ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪರಿಚಯ
ಬೆಂಗಳೂರು, ಮಾರ್ಚ್ 12 : ರಾಜ್ಯಸಭೆ ಚುನಾವಣೆಗೆ ರಾಜೀವ್ ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಾರ್ಚ್ 23ರಂದು ಮತದಾನ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ರಾಜೀವ್ ಚಂದ್ರಶೇಖರ್ 2012ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಾ ಎರಡನೇ ಅವಧಿಗೆ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಚುನಾಯಿತರಾದರು. ಅವರ ಅವಧಿ ಏಪ್ರಿಲ್ 2ಕ್ಕೆ ಅಂತ್ಯಗೊಳ್ಳಲಿದೆ. ತೆರವಾಗುವ ಸ್ಥಾನಕ್ಕೆ ಅವರನ್ನು ಬಿಜೆಪಿ ಅವರನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.
ರಾಜ್ಯಸಭೆಗೆ ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ಅಭ್ಯರ್ಥಿ
ರಾಜೀವ್ ಚಂದ್ರಶೇಖರ್ ಎನ್ಡಿಎ ಮೈತ್ರಿಕೂಟವನ್ನು ಬೆಂಬಲಿಸುತ್ತಾರೆ ಮತ್ತು ಅದರ ಭಾಗವಾಗಿದ್ದಾರೆ. 2006ರಿಂದ 2014ರ ತನಕ ಅವರು ಕೇಂದ್ರದಲ್ಲಿ ವಿರೋಧ ಪಕ್ಷದ ಭಾಗವಾಗಿದ್ದರು.
ರಾಜೀವ್ ಚಂದ್ರಶೇಖರ್ ಅವರ ಪರಿಚಯ
* ರಾಜೀವ್ ಚಂದ್ರಶೇಖರ್ ಸುಮಾರು 40 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದಾರೆ
* ಯಲಹಂಕ ವಾಯುನೆಲೆಯಲ್ಲಿ ಮತ್ತು ಹೆಬ್ಬಾಳದ ತರಬೇತಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ವಾಯುಸೇನೆಯ ಅಧಿಕಾರಿ ಮಗನಾಗಿ ಬೆಂಗಳೂರಿನಲ್ಲಿ ಬಾಲ್ಯವನ್ನು ಕಳೆದಿದ್ದಾರೆ.
* ಯಲಹಂಕ ಮತ್ತು ಹೆಬ್ಬಾಳದ ಕೇಂದ್ರಿಯ ವಿದ್ಯಾಲಯಗಳಲ್ಲಿ ಓದುತ್ತಿದ್ದ ಬಾಲಕನಾಗಿ ಅನೇಕ ಬಾರಿ ಹೆಬ್ಬಾಳದ ಶಾಲೆಯಿಂದ ಯಲಹಂಕದಲ್ಲಿದ್ದ ಮನೆಯವರೆಗೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದರು.
* ರಾಜೀವ್ ಚಂದ್ರಶೇಖರ್ ಮಂಗಳೂರು ವಿಶ್ವವಿದ್ಯಾಲಯದ ಭಾಗವಾಗಿದ್ದ ಮಣಿಪಾಲದ ಎಂಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ನಂತರ ಅಮೆರಿಕದ ಚಿಕಾಗೋದಲ್ಲಿನ ಇಲಿನಾಯ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಗಣಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
* ಸಿಲಿಕಾನ್ ವ್ಯಾಲಿಯಲ್ಲಿ ತಂತ್ರಾಶ ಮತ್ತು ಮೈಕ್ರೊಪ್ರೊಸೆಸರ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಸುತ್ತಾ ಇಂಟೆಲ್ ಕಂಪನಿಯಲ್ಲಿ ಕಾರ್ಯನಿರ್ವಹಿಸಿದರು. ಐತಿಹಾಸಿಕ 80486 ಪ್ರೊಸೆಸ್ಸರ್ ಮತ್ತು ಪೆಟಿಯಂ ನಿರ್ಮಿಸಿದ ತಂಡದ ಭಾಗವಾಗಿದ್ದರು.
* 1992ರಲ್ಲಿ ಭಾರತಕ್ಕೆ ಮರಳಿದರು ಅಂದಿನಿಂದಲೂ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ತಂದೆ-ತಾಯಿ, ಸಹೋದರಿಯ ಕುಟುಂಬ ಸದಸ್ಯರೂ ಸಹ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.
* ಭಾರತದ ಅತ್ಯಂತ ದೊಡ್ಡ ಮೊದಲನೆ ಸೆಲ್ಯೂಲಾರ್ ಕಂಪನಿ, ಬಿಪಿಎಲ್ ಮೊಬೈಲ್ ಅನ್ನು 1994ರಲ್ಲಿ ಆರಂಭಿಸಿದರು. ಆಗ ರಾಜೀವ್ ಚಂದ್ರಶೇಖರ್ ಅವರ ವಯಸ್ಸು ಕೇವಲ 30.
* ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ವಾಣಿಜ್ಯ ಮತ್ತು ಉದ್ಯಮ ಮಂಡಳಿಯ ಯುವ ಸದಸ್ಯರಲ್ಲಿ ಒಬ್ಬರಾಗಿದ್ದರು. ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
* ರಾಜೀವ್ ಚಂದ್ರಶೇಖರ್ ತಮ್ಮ ಜ್ಯುಪಿಟರ್ ಸಂಸ್ಥೆಯ ಮೂಲಕ ಮಾಡಿರುವ ಹಲವು ಹೂಡಿಕೆಗಳಲ್ಲಿ ಸುವರ್ಣ ನ್ಯೂಸ್, ಕನ್ನಡ ಪ್ರಭ, ರಿಪಬ್ಲಿಕ್ ಟಿವಿ ಮತ್ತು ಅವುಗಳ ಡಿಜಿಟಲ್ ಆವೃತ್ತಿಗಳು ಸಹ ಸೇರಿವೆ.
* 1990ರ ದಶಕದ ಮಧ್ಯಭಾಗದಿಂದ ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಮತ್ತು ಕರ್ನಾಟಕದ ಹಲವಾರು ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಮತ್ತು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ.
* ಸಂಸದರಾಗಿ ರಾಜೀವ್ ಚಂದ್ರಶೇಖರ್ ನಿರಂತರವಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರು ಮತ್ತು ಬೆಂಗಳೂರಿನ ನಾಗರೀಕರ ಹಿತಾಸಕ್ತಿ ಕಾಪಾಡುವುದು, ನಗರಾಡಳಿತ, ಡಿಜಿಟಲ್ ಇಂಡಿಯಾ, ನಿವೃತ್ತ ಮತ್ತು ಸೇವಾನಿರತ ಯೋಧರ ಕಲ್ಯಾಣ, ಮಕ್ಕಳ ರಕ್ಷಣೆ ಮೊದಲಾದ ವಿಷಯಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದಾರೆ.
ಕರ್ನಾಟಕಕ್ಕೆ ಕೊಡುಗೆ
* 2009ರಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದಿಂದ ಮನೆ ಕಳೆದುಕೊಂಡಿದ್ದವರಿಗೆ ಪುರ್ನವಸತಿ ಕಲ್ಪಿಸಲು ಯಡಿಯೂರಪ್ಪ ಅವರ ಸರ್ಕಾರ ಹಮ್ಮಿಕೊಂಡಿದ್ದ 'ಆಶ್ರಯ' ಯೋಜನೆಯನ್ನು ಯಶಸ್ವಿಗೊಳಿಸಲು ಸಹಕರಿಸಿದ್ದಾರೆ. ಸಿಸ್ಕೋ, ಇನ್ಫೋಸಿಸ್, ವಿಪ್ರೋ ಮುಂತಾದ ಕಂಪನಿಗಳನ್ನು ಒಗ್ಗೂಡಿಸಿ ನೆರೆ ಪೀಡಿತ ಸುಮಾರು 40 ಸಾವಿರ ಮನೆಗಳನ್ನು ನಿರ್ಮಿಸುವ ಅಭೂತಪೂರ್ವ ಕಾರ್ಯ ಕೈಗೊಂಡರು.
* ತಮ್ಮ ಆರ್ ಸಿ ಪ್ರತಿಷ್ಠಾನದ ಮೂಲಕ ಬಾಗಲಕೋಟೆ ಜಿಲ್ಲೆಯ ಶಿರಬಡಗಿ ಗ್ರಾಮದಲ್ಲಿ 293ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟರು.
* ರಾಷ್ಟ್ರೀಯ ಸೇನಾ ಸ್ಮಾರಕ : ಬೆಂಗಳೂರಿನಲ್ಲಿರುವ ಸ್ವತಂತ್ರ ಭಾರತದ ಪ್ರಥಮ ಸೇನಾ ಸ್ಮಾರಕ. ರಾಜೀವ್ ಚಂದ್ರಶೇಖರ್ ಅವರ ಕನಸಿನ ಕುಡಿ. ಇದು ಕಾರ್ಯಾರಂಭಗೊಂಡ ದಿನದಿಂದಲೂ ರಾಜೀವ್ ಅವರು ಅಲ್ಲಿನ 210 ಅಡಿ ಧ್ವಜಸ್ತಂಭದ ಮೇಲೆ ಹಾರಾಡುವ ರಾಷ್ಟ್ರಧ್ವಜವನ್ನು ಕಾಣಿಕೆಯಾಗಿ ನೀಡುತ್ತಾ ಬಂದಿದ್ದಾರೆ.