಗೆ ಸ್ತ್ರೀಶಕ್ತಿ ಸಂಘಟನೆ ವಿರೋಧ ವ್ಯಕ್ತಪಡಿಸಿದೆ ಎಂದು ಜನ ಆಕ್ರೋಶಗೊಂಡಿದ್ದಾರೆ
ಒಟ್ಟಿನಲ್ಲಿ ಹನುಮಂತನ ಹಾಡಿನಲ್ಲಿ ಯಾವ ಸಾಲು ಯಾರಿಗೆ ಇಷ್ಟವಾಗಿಲ್ಲ ಅನ್ನೋದು ಇನ್ನೂ ಕೂಡ ಸ್ಪಷ್ಟವಾಗಬೇಕಿದೆ. ಸ್ತ್ರೀಶಕ್ತಿ ಸಂಘಟನೆ ಯಾವ ಮಾಧ್ಯಮದಲ್ಲೂ ಈ ಬಗ್ಗೆ ಆರೋಪ ಮಾಡಿಲ್ಲ. ಆದರೆ ಕೆಲ ಯೂಟ್ಯೂಬ್ಗಳಲ್ಲಿ ಇಂತಹದೊಂದು ಆರೋಪ ಕೇಳಿ ಬಂದಿದೆ. ಇದಕ್ಕೆ ಸ್ತ್ರೀಶಕ್ತಿ ಸಂಘಟನೆ ಉತ್ತರ ನೀಡಬೇಕಿದೆ.












Click it and Unblock the Notifications