Bigg Boss: ಮತ್ತೆ ಜೈಲಿಗೆ ಹೋದ ಚೈತ್ರಾ ಕುಂದಾಪುರ
ಬಿಗ್ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಅವರ ಮೇಲೆ ಹಣ ವಂಚನೆ ಆರೋಪವಿದೆ. ಇದೇ ಕಾರಣಕ್ಕೆ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಈ ಪ್ರಕರಣದ ವಿಚಾರಣೆ ಈಗಲೂ ಕೋರ್ಟ್ನಲ್ಲಿ ನಡೆಯುತ್ತಿದೆ. ಪ್ರಸ್ತುತ ಬಿಗ್ಬಾಸ್ ಸ್ಪರ್ಧಿಯಾಗಿರುವ ಚೈತ್ರಾ ಅವರಿಗೆ ಜೈಲಿಗೆ ಹೋಗುವುದು ಸಲೀಸಾಗಿರುವಂತೆ ಕಾಣಿಸುತ್ತಿದೆ. ಯಾಕೆಂದರೆ ಈ ವಾರವೂ ಚೈತ್ರಾ ಅವರಿಗೆ ಕಳಪೆ ಪಟ್ಟ ನೀಡಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ. ಜೊತೆಗೆ ಈ ವಾರದ ಕ್ಯಾಪ್ಟನ್ ಭವ್ಯಾ ಗೌಡ ಅವರು ಆಗಿದ್ದಾರೆ.
ಹೌದು... ಚೈತ್ರಾ ಕುಂದಾಪುರ ಅವರಿಗೆ ಈ ವಾರ ಮನೆಯ ಬಹುತೇಕ ಸದಸ್ಯರು ಕಳಪೆ ಪಟ್ಟ ನೀಡಿ ಜೈಲಿಗೆ ಕಳುಹಿಸಿದ್ದಾರೆ. ಇದರಿಂದಾಗಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯ ಜೈಲಿನಲ್ಲಿ ಕಾಲ ಕಳೆಯುವುದು ಹೆಚ್ಚಾಗಿದೆ. ಇಂದು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡ ವೀಡಿಯೋ ಕ್ಲಿಪ್ನಲ್ಲಿ ಚೈತ್ರಾ ಜೈಲಿಗೆ ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹಾಗಾದರೆ ಚೈತ್ರಾ ಅವರಿಗೆ ಈ ಬಾರಿ ಕಳಪೆ ನೀಡಲು ಮನೆಯ ಸದಸ್ಯರು ನೀಡಿದ ಕಾರಣ ಏನು?

ರಜತ್, ಹನುಮಂತ, ಧನ್ರಾಜ್, ಮೋಕ್ಷಿತಾ, ಐಶ್ವರ್ಯ ಅವರು ಚೈತ್ರಾಗೆ ಕಳಪೆ ಪಟ್ಟ ಕೊಟ್ಟಿದ್ದಾರೆ. ಜೊತೆಗೆ ಕಳಪೆಗೆ ಕಾರಣಗಳನ್ನೂ ನೀಡಿದ್ದಾರೆ. ರಜತ್ ಅವರು ಚೈತ್ರಾ ಅವರಿಗೆ ಕಳಪೆ ನೀಡುವಾಗ 'ದಯವಿಟ್ಟು ನೀವು ಆಟ ಆಡಿ ಬೇರೆಯವರಿಗೂ ಆಡಲು ಬಿಡಿ' ಎಂದು ಸಲಹೆ ನೀಡುತ್ತಾ ಕಳಪೆ ನೀಡಿದ್ದಾರೆ. ನಿಮ್ಮ ಆಟದ ಶೈಲಿಯಿಂದ ಬೇರೆಯವರಿಗೆ ಆಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಾನು ನಿಮಗೆ ಕಳಪೆ ಕೊಡುತ್ತಿದ್ದೇನೆ ಎಂದು ರಜತ್ ಹೇಳಿದ್ದಾರೆ.
ನಿಮಗೆ ಕಳಪೆ ಕೊಡಲು ಮಾನವನ ಮಗಳಾ? ಹನುಮಂತ ಪ್ರಶ್ನೆ
ಜೊತೆಗೆ ಹನುಮಂತ ಕೂಡ ಚೈತ್ರಾ ಅವರಿಗೆ ಕಳಪೆ ಪಟ್ಟ ನೀಡಿದ್ದಾರೆ. ಕಳಪೆ ನೀಡುತ್ತಿದ್ದಂತೆ ಚೈತ್ರಾ ಕೋಪಗೊಂಡು 'ಗುಂಪಾಗಿ ನೀವು ನನಗೆ ಕಳಪೆ ನೀಡುತ್ತೀರಿ' ಎಂದು ವಾದಿಸಿದ್ದಾರೆ. 'ಆಟ ಆಡಲು ಬಾರದವರ ಮುಂದೆ ಉಸ್ತುವಾರಿ ವಹಿಸಿಕೊಂಡು ಆಡುವ ನನಗೆ ಕೊಟ್ಟ ಕಳಪೆ ಬಗ್ಗೆ ನಾನು ಉತ್ತರ ಕೊಡಬೇಕಾಗಿಲ್ಲ' ಎಂದು ಚೈತ್ರಾ ರೇಗಿದ್ದಾರೆ. ಇದಕ್ಕೆ ಪ್ರತಿಯುತ್ತರ ನೀಡಿದ ಹನುಮಂತ- 'ನಿಮಗೆ ಕಳಪೆ ಕೊಟ್ಟು ಟಾರ್ಗೆಟ್ ಮಾಡೋಕೆ ನೀವೇನ್ ನನ್ನ ದೊಡ್ಡಪ್ಪನ ಮಗಳು ಅಲ್ಲ ಅಥವಾ ಅತ್ತೆ ಮಗಳು ಅಲ್ಲ' ಎಂದು ತಿರುಗೇಟು ಕೊಟ್ಟಿದ್ದಾರೆ.
ಕಳೆದ ದಿನ ನಡೆದ ಟಾಸ್ಕ್ ವಿಚಾರದಲ್ಲಿ ಹನುಮಂತ ಹಾಗೂ ಚೈತ್ರಾ ನಡುವೆ ಗಲಾಟೆ ನಡೆದಿತ್ತು. ನಿಯಮ ಪಾಲಿಸದ ಕಾರಣ ಚೈತ್ರಾ ತಂಡದ ಉಸ್ತುವಾರಿಯಲ್ಲಿ ಆಟ ರದ್ದಾಗಿತ್ತು. ಇದರಿಂದಾಗಿ ಕೋಪಗೊಂಡ ಹನುಮಂತ ಹಾಗೂ ಚೈತ್ರಾ ನಡುವೆ ವಾಗ್ವಾದವಾಗಿತ್ತು. ಇದೇ ವೇಳೆ ಹನುಮಂತ, 'ಈ ಜಾಗದಲ್ಲಿ ಗಂಡಸರು ಇದ್ದಿದ್ದರೆ ಮಾತೇ ಬೇರೆ ಇರುತ್ತಿತ್ತು' ಎಂದು ಚೈತ್ರಾ ಅವರಿಗೆ ಅವಾಜ್ ಹಾಕಿದ್ದರು. ಈ ಕಾರಣಕ್ಕೆ ಚೈತ್ರಾ ಅವರಿಗೆ ಹನುಮಂತ ಕಳಪೆ ಕೊಟ್ಟಿದ್ದಾರೆ.
ಚೈತ್ರಾಗೆ ಕಳಪೆ ನೀಡಿದ ಧನ್ರಾಜ್
ಇನ್ನೂ ಧನ್ರಾಜ್ ಕೂಡ ಚೈತ್ರಾ ಕುಂದಾಪುರ ಅವರಿಗೆ ಕಳಪೆ ನೀಡಿದ್ದಾರೆ. ನಾನು ಮನೆಗೆ ಬಂದು ಇಷ್ಟೊಂದು ದಿನ ಆಗಿದೆ. ಈ ದಿನಗಳಲ್ಲಿ ನಾನು ಯಾವತ್ತೂ ಕೂಡ ಆಟದಲ್ಲಿ ಇಷ್ಟೊಂದು ಫೌಲ್ ಕೇಳಿಲ್ಲ. ಹೀಗಾಗಿ ಚೈತ್ರಾ ಅವರಿಗೆ ಕಳಪೆ ನೀಡುವುದಾಗಿ ಧನ್ರಾಜ್ ಕಾರಣ ನೀಡಿದ್ದಾರೆ.
ಚೈತ್ರಾ ಪಕ್ಷಪಾತಿ ಎಂದ ಮೋಕ್ಷಿತಾ
ಜೊತೆಗೆ ಮೋಕ್ಷಿತಾ ಕೂಡ ಚೈತ್ರಾ ಅವರನ್ನು ಪಕ್ಷಪಾತಿ ಎನ್ನುವ ಪಟ್ಟ ನೀಡಿ ಕಳಪೆ ನೀಡಿದ್ದಾರೆ. ಮನೆಯಲ್ಲಿ ಒಬ್ಬರಿಗೆ ಒಂದು ರೀತಿ ಇನ್ನೊಬ್ಬರಿಗೆ ಇನ್ನೊಂದು ರೀತಿ ನೋಡ್ತಾರೆ ಚೈತ್ರಾ. ಹೀಗಾಗಿ ನಾನು ಕಳಪೆ ನೀಡುತ್ತೇನೆಂದು ಮೋಕ್ಷಿತಾ ಕಾರಣ ನೀಡಿದ್ದಾರೆ.
ಒಟ್ಟಾರೆಯಾಗಿ ಚೈತ್ರಾ ಅವರು ಮೂರನೇ ಬಾರಿ ಜೈಲಿಗೆ ಹೋಗಿದ್ದಾರೆ. ಕಳಪೆ ನೀಡಿದ ಸ್ಪರ್ಧಿಗಳೊಂದಿಗೆ ಚೈತ್ರಾ ವಾಗ್ವಾದ ಮಾಡಿದ್ದು ಕಂಡು ಬಂದಿದೆ. ಇಂದಿನ ಸಂಚಿಕೆಯಲ್ಲಿ ಚೈತ್ರಾ ಅವರಿಗೆ ಕಳಪೆ ನೀಡಲು ಇತರ ಸ್ಪರ್ಧಿಗಳು ನೀಡಿದ ಕಾರಣದ ಬಗ್ಗೆ ಇನ್ನಷ್ಟು ಮಾಹಿತಿ ಗೊತ್ತಾಗಲಿದೆ. ಟಾರ್ಗೇಟ್ ಮಾಡಿ ಚೈತ್ರಾ ಅವರನ್ನು ಜೈಲಿಗೆ ಕಳುಹಿಸಲಾಯ್ತಾ ಎನ್ನುವುದು ವಾರಾಂತ್ಯದಲ್ಲಿ ಗೊತ್ತಾಗಲಿದೆ.












Click it and Unblock the Notifications