"ದೃಶ್ಯಂ" ಸಿನಿಮಾ ನೋಡಿ ಸ್ನೇಹಿತೆ ಮನೆ ದೋಚಿದ್ದ ಬ್ಯುಸಿನೆಸ್ ಮ್ಯಾನ್ ಗಳು
ಬೆಂಗಳೂರು, ಫೆಬ್ರವರಿ 20: ಆ ಇಬ್ಬರು ಕಳ್ಳರು ದೃಶ್ಯಂ ಸಿನಿಮಾ ನೋಡಿ ಪ್ರೇರಣೆಗೊಂಡಿದ್ದರು. ಆಪ್ತಳ ಮನೆಯಲ್ಲಿ ಒಂದು ಕೋಟಿ ರೂ. ಮೌಲ್ಯದ ಚಿನ್ನ, ನಗದು ದೋಚಿದ್ದರು ! ಸ್ಕೆಚ್ ಹಾಕಿದ್ದವ ಮಾತ್ರ ಕಳ್ಳತನವಾದ ಮನೆ ಮಾಲೀಕರ ಜತೆಗೆ ಇದ್ದ ! ಇನ್ನು ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 270 ಸಿಸಿಟಿವಿ ದೃಶ್ಯ ನೋಡಿದ್ರೂ ಪೊಲೀಸರಿಗೆ ಅವರ ಬಗ್ಗೆ ಮರ್ಮ ಸಿಗಲಿಲ್ಲ ! ನಕಲಿ ಕೀ ಬಳಿಸಿ ದೋಚಿದ್ದ ಮನೆಗೆ ಬಾಗಿಲು ಮುರಿದು ಕಳ್ಳತನ ಮಾಡಿದಂತೆ ಕಥೆ ಕಟ್ಟಿದ್ದರು ! ಬ್ಯುಜಿನೆಸ್ ನಲ್ಲಿ ನಷ್ಟವಾದ ಬಳಿಕ ಬಳಿಕ ಆಪ್ತರ ಮನೆ ದೋಚಿ ಸಿಕ್ಕಿಬಿದ್ದ ಬ್ಯುಸಿನೆಸ್ ಮ್ಯಾನ್ ಗಳ ರಿಯಲ್ ದೃಶ್ಯಂ ಸ್ಟೋರಿಯಿದು.

ಪುಲಿಕೇಶಿನಗರದಲ್ಲಿ ನಡೆದ ದೃಶ್ಯಂ:
ಅವತ್ತು ಜ. 12. ಜ್ಯೋತಿ ಜ್ವಾಲ ಎಂಬುವರು ಪುಲಿಕೇಶಿನಗರದಲ್ಲಿ ವಾಸವಾಗಿದ್ದಾರೆ. ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಅಣ್ಣನನ್ನು ನೋಡಿಕೊಂಡು ಬರಲೆಂದು ಜ್ಯೋತಿ ಜ್ವಾಲ ಹೋಗಿದ್ದರು. ಅಲ್ಲಿ ಅಣ್ಣನ ಹಾರೈಕೆ ಮಾಡಿದ್ದ ಜ್ಯೋತಿ ಮರುದಿ ಫುಲಿಕೇಶಿನಗರ ಮನೆಗೆ ಬಂದಿದ್ದರು. ಮನೆ ಬಾಗಿಲು ಮುರಿದಂತಿತ್ತು. ಒಳಗೆ ನೋಡಿದರೆ ಚಿನ್ನದ ಆಭರಣಗಳು ಇಲ್ಲ, ನಗದು ವಿದೇಶಿ ಕರೆನ್ಸಿ ಯಾವದೂ ಇಲ್ಲ. ಇಡೀ ಮನೆಯಲ್ಲಿ ಎಲ್ಲಾ ಮಾಯ. ಒಂದು ಕೋಟಿ ರೂಪಾಯಿ ಮೌಲ್ಯದ ಆಭರಣ, ನಗದು ಎಗರಿಸಿದ್ದರು. ಜ್ಯೋತಿ ಜ್ವಾಲ ಪುಲಿಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪುಲಿಕೇಶಿನಗರ ಪೊಲೀಸರ ತನಿಖೆ:
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಒಂದು ಸಂಗತಿ ಹೊರಗೆ ಬಂದಿತ್ತು. ಯಾರೋ ಮನೆ ಕಳ್ಳತನ ಮಾಡಿದ್ದಾರೆ. ಆದರೆ, ಮನೆಗೆ ನಕಲಿ ಕೀ ಬಳಿಸಿದ್ದಾರೆ. ಮೇಲ್ನೋಟಕ್ಕೆ ಮನೆ ಬಾಗಿಲು ಮುರಿದಂತೆ ಕಾಣುತ್ತಿತ್ತು. ಇದು ಬಿಟ್ಟರೆ ಕಳ್ಳತನವಾದ ದಿನ ಕಳ್ಳರು ಹೋಗಿರಬಹುದಾದ ದಾರಿಯ ಸಾಧ್ಯತೆ ಜಾಡು ಹಿಡಿದು ತನಿಖೆ ನಡೆಸಿದ್ದರು. ಅಚ್ಚರಿ ಏನೆಂದರೆ, ಜ್ಯೋತಿ ಜ್ವಾಲಾ ಅವರ ದ್ವಿಚಕ್ರ ವಾಹನ ಕೂಡ ಕಳ್ಳತನವಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸ್ ನಾಯಿಗಳನ್ನು ತರಿಸಿ ಮೂಲ ಪತ್ತೆ ಮಾಡಲು ಪೊಲೀಸರು ಪ್ರಯತ್ನಿಸಿದರು. ಆದರೆ ಏನನ್ನೂ ನಾಯಿಗಳು ಮೂಸಿ ನೋಡಲಿಲ್ಲ, ಯಾಕೆಂದರೆ ಮನೆ ತುಂಬಾ ಕಳ್ಳರು ಸಾಕ್ಷಿ ಸಿಗದಂತೆ ಖಾರದ ಪುಡಿ ಚೆಲ್ಲಿದ್ದರು !

ಏಳು ಆಟೋ ಬದಲಿಸಿದ್ದರು:
ಇನ್ನು ಮನೆಯಲ್ಲಿ ಚಿನ್ನಾಭರಣ ನಗದು ದೋಚಿದ್ದ ಬಗ್ಗೆ ಪುಲಿಕೇಶಿನಗರ ಠಾಣೆ ಪೊಲೀಸರು ಸಿಸಿಟಿವಿ ಪರಿಶೀಲನೆಗೆ ಮುಂದಾಗಿದ್ದರು. ಬರೋಬ್ಬರಿ 270 ಸಿಸಿಟಿವಿ ದೃಶ್ಯ ತೆಗೆದು ಪರಿಶೀಲನೆ ನಡೆಸಿದ್ದರು. ಆದರೆ ಅದರಲ್ಲಿ ಒಬ್ಬ ಕಳ್ಳ ಬೈಕ್ ನಲ್ಲಿಯೇ ಚಿನ್ನಾಭರಣ ಹಾಗೂ ನಗದು ದೋಚದ್ದ ವಿವರ ಸಿಕ್ಕಿತ್ತು. ಆದರೆ ಬೈಕ್ ದೂರುದಾರೆಯದ್ದು. ಇನ್ನು ಸಿಸಿಟಿವಿ ಹುಡುಕುತ್ತಾ ಹೋದಂತೆ ಏಳು ಆಟೋಗಳನ್ನು ಬದಲಿಸಿದ್ದ ಕಳ್ಳ. ಹೊಸೂರು ರಸ್ತೆ ವರೆಗೂ ಹೋಗಿದ್ದ ಬಗ್ಗೆ ವಿವರ ಪಡೆದ ಬಳಿಕ ಆನಂತರ ಎಲ್ಲಿ ಹೋದ ಎಂಬ ಸುಳಿವು ಪೊಲೀಸರಿಗೆ ಸಿಗದಂತೆ ಎಸ್ಕೇಪ್ ಆಗಿದ್ದ. ಸಿಸಿಟಿವಿ ದೃಶ್ಯ ಆಧರಿಸಿ ಕೊನೆಗೂ ಪೊಲೀಸರಿಗೆ ಕಳ್ಳರ ಜಾಡು ಹಿಡಿಯಲು ಸಾಧ್ಯವಾಗಲಿಲ್ಲ. ಪಿಎಸ್ಐ ರುಮಾನ್ ಪಾಷಾ ಸಾಕಷ್ಟು ಶ್ರಮ ಹಾಕಿದರೂ ಯಶಸ್ಸು ಸಿಗಲಿಲ್ಲ.

ಇದು ದೃಶ್ಯಂ ಮೂವಿ ರಿಪೀಟ್ :
ಪೊಲೀಸರ ವಿಶೇಷ ತನಿಖಾ ತಂಡ ತನಿಖೆ ಮಾಡುತ್ತಿದ್ದರೂ, ಜ್ಯೋತಿ ಜ್ವಾಲ ಅವರ ಸ್ನೇಹಿತ ನಜೀಂ ಷರೀಪ್ ಜತೆಗೆ ಇದ್ದರು. ಯಾಕೋ ಪೊಲೀಸರಿಗೆ ಈತನ ನಡಾವಳಿಕೆ ಬಗ್ಗೆ ಅನುಮಾನಗೊಂಡಿದ್ದರು. ಆದರೆ, ಯಾವುದೇ ರೀತಿಯ ಸಾಕ್ಷಿ ಸಿಗಲಿಲ್ಲ. ಸಿಸಿ ಟಿವಿಯಲ್ಲಿ ಸಿಕ್ಕಿದ್ದ ವ್ಯಕ್ತಿಯ ಚಿತ್ರಕ್ಕೂ ಈತನಿಗೂ ಹೋಲಿಕೆಯಾಗುತ್ತಿರಲಿಲ್ಲ. ಹೀಗಾಗಿ ಬರೋಬ್ಬರಿ ಎರಡು ತಿಂಗಳು ತನಿಖೆ ನಡಸಿದರೂ ಆರೋಪಿಗಳನ್ನು ಆರಂಭದಲ್ಲಿ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ದೂರುದಾರ ಮಹಿಳೆ ಜ್ಯೋತಿ ಜ್ವಾಲ ಅವರ ಜತೆಯಲ್ಲಿಯೇ ಇದ್ದ ಆರೋಪಿಯ ನಡಾವಳಿಕೆ ನೋಡಿ ಅನುಮಾನಗೊಂಡು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರು ಬ್ಯುಜಿನೆಸ್ ಮ್ಯಾನ್ ಗಳ ಕಳ್ಳತನ ಪ್ರಕರಣ ಹೊರಗೆ ಬಿದ್ದಿದೆ.

ಸ್ನೇಹಿತೆಯ ಮನೆಗೆ ಕನ್ನ :
ಜ್ಯೋತಿ ಜ್ವಾಲಾ ಸ್ನೇಹಿತನಾಗಿದ್ದ ನಜೀಂ ಷರೀಪ್ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಿದ್ದ. ಈತನ ಸ್ನೇಹಿತ ಮಹಮದ್ ಶಫಿವುಲ್ಲಾ ಕೂಡ ಬೇರೆ ವ್ಯಾಪಾರ ಮಾಡಿಕೊಂಡಿದ್ದ. ಕೊರೋನಾ ಬಳಿಕ ಇಬ್ಬರು ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರು. ಜ್ಯೋತಿ ಜ್ವಾಲ ಬಗ್ಗೆ ತಿಳಿದಿದ್ದ ನಜೀಂ ಷರೀಪ್ ಕಳ್ಳತನಕ್ಕೆ ಯೋಜನೆ ರೂಪಿಸಿದ. ದೃಶ್ಯಂ ಸಿನಿಮಾ ಮಾದರಿಯಲ್ಲಿಯೇ ಪ್ಲಾನ್ ರೂಪಿಸಿದ್ದಾನೆ. ಅದಕ್ಕೆ ತನ್ನ ಸ್ನೇಹಿತ ಮಹಮದ್ ಶಫೀವುಲ್ಲಾ ನನ್ನು ಬಳಿಸಿಕೊಂಡಿದ್ದಾನೆ. ಸ್ನೇಹಿತೆಯ ಮನೆಯಲ್ಲಿ ಕಳ್ಳತನ ಮಾಡಿಸಲು ಸ್ನೇಹಿತನನ್ನು ಬಳಿಸಿಕೊಂಡಿದ್ದ ನಜೀಂ ಷರೀಪ್ ನಡವಳಿಕೆ ಬಗ್ಗೆ ಪೊಲೀಸರು ಅನುಮಾನಗೊಂಡಿದ್ದರು. ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದು, ಈತ ನೀಡಿದ ಮಾಹಿತಿ ಮೇರೆಗೆ ಮಹಮದ್ ಶಫೀಉಲ್ಲಾನನ್ನು ಬಂಧಿಸಿದ್ದಾರೆ. ಇಬ್ಬರ ಬಂಧನದಿಂದ ಒಂದು ಕೋಟಿ ಮೌಲ್ಯದ ಚಿನ್ನಾಭರಣ, ನಗದು ಹಣ ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಮುಂದೆ ಆಟ ನಡೆಯಲಿಲ್ಲ:
ನಜೀಂ ಷರೀಪ್ ತನ್ನ ಸ್ನೇಹಿತೆ ಜ್ಯೋತಿ ಜ್ವಾಲಾ ಮನೆಯಲ್ಲಿ ಕಳ್ಳತನ ಮಾಡಲು ಯೋಜನೆ ರೂಪಿಸಿದ. ಪೊಲೀಸ್ ನಾಯಿಗಳಿಗೆ ಸುಳಿವು ಸಿಗದಂತೆ ಮನೆಯಲ್ಲಿ ಕಾರದ ಪುಡಿ ಎರಚಿದ್ದ. ಬೆರಳು ಮುದ್ರೆ ಸುಳಿವು ಸಿಗದಂತೆ ಗ್ಲೌಸ್ ಬಳಸುವಂತೆ ಮಾಡಿದ್ದ. ಮನೆ ಬಾಗಿಲು ಒಡೆದ ರೀತಿ ಮಾಡಿ, ನಕಲಿ ಕೀ ಬಳಿಸಿ ಕಳ್ಳತನ ಮಾಡಿಸಿದ್ದ. ಇನ್ನು ಮನೆಯಿಂದ ಪರಾರಿಯಾಗಲು ಬರೋಬ್ಬರಿ ಏಳು ಆಟೋ ಬಳಸುವಂತೆ ಸೂಚನೆ ಮಾಡಿದ್ದ. ಇದೆಲ್ಲವನ್ನೂ ಮೊದಲೇ ಸಂಚು ರೂಪಿಸಿ ಕಳ್ಳತನ ಮಾಡಿದ ಮಹಮದ್ ಶಫೀಉಲ್ಲಾ ಜತೆ ಒಂದು ಕರೆಯ ಸಂಪರ್ಕವೂ ಇಟ್ಟುಕೊಂಡಿರಲ್ಲ. ಶಫೀವುಲ್ಲಾ ಕಳ್ಳತನ ಮಾಡಿಕೊಂಡು ಬಂದ ಬಳಿಕ ಎಲ್ಲಾ ಚಿನ್ನಾಭರಣ ಮತ್ತು ನಗದು ಹಣವನ್ನು ಇಬ್ಬರು ಹಂಚಿಕೊಂಡಿದ್ದರು. ಅಂತೂ ಡಿಸಿಪಿ ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಪುಲಿಕೇಶಿನಗರ ಪೊಲೀಸರು ದೃಶ್ಯಂ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications