ರಾಯಣ್ಣ ಬ್ರಿಗೇಡ್ಗೆ ಬಹಿರಂಗ ಮರುಜೀವ?
ಶಿವಮೊಗ್ಗ, ಮಾರ್ಚ್ 03: ಹಿಂದುಳಿದ ಹಾಗೂ ದಲಿತ ವರ್ಗಗಳ ಮತ ಸೆಳೆಯಲು ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಕೈಹಾಕಿದ್ದು ಈ ಸಮಾವೇಶಕ್ಕೆ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಮುನ್ನುಡಿ ಹಾಡಲು ಮುಂದಾಗಿದೆ. ಈ ಕಾರ್ಯಕ್ರಮ ಈಶ್ವರಪ್ಪ ಅವರಿಗೆ ರಾಷ್ಟ್ರ ನಾಯಕರ ಮುಂದೆ ಶಕ್ತಿ ಪ್ರದರ್ಶನಕ್ಕೂ ಇದು ಅವಕಾಶ ಎನ್ನಲಾಗಿದೆ.
ಈಗಾಗಲೇ ಹಿಂದುಳಿದ ವರ್ಗಗಳನ್ನು 'ರಾಯಣ್ಣ ಬ್ರಿಗೇಡ್' ಮೂಲಕ ಸಂಘಟಿಸಿ ಬಿಜೆಪಿಯ ಒಳಗೆ 'ಸಂಚಲನ' ಮೂಡಿಸಿದ್ದ ಈಶ್ವರಪ್ಪ ಆ ನಂತರ ಪಕ್ಷದ ಒತ್ತಡಕ್ಕೆ ಮಣಿದು ಬ್ರಿಗೆಡ್ಗೆ ಅಲ್ಪ ವಿರಾಮ ಹಾಕಬೇಕಾಗಿತ್ತು. ಆದರೆ ಪಕ್ಷಕ್ಕೆ ಈಗ ಮತ್ತೆ ರಾಯಣ್ಣ ಬ್ರಿಗೇಡ್ ಅವಶ್ಯಕತೆ ಉಂಟಾಗಿದ್ದು, ಹಿಂದುಳಿದ ಹಾಗೂ ದಲಿತ ವರ್ಗಗಳ ಸಮಾವೇಶದ ಮೂಲಕ ರಾಯಣ್ಣ ಬ್ರಿಗೆಡ್ಗೆ ಬಹಿರಂಗ ಮರುಜೀವ ನೀಡಲು ಈ ಅವಕಾಶವನ್ನು ಈಶ್ವರಪ್ಪ ಬಳಸಿಕೊಳ್ಳುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಅವರು 'ಅಹಿಂದ' ರಾಜಕಾರಣಿ ಮಾಡಿ ರಾಜ್ಯದ ಮೇರು ರಾಜಕೀಯ ಹುದ್ದೆಗೇರಿದರು. ಇದೇ ಮಾದರಿಯನ್ನು ಪಾಲಿಸಲು ಹೊರಟ ಈಶ್ವರಪ್ಪ ಅವರು 'ರಾಯಣ್ಣ' ರಾಜಕೀಯ ಪ್ರಾರಂಭ ಮಾಡಿದರಾದರೂ, ಪಕ್ಷದಲ್ಲೇ ಭಿನ್ನಮತ ಮೂಡಿ 'ರಾಯಣ್ಣ ಬ್ರಿಗೇಡ್' ಮೂಲೆ ಸೇರಬೇಕಾಯಿತು. ಇತ್ತೀಚೆಗೆ ಶಿವಮೊಗ್ಗ ರಾಜಕೀಯದಲ್ಲಿ ಈಶ್ವರಪ್ಪಗೆ ಹಿನ್ನೆಡೆ ಆದ ಕಾರಣ ರಾಯಣ್ಣ ಬ್ರಿಗೇಡ್ಗೆ ಮರುಜೀವ ನೀಡಲು ಈಶ್ವರಪ್ಪ ಪ್ರಯತ್ನ ಪಟ್ಟಿದ್ದರು ಅದಕ್ಕೆ ಈಗ ಪಕ್ಷವೇ ಅವಕಾಶ ಕಲ್ಪಿಸಿಕೊಟ್ಟಂತಾಗಿದೆ.
ರಾಯಣ್ಣ ಬ್ರಿಗೇಡ್ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸಿದ ವಿಧಾನ ಪರಿಷತ್ ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪನವರಿಗೆ ಪಕ್ಷ ಈಗ ಹಿಂದುಳಿದ ವರ್ಗಗಳ ಮತ್ತು ದಲಿತರ ಮತವನ್ನ ಪಕ್ಷದೆಡೆ ಸೆಳೆಯಲು ಹೊಸ ಜವಬ್ದಾರಿಯನ್ನ ಅವರ ಹೆಗಲ ಮೇಲೆ ಹೇರಿದೆ.

ಈ ಕುರಿತು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಈಶ್ವರಪ್ಪ ಹಿಂದುಳಿದ ವರ್ಗದ ಎರಡು ಬೃಹತ್ ಸಮಾವೇಶವನ್ನ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಮಾ.10 ರಂದು ಕೂಡಲ ಸಂಗಮದಲ್ಲಿ ಹಾಗೂ
ಮಾ. 25ರಂದು ಹಾವೇರಿ ಜಿಲ್ಲೆ ಕಾಗಿನೆಲೆಯಲ್ಲಿ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.
ಮಾ.10ರಂದು ಕೂಡಲಸಂಗಮದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ರಾಜ್ಯದ ಉತ್ತರ ಕರ್ನಾಟಕದ ಭಾಗದ 10 ಜಿಲ್ಲೆಗಳ ಹಿಂದುಳಿ ವರ್ಗದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾಗಿನೆಲೆಯಲ್ಲಿ ನಡೆಯುವ ಎರಡನೇ ಸಮಾವೇಶಕ್ಕೆ ಹುಬ್ಬಳ್ಳಿ, ಚಿಕ್ಕಬಳ್ಳಾಪುರ, ಮಂಡ್ಯ ಚಾಮರಾಜ ನಗರ, ಹಾಸನ, ಶಿವಮೊಗ್ಗ, ಮೈಸೂರು, ದಾವಣಗೆರೆಯಲ್ಲಿ ಹಿಂದುಳಿದ ವರ್ಗದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನ ಉದ್ಘಾಟಿಸುವರು ಇನ್ನೂ ನಿಶ್ಚಿತಗೊಂಡಿಲ್ಲವೆಂದರು. ಜನರ ಜೊತೆ ಬಿಜೆಪಿ ಇದೆ ಎಂದು ಸಾಭೀತು ಪಡಿಸಲು ಸಮಾವೇಶ ನಡೆಸಲಾಗುತ್ತಿದೆ. ಇದು ಪಕ್ಷದ ಶಕ್ತಿ ಪ್ರದರ್ಶನವೂ ಹೌದು ಎಂದು ಹೇಳಿದರು.












Click it and Unblock the Notifications