Bigg Boss: ಬಡವರ ಮಕ್ಳು ಗೆಲ್ಬೇಕು: ಹನುಮಂತನ ಪರ ಶುರುವಾಯ್ತು ಸೋಶಿಯಲ್ ಮಿಡಿಯಾ ಕ್ಯಾಂಪೇನ್
ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿಯುವ ಹಂತ ತಲುಪಿದೆ. ಇನ್ನೇನು ಎರಡು ವಾರಗಳು ಮಾತ್ರ ಬಾಕಿ ಇದ್ದು ಮೂರನೇ ವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಅದಾಗಲೇ ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ಶುರುವಾಗಿದೆ. ಈ ಬಾರಿಯ ವಿನ್ನರ್ ಯಾರು? ಯಾರಾಗಬೇಕು ಎನ್ನುವ ಅಭಿಪ್ರಾಯವನ್ನು ಜನ ಈ ಕ್ಯಾಂಪೇನ್ ಮೂಲಕ ಹಂಚಿಕೊಳ್ಳುತ್ತಿದೆ. ಸಣ್ಣ ಪುಟ್ಟ ಹಳ್ಳಿ, ಆಟೋ ಚಾಲಕರು, ಉತ್ತರ ಕರ್ನಾಟಕ ಭಾಗದ ಜನ ಸೇರಿದಂತೆ ನಗರ ಪ್ರದೇಶದಲ್ಲೂ ಒಬ್ಬ ಸ್ಪರ್ಧಿಯ ಹೆಸರು ಆಕಾಶದೆತ್ತರಕ್ಕೆ ಕೇಳಿ ಬರುತ್ತಿದೆ. ಹಾಗಾದರೆ ಯಾರ ಪರ ಸೋಶಿಯಲ್ ಮಿಡಿಯಾದಲ್ಲಿ ಕ್ಯಾಂಪೇನ್ ಶುರುವಾಗಿದೆ? ಬಿಗ್ಬಾಸ್ ವೀಕ್ಷಕರ ಪ್ರಕಾರ ಈ ಬಾರಿಯ ವಿನ್ನರ್ ಯಾರು?
ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹನುಮಂತ ಲಮಾಣಿ, ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 15 ಕಾರ್ಯಕ್ರಮದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ಗಾಯಕ. ಈ ಹುಡುಗನ ಮುಖದಲ್ಲಿ ಮುಗ್ಧತೆ ಎದ್ದು ಕಾಣುತ್ತದೆ. ಮಾತು ಸರಳ, ಜೀವನ ಶೈಲಿ ಕೂಡ ತುಂಬಾನೇ ಸರಳ. ಒಂದು ಶರ್ಟ್ ಹಾಗೂ ಲುಂಗಿ ಮಾತ್ರ ಇವರಿಗೆ ಬಿಗ್ಬಾಸ್ ಮನೆಯಲ್ಲಿರುವ ಆಸ್ತಿ. ಯಾರು ಎಷ್ಟೇ ಚಂದದ ದುಬಾರಿ ಉಡುಪುಗಳನ್ನು ಹಾಕಿಕೊಂಡು ಮಿಂಚಿದರೂ ಕೂಡ, ಹನುಮಂತ ಮಾತ್ರ ಬಿಗ್ಬಾಸ್ ಮನೆಗೆ ಬರುವಾಗ ಹೇಗೆ ಇದ್ದರೋ ಈಗಲೂ ಹಾಗೇ ಇದ್ದಾರೆ. ಹೀಗಾಗಿ ಬಿಗ್ಬಾಸ್ ವೀಕ್ಷಕರಿಗೆ ಹನುಮಂತು ಮನೆ ಮಗನಾಗಿದ್ದು ನೂರಕ್ಕೆ ನೂರು ಸತ್ಯ.

ಸಿಂಪಲ್ ಸ್ಟಾರ್ ಹನುಮಂತನ ಪರ ಕ್ಯಾಂಪೇನ್
ಹನುಮಂತನಿಗೆ ಯಾರ ಮೇಲೂ ಅಸೂಯೆ ಇಲ್ಲ. ದ್ವೇಷವಿಲ್ಲ. ಕಿತ್ತಾಟ, ಹೊಡೆದಾಟವಂತೂ ಇಲ್ವೇ ಇಲ್ಲ. ಕೊಟ್ಟ ಆಟವನ್ನು ತಮ್ಮ ಕೈಲಾದಷ್ಟು ಆಡಿದರೆ ಹನುಮಂತನ ಅಂದಿನ ಕೆಲಸ ಮುಗಿತು ಅಂತಲೇ ಅರ್ಥ. ತಮ್ಮ ಗೆಳೆಯ ಧನ್ರಾಜ್ ಅವರೊಂದಿಗೆ ಒಂದಿಷ್ಟು ಮಾತು, ತರ್ಲೆ ಮಾಡಿಕೊಂಡು ತಮ್ಮಪಾಡಿಗೆ ತಾವಿರುವ ಸ್ಫರ್ಧಿ ಹನುಮಂತು. ಹೀಗೆ ಯಾರೊಂದಿಗೂ ದ್ವೇಷ ಕಾರದೆ ತಮ್ಮಪಾಡಿಗೆ ತಾವು ಆಡಿಕೊಂಡು ಬಿಗ್ಬಾಸ್ ಮನೆಯಲ್ಲಿ ಗ್ರಾಂಡ್ ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ ಅಂದರೆ ಇದು ಹನುಮಂತುವಿನಲ್ಲಿ ಇರುವ ವೈಯಕ್ತಿಕ ಸಾಮಾರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದನ್ನು ಭಾನುವಾರದ ಕಿಚ್ಚನ ಜೊತೆ ವಾರದ ಕತೆಯಲ್ಲೂ ಸುದೀಪ್ ಹೇಳಿರುವುದು ಇದೆ. ಹೀಗಾಗಿ ಹನುಮಂತನ ಪರ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಶುರುವಾಗಿದೆ.
ಅಂದಹಾಗೆ ಹನುಮಂತ ಬಿಗ್ಬಾಸ್ ಮನೆಗೆ ಬರುವ ಮುನ್ನ ಸರಿಗಮಪ ದಲ್ಲಿ ಇರುವಾಗಲೂ ಇದೇ ಒಂದು ವ್ಯಕ್ತಿತ್ವವನ್ನು ಹೊಂದಿದ್ದರು. ಅಲ್ಲೂ ಕೂಡ ಇವರು ಜನಮೆಚ್ಚಿಗೆಯನ್ನು ಪಡೆದುಕೊಂಡಿದ್ದು ಅವರ ಸರಳತೆಯಿಂದ ಹಾಗೂ ಅವರ ಹಾಡುಗಾರಿಕೆಯಿಂದ. ಹಿಂದೆ ನೋಡಿದ ಹನುಮಂತನಿಗೂ ಈಗ ನೋಡುತ್ತಿರುವ ಹನುಮಂತನಿಗೂ ಒಂದೆ ಕಾಳಿನಷ್ಟು ಕೂಡ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ ಹನುಮಂತ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಒಂದು ವಾರದಲ್ಲೇ ವೀಕ್ಷಕರಿಗೆ ನೆಚ್ಚಿನ ಸ್ಪರ್ಧಿಯಾದರು.
ಐಷಾರಾಮಿ ಜೀವನ ಬಯಸದ ಹನುಮಂತು
ಹನುಮಂತು ಎಷ್ಟು ಸರಳ ವ್ಯಕ್ತಿ ಅನ್ನೋದಕ್ಕೆ ಬಿಗ್ಬಾಸ್ ಮನೆಯಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ನಾವು ನೆನಪಿಸಿಕೊಳ್ಳಲೇಬೇಕು. ಬಿಗ್ಬಾಸ್ ಮನೆಗೆ ಹನುಮಂತ ಬರುವಾಗ ಕ್ಯಾಪ್ಟನ್ ಆಗಿ ಬಂದಿದ್ದರು. ಕ್ಯಾಪ್ಟನ್ ರೂಂನಲ್ಲಿ ಇರಲು ಕ್ಯಾಪ್ಟನ್ ಆಗಲು ಬಿಗ್ಬಾಸ್ ಮನೆಯ ಪ್ರತಿಯೊಬ್ಬ ಸ್ಪರ್ಧಿ ಕೂಡ ಆಸೆ ಪಡ್ತಾರೆ. ಆದರೆ ಹನುಮಂತ ಕ್ಯಾಪ್ಟನ್ ಆದರೂ ಕೂಡ ಕ್ಯಾಪ್ಟನ್ ರೂಂನಲ್ಲಿ ಇರುವ ಬಯಸಲಿಲ್ಲ. ಬದಲಿಗೆ ಅವರು ತಮ್ಮ ಇನ್ನಿತರ ಸ್ಪರ್ಧಿಗಳೊಂದಿಗೆ ನೆಲದ ಮೇಲೆ ಮಲಗಿಕೊಳ್ಳುತ್ತಿದ್ದರು. ಇದನ್ನು ಸುದೀಪ್ ಪ್ರಶ್ನೆ ಮಾಡಿದ್ದಕ್ಕೆ ಹನುಮಂತ, 'ಸರ್ ನನಗೆ ಆ ಮಂಚದ ಮೇಲೆ ನಿದ್ದೆ ಬರೋದಿರ್ರಿ ಸರ್.. ಅದ್ಕಾ ನಾನ್ ಇಲ್ಲೇ ನೆಲದ ಮೇಲೆ ಮಲ್ಕೋಳ್ತೀನಿ ಅಂತ ಹೇಳಿದ್ದರು' ಈ ಉತ್ತರ ಸುದೀಪ್ ಅವರಿಗೆ ಅಚ್ಚರಿ ತಂದಿತ್ತು.

ಬಿಗ್ಬಾಸ್ಗೆ ಪಾಠ ಹೇಳುವ ಹನುಮಂತ
ಹನುಮಂತ ಕೇವಲ ಅವರು ಹಾಡುವ ಹಾಡು ಹಾಗೂ ಸರಳತೆಯಿಂದ ಮಾತ್ರ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿಲ್ಲ. ಅವರು ಆಗಾಗ ಆಡುವ ಮಾತು, ಒಂದು ಸಾಲಿನಲ್ಲಿ ನೂರು ಅರ್ಥ ನೀಡುವ ಪದ ಬಳಕೆ ಮಾಡುತ್ತಾರೆ. ಅದು ಕೆಲವೊಮ್ಮೆ ಕಾಮಿಡಿಯಾಗಿಯೂ ಇರುತ್ತದೆ. ಈ ರೀತಿ ಬಿಗ್ಬಾಸ್ ಬಳಿ ಅದೆಷ್ಟು ಬಾರಿ ಹನುಮಂತು ಮಾತನಾಡಿದ್ದಾರೋ ಏನೋ ಲೆಕ್ಕವೇ ಇಲ್ಲ. ಹನುಮಂತನ ಈ ಮಾತುಗಳನ್ನ ಕೇಳಿ ವೀಕ್ಷಕರು ಎಂಜಾಯ್ ಕೂಡ ಮಾಡಿದ್ದಾರೆ. ಇದ್ದರೆ ಹನುಮಂತನ ಹಾಗೆ ಇರಬೇಕು ಅಂತ ಬಿಗ್ಬಾಸ್ ವೀಕ್ಷಕರು ಹನುಮಂತನ ಬೆನ್ನು ತಟ್ಟುತ್ತಿದ್ದಾರೆ.
ಬಡವರ ಮಕ್ಕಳಲು ಗೆಲ್ಲಬೇಕು
ಹನುಮಂತ ಒಬ್ಬ ಕುರಿಗಾಯಿ. ಇವರದ್ದು ಬಡ ಕುಟುಂಬ. ಹನುಮಂತ ಇಷ್ಟೊಂದು ಸರಳ ಜೀವನ ರೂಢಿಸಿಕೊಂಡಿರುವುದಕ್ಕೆ ಅವರು ಬೆಳದು ಬಂದ ವಾತಾವರಣ. ಆದರೆ ಮನುಷ್ಯ ಎಷ್ಟೇ ಬಡವನಾಗಿರಲಿ, ಕೈಯಲ್ಲಿ ದುಡ್ಡ ಹೆಸರು ಬಂದ ಕೂಡಲೇ ದುಬಾರಿ ಬಟ್ಟೆ, ಕಾರು, ಬಂಗಲೆ ಖರೀದಿ ಮಾಡಿಬಿಡುತ್ತಾನೆ. ಆದರೆ ಹನುಮಂತ ಮಾತ್ರ ಹಾಗಲ್ಲ. ಆತನಿಗೆ ಅದೆಷ್ಟೇ ಹೆಸರು ಇದ್ದರೂ ಕೂಡ ಆತ ಬದಲಾಗೇ ಇಲ್ಲ. ಮುಂದೆ ಕೂಡ ಹನುಮಂತ ಬದಲಾಗುವುದಿಲ್ಲ ಅನ್ನೋ ನಂಬಿಕೆ ಜನರಲ್ಲಿ ಇದೆ. ಹೀಗಾಗಿ ಬಡ ಮಕ್ಕಳು ಗೆಲ್ಲಬೇಕು ಅನ್ನೋ ಮಾತುಗಳನ್ನು ಜನ ಆಡುತ್ತಿದ್ದಾರೆ. ಇದಕ್ಕಾಗಿ ಹೊರಗಡೆ ಹನುಮಂತ ಗೆಲ್ಲಬೇಕು ಅನ್ನೋ ಅಭಿಯಾನವೇ ಶುರುವಾಗಿದೆ. ಇದಕ್ಕೆ ಲಕ್ಷಾಂತರ ಜನ ಕನ್ನಡಿಗರೂ ಕೂಡ ಗ್ರೀನ್ ಸಿಗ್ನಲ್ ತೋರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಹನುಮಂತನಿಗೆ ಗೆಲ್ಲಿಸಿ ಸಪೋರ್ಟ್ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಹೀಗಾಗಿ ಈ ಬಾರಿ ಹನುಮಂತ ಲಮಾಣಿ ಪರ ಲಕ್ಷಾಂತರ ಜನ ನಿಂತುಕೊಂಡಿದ್ದು, ಈ ಬಾರಿಯ ವಿಜೇತರು ಹನುಮಂತನೇ ಆಗುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ರೇಸ್ನಲ್ಲಿ ತ್ರಿವಿಕ್ರಮ್ ಇರುವುದರಿಂದ ಇವರಿಬ್ಬರಲ್ಲಿ ಯಾರು ಬೇಕಾದರೂ ವಿನ್ ಆಗಬಹುದು.












Click it and Unblock the Notifications