ಕೋವಿಡ್ ಹೊಡೆತಕ್ಕೆ ನಲುಗಿದ ಜನತೆ: ಹಬ್ಬದ ನಡುವೆ ಚಿನ್ನ ಮಾರಾಟವೇ ಕೊನೆಯ ಆಯ್ಕೆ
ಮುಂಬೈ, ಅಕ್ಟೋಬರ್ 13: ಕೊರೊನಾ ವೈರಸ್ ಸೋಂಕು ದೇಶದಲ್ಲಿ ಅದೇಷ್ಟೋ ಜನರನ್ನು ಸಂಕಷ್ಟಕ್ಕೆ ದೂಡಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮಾಡಲಾದ ಲಾಕ್ಡೌನ್ನಿಂದಾಗಿ ಹಲವಾರು ಜನರು ಉದ್ಯೋಗವನ್ನು ಕಳೆದು ಕೊಂಡು ಸಂಕಷ್ಟದಲ್ಲಿ ಇರುವಾಗ ಈಗ ಬೆಲೆ ಏರಿಕೆಯು ಜನರನ್ನು ಬಡತನಕ್ಕೆ ದೂಡಿದೆ.
ಕೊರೊನಾದ ಎರಡನೇ ಅಲೆಯ ಬಳಿಕ ಭಾರತದಲ್ಲಿ ಹಲವಾರು ಮಂದಿ ತಮ್ಮ ಚಿನ್ನವನ್ನು ಮಾರಾಟ ಮಾಡಿದ್ದಾರೆ ಎಂದು ವರದಿಗಳು ಆಗಿದ್ದವು. ಆದರೆ ಈಗ ನವರಾತ್ರಿ, ದೀಪಾವಳಿ ಹಬ್ಬದ ನಡುವೆ ಜನರು ಚಿನ್ನವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಸಾವಿರಾರು ಮಂದಿ ಭಾರತೀಯರು ಈ ಹಬ್ಬದ ಸಂದರ್ಭದಲ್ಲಿ ತಮ್ಮ ಹಳೆಯ ಆಭರಣಗಳನ್ನು ಅಡವಿಡುತ್ತಿದ್ದಾರೆ ಎಂದು ಮುಂಬೈನ ಜ್ಯುವೆಲ್ಲರಿ ಮಾಲೀಕರೊಬ್ಬರು ಹೇಳುತ್ತಾರೆ.
ಮುಂಬೈನಲ್ಲಿ ಕವಿತಾ ಜೋಗನಿ ಎಂಬ ಮಹಿಳೆಯೊಬ್ಬರು ತಮ್ಮ ವಿವಾಹದ ಒಡವೆಗಳನ್ನು ಈಗ ಸಂಕಷ್ಟದ ಸಂದರ್ಭದಲ್ಲಿ ಮಾರಾಟ ಮಾಡಿದ್ದಾರೆ. ನಾನು ನನ್ನ ವಿವಾಹದ ಒಡವೆಯನ್ನು ಈ ರೀತಿಯಾಗಿ ಮಾರಾಟ ಮಾಡುವುದಕ್ಕೂ ಮುನ್ನ ಹಲವಾರು ಬಾರಿ ಯೋಚನೆ ಮಾಡಿದ್ದೇನೆ. ಆದರೆ ಬೇರೆ ಯಾವುದೇ ದಾರಿ ನನಗೆ ತೋಚದ ಕಾರಣ ಕೊನೆಗೆ ಚಿನ್ನವನ್ನು ಅಡವಿಟ್ಟು ಬಿಟ್ಟಿದ್ದೇನೆ ಎಂದು ಕವಿತಾ ಜೋಗನಿ ತಿಳಿಸಿದ್ದಾರೆ.

ಚಿನ್ನವನ್ನು ಮಾರಾಟ ಮಾಡುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ
ಕವಿತಾ ಜೋಗನಿ ಕುಟುಂಬವು ಈ ಹಿಂದೆ ಬಟ್ಟೆಯ ವ್ಯಾಪಾರವನ್ನು ಮಾಡುತ್ತಿತ್ತು. ಆದರೆ ಕಳೆದ ವರ್ಷದಲ್ಲಿ ಕೋವಿಡ್ ಈ ವ್ಯಾಪಾರಕ್ಕೆ ಪೆಟ್ಟು ನೀಡಿದೆ. ಮುಂಬೈನಲ್ಲಿ ಒಂದು ಹದಿನೈದು ಜನರು ಉದ್ಯೋಗಿಗಳನ್ನು ಇರಿಸಿಕೊಂಡು ಬಟ್ಟೆ ವ್ಯಾಪಾರ ಮಾಡುತ್ತಿದ್ದ ಕುಟುಂಬವು, ಈ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಲಾಕ್ಡೌನ್ ಮಾಡಿದ ಬಳಿಕ ಸಂಕಷ್ಟಕ್ಕೆ ಒಳಗಾಗಿದೆ. ಈ ಲಾಕ್ಡೌನ್ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಸಂಬಳವನ್ನು ನೀಡಲಾಗದೆ, ಅಂಗಡಿಯಲ್ಲಿನ ಬಿಲ್ಗಳನ್ನು ಕಟ್ಟಲಾಗಿದೆ ಕುಟುಂಬವು ಭಾರೀ ಸಂಕಷ್ಟಕ್ಕೆ ಒಳಗಾಗಿದೆ. "ಈ ಚಿನ್ನವನ್ನು ಮಾರಾಟ ಮಾಡುವುದು ಬಿಟ್ಟು ಬೇರೆ ಯಾವುದೇ ಆಯ್ಕೆ ನನಗೆ ಕಂಡು ಬಂದಿಲ್ಲ," ಎಂದು ಈ ಹಿಂದೆ ಬಟ್ಟೆ ಅಂಗಡಿಯ ಮಾಲೀಕರಾಗಿದ್ದ ಕವಿತಾ ಜೋಗನಿ ಈಗ ನೊಂದು ಹೇಳುತ್ತಾರೆ. "23 ವರ್ಷಗಳ ಹಿಂದೆ ನಾನು ನನ್ನ ವಿವಾಹದ ಸಂದರ್ಭ ಈ ಒಡವೆಯನ್ನು ಖರೀದಿ ಮಾಡಿದ್ದೆ. ಆದರೆ ಈಗ ಬೇರೆ ದಾರಿಯೇ ಇಲ್ಲದಂತೆ ಆಗಿದೆ," ಎಂದು ಹೇಳಿದ್ದಾರೆ.

230 ಮಿಲಿಯನ್ಗೂ ಅಧಿಕ ಮಂದಿಯನ್ನು ಬಡತನದ ಬಲೆಗೆ
ವ್ಯಾಪಾರದಲ್ಲಿ ನಷ್ಟ ಹಾಗೂ ಕೋವಿಡ್ ಸಂದರ್ಭದಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡು ಸುಮಾರು 230 ಮಿಲಿಯನ್ಗೂ ಅಧಿಕ ಭಾರತೀಯರು ಕಳೆದ ಒಂದು ವರ್ಷದಲ್ಲಿ ಬಡವರಾಗಿದ್ದಾರೆ ಎಂದು ಆಜೀಮ್ ಪ್ರೇಮ್ಜಿ ವಿಶ್ವವಿದ್ಯಾನಿಲಯದ ಸಂಶೋಧನೆಯು ಹೇಳುತ್ತದೆ. ಹಲವಾರು ಮಂದಿ ಅನಾರೋಗ್ಯವಾದರೆ ಆಸ್ಪತ್ರೆಯ ಬಿಲ್ಗಳು, ಶಾಲೆಯ ಶುಲ್ಕ ಹಾಗೂ ಬಾಡಿಗೆ ಕಟ್ಟಲಾಗದೆ ಕಂಗಲಾಗಿದ್ದಾರೆ. ಈ ಜನರುಗಳ ಕಷ್ಟವು ಇತ್ತೀಚೆಗೆ ಇನ್ನಷ್ಟು ಅಧಿಕವಾಗಿದೆ. ಇತ್ತೀಚೆಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ, ಅಡುಗೆ ಅನಿಲ ಬೆಲೆಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಿಂದಾಗಿ ಈಗಾಗಲೇ ಕಷ್ಟದ ಬಲೆಯಲ್ಲಿ ಇದ್ದ ಜನರು ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಮುಖ್ಯವಾಗಿ ಚಿನ್ನವನ್ನು ಅಡವಿಡುತ್ತಿದ್ದಾರೆ. 2021 ರ ಮೊದಲ ಎಂಟು ತಿಂಗಳಿನಲ್ಲೇ ಭಾರತದಲ್ಲಿ 4.71 ಟ್ರಿಲಿಯನ್ ರೂಪಾಯಿ ಮೌಲ್ಯದ ಚಿನ್ನವನ್ನು ಅಡವಿಡಲಾಗಿದೆ. ಈ ಮೂಲಕ ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯುವುದು ಶೇಕಡ 74 ರಷ್ಟು ಏರಿಕೆ ಆಗಿದೆ.

ಭಾರತದಲ್ಲಿ ಎಷ್ಟು ಚಿನ್ನ ಖರೀದಿ ಮಾಡಲಾಗಿದೆ?
ಭಾರತದಲ್ಲಿ ಚಿನ್ನವು ಸಾಂಸ್ಕೃ ತಿಕ ಹಾಗೂ ಆರ್ಥಿಕ ಮೌಲ್ಯವನ್ನು ಹೊಂದಿದೆ. ಮದುವೆ, ಹುಟ್ಟು ಹಬ್ಬ ಹಾಗೂ ಯಾವುದೇ ಧಾರ್ಮಿಕ ಸಂದರ್ಭದಲ್ಲಿ ಚಿನ್ನ ಅಗತ್ಯ ಎಂದು ಭಾರತದಲ್ಲಿ ನಂಬಲಾಗಿದೆ. ಇನ್ನು ಈ ಚಿನ್ನವನ್ನು ಪೀಳಿಗೆಯಿಂದ ಪೀಳಿಗೆಗೆ ನೀಡಬಹುದಾದ ಸಂಪತ್ತು ಎಂದು ಕೂಡಾ ಪರಿಗಣಿಸಲಾಗುತ್ತದೆ. 2020 ರಲ್ಲಿ ಭಾರತದಲ್ಲಿ 315.9 ಟನ್ನಷ್ಟು ಚಿನ್ನವನ್ನು ಭಾರತೀಯರು ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಮೆರಿಕನ್ನರು, ಯುರೋಪಿಯನ್ನರು ಹಾಗೂ ಮಧ್ಯ ಏಷ್ಯಾದವರು ಇಷ್ಟೇ ಪ್ರಮಾಣದಲ್ಲಿ ಚಿನ್ನವನ್ನು ಖರೀದಿ ಮಾಡಿದ್ದಾರೆ ಎಂದು ವಿಶ್ವ ಚಿನ್ನದ ಸಮಿತಿಯು ಹೇಳುತ್ತದೆ. ಆದರೆ ಈ ನಡುವೆ ಚೀನಾ ಮಾತ್ರ ಅಧಿಕ ಚಿನ್ನವನ್ನು ಖರೀದಿ ಮಾಡಿದೆ ಎಂದು ಹೇಳಲಾಗಿದೆ. ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿಯ ನಿರ್ದೇಶಕ ದಿನೇಶ್ ಜೈನ್, "ಚಿನ್ನವನ್ನು ಭಾರತದಲ್ಲಿ ಮಹಿಳೆಗೆ ಇರುವ ಸಾಮಾಜಿಕ ಭದ್ರತೆ ಎಂದೇ ಪರಿಗಣಿಸಲಾಗುತ್ತದೆ. ಸರ್ಕಾರದ ವತಿಯಿಂದ ಯಾವುದೇ ಸಾಮಾಜಿಕ ಭದ್ರತಾ ಯೋಜನೆ ಇಲ್ಲದ ಕಾರಣದಿಂದಾಗಿ ಈ ನಂಬಿಕೆ ಇದೆ," ಎಂದು ಅಭಿಪ್ರಾಯಿಸಿದ್ದಾರೆ.

ಚೇತರಿಕೆ ಕಾಣುತ್ತಿದೆ ಭಾರತದ ಆರ್ಥಿಕತೆ
ಈ ಎಲ್ಲಾ ಬೆಳವಣಿಗೆಯ ನಡುವೆ ಭಾರತದಲ್ಲಿ ಆರ್ಥಿಕತೆಯು ಚೇತರಿಕೆ ಕಾಣುತ್ತಿದೆ ಎಂದು ವರದಿಯಾಗಿದೆ. ಭಾರತದ ಆರ್ಥಿಕತೆ ವೇಗವಾಗಿ ಸುಧಾರಿಸಿಕೊಳ್ಳಲಿದೆ ಎಂದು ಇಂಟರ್ನ್ಯಾಷನಲ್ ಮಾನೆಟರಿ ಫಂಡ್ ಹೇಳಿದೆ. ದೇಶದ ಆರ್ಥಿಕ ಪ್ರಗತಿಯ ಗತಿಯನ್ನು ಪರಿಶೀಲನೆ ಮಾಡಿ, ಮಾಹಿತಿ ನೀಡುವುದರಲ್ಲಿ ಖ್ಯಾತಿಯಾಗಿರುವ ಈ ಸಂಸ್ಥೆಯು, ಭಾರತದಲ್ಲಿ ಒಟ್ಟಾರೆ ಈ ವಿತ್ತೀಯ ವರ್ಷದಲ್ಲಿ ಶೇ.9.5ರಷ್ಟು ಪ್ರಗತಿ ಸಾಧಿಸಲಿದೆ ಹಾಗೆಯೇ 2022ರಲ್ಲಿ ಶೇ.8.5 ರಷ್ಟು ಪ್ರಗತಿ ಸಾಧಿಸಲಿದೆ ಎಂದು ತಿಳಿಸಿದೆ. IMF ವರದಿಯ ಪ್ರಕಾರ ಕೊರೊನಾವೈರಸ್ನ ಎರಡನೇ ಅಲೆಗೆ ತತ್ತರಿಸಿ ಹೋದ ಅರ್ಥವ್ಯವಸ್ಥೆಗಳಲ್ಲಿ ಕೇವಲ ಭಾರತ ಒಂದೇ ಇಲ್ಲ. ಈ ಪಟ್ಟಿಯಲ್ಲಿ ಇಂಡೋನೆಷ್ಯಾ, ಮಲೇಶಿಯಾ, ಫಿಲಿಪೈನ್ಸ್, ಥೈಲೆಂಡ್, ವಿಯಟ್ನಾಂ ದೇಶಗಳ ಆರ್ಥವ್ಯವಸ್ಥೆಗಳ ಕುರಿತು ಕೂಡ ಆತಂಕ ವ್ಯಕ್ತಪಡಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications