ಕೂಲಿಂಗ್ ಗ್ಲಾಸ್ ಧರಿಸಿ ಜೈಲಿನೊಳಗಡೆ ಕಾಲಿಟ್ಟ ನಟ ದರ್ಶನ್: ಡಿಐಜಿಗೆ ಬಳ್ಳಾರಿ ಪೊಲೀಸರು ಕೊಟ್ಟ ಉತ್ತರ ಏನು?
Actor Dasrshan Thoogudeepa: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯದ ಫೋಟೋ ಭಾರೀ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಆರೋಪಿ ನಟ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದೆ. ಇನ್ನೂ ಜೈಲಿಗೆ ಕರೆತಂದ ವೇಳೆ ದರ್ಶನ್ ಕೂಲಿಂಗ್ ಗ್ಲಾಸ್ ಧರಿಸಿದ್ದು, ಈ ಬಗ್ಗೆ ಬಳ್ಳಾರಿ ಪೊಲೀಸರು ಬೆಳಗಾವಿ ಡಿಐಜಿಗೆ ಕೊಟ್ಟ ಪ್ರತಿಕ್ರಿಯೆ ಏನೆಂದು ಇಲ್ಲಿ ತಿಳಿಯಿರಿ.
ಕೊಲೆ ಆರೋಪಿ, ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕರೆತಂದ ವೇಳೆ ಅವರು ಕೂಲಿಂಗ್ ಗ್ಲಾಸ್ ಧರಿಸಲು ಅವಕಾಶ ಮಾಡಿಕೊಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಕಾರಾಗೃಹ & ಸುಧಾರಣಾ ಸೇವೆಗಳ ಉತ್ತರವಲಯದ ಡಿಐಜಿ ಟಿ.ಪಿ.ಶೇಷ ಅವರು ಬೆಂಗಳೂರು ಡಿಜಿಪಿ ಮಾಲಿನಿ ಅವರಿಗೆ ಸೂಚಿಸಿದ್ದಾರೆ.

ದರ್ಶನ್ ಅವರನ್ನು ಬಳ್ಳಾರಿ ಜೈಲಿನ ಮುಂದೆ ಕರೆತಂದಾಗ ಅವರು ಕೂಲಿಂಗ್ ಗ್ಲಾಸ್ ಧರಿಸಿದ್ದರು. ಇದು ಜೈಲಿನ ನಿಯಮಗಳಿಗೆ ವಿರುದ್ಧವಾದುದು. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾಗುತ್ತಿವೆ. ಇದರಿಂದ ಇಲಾಖೆಯ ಘನತೆಗೆ ಧಕ್ಕೆ ಬಂದಿದೆ. ದರ್ಶನ್ ಒಬ್ಬ ನಟ ಆಗಿದ್ದರಿಂದ ಈ ಪ್ರಕರಣದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿತ್ತು ಎಂದು ಹೇಳಿದರು.
ಈಗಾಗಲೇ ಆರೋಪಿ ಬಗ್ಗೆ ಸಣ್ಣ ತಪ್ಪುಗಳು ಕೂಡ ದೊಡ್ಡ ಸುದ್ದಿಗಳಾಗುತ್ತಿವೆ. ಯಾವುದೇ ತಪ್ಪು ಆಗದಂತೆ ಎಚ್ಚರಿಕೆ ವಹಿಸಬೇಕಾಗಿತ್ತು. ಆದರೆ, ಬೆಂಗಳೂರಿನಿಂದ ಆರೋಪಿಯನ್ನು ಕರೆತಂದ ಬೆಂಗಾವಲು ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಳ್ಳಾರಿ ಪೊಲೀಸ್ ಅಧಿಕಾರಿಗಳು ದರ್ಶನ್ ಧರಿಸಿದ್ದು ಕೂಲಿಂಗ್ ಗ್ಲಾಸ್ ಅಲ್ಲ. ಅವರ ದೃಷ್ಟಿದೋಷ ನಂಬರ್ ಇರುವ ಗ್ಲಾಸ್ ಎಂದು ತಿಳಿಸಿದ್ದಾರೆ ಅಂತಾ ಪ್ರಜಾವಾಣಿ ವರದಿ ಮಾಡಿದೆ. ಆದರೆ ಮತ್ತೊಂದೆಡೆ ಕೈಯಲ್ಲಿ ಜಾಕೆಟ್ ಹಾಗೂ ವಾಟರ್ ಬಾಟಲ್ ಹಿಡಿದಿರುವ ವಿರುದ್ಧವೂ ಇದೀಗ ಆಕ್ರೋಶಗಳು ಭುಗಿಲೆದ್ದಿವೆ.
ಇನ್ನೂ ಬಳ್ಳಾರಿ ಜೈಲಿಗೆ ಎಂಟ್ರಿ ಕೊಡುವಾಗ ನಟ ದರ್ಶನ್ ಹಾಕಿಕೊಂಡು ಬಂದಿದ್ದ ಟೀ ಶರ್ಟ್ ಮೇಲಿನ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದರ್ಶನ್ ಧರಿಸಿದ್ದ ಟೀ ಶರ್ಟ್ ಮೇಲೆ Justice (ನ್ಯಾಯ), Dignity (ಘನತೆ) Equality (ಸಮಾನತೆ), Piece (ಶಾಂತಿ) ಎಂಬ ನಾಲ್ಕು ಪದಗಳು ಕಂಡುಬಂದಿದ್ದು, ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಈ ಮೂಲಕ ಅಭಿಮಾನಿಗಳಿಗೆ ಪರೋಕ್ಷವಾಗಿ ಸಂದೇಶ ನೀಡಿದ್ದೀರಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.












Click it and Unblock the Notifications