Kangana Ranaut: ಭಾರತದ ಪ್ರಧಾನಿ ಆಗೋ ಪ್ಲ್ಯಾನ್ ಇದ್ಯಾ ನಟಿ ಕಂಗನಾ ರನೌತ್ಗೆ?
ನವದೆಹಲಿ, ಫೆಬ್ರವರಿ.12: ಬಹುಭಾಷಾ ನಟಿ ಕಂಗನಾ ರನೌತ್ ಅವರ ಸಿನಿಮಾಗಳು ಸಾಲು ಸಾಲು ಬರುತ್ತಿದ್ದರು ಕೂಡ ಒಂದು ಗೆಲುವು ಕಾಣುತ್ತಿಲ್ಲ. ಎಲ್ಲಾ ಸಿನಿಮಾಗಳು ಮಕಾಡೆ ಮಲಗಿಕೊಂಡಿವೆ. ಇದೇ ಹೊತ್ತಿನಲ್ಲಿ ಅವರ ಬಹುನಿರೀಕ್ಷಿತ ಸಿನಿಮಾ 'ಎಮರ್ಜೆನ್ಸಿ' ತೆರೆಗೆ ಬರಲು ಸಿದ್ಧವಾಗಿದೆ. ಸಿನಿಮಾ ಮೇಲೆ ನಟಿ ಕಂಗನಾ ಅಗಾಧ ವಿಶ್ವಾಸವಿರಿಸಿಕೊಂಡಿದ್ದಾರೆ.
ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾಗಳು ಸದ್ದು ಮಾಡದ ಬೆನ್ನಲ್ಲೇ ನಟಿ ಕಂಗನಾ ರನೌತ್ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಓಡಾಡುತ್ತಿವೆ, ಬಿಜೆಪಿ ಪಕ್ಷದ ಜೊತೆಗೆ ಗುರುತಿಸಿಕೊಳ್ಳುತ್ತಿರುವ ಅವರಉ, ಬಿಜೆಪಿಯಿಂದಲೇ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಗಳಿವೆ.

ಕಂಗನಾ ರನೌತ್ ಮತ್ತು ಎಮರ್ಜೆನ್ಸಿ
ಭಾರತದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆದ ಐತಿಹಾಸಿಕ ಘಟನೆ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನಚರಿತ್ರೆಯನ್ನು ಆಧರಿಸಿ ನಟಿ ಕಂಗನಾ ರನೌತ್ 'ಎಮರ್ಜೆನ್ಸಿ' ಸಿನಿಮಾ ಮಾಡಿದ್ದಾರೆ. ಅವರೇ ನಿರ್ದೇಶನ ಮತ್ತು ನಿರ್ಮಾಪಕಿಯಾಗಿದ್ದಾರೆ. ಪ್ರಚಲಿತ ಮತ್ತು ರಾಜಕೀಯದ ಬಗ್ಗೆ ಮಾತನಾಡಿ ಆಗಾಗ್ಗೆ ವಿವಾದಗಳಲ್ಲಿ ಸಿಲುಕಿಕೊಳ್ಳುವ ನಟಿ ಈ ಸಿನಿಮಾದಿಂದ ಮತ್ತೆ ಕಂಬ್ಯಾಕ್ ಮಾಡ್ತಾರಾ ಎಂಬುದು ಸಿನಿ ಪ್ರೇಮಿಗಳ ನಿರೀಕ್ಷೆ.
ಕಂಗನಾ ರನೌತ್ ಅವರ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಗಳು ಬಹಳ ಹಿಂದಿನಿಂದಲೂ ಮುಂದುವರೆದಿದೆ. ಅವರು ಹಲವು ಬಾರಿ ಈ ಬಗ್ಗೆ ಮಾತನಾಡಿದ್ದರು ಕೂಡ, ಪರಿಸ್ಥಿತಿ ಮಾತ್ರ ಅವರ ರಾಜಕೀಯ ಪ್ರವೇಶದ ಸುತ್ತಲೇ ಗಿರಕಿ ಹೊಡೆಯುತ್ತಿವೆ. ಇತ್ತೀಚೆಗೆ, ಮುಂಬರುವ ಚಲನಚಿತ್ರ ರಜಾಕರ್: ಸೈಲೆಂಟ್ ಜಿನೋಸೈಡ್ ಆಫ್ ಹೈದರಾಬಾದ್ನ ಟ್ರೇಲರ್ ಅನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ಕಂಗನಾ ಕುತೂಹಲಕರ ಹೇಳಿಕೆ ನೀಡಿದ್ದಾರೆ.
ದೇಶದ ಪ್ರಧಾನಿ ಆಗ್ತಾರಾ ಕಂಗನಾ?
ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಕಂಗನಾ ರನೌತ್ ಅವರನ್ನು ದೇಶದ ಪ್ರಧಾನಿಯಾಗಲು ಏನಾದರೂ ಪ್ಲ್ಯಾನ್ ಮಾಡಿದ್ದೀರಾ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಯಿಂದ ಆಶ್ಚರ್ಯಚಕಿತರಾದ ಅವರು, "ನಾನು ಈಗಷ್ಟೇ ಎಮರ್ಜೆನ್ಸಿ ಎಂಬ ಚಿತ್ರವನ್ನು ಮಾಡಿದ್ದೇನೆ. ಆ ಸಿನಿಮಾ ನೋಡಿದ ನಂತರ ಯಾರೂ ನನ್ನನ್ನು ಪ್ರಧಾನಿಯಾಗುವುದನ್ನು ಇಷ್ಟಪಡುವುದಿಲ್ಲ" ಎಂದು ನಗೆ ಚಟಾಕಿ ಹರಿಸಿದ್ದಾರೆ.

ಫೆಬ್ರವರಿ 2023 ರಲ್ಲಿ, ಕಂಗನಾ ರನೌತ್ ತಾನು ರಾಜಕೀಯ ವ್ಯಕ್ತಿಯಲ್ಲ ಆದರೆ ರಾಜಕೀಯ ಸಿದ್ಧಾಂತಗಳನ್ನು ಹೊಂದಿರುವವರು ಎಂದು ಹೇಳಿದ್ದರು. ಟ್ವಿಟರ್ ವೇದಿಕೆಯಲ್ಲಿ "ನಾನು ಸೂಕ್ಷ್ಮ ಮತ್ತು ಸಂವೇದನಾಶೀಲ ವ್ಯಕ್ತಿ, ರಾಜಕೀಯ ವ್ಯಕ್ತಿಯಲ್ಲ. ರಾಜಕೀಯಕ್ಕೆ ಸೇರಲು ನನ್ನನ್ನು ಹಲವು ಬಾರಿ ಕೇಳಲಾಗಿದೆ. ಆದರೆ, ನಾನು ಸೇರಿಲ್ಲ" ಎಂದು ಟಿವಿ ನಟಿ ಉರ್ಫಿ ಜಾವೇದ್ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದರು. ಇದಾದ ಕೆಲವು ದಿನಗಳ ಬಳಿಕ ತಾನು ರಾಜಕೀಯಕ್ಕೆ ಬರಬೇಕೇ ಬೇಡವೆ ಎಂಬುದನ್ನು ಜನ ನಿರ್ಧರಿಸಬೇಕು ಎಂದಿದ್ದರು.
ರಾಜಕೀಯ ಸೇರುವ ಬಗ್ಗೆ ಯೋಚಿಸುತ್ತೇನೆ!
ಅಕ್ಟೋಬರ್ 2022 ರಲ್ಲಿ, ಕಂಗನಾ ರನೌತ್ ಪಂಚಾಯತ್ ಆಜ್ ತಕ್ ಕಾರ್ಯಕ್ರಮದಲ್ಲಿ ರಾಜಕೀಯಕ್ಕೆ ಸೇರುವ ಬಗ್ಗೆ ಮಾತನಾಡಿದ್ದರು. "ಇಂದಿನ ಪರಿಸ್ಥಿತಿಯ ಪ್ರಕಾರ ಮತ್ತು ಸರ್ಕಾರಕ್ಕೆ ನನ್ನ ಭಾಗವಹಿಸುವಿಕೆ ಅಗತ್ಯವಿದ್ದರೆ, ನಾನು ರಾಜಕೀಯ ಭಾಗವಹಿಸುವಿಕೆಗೆ ತುಂಬಾ ಮುಕ್ತಳಾಗಿರುತ್ತೇನೆ. ಹಿಮಾಚಲ ಪ್ರದೇಶದ ಜನರು ನನಗೆ ಸೇವೆ ಮಾಡಲು ಅವಕಾಶ ನೀಡಿದರೆ ಅದು ತುಂಬಾ ಒಳ್ಳೆಯದು. ಆದ್ದರಿಂದ, ಖಂಡಿತವಾಗಿಯೂ, ಇದು ಅದೃಷ್ಟಕರ ಸನ್ನಿವೇಶ ಆಗಿರುತ್ತದೆ" ಎಂದಿದ್ದರು.
ನವೆಂಬರ್ 2023 ರಲ್ಲಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನೇರವಾಗಿ ಸ್ಪರ್ಧಿಸುವ ಬಯಕೆಯನ್ನು ವ್ಯಕ್ತಪಡಿಸುವ ಮೂಲಕ ಕಂಗನಾ ರನೌತ್ ಮತ್ತೊಂದು ಹೆಜ್ಜೆ ಮಿಂದಿಡ್ಡಿದ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ, "ಶ್ರೀಕೃಷ್ಣ ಆಶೀರ್ವದಿಸಿದರೆ, ನಾನು ಸ್ಪರ್ಧಿಸುತ್ತೇನೆ" ಎಂದು ಸುಳಿವು ನೀಡಿದ್ದರು.












Click it and Unblock the Notifications