Get Updates
Get notified of breaking news, exclusive insights, and must-see stories!

ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಇಲ್ಲ, ಕೆಟ್ಟ ಅನುಭವ ಆಗಿದ್ರೆ ಅವರ ನಡೆ ಕಾರಣ: ಚಿರಂಜೀವಿ ಹೇಳಿಕೆಗೆ ಭಾರೀ ವಿರೋಧ

ತೆಲುಗು ನಟ, ಮೆಗಾಸ್ಟಾರ್‌ ಚಿರಂಜೀವಿ ಅವರ ಕಾಸ್ಟಿಂಗ್‌ ಕೌಚ್‌ ಕುರಿತು ನೀಡಿರುವ ಹೇಳಿಕೆಗಳು ಭಾರೀ ವಿವಾದಕ್ಕೆ ಕಾರಣವಾಗಿವೆ. "ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಎಂಬುದೇ ಇಲ್ಲ" ಎಂದು ಹೇಳಿದ್ದಾರೆ. ಅಲ್ಲದೆ ಯಾರಿಗಾದರೂ ಕೆಟ್ಟ ಅನುಭವ ಆಗಿದ್ದರೆ ಅದಕ್ಕೆ ಅವರ ವರ್ತನೆಯೇ ಕಾರಣ ಎಂಬ ಅರ್ಥ ಬರುವಂತೆ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. "ಈ ಉದ್ಯಮ ಕನ್ನಡಿಯಂತಿದೆ. ನೀವು ಹೇಗಿರುತ್ತೀರೋ ಹಾಗೆಯೇ ಪ್ರತಿಫಲ ಸಿಗುತ್ತದೆ. ವೃತ್ತಿಪರವಾಗಿ ನಡೆದುಕೊಂಡರೆ ಎಲ್ಲರೂ ವೃತ್ತಿಪರವಾಗಿಯೇ ವರ್ತಿಸುತ್ತಾರೆ" ಎಂದು ಅವರು ಹೇಳಿದ್ದರು. ಈ ಮಾತುಗಳು ವೇದಿಕೆಯಲ್ಲಿ ಕೇಳುತ್ತಿದ್ದವರಿಗೆ ಪ್ರೇರಣೆಯಂತಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.

ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ತಮ್ಮ ಇತ್ತೀಚಿನ ಸಿನಿಮಾ "ಮನ ಶಂಕರ ವರಪ್ರಸಾದ್ ಗಾರು" ಯಶಸ್ಸಿನ ಸಮಾರಂಭದಲ್ಲಿ ಚಿರಂಜೀವಿ ಮಾತನಾಡಿರುವುದು ವಿವಾದ ಸ್ವರೂಪ ತಾಳಿದೆ. ಚಿರು ಅವರ ಹೇಳಿಕೆಯನ್ನು ಹಲವರು ಬಲಾತ್ಕಾರದ ಅನುಭವಗಳನ್ನು ನಿರಾಕರಿಸುವ ಮತ್ತು ಸಂತ್ರಸ್ತರನ್ನೇ ಹೊಣೆಗಾರರನ್ನಾಗಿಸುವ ಮನೋಭಾವ ಎಂದು ಟೀಕಿಸಿದ್ದಾರೆ. ವಿಶೇಷವಾಗಿ ಮಹಿಳೆಯರ ಮೇಲೆ ನಡೆಯುವ ಶೋಷಣೆ, ಲೈಂಗಿಕ ದೌರ್ಜನ್ಯ ಮತ್ತು ಅಧಿಕಾರ ದುರುಪಯೋಗದಂತಹ ಗಂಭೀರ ವಿಷಯಗಳನ್ನು ಲಘುವಾಗಿ ತಳ್ಳಿಹಾಕಿರುವಂತೆ ಚಿರು ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Casting Couch

ಚಿರು ಹೇಳಿದ್ದೇನು?

ಚಿರಂಜೀವಿ ಅವರು ಕ್ಯಾಸ್ಟಿಂಗ್ ಕೌಚ್ ಕುರಿತು ಮಾತನಾಡುತ್ತಾ, "ಚಿತ್ರರಂಗವು ಕೆಲಸ ಮಾಡಲು ಒಳ್ಳೆಯ ವಾತಾವರಣವಿರುವ ಕ್ಷೇತ್ರ" ಎಂದು ಹೇಳಿದ್ದಾರೆ. ಯಾರಿಗಾದರೂ ಚಿತ್ರರಂಗದಲ್ಲಿ ಕಹಿ ಅನುಭವವಾಗಿದ್ದರೆ, ಅದಕ್ಕೆ ವೈಯಕ್ತಿಕ ಆಯ್ಕೆಗಳು ಮತ್ತು ನಡೆನುಡಿಗಳು ಕೂಡ ಕಾರಣವಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನೀವು ನಿಮ್ಮ ವೃತ್ತಿಯಲ್ಲಿ ಕಟ್ಟುನಿಟ್ಟಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ಯಾರೂ ನಿಮ್ಮನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಎನ್ನುವಂತಹ ಸಂಸ್ಕೃತಿ ಇಲ್ಲ. ಅದು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. "ಚಿತ್ರರಂಗ ಒಂದು ಕನ್ನಡಿಯಂತೆ. ನೀವು ಹೇಗಿರುತ್ತೀರೋ, ಅದೇ ರೀತಿಯ ಪ್ರತಿಫಲ ನಿಮಗೆ ಸಿಗುತ್ತದೆ" ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ವಾಸ್ತವಕ್ಕೆ ದೂರ ಎಂದ ಗಾಯಕಿ

ಈ ವಿವಾದಕ್ಕೆ ಮೊದಲಿಗೆ ಪ್ರತಿಕ್ರಿಯಿಸಿದ ಸೆಲೆಬ್ರಿಟಿಗಳಲ್ಲಿ ಗಾಯಕಿ ಚಿನ್ಮಯಿ ಶ್ರೀಪಾದ ಪ್ರಮುಖರಾಗಿದ್ದಾರೆ. ಅವರು ಎಕ್ಸ್‌ (ಟ್ವಿಟರ್‌)ನಲ್ಲಿ ಸುದೀರ್ಘ ಪೋಸ್ಟ್‌ ಮಾಡಿ, 'ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ವ್ಯಾಪಕವಾಗಿ ನಡೆಯುತ್ತಿದೆ. 'ಫುಲ್ ಕಮಿಟ್‌ಮೆಂಟ್' ನೀಡದಿದ್ದರೆ ಅವಕಾಶವಿಲ್ಲ ಎಂಬುದೇ ಅನೇಕ ಮಹಿಳೆಯರು ಎದುರಿಸುತ್ತಿರುವ ಕಠಿಣ ಸತ್ಯ. ಹೊರಗೆ ಕೇಳಲು ಈ ಪದ ವೃತ್ತಿಪರತೆ ಎಂದು ತೋರುವುದಾದರೂ, ಚಿತ್ರರಂಗದಲ್ಲಿ ಅದಕ್ಕೆ ಸಂಪೂರ್ಣ ಬೇರೆ ಅರ್ಥವಿದೆ. ಇಂಗ್ಲಿಷ್‌ ಶಿಕ್ಷಣ ಪಡೆದವರು 'ಕಮಿಟ್‌ಮೆಂಟ್' ಎಂದರೆ ಕೆಲಸದ ಮೇಲಿನ ನಿಷ್ಠೆ, ಸಮಯಪಾಲನೆ, ವೃತ್ತಿಪರತೆ ಎಂದು ಅರ್ಥೈಸಿಕೊಂಡರೆ ಅದು ದೊಡ್ಡ ತಪ್ಪಾಗುತ್ತದೆ. ಅನೇಕ ಪುರುಷರು ಅಧಿಕಾರ ಸ್ಥಾನಗಳಲ್ಲಿ ಉಳಿದುಕೊಂಡು, ಕೆಲಸ ನೀಡುವ ನೆಪದಲ್ಲಿ ಮಹಿಳೆಯರಿಂದ ಲೈಂಗಿಕ ಅನುಕೂಲಗಳನ್ನು ಬೇಡುವ ಹಕ್ಕು ತಮ್ಮದೇ ಎಂಬ ಭಾವನೆಯಲ್ಲಿದ್ದಾರೆ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ನಾನು ಒಬ್ಬ ಮಹಿಳಾ ಸಂಗೀತಗಾರ್ತಿಯ ಘಟನೆಗೆ ಸಾಕ್ಷಿಯಾಗಿದ್ದೇನೆ. ಸ್ಟುಡಿಯೋದಲ್ಲೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ನಡೆದಿತ್ತು. ಆ ಘಟನೆ ಬಳಿಕ ಆಕೆ ಆ ಕೆಲಸದ ವಲಯವನ್ನೇ ತೊರೆದಳು. ಇದೇ ರೀತಿ ತಪ್ಪು ಮಾಡುವ ಪುರುಷ ಗಾಯಕರು ಯಾವುದೇ ಪಶ್ಚಾತ್ತಾಪವಿಲ್ಲದೇ ವೇದಿಕೆಗಳ ಮೇಲೆ ಮೆರೆಯುತ್ತಿದ್ದಾರೆ. ಅಸಭ್ಯ ಸಂದೇಶಗಳು, ಅಶ್ಲೀಲ ಚಿತ್ರಗಳನ್ನು ಕಳುಹಿಸುವುದು, ಲೈಂಗಿಕ ಬೇಡಿಕೆಗಳನ್ನು ಇಡುವುದು ಸೇರಿ ಈ ಎಲ್ಲ ಕೃತ್ಯಗಳನ್ನು ಅವರು ಮಾಡಿದ್ದಾರೆ. ಆದರೂ ಪ್ರೇಕ್ಷಕರು ಅವರನ್ನು ನಿರಂತರವಾಗಿ ಒಪ್ಪಿಕೊಳ್ಳುತ್ತಿದ್ದಾರೆ'.

'ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಚಿತ್ರರಂಗದಲ್ಲಿ ಸಾಮಾನ್ಯ ಸಮಸ್ಯೆಯಾಗಿಯೇ ಉಳಿದಿದೆ. ಚಿರಂಜೀವಿ ಅವರ ಹಿಂದಿನ ತಲೆಮಾರಿನ ನಟರು ತಮ್ಮ ಸಹನಟಿಯರೊಂದಿಗೆ ಸ್ನೇಹಪೂರ್ಣ, ಗೌರವಯುತ ಸಂಬಂಧ ಹೊಂದಿದ್ದ ಕಾಲದವರು. ಅವರು ಎಲ್ಲರೂ ಲೆಜೆಂಡ್ಸ್‌. ಆದರೆ ಮೀಟೂ ಚಳವಳಿ ಆ ತಲೆಮಾರಿಗೆ ಅರ್ಥವಾಗದೇ ಹೋದ ಸತ್ಯ. ಹಿರಿಯ ಕಲಾವಿದರು ಕೂಡ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ ಮಹಿಳೆಯರನ್ನು ಅವಮಾನಿಸಿದ ಉದಾಹರಣೆಗಳಿವೆ'.

'ತಾಯಿ ಅಲ್ಲೇ ಇದ್ರೂ ನನ್ನ ಮೇಲೆ ದೌರ್ಜನ್ಯ'

'ಇಂದಿನ ಹುಡುಗಿಯರು ವಿದೇಶಗಳಿಂದಲೂ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರು ಜಾಗತಿಕ ದೃಷ್ಟಿಕೋನ ಹೊಂದಿದ್ದಾರೆ, ಶಿಕ್ಷಣ ಪಡೆದಿದ್ದಾರೆ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಷ್ಟು ಜಾಗೃತರಾಗಿದ್ದಾರೆ. ಆದ್ದರಿಂದ, "ಚಿತ್ರರಂಗ ಒಂದು ಕನ್ನಡಿ" ಎನ್ನುವುದು ಸರಿಯಲ್ಲ. ನನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ನಾನು ಕಾರಣವಲ್ಲ. ನಾನು ಕೇವಲ ಯೌವನದ ಅಂಚಿನಲ್ಲಿದ್ದ ಹುಡುಗಿ. ವೈರಮುತ್ತು ಅವರನ್ನು ಗುರು, ಲೆಜೆಂಡರ ಎಂದು ಗೌರವಿಸಿದ್ದೆ. ಅವರು ಅಪಾಯಕಾರಿ ವ್ಯಕ್ತಿ ಎಂದು ನನಗೆ ಅನ್ನಿಸಲೇ ಇಲ್ಲ. ನನ್ನ ತಾಯಿ ಅದೇ ಕಟ್ಟಡದಲ್ಲಿದ್ದರೂ ಅವರು ನನ್ನ ಮೇಲೆ ದೌರ್ಜನ್ಯ ನಡೆಸಿದರು'.

'ಪೋಷಕರು ಜೊತೆಯಲ್ಲಿದ್ದರೂ ಕೆಲವು ಪುರುಷರ ಮನಸ್ಥಿತಿ ಬದಲಾಗುವುದಿಲ್ಲ. ಸಮಸ್ಯೆ ಮಹಿಳೆಯರಲ್ಲ. ಸಮಸ್ಯೆ ಎಂದರೆ ಕೆಲಸ ಕೊಡುವ ಬದಲಾಗಿ ಲೈಂಗಿಕ ಅನುಕೂಲಗಳನ್ನು ಬೇಡುವ ಹಕ್ಕು ನಮಗಿದೆ ಎಂದು ನಂಬುವ ಪುರುಷರ ಮನೋಭಾವ' ಎಂದು ಚಿನ್ಮಯಿ ಶ್ರೀಪಾದ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

Casting Couch

ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಚಿರಂಜೀವಿ ಹೇಳಿಕೆಯನ್ನು ಮಹಿಳಾವಿರೋಧಿ ಎಂದು ಕರೆದಿದ್ದಾರೆ. "ಪರದೆಯ ಮೇಲೆ ಶ್ರೇಷ್ಠ ಪಾತ್ರಗಳನ್ನು ಮಾಡಿದರೆ ಸಾಕು, ನೈಜ ಜೀವನದಲ್ಲಿನ ಪಿತೃಸತ್ತಾತ್ಮಕ ಚಿಂತನೆ ಮಾಸುವುದಿಲ್ಲ" ಎಂದು ಕೆಲವರು ಚಿರು ವಿರುದ್ಧ ಕಿಡಿಕಾರಿದ್ದಾರೆ. ಚಿರಂಜೀವಿ ಅವರ ಹೇಳಿಕೆ ಕೇವಲ ಒಂದು ವೈಯಕ್ತಿಕ ಅಭಿಪ್ರಾಯವಾಗಿ ಉಳಿಯದೆ, ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ವ್ಯವಸ್ಥಾತ್ಮಕ ದೌರ್ಜನ್ಯಗಳ ಕುರಿತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ತಮ್ಮ ಅನುಭವದ ಆಧಾರದಲ್ಲಿ ಮಾತನಾಡಿದ ಹಿರಿಯ ನಟನ ಮಾತುಗಳು, ಇನ್ನೊಂದು ಕಡೆ ಅನೇಕ ಮಹಿಳೆಯರು ಹೇಳುತ್ತಿರುವ ಕಠಿಣ ವಾಸ್ತವಗಳು - ಈ ಎರಡರ ನಡುವಿನ ಅಂತರವೇ ಇಂದಿನ ವಿವಾದದ ಕೇಂದ್ರಬಿಂದುವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+