ಬಿಗ್ ಬಾಸ್ ಕನ್ನಡ ಗೆದ್ದ ಖುಷಿಯಲ್ಲಿದ್ದ ಹನುಮಂತನಿಗೆ ಆಘಾತ: ಸಂಭ್ರಮಾಚರಣೆಗೆ ಬ್ರೇಕ್
ಬಿಗ್ ಬಾಸ್ ಸೀಜನ್ 11ರ ಗ್ರ್ಯಾಂಡ್ ಫಿನಾಲೆ ಬಹಳ ಅದ್ಧೂರಿಯಾಗಿ ನಡೆದಿದ್ದು, ವಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ಹಾಡುಗಾರ, ಕುರಿಗಾಯಿ ಹನುಮಂತ ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ನೂರು ದಿನದ ಶ್ರಮ ಹನುಮಂತನ ಕೈ ಹಿಡಿದಿದ್ದು, ಕನ್ನಡಿಗರ ಪ್ರೀತಿ ಗೆದ್ದು, ಐದು ಕೋಟಿಗೂ ಅಧಿಕ ಮತಗಳನ್ನು ಪಡೆದು ಹನುಮಂತ ಬಿಗ್ ಬಾಸ್ ಸೀಜನ್ 11ರ ವಿನ್ನರ್ ಆಗಿದ್ದಾರೆ. ಈ ಬಹುದೊಡ್ಡ ಸಾಧನೆಯ ಖುಷಿಯಲ್ಲಿದ್ದ ಹನುಮಂತ ಹಾಗೂ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದ್ದು, ಸದ್ಯ ಎಲ್ಲಾ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ.
ಬಿಗ್ಬಾಸ್ ಸೀಜನ್ 11ರಲ್ಲಿ ಗೆಲುವು ಪಡೆದ ಹನುಮಂತ ತೆರಳ ಬೇಕಾಗಿದ್ದ ಮನೆಯಲ್ಲಿ ಈಗ ನೀರವ ಮೌನ ಆವರಿಸಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದಲ್ಲಿ ಹನುಮಂತ ಅವರ ಚಿಕ್ಕಪ್ಪ ದೇವಪ್ಪ ಎನ್ನುವವರು ನಿಧನ ಹೊಂದಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಮಗ ಟ್ರೋಫಿ ಗೆದ್ದ ಖುಷಿಯನ್ನು ಸಂಭ್ರಮಿಸಬೇಕಾದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.

ಹನುಮಂತ ಅವರ ಚಿಕ್ಕಪ್ಪ ದೇವಪ್ಪ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಮನೆ ಬಳಿ ಅಥವಾ ಗ್ರಾಮದಲ್ಲಿ ಕೆಲವು ದಿನಗಳ ಕಾಲ ಯಾವುದೇ ಸಂಭ್ರಮಾಚರಣೆ ಮಾಡದಿರಲು ಹನುಮಂತನ ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ಹನುಮಂತ ಬಿಗ್ ಬಾಸ್ ಸೀಜನ್ 11ರಲ್ಲಿ ಗೆಲುವು ಸಾಧಿಸಿರುವ ವಿಚಾರ ಎಲ್ಲರಿಗೂ ತಲುಪಿದ್ದು, ಹನುಮಂತನ ಆಪ್ತರು, ಪರಿಚಯಸ್ಥರು ಸೇರಿದಂತೆ ಪರ ಊರು, ಬೇರೆ ಜಿಲ್ಲೆಯಿಂದಲೂ ಅಭಿಮಾನಿಗಳು ಹುಡುಕಿ ಬರುತ್ತಿದ್ದಾರೆ. ಆದರೆ ಹನುಮಂತನನ್ನು ಹುಡುಕಿ ಬಂದವರಿಗೆ ನಿರಾಸೆಯಾಗಿದ್ದು, ಅವರ ಸದ್ಯದ ಕುಟುಂಬದ ಪರಿಸ್ಥಿತಿ ಅರ್ಥ ಮಾಡಿಕೊಂಡು ವಾಪಸ್ ತೆರಳುತ್ತಿದ್ದಾರೆ.












Click it and Unblock the Notifications