ರಜತ್, ವಿನಯ್ ಅರೆಸ್ಟ್ ಕೇಸ್ಗೆ ಟ್ವಿಸ್ಟ್: ಮಧ್ಯರಾತ್ರಿಯೇ ಬಿಡುಗಡೆ
ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿ ರಜತ್ ಕಿಶನ್ ಹಾಗೂ ಬಿಗ್ ಬಾಸ್ ಕನ್ನಡ ಸೀಜನ್ 10ರ ಸ್ಪರ್ಧಿ ವಿನಯ್ ಗೌಡ ಬಿಡುಗಡೆಯಾಗಿದ್ದಾರೆ. ರೀಲ್ಸ್ವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರು ಇಬ್ಬರು ಸೆಲೆಬ್ರೆಟಿಗಳನ್ನು ಬಂಧಿಸಿದ್ದು, ಇದೀಗ ನಿನ್ನೆ ಮಾರ್ಚ್ 24ರ ಮಧ್ಯರಾತ್ರಿಯೇ ಬಿಡುಗಡೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿನಯ್ ಗೌಡ ಹಾಗೂ ರಜತ್ ಕಿಶನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೆಜೆಸ್ಟಿಕ್ ಹಾಡಿಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ರೀಲ್ಸ್ ಮಾಡುವಾಗ ಮಾಡಿದ ಸಣ್ಣ ತಪ್ಪಿನಿಂದ ಇಬ್ಬರ ಮೇಲೆ ಬಸವೇಶ್ವರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಸಾರ್ವಜನಿಕ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ವಿಡಿಯೋ ಮಾಡಿದ ಆರೋಪದ ಮೇಲೆ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಿನ್ನೆ (ಮಾರ್ಚ್ 24) ಸೋಮವಾರ ತನಿಖೆ ನಡೆಸಿ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರನ್ನು ಬಂಧಿಸಿದ್ದರು. ಸದ್ಯ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿರುವ ಪೊಲೀಸರು ನಿನ್ನೆ ರಾತ್ರಿಯೇ ನೋಟಿಸ್ ನೀಡಿ ಅವರನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಬಂಧನದಿಂದ ಬಿಡುಗಡೆ ಸಿಕ್ಕರೂ ಕೂಡ ವಿನಯ್ ಗೌಡ ಹಾಗೂ ರಜತ್ ಕಿಶನ್ಗೆ ಈ ಪ್ರಕರಣದ ಸಂಕಷ್ಟ ಮುಂದುವರಿದ್ದು, ಪ್ರಕರಣದ ತನಿಖೆ ಸಂಪೂರ್ಣವಾಗಿ ಮುಗಿಯುವ ವರೆಗೂ ಮತ್ತೆ ವಿಚಾರಣೆಗೆ ಹಾಜರಾಗಬೇಕಿದೆ. ಇನ್ನು ಬಿಡುಗಡೆಯಾಗುತ್ತಿದ್ದಂತೆ ವಿನಯ್ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 'ಹೊಸ ದಿನ ಹೊಸ ಆರಂಭ' ಎನ್ನುವ ಪ್ರಾಣಿಗಳ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.












Click it and Unblock the Notifications