Bigg Boss: ಚಾಲನೆಗೂ ಮುನ್ನ ಬಿಗ್ ಬಾಸ್ ತಂಡದಿಂದ ಇಂದು ಸುದ್ದಿಗೋಷ್ಠಿ.. ಏನಿರಬಹುದು..?
ಬೆಂಗಳೂರು ಸೆಪ್ಟೆಂಬರ್ 23: ಬಹುನಿರೀಕ್ಷಿತ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಸೆಪ್ಟೆಂಬರ್ 29ರಿಂದ 'ಬಿಗ್ ಬಾಸ್ ಕನ್ನಡ ಸೀಸನ್ 11' ಆರಂಭವಾಗಲಿದೆ. ಕಿಚ್ಚ ಸುದೀಪ್ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಈ ಬಾರಿ ಬಿಗ್ ಬಾಸ್ ಸಾಕಷ್ಟು ಕುತೂಹಲವನ್ನು ಮೂಡಿಸಿದ್ದು ಚಾಲನೆಗೂ ಮುನ್ನ ತಂಡ ಬಿಗ್ ಅಪ್ಡೇಟ್ ನೀಡಲು ಮುಂದಾಗಿದೆ. ಇದಕ್ಕಾಗಿ ಸುದ್ದಿಗೋಷ್ಠಿಯನ್ನು ಬಿಗ್ ಬಾಸ್ ತಂಡ ಇಂದು ನಡೆಸಲಿದೆ.
ಹೌದು... 'ಬಿಗ್ ಬಾಸ್ ಕನ್ನಡ ಸೀಸನ್ 11'ರ ಸುದ್ದಿಗೋಷ್ಠಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ವಾಹಿನಿಯವರು ಈ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಲಿದ್ದಾರೆ. ಈ ವೇಳೆ ಬಿಗ್ಬಾಸ್ ಚಾಲನೆಗೂ ಮುನ್ನ ತಂಡ ಬಿಗ್ ಅಪ್ಡೇಟ್ ಕೊಡುವ ನಿರೀಕ್ಷೆ ಇದೆ. ಈ ಸುದ್ದಿಗೋಷ್ಠಿಯಲ್ಲಿ ವಾಹಿನಿಯವರು ಹಾಗೂ ಸುದೀಪ್ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.

ಈಗಾಗಲೇ ಬಿಗ್ ಬಾಸ್ ಲೋಗೋವಿನ ಪ್ರೋಮೋದಲ್ಲಿ ಬೆಂಕಿ ಹಾಗೂ ನೀರು ಇದೆ. ಇದು ಈ ಬಾರಿ ದೊಡ್ಮನೆಯಲ್ಲಿ ಶಾಂತಿ ಹಾಗೂ ಕಾಂತ್ರಿಯ ಸಂಕೇತವಾಗಿದೆ. ಇನ್ನೂ ತಂಡ ಸ್ಪರ್ಧಿಗಳ ಬಗ್ಗೆ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಎಲ್ಲಾ ರೀತಿಯ ಜನ ಬಿಗ್ಬಾಸ್ನಲ್ಲಿ ಕಾಣಿಸಿಕೊಳ್ಳುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇದಕ್ಕೆ ಬೇಕಾದ ತಯಾರಿ ತೆರೆಮರೆಯಲ್ಲಿ ಮಾಡಿಕೊಳ್ಳಲಾಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಮಾಡಲು ಈ ಬಾರಿ 'ಗಿಚ್ಚಿ ಗಿಲಿಗಿಲಿ 3' ವಿನ್ನರ್ ಹುಲಿ ಕಾರ್ತಿಕ್, 'ಗಿಚ್ಚಿ ಗಿಲಿಗಿಲಿ 3' ರನ್ನರ್ ಮಾನಸಾ ಸಂತು, ಚಂದ್ರಪ್ರಭ, ರೀಲ್ಸ್ ರೇಷ್ಮಾ, 'ರಾಗಿಣಿ' ಗೆಟಪ್ನಿಂದಲೇ ಫೇಮಸ್ ಆಗಿರುವ ರಾಘವೇಂದ್ರ ಪೈಕಿ ಒಬ್ಬರು ಬರುವ ಸಾಧ್ಯತೆ ಇದೆ.
ಇನ್ನೂ ಸೀನಿಯರ್ ಸ್ಥಾನದಲ್ಲಿ ಕೊಡಗಿನ ಬೆಡಗಿ ಪ್ರೇಮಾ ಬಿಗ್ ಬಾಸ್ ಮನೆಗೆ ಬರ್ತಾರೆನ್ನಲಾಗುತ್ತಿದೆ. ಇನ್ನೂ ಬಿಗ್ ಬಾಸ್ ಮನೆ ಅಂದ್ಮೇಲೆ ಹಾಡಿನ ಧ್ವನಿ ಕೇಳಲೇ ಬೇಕು. ಇದಕ್ಕಾಗಿ ಸರಿಗಮಪ ಖ್ಯಾತಿಯ ಆಶಾ ಭಟ್ ಹಾಗೂ ಐಶ್ವರ್ಯಾ ರಂಗರಾಜನ್ ಹೆಸರುಗಳು ಮುಂಚುಣಿಯಲ್ಲಿ ಇವೆ.

ಅಲ್ಲದೆ ಈಗಷ್ಟೇ ಪೂರ್ಣಗೊಂಡ ಸಿರಿಯಲ್ ನಟ ನಟಿಯರು ಬಿಗ್ ಬಾಸ್ ಮನೆಯಲ್ಲಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ. 'ಬೃಂದಾವನ' ನಟಿ ಅಮೂಲ್ಯ ಭಾರದ್ವಾಜ್, 'ಗೀತಾ' ನಾಯಕಿ ಭವ್ಯ ಗೌಡ, ಒಲವಿನ ನಿಲ್ದಾಣ ಸೀರಿಯಲ್ನಲ್ಲಿ ಹೀರೋಯಿನ್ ಆಗಿ ನಟಿಸಿದ್ದ ಅಮಿತಾ ಸದಾಶಿವ, 'ಲಕ್ಷಣ' ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸಿದ್ದ ಸುಕೃತಾ ನಾಗ್ ಸೇರಿದಂತೆ ಇನ್ನಿತರರ ಹೆಸರುಗಳು ಸಾಂಭಾವ್ಯ ಪಟ್ಟಿಯಲ್ಲಿದೆ.
ಇನ್ನೂ ಹೊರಗಿನಿಂದ ಜೋಡಿಯಾಗಿ ಸಹೋದರಿಯರಾದ ಅದ್ವಿತಿ ಶೆಟ್ಟಿ-ಅಶ್ವಿತಿ ಶೆಟ್ಟಿ ಅಥವಾ ಸುಷ್ಮಿತಾ-ಜಗಪ್ಪ ದಂಪತಿ ದೊಡ್ಮನೆಗೆ ಹೋಗುವ ಸಾಧ್ಯತೆ ಇದೆ. ಇನ್ನೂ ಸೀರಿಯಲ್ ನಾಯಕರು ಕೂಡ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. 'ಪದ್ಮಾವತಿ' ಸೀರಿಯಲ್ನಲ್ಲಿ ನಟಿಸಿದ್ದ ತ್ರಿವಿಕ್ರಮ್, 'ನಮ್ಮನೆ ಯುವರಾಣಿ' ಸೀರಿಯಲ್ ಖ್ಯಾತಿಯ ದೀಪಕ್ ಗೌಡ, 'ಒಲವಿನ ನಿಲ್ದಾಣ' ಧಾರವಾಹಿಯಲ್ಲಿ ನಾಯಕನಾಗಿ ನಟಿಸಿರುವ ಅಕ್ಷಯ್ ನಾಯಕ್ ಹೆಸರು ಕೇಳಿಬರುತ್ತಿದೆ.
ಇದಲ್ಲದೆ ಪತ್ರಕರ್ತರ ಹೆಸರು ಕೂಡ ಕೇಳಿ ಬಂದಿದೆ. ಬಿಗ್ಬಾಸ್ ಮನೆಗೆ ಜಾಹ್ನವಿ ಹಾಗೂ ಆಂಕರ್ ನಾಗರಾಜ್ ಹೋಗಬಹುದು ಎನ್ನಲಾಗುತ್ತಿದೆ. ಇವರೊಂದಿಗೆ ಯೂಟ್ಯೂಬ್ ಚಾನೆಲ್ ಹೊಂದಿರುವ ಲೇಖಿ ಗೋಸ್ವಾಮಿ ಈ ಬಾರಿ ಬಿಗ್ಬಾಸ್ ಕದ ತಟ್ಟಬಹುದು.
ಇನ್ನೂ ಇಂದು ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಬಿಗ್ಬಾಸ್ ಸ್ಪರ್ಧಿಗಳ ಸಂಖ್ಯೆ ಎಷ್ಟು? ಯಾವ ಕ್ಷೇತ್ರದವರಿಗೆ ಅವಕಾಶ ನೀಡಲಾಗಿದೆ? ಯಾವೆಲ್ಲಾ ವಿಶೇಷ ಅತಿಥಿಗಳು ಬಿಗ್ಬಾಸ್ ಮನೆಯಲ್ಲಿ ಇರುತ್ತಾರೆ ಎನ್ನುವ ಬಗ್ಗೆ ತಂಡ ಮಾಹಿತಿ ಹಂಚಿಕೊಳ್ಳಲಿದೆ.











Click it and Unblock the Notifications