ದರ್ಶನ್ ಕಂಡು ಭಾವುಕರಾದ ಅಭಿಷೇಕ್- ಜೈಲಿನಲ್ಲಿ ಸುಮಲತಾ ಅಮ್ಮನ ಬಗ್ಗೆ ವಿಚಾರಿಸಿದ ದಾಸ!
ಬೆಂಗಳೂರು ಆಗಸ್ಟ್ 14: ಚಿತ್ರರಂಗದ ಏಳಿಗೆಗಾಗಿ ಇಂದು ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ ಚಂದನವನದ ಎಲ್ಲಾ ಕಲಾವಿದರು ಭಾಗಿಯಾಗಿ ಹೋಮ ಹವನ ಮಾಡಿದರು. ಈ ಪೂಜೆಯನ್ನು ಜೈಲಿನಲ್ಲಿರುವ ದರ್ಶನ್ ಬಹುಬೇಗ ಹೊರಬರಲೆಂದು ಮಾಡಿದ್ದಾರೆನ್ನುವ ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಇದರಲ್ಲಿ ಭಾಗಿಯಾಗಿದ್ದ ಕನ್ನಡದ ಹಾಸ್ಯನಟ ಚಿಕ್ಕಣ್ಣ ಹಾಗೂ ನಟ ಅಭಿಷೇಕ್ ಅಂಬರೀಷ್ ಅವರು ಪೂಜೆ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ಹೌದು... ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಜೈಲುವಾಸ ಅನುಭವಿಸುತ್ತಿದ್ದಾರೆ. ದರ್ಶನ್ ಜೈಲಿಗೆ ಹೋದಾಗಿನಿಂದ ಹಲವಾರು ಕಲಾವಿದರು ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಅಭಿಷೇಕ್ ಅವರು ದರ್ಶನ್ ಅವರನ್ನು ಭೇಟಿ ಮಾಡಿರಲಿಲ್ಲ. ಆದರೆ ಇಂದು ಪೂಜೆ ಬಳಿಕ ಜೈಲಿಗೆ ಹೋಗಿ ಅವರ ಆರೋಗ್ಯವನ್ನು ವಿಚಾರಿಸಿ ಬಂದಿದ್ದಾರೆ.

ದರ್ಶನ್ ಭೇಟಿ ಮಾಡಿದ ತಕ್ಷಣ ಅವರನ್ನು ಅಪ್ಪಿಕೊಂಡು ಅಭಿಷೇಕ್ ಭಾವುಕರಾದರು ಎಂದು ತಿಳಿದು ಬಂದಿದೆ. ದರ್ಶನ್ ಈ ಸಮಯದಲ್ಲಿ ಸುಮಲತಾ ಅಂಬರೀಷ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆನ್ನಲಾಗುತ್ತಿದೆ. ಅರ್ಧ ಗಂಟೆಗಳ ಕಾಲ ಅವರೊಂದಿಗೆ ಮಾತನಾಡಿ ಅಭಿಷೇಕ್ ಬಳಿಕ ಕಣ್ಣೀರಾಕುತ್ತಲೇ ಹೊರಬಂದಿದ್ದಾರೆ.
ಅಲ್ಲದೆ ಅಭಿಷೇಕ್ ಅವರೊಂದಿಗೆ ಚಿಕ್ಕಣ್ಣ ಕೂಡ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಹಾಸ್ಯನಟ ಚಿಕ್ಕಣ್ಣ ವಿವಾದದ ನಡುವೆಯು ನಟ ದರ್ಶನ್ ಅವರನ್ನು ಜೈಲಿಗೆ ಹೋಗಿ ಭೇಟಿ ಮಾಡಿದ್ದಾರೆ.

ದರ್ಶನ್ ಜೊತೆ ಪಾರ್ಟಿ ಮಾಡಿದ ನಟ ಚಿಕ್ಕಣ್ಣ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಂದರ್ಭಿಕ ಸಾಕ್ಷಿಯಾಗಿದ್ದಾರೆ. ಪಾರ್ಟಿ ಅಧಾರದ ಮೇಲೆ ಸಿಆರ್ಪಿಸಿ 164ರ ಅಡಿಯಲ್ಲಿ ಚಿಕ್ಕಣ್ಣ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಇದರ ನಡುವೆ ಆರೋಪಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದರು ಚಿಕ್ಕಣ್ಣ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಚಿಕ್ಕಣ್ಣ ಅವರೊಂದಿಗೆ ನಟರಾದ ಅಭಿಷೇಕ್, ಧನ್ವಿರ್ ಕೂಡ ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ.
ಅಭಿಷೇಕ್ ಜೊತೆ ಆಗಮಿಸಿದ ಪೂಜಾರಿ ಶಶಿಕುಮಾರ್
ಅಲ್ಲದೆ ಅಭಿಷೇಕ್ ಜೊತೆ ಬೆಂಗಳೂರಿನ ಬಂಡಿಮಹಾಕಾಳಿ ದೇವಾಲಯದ ಅರ್ಚಕ ಶಶಿಕುಮಾರ್ ಆಗಮಿಸಿ ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮೀ ಪೂಜಿಸುವ ಆರಾಧ್ಯ ದೈವ ಬಂಡಿಮಹಾಕಾ ಅರ್ಚಕ ಶಶಿಕುಮಾರ್ ಸ್ವತ: ಜೈಲಿಗೆ ಹೋಗಿ ದರ್ಶನ್ ಅವರ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದಾರೆ.

ಇಂದು ಕಲಾವಿದರೆಲ್ಲರೂ ಸೇರಿ ಸಿನಿಮಾರಂಗದ ಏಳಿಗೆಗೆ ಮಾಡಿದ ಪೂಜೆಯಲ್ಲಿ ಸುಮಲತಾ ಅಂಬರೀಷ್ ಕೂಡ ಭಾಗಿಯಾಗಿದ್ದರು. ಪೂಜೆ ಬಳಿಕೆ ಮಾತನಾಡಿ ಅವರು,'ಇಪ್ಪತ್ತು ವರ್ಷಗಳ ಹಿಂದೆ ಅಂಬರೀಷ್ ಅವರು ಕಲಾವಿದರಿಗಾಗಿ ಒಂದು ಸೂರು ಇರಲಿ ಅಂತ ಈ ಕಲಾವಿದರ ಭವನವನ್ನು ನಿರ್ಮಿಸಿದರು. ಇದು ಡಾ. ರಾಜುಕುಮಾರ್ ಅವರ ಕನಸು ಕೂಡ ಆಗಿತ್ತು. ರಾಜುಕುಮಾರ್ ಅವರ ಕನಸು ನನಸು ಮಾಡಿದವರು ಅಂಬರೀಷ್. ಇದನ್ನು ಯಾರು ಏನು ಬೇಕಾದರೂ ಅಂದುಕೊಳ್ಳಲಿ' ಎಂದು ಹೇಳಿದರು. ಆದರೆ ಈ ವೇಳೆ ದರ್ಶನ್ ಅವರ ಬಗ್ಗೆ ಅವರು ಮಾತಾಡಲೇ ಇಲ್ಲ.
ಅಲ್ಲದೆ ಈ ನಡುವೆ ಸುಮಲತಾ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸುಮಲತಾ ಅವರು ಅಜ್ಜಿಯಾಗುವ ಸಂತಸದಲ್ಲಿ ಇದ್ದಾರೆ. ಆದರೆ ಈ ಸಂಭ್ರಮದಲ್ಲಿ ದೊಡ್ಡ ಮಗ ದರ್ಶನ್ ಇಲ್ಲ ಅನ್ನೋದೇ ಅವರಿಗೆ ಬೇಸರ ತಂದಿದೆ. ಸುಮಲತಾ ದರ್ಶನ್ ಜೈಲಿಗೆ ಹೋದಾಗಿನಿಂದಲೂ ಅವರನ್ನು ಭೇಟಿ ಮಾಡಿಲ್ಲ. ಆದರೆ ಇದೇ ಮೊದಲ ಬಾರಿಗೆ ಮಗ ಅಭಿಷೇಕ್ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ದರ್ಶನ್ ಅವರ ಆರೋಗ್ಯ ವಿಚಾರಿಸಿ ಬಂದಿದ್ದಾರೆ.












Click it and Unblock the Notifications