ಬಾಂಗ್ಲಾ: ಕೋಮು ಸಂಘರ್ಷ, 29 ಹಿಂದೂ ಕುಟುಂಬದ ಮನೆಗೆ ಬೆಂಕಿ
ಢಾಕಾ, ಅಕ್ಟೋಬರ್ 18: ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಹಿಂದೂ ಕುಟುಂಬದ ಮೇಲಿನ ದೌರ್ಜನ್ಯವು ಅಧಿಕವಾಗಿದೆ. ಕನಿಷ್ಠ 29 ಹಿಂದೂ ಕುಟುಂಬಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ದುರ್ಗಾಪೂಜೆ ವೇಳೆ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿದ ಅಪರಿಚಿತರು ಮೂವರನ್ನು ಹತ್ಯೆ ಮಾಡಿದ ಘಟನೆ ಅಕ್ಟೋಬರ್ 14 ರಂದು ನಡೆದಿತ್ತು. ಈ ಘಟನೆಯನ್ನು ಖಂಡಸಿ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯವು ಪ್ರತಿಭಟನೆ ನಡೆಸಿತ್ತು. ಬಳಿಕ ಹಿಂದೂಗಳ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ಹೇಳಿದೆ.
ಭಾನುವಾರ ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 255 ಕಿಲೋಮೀಟರ್ ದೂರದಲ್ಲಿರುವ ಗ್ರಾಮದಲ್ಲಿ ದುಷ್ಕರ್ಮಿಗಳು ಈ ದಾಳಿಯನ್ನು ನಡೆಸಿ, ಮನೆಗಳಿಗೆ ಬೆಂಕಿಯನ್ನು ಹಚ್ಚಿದ್ದಾರೆ. "ಈ ಹಳ್ಳಿಯ ಯುವಕನೋರ್ವ ಧರ್ಮವನ್ನು ಅವಹೇಳನ ಮಾಡಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ವದಂತಿಗಳು ಹಬ್ಬಿದ ಬೆನ್ನಲ್ಲೇ ಪೊಲೀಸರು ಮೀನುಗಾರರ ಈ ಕಾಲೋನಿಗೆ ಧಾವಿಸಿದ್ದಾರೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಕಮರುಜಮಾನ್ ಹೇಳಿದ್ದಾರೆ.

ಯುವಕನ ಮನೆಗೆ ಪೊಲೀಸರ ಕಾವಲು
ಯುವಕನು ಫೇಸ್ಬುಕ್ನಲ್ಲಿ ಧರ್ಮವನ್ನು ಅವಹೇಳನ ಮಾಡಿ ಪೋಸ್ಟ್ ಹಾಕಿದ್ದಾನೆ ಎಂದು ವದಂತಿ ಹರಡುವಾಗ ಆತನ ಮೇಲೆ ದಾಳಿ ನಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ಯುವಕನ ಮನೆಗೆ ಕಾವಲು ಕಾಯುತ್ತಿರುವಾಗ, ದಾಳಿಕೋರರು ಇತರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮಾಧ್ಯಮಗಳ ವರದಿ ಹೇಳಿದೆ. ಗುಂಪೊಂದು ಬಂದು ಈ ದಾಳಿಯನ್ನು ನಡೆಸಿದೆ. ಸುಮಾರು 29 ಮನೆಗಳು, ಎರಡು ಅಡುಗೆ ಕೋಣೆಗಳು, ಎರಡು ಕೊಟ್ಟಿಗೆಗಳು, 15 ಜನರಿಗೆ ಸೇರಿದ ಸುಮಾರು 20 ಒಣಹುಲ್ಲುಗಳ ರಾಶಿಯ ಮೇಲೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಇವೆಲ್ಲವೂ ನಾಶವಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ರಾತ್ರಿ 8:45ಕ್ಕೆ ಬಂದಿದ್ದು, ಬೆಳಗ್ಗೆ 4:10ಕ್ಕೆ ಬೆಂಕಿಯನ್ನು ನಂದಿಸಲಾಗಿದೆ. ಬೇರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬಾಂಗ್ಲಾದೇಶದಲ್ಲಿ ಹೆಚ್ಚಿದ ಕೋಮು ಸಂಘರ್ಷ
ಬಾಂಗ್ಲಾದೇಶದಲ್ಲಿ ನವರಾತ್ರಿ ಪ್ರಯುಕ್ತ ದೇವಸ್ಥಾನಗಳಲ್ಲಿ ದುರ್ಗಾದೇವಿಯ ಪೂಜೆ ಮಾಡಲಾಗುತ್ತಿದ್ದ ಸಂದರ್ಭ ಅಪರಿಚಿತ ಗುಂಪೊಂದು ದೇವಸ್ಥಾನದ ಮೇಲೆ ದಾಳಿ ಮಾಡಿ ವಿಗ್ರಹಗಳನ್ನು ಧ್ವಂಸ ಮಾಡಿತ್ತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಗೊಂದಲದ ವಾತಾವರಣ ಮನೆ ಮಾಡಿದೆ. ಈ ನಡುವೆ ದುಷ್ಕರ್ಮಿಗಳು ಹಿಂದೂಗಳ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ಕೊಮಿಲ್ಲಾ, ಚಂದಾಪುರ, ಚಟ್ಟೋಗ್ರಾಮ್, ಕಾಕ್ಸ್ ಬಜಾರ್, ಬಂದರ್ಬನ್, ಮೌಲ್ವಿಬಜಾರ್, ಗಾಜಿಪುರ, ಚಪೈನವಾಬ್ಗಂಜ್, ಫೆನಿ ಮತ್ತು ಇತರ ಜಿಲ್ಲೆಗಳಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ಈ ನಡುವೆ ಈ ದಾಳಿ ಪ್ರಕರಣದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋಧಕ ಪೋಸ್ಟ್ ಮಾಡಿದ ಆರೋಪದಲ್ಲಿ 12 ಅಧಿಕ ಮಂದಿಯ ಬಂಧನ ಮಾಡಲಾಗಿದೆ.

ಕೋಮು ಸಂಘರ್ಷ, ಹಲವಾರ ಬಂಧನ
ಇನ್ನು "ಚಂದಾಪುರ ಹಾಗೂ ನೋಖಾಲಿ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಹಿಂದೂ ಭಕ್ತರು ಸಾವನ್ನಪ್ಪಿದ್ದಾರೆ," ಎಂದು ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ಆರೋಪ ಮಾಡಿದೆ. ಈ ನಡುವೆ ಅಪರಾಧ ವಿರೋಧಿ ಪಡೆಯಾದ ರಾಪಿಡ್ ಆಕ್ಷನ್ ಬೆಟಾಲಿಯನ್ (ಆರ್ಎಬಿ) ದೇವಾಲಯ ಹಾಗೂ ಹಿಂದೂ ಸಮುದಾಯಕ್ಕೆ ಸೇರಿದ ಅಂಗಡಿಗಳಿಗೆ ದಾಳಿ ನಡೆಸಿದ ಹಾಗೂ ಲೂಟಿ ಮಾಡಿದ ಆರೋಪದ ಮೇಲೆ ಇನ್ನಿಬ್ಬರು ಆರೋಪಿಗಳನ್ನು ಬಂಧನ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅರೆಸೇನಾ ಪಡೆಯ ಕಾನೂನು ಮತ್ತು ಮಾಧ್ಯಮ ವಿಭಾಗದ ಸಹಾಯಕ ನಿರ್ದೇಶಕರಾದ ಇಮ್ರಾನ್ ಖಾನ್, "ಕೋಮು ಸಂಘರ್ಷ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಇಬ್ಬರನ್ನು ಬಂಧನ ಮಾಡಲಾಗಿದೆ," ಎಂದು ಮಾಹಿತಿ ನೀಡಿದ್ದಾರೆ.

2013 ರಿಂದ ಈವರೆಗೆ ಹಿಂದೂಗಳ ಮೇಲೆ 3,679 ಬಾರಿ ದಾಳಿ
2013ರ ಜನವರಿಯಿಂದ ಈ ವರ್ಷದ ಸೆಪ್ಟೆಂಬರ್ವರೆಗೆ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ಒಟ್ಟು 3,679 ಬಾರಿ ದಾಳಿ ನಡೆದಿದೆ ಎಂದು ಬಾಂಗ್ಲಾದೇಶದ ಪ್ರಮುಖ ಮಾನವ ಹಕ್ಕುಗಳ ಗುಂಪು, ಬಾಂಗ್ಲಾದೇಶ ಐನ್ ಓ ಸಲೀಶ್ ಕೇಂದ್ರ (ಎಎಸ್ಕೆ) ಹೇಳಿದೆ ಎಂದು ಬಿಡಿನ್ಯೂಸ್ ವರದಿ ಮಾಡಿದೆ.
ಈ ದಾಳಿಯಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ 559 ಮನೆಗಳಿಗೆ ಹಾಗೂ 442 ಅಂಗಡಿಗಳಿಗೆ ಬೆಂಕಿ ಹಚ್ಚರಿವುದು ಸೇರಿದೆ. ಹಾಗೆಯೇ ಹಿಂದೂ ದೇವಾಲಯದಲ್ಲಿ ವಿಗ್ರಹಗಳ ಧ್ವಂಸ ಮಾಡುವುದು ಕೂಡಾ ಇದರಲ್ಲಿ ಒಳಗೊಂಡಿದೆ. ಈ ಎಲ್ಲಾ ದಾಳಿಯಲ್ಲಿ ಒಟ್ಟು 11 ಮಂದಿ ಹಿಂದೂ ನಾಗರಿಕರು ಸಾವನ್ನಪ್ಪಿದರೆ, ಸುಮಾರು 862 ಮಂದಿಗೆ ಗಾಯವಾಗಿದೆ.












Click it and Unblock the Notifications