ಹನಿ ಹನಿ ಇಬ್ಬನಿ ನಿನ್ನ ಬಾಚಿ ಕುಡಿಯೋ ಆಸೆ!
ಚಿಲಿಪಿಲಿ ಹಕ್ಕಿ ನಿನ್ನ ಭಾಷೆ ಕಲಿಯೋ ಆಸೆ. . . . .ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ; ಕಾಮನಾಬಿಲ್ಲೇರುವ ಜಾರುತಾ ನಾವಾಡುವ. . . .ಹೀಗೆ ಪ್ರತೀ ರಾಗಕ್ಕೂ ಹಾಡಿನ ಹೊರತಾಗಿಯೂ ಒಂದು ಮಾಧುರ್ಯವಿದೆ. ಪ್ರತಿ ಮಾತಿಗೂ ಶಬ್ದದ ಹೊರತಾಗಿಯೂ ಒಂದು ಭಾವವಿದೆ. ಪ್ರತಿ ಅಂಗಕ್ಕೂ ಸ್ಪರ್ಶದ ಹೊರತಾಗಿಯೂ ಒಂದು ಸ್ಪಂದನವಿದೆ. ಪ್ರತಿ ಬರಹಕ್ಕೂ ವಾಕ್ಯದ ಹೊರತಾದ ಒಂದು ಅರ್ಥವಿದೆ, ಆಳವಿದೆ ಅಗಲವಿದೆ. ಏನಂತೀರ?
ಬೇಡವೆಂದರೂ ಅರಳಲಿದೆ ಹೂವುಬೇಕೆಂದರೂ ಬಾಡಲೇಬೇಕು ಹೂವು,
ವಾಸ್ತವ-ಕಾಲ್ಪನಿಕ; ಅಷ್ಟೇ ಎಲ್ಲವೂ ಕ್ಷಣಿಕ,
ಕಾಲನ ಗೀತೆಗೆ ನಾನು ಅರ್ಜುನ;
ಅವನಲ್ಲಿ ಸ್ಥಾಯಿಯಾಗಲಿ ನನ್ನ ಮನ.
***
ನಾನು ಹೊಳೆಯಬೇಕಿತ್ತು ಹೊಳೆಯಾಗಿಬಿಟ್ಟೆ;
ನಾನು ಬದುಕಬೇಕಿತ್ತು ಬಯಲಾಗಿಬಿಟ್ಟೆ;
ನಾನು ನಾನಾಗ ಬೇಕಿತ್ತು ನಗ್ನಳಾಗಿಬಿಟ್ಟೆ;
ನಾನು ಹೂವಾಗಿ ಅರಳಬೇಕಿತ್ತು ಹರಳಾಗಿಬಿಟ್ಟೆ;
ನನಗೆ ನೋವೇ ಇಲ್ಲ; ಆವಿಯಾಗಲು ಕಾವು ಇಲ್ಲ!
***
ಜನ್ಮಗಳ ಬೆನ್ನಲ್ಲೇ ಇಳಿಸಲು ಹಾತೊರೆದಿದ್ದೆ ಈ ಹೊರೆ
ನಿನ್ನ ಅಲೆಗಳಬ್ಬರದೊಡನೆ ಒಂದಾಯ್ತು ಸಿಹಿ ನೀರಿನಾ ತೊರೆ
ಕಾಮನ ಬಿಲ್ಲಿನ ತುದಿಯಲ್ಲಿ ನೀ ತೆರೆದ ಹೆರಳು.....
ಕಾದ ಮರಳಿನಲ್ಲಿ ಹುಟ್ಟಿತಾಗ ಸುಣ್ಣದ ಹರಳು
***
ದೂರದಲ್ಲೇ ನಕ್ಕು ಕಿರುಣದ ಬಸಿರು ಬಿತ್ತುವವ ನೀನು
ನೀನಿತ್ತ ಉಸಿರನ್ನೆ ಹೊತ್ತು ತಿರುಗುವವಳು ನಾನು
ಭಾನು ನಿನಗೆಲ್ಲಿದೆ ಉದಯ-ಅಸ್ತಮಾನ
ಕಲ್ಪನೆಗಷ್ಟೇ ಸೀಮಿತ ಈ ನನ್ನ ಮನ!
***
ಅಪ್ಪ ಯಾರು? ಕ್ರೋಮೋಸೋಂ ಕೊಟ್ಟವನು. . .
ಪ್ರೇಮಿ ಯಾರು? ದೇಹಕ್ಕೆ ಭಾರದ ಭ್ರಮೆ ಕೊಟ್ಟವನು.
ಮಗ ಯಾರು? ಬದುಕು ಅನುಭವವೆಂಬ ಕಲ್ಪನೆ ಕೊಟ್ಟವನು...
ನಾನು ಯಾರು? ಅದನ್ನೇ ಹುಡುಕುತ್ತಿದ್ದೇನೆ ಈವರೆಗೂ. . .
***
ನಾನು ಒಂಟಿ. . . .ನನ್ನ ಕನಸು ಒಂಟಿ. . . .
ನಾವಿಬ್ಬರೂ ಕೂಡಿದಾಗ ಏಕಾಂತ;
ಅಲ್ಲೊಂದು ಮೌನ,
ಅದೇ ನಮ್ಮ ಮಾತು!
***
ವಿಶಾಲ ಶರಧಿಯ ಕಿರುದೋಣಿಯ
ಪಯಣಿಗರು ನಾನು ನೀವು. . . .
ಜಾಡುಹಿಡಿಯದೆ ಈ ದೋಣಿಯ
ಬೇರೆಲ್ಲಿತಾನೆ ಹೋಗಬಲ್ಲೆವು. . . .
ನಿರಾಶೆ ಹತಾಶೆಬೇಡದ ಈ ಪಯಣ
ಕನಸೊಂದೇ ಕಟ್ಟುತ್ತ ದಾರಿಗುಂಟ ಸಾಗೋಣ!
ಬಾ ಗೆಳತಿ ಸಾಗೋಣ, ಸಾಗುತ್ತಲೇ ಇರೋಣ
ಎಷ್ಟೇ ಆದರೂ ಇದು ದೋಣಿ ಪಯಣ!












Click it and Unblock the Notifications