ಎಚ್ಚೆಸ್ವಿ ಮತ್ತು ಅಶ್ವತ್ಥ್ ಹರಿಬಿಟ್ಟ ಸೃಜನಶೀಲತೆಯ ಪ್ರವಾಹ
ಕಳೆದ ವರ್ಷದ ಜೂನ್ ತಿಂಗಳು. ನನ್ನ ಕವಿ ಮಿತ್ರ ವೆಂಕಟ್ ಒಂದು ಹಾಡನ್ನು ವಾಟ್ಸಾಪ್ ಮೂಲಕ ಕಳಿಸಿದರು. ಮೊದಲೆರಡು ದಿನ ಅದನ್ನು ಕೇಳಲಿಕ್ಕೆ ನನಗೆ ಆಗಿರಲಿಲ್ಲ. ಅದೊಂದು ದಿನ ಶನಿವಾರ ಎಂದು ನೆನಪು. ಸುಮ್ಮನೇ ಒಬ್ಬನೇ ಕುಳಿತಿರುವಾಗ ಆ ಹಾಡನ್ನು ಕೇಳಿದೆ. ಅದನ್ನು ಕೇಳುತ್ತಲೇ ಮೈ ಜುಮ್ಮೆನ್ನಿಸಿತು!
ಕಾಲದ ಅಳತೆ ಯಾವುದು? ಹರಿಕಥಾಮೃತಸಾರ ಓದಿ
ಅಶ್ವತ್ಥ್ ಅವರ ಗಹನ, ಭಾವಾವೇಶಪೂರ್ಣ ಧ್ವನಿ ಮತ್ತು ರಸಾಭಾವವನ್ನು ತುಂಬಿ ತುಳುಕಿಸುವ ಸಂಗೀತ ನನ್ನ ಮನದ ಮೂಲೆ ಮೂಲೆಯನ್ನು ತಟ್ಟಿ ಒಂದು ಅರ್ಥದಲ್ಲಿ ನನ್ನನ್ನು ಅಲುಗಾಡಿಸಿಬಿಟ್ಟಿತು! ಹಾಡಿನ ಅರ್ಥದ ಆಗಾಧತೆ, ನಾವೀನ್ಯತೆ ಮತ್ತು ಅದು ಚಿತ್ರಿಸಿದ ರೂಪಕಗಳು ಮನಸ್ಸಿನ ಚಿತ್ರಪಟಲದಲ್ಲಿ ತಮ್ಮ ಅಚ್ಚನ್ನು ಶಾಶ್ವತವಾಗಿ ಮೂಡಿಸಿಬಿಟ್ಟವು!
ವೆಂಕಟ್ ಮುಂದಿನ ವಾರ ಸಿಕ್ಕಿದಾಗ ನಾನು ಅದೇ ಹಾಡಿನ ಪ್ರಸ್ತಾಪ ಮಾಡಿ, "ಯಾರು ಬರೆದದ್ದು ವೆಂಕಟ್, ಈ ಪದ್ಯ? ಕೇಳಿದಾಗಿನಿಂದ ನನ್ನ ಮನಸ್ಸನ್ನು ಕಲಕಿಬಿಟ್ಟಿದೆ" ಎಂದು ಹೇಳಿದಾಗ, ಅವರು "ಹೌದು ಸರ್, ನಾನು ಕೇಳಿದಾಗಿನಿಂದ ನನಗೂ ಕೂಡ ಹಾಗೆಯೇ ಆಗಿದೆ, ಇಲ್ಲಿಯವರೆಗೆ ಲೆಕ್ಕವಿರದಷ್ಟು ಬಾರಿ ಕೇಳಿರಬೇಕು. ಹಾಡು ಎಚ್ಎಸ್ ವೆಂಕಟೇಶ ಮೂರ್ತಿಯವರದು" ಎಂದರು.
ಮನದಲ್ಲಿ ಹುದುಗಿದ್ದ ಕವನ ಅರಳಿಸಿದ ಸಿಂಗಪುರ
ನನಗಾಗ ಇಬ್ಬರು ಉಜ್ವಲ ಪ್ರತಿಭೆಯ ಅಮೋಘ ವ್ಯಕ್ತಿಗಳು ಜೊತೆ ಸೇರಿ ತಮ್ಮ ಸೃಜನಶೀಲತೆಯ ಪ್ರವಾಹವನ್ನು ಹರಿಬಿಟ್ಟಾಗ ಉಂಟಾಗುವ ಅಪೂರ್ವ ಫಲಿತಾಂಶ ಹೇಗಿರುತ್ತೆ ಎಂಬುದು ಮೊತ್ತ ಮೊದಲ ಬಾರಿಗೆ ತಿಳಿಯಿತು ಎಂದರ ಅತಿಶಯೋಕ್ತಿ ಏನಲ್ಲ!
ಹಾಡಿನ
ಮೊದಲ
ಸಾಲುಗಳು
ಇಂತಿವೆ:
ಸಂಜೆಯಾಗುತಿದೆ
ನಡೆ
ನಡೆ
ಗೆಳೆಯ
ಬೃಂದಾವನದ
ಕಡೆ|
ತಾಳೆಯ
ಮರಗಳು
ತಲೆಯ
ತೂಗುತಿವೆ
ಕೆದರುತ
ಇರುಳ
ಜಡೆ|
ಅಂಜಿಕೆಯಾಗುವ
ಮುನ್ನವೆ
ಸಾಗುವ
ಬೃಂದಾವನದ
ಕಡೆ||
ಅಶ್ವತ್ಥ್ ಅವರು ಸಂಯೋಜಿಸಿದ "ತೂಗುಮಂಚ" ಎಂಬ ಅಪೂರ್ವ ಧ್ವನಿ ಸುರುಳಿಯಲ್ಲಿ ಮೊದಲನೆಯದೇ ಈ ಗೀತೆ. ಅಲ್ಲಿಂದ ಮುಂದೆ ನಾನು ಆ ಹಾಡನ್ನು ಲೆಕ್ಕವಿರದಷ್ಟು ಬಾರಿ ಕೇಳಿರಬೇಕು. ಅಲ್ಲದೇ ಲೆಕ್ಕವಿರದಷ್ಟು ಬಾರಿ ಗುನುಗಿದ್ದೇ ಗುನುಗಿದ್ದು! ನನ್ನ ಮಗನಿಗೆ ನನ್ನ ಈ ಹೊಸ ಹುಚ್ಚನ್ನು ನೋಡಿ ಕಿರಿಕಿರಿಯಾಯಿತು. ಹೀಗೆ ಅಪ್ಪ ಪದೇ ಪದೇ ಇದೇ ಹಾಡನ್ನು ಹಾಡುತ್ತಿದ್ದರೆ ತನಗೆ ಗೊಂದಲವಾಗುತ್ತದೆ ಎಂದು ಅನೇಕ ಬಾರಿ ತನ್ನ ಅಮ್ಮನಿಗೆ ನನ್ನ ಈ ಹೊಸ ಹುಚ್ಚಿನ ಬಗ್ಗೆ ದೂರು ಕೂಡಾ ಕೊಟ್ಟ!
ಸ್ವಾತಂತ್ರ್ಯ ವೀರರು ಕಂಡ ಕನಸಿನ ಭಾರತ ಇದೇನಾ?
ಆದರೇನು? ಆ ಹಾಡಿನ ಗುಂಗು ನನ್ನನ್ನು ಆವರಿಸಿಬಿಟ್ಟಿತ್ತು. ಮುಂದೆ ಡಿಸೆಂಬರ್ ನಲ್ಲಿ ನಾನು ಎಚ್ಎಸ್ ವೆಂಕಟೇಶ ಮೂರ್ತಿಯವರ ಮುಂದೆ ಅದೇ ಹಾಡನ್ನು ಅವರ ಮನೆಯಲ್ಲಿಯೇ ಹಾಡಿದೆ. ನಾನು ಹೇಗೆ ಹಾಡಿದೆನೋ, ಅವರಿಗೇನನಿಸಿತೋ ನನಗೆ ಗೊತ್ತಿಲ್ಲ. ಆದರೆ ಆ ಮಹಾನ್ ಕವಿಯ ಒಂದು ಮಹತ್ತರ ರಚನೆಯನ್ನು ತೀವ್ರವಾಗಿ ಅನುಭವಿಸಿ ಅವರ ಮುಂದೆಯೇ ಹಾಡಿದ ತೃಪ್ತಿ ನನಗೆ ದೊರೆಯಿತು.
ತೂಗುಮಂಚ ಧ್ವನಿ ಸುರುಳಿಯ ಇತರ ಹಾಡುಗಳನ್ನೂ ಕೇಳಿದ್ದೇನೆ. ಎಲ್ಲ ಗೀತೆಗಳು ಎಚ್ ಎಸ್ ವೆಂಕಟೇಶ ಮೂರ್ತಿಯವರ ರಚನೆಗಳು. ಅವೆಲ್ಲವೂ ಅದ್ಭುತ! ನನಗೆ ಅದರ ಒಂದೊಂದು ಹಾಡು ಒಂದೊಂದು ಅನರ್ಘ್ಯ ರತ್ನ ಎನಿಸಿತು. ಇದೊಂದು ಅಶ್ವತ್ಥ್ ಅವರ "ಮಾಸ್ಟರ್ ಪೀಸ್" ಎನಿಸಿತು. ರತ್ನಮಾಲಾ ಪ್ರಕಾಶ್ ಅವರ ಇಂಪಾದ ಧ್ವನಿಯಲ್ಲಿ "ಇರುಳ ಸಮಯ ಸುರಿಮಳೆಯೊಳಗೆ", ಅಶ್ವತ್ಥ್ ಅವರೇ ಹಾಡಿದ ಇತರ ಗೀತೆಗಳಾದ "ಒಂದು ಮಣ್ಣಿನ ಜೀವ" ಮತ್ತು "ಬೇಸರದ ದಾರಿಯಲಿ" ಎಂಬ ಹಾಡುಗಳು ತಮ್ಮ ಗಾಢ ಅನುಭಾವದಿಂದ, ತಾತ್ವಿಕ ನೆಲೆಗಟ್ಟಿನಿಂದ ಮನದಾಳದಲ್ಲಿ ಇಳಿದು ಕಾಡು ತೊಡಗುತ್ತವೆ.
ಸಂಗೀತಾ ಕಟ್ಟಿ ಕುಲಕರ್ಣಿ ಅವರು ಹಾಡಿದ "ಬೃಂದಾವನದಲಿ ಒಂದಿರುಳು" ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದುಕೊಳ್ಳುವ, ಬದುಕಿನ ಸುಂದರ ಚಿತ್ರಣವನ್ನು ಕೃಷ್ಣ ಕಥೆಯ ಮೂಲಕ ಕಟ್ಟಿ ಮುಖದಲ್ಲಿ ತುಂಟ ನಸುನಗೆ ತರಿಸುವ ಅಪರೂಪದ ಭಾವಗೀತೆ. ಎಂ ಡಿ ಪಲ್ಲವಿ ಅವರ "ಕೃಷ್ಣನ ಶಾಮಲ ವಕ್ಷದ ಮೇಲೆ" ಮತ್ತು ರತ್ನಮಾಲಾ ಪ್ರಕಾಶ್ ಅವರ "ತೂಗು ಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು" ಶೃಂಗಾರ ಮತ್ತು ಬದುಕಿನ ಅವಿನಾಭಾವ ಸಂಬಂಧವನ್ನು ಕಾವ್ಯಾತ್ಮಕವಾಗಿ ಹೊಸೆದಿರುವ ಸುಂದರ ರಚನೆಗಳು. ಸುಪ್ರಿಯಾ ಆಚಾರ್ಯ ಅವರು ಹಾಡಿದ "ಹೂಬಳ್ಳಿಯ ಹಿಗ್ಗೆ" ತಾಯಿ ಮಗುವಿನ ಮಮತೆಯ ನೂಲನ್ನು ಸೂಕ್ಷ್ಮವಾಗಿ, ನವಿರಾಗಿ ತುಂಬಾ ಪ್ರಿಯವಾಗಿ ಹೆಣೆದ ಗೀತೆ.
ಅವುಗಳಲ್ಲಿರುವ ಮಾಗಿದ ಜೀವನಾನುಭವ, ಕಣ್ಣ ಮುಂದೆ ಕಟ್ಟುವ ರೂಪಕಗಳು ಮತ್ತು ಹಾಡಿದವರ ಭಾವ ತಲ್ಲೀನತೆ ನಮ್ಮ ಅನುಭವದಾಳವನ್ನ ತಟ್ಟಿದರೆ, ಹದವಾದ ಸಂಗೀತ ಹೃದಯವನ್ನು ಮುಟ್ಟುವಲ್ಲಿ ಯಶಸ್ವಿಯಾಗುತ್ತದೆ. ತೂಗುಮಂಚದಲ್ಲಿನ ಹೆಚ್ಚು ಕಡಿಮೆ ಎಲ್ಲ ಗೀತೆಗಳನ್ನು ಎಚ್ಎಸ್ ವೆಂಕಟೇಶ ಮೂರ್ತಿಯವರ "ಉತ್ತರಾಯಣ" ಕವನ ಸಂಕಲನದಿಂದ ಆಯ್ದುಕೊಂಡಿದ್ದಾರೆ ಅಶ್ವತ್ಥ್. ಕನ್ನಡ ಭಾವ ಗೀತಾ ಪ್ರಪಂಚಕ್ಕೆ ಅವರ ಅತಿ ದೊಡ್ಡ ಕೊಡುಗೆಗಳಲ್ಲಿ ಇದೂ ಒಂದು ಎಂದು ನನ್ನ ದೃಢವಾದ ಅನಿಸಿಕೆ.
ಎಚ್ ಎಸ್ ವೆಂಕಟೇಶ ಮೂರ್ತಿಯವರ "ಉತ್ತರಾಯಣ"ದ ಕವಿತೆಗಳು ಅಮೋಘ. ನನ್ನಂತಹ ಹವ್ಯಾಸಿ ಬರಹಗಾರರಿಗೆ ಮತ್ತು ಸಾಹಿತ್ಯದ ವಿದ್ಯಾರ್ಥಿಗಳಿಗೆ ಓದಲೇ ಬೇಕಾದ, ಓದಿ ಸಾಧ್ಯವಾದಷ್ಟು ಅರಿಯಲೇಬೇಕಾದ ಕನ್ನಡ ಕವನಗಳು. ಪ್ರಖ್ಯಾತ ಕವಿ ಜಿ ಎಸ್ ಅಮೂರ ಅವರ ಪ್ರಕಾರ "ಉತ್ತರಾಯಣದ ಕವಿತೆಗಳು ನಿಶ್ಚಯವಾಗಿಯೂ ಎಚ್ಎಸ್ ವಿ ಅವರ ಬದುಕಿನ ಹಾಗೂ ಕವಿತ್ವದ ಮಾಗಿದ ಫಲಗಳು. ಆಪ್ತಗೀತ, ಉತ್ತರಾಯಣ ಕವಿತೆಗಳು ಕನ್ನಡದ ಶ್ರೇಷ್ಠ ಕವಿತೆಗಳ ಸಾಲಿಗ ಸೇರುವಂಥವು".
ಉತ್ತರಾಯಣ ಸಂಕಲನದ ಸಂಪಾದಕರಾದ ರಾಘವೇಂದ್ರ ಪಾಟೀಲ ಅವರು "ಪೌರಾಣಿಕ ಸ್ಮೃತಿಯ ಮಂಥನದ ಮೂಲಕ ಆಧುನಿಕ ಕಾಲಕ್ಕೆ ಅತ್ಯಂತ ಪ್ರಸ್ತುತವಾಗುವ ಇಂತಹ ವೈಚಾರಿಕತೆಯ ನವನೀತವನ್ನು ದೊರಕಿಸುವ ಮೂಲಕ ಎಚ್ ಎಸ್ ವಿ ಯವರು ಆಧುನಿಕರಾದ ನಮ್ಮನ್ನು ಪರಂಪರೆಯೊಂದಿಗೆ ಘನಿಷ್ಠವಾಗಿ ಜೋಡಿಸುತ್ತಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ" ಎಂದು ಹೇಳಿದ್ದಾರೆ.
ಎಚ್ ಎಸ್ ವಿ ಅವರಂತಹ ಮಹಾನ್ ಕವಿಯ ಈ ಮಹತ್ತರ ಗೀತೆಗಳನ್ನು ಕುರಿತು ಇದಕ್ಕಿಂತ ಹೆಚ್ಚು ಶಕ್ತವಾಗಿ ಹೇಳಲು ನನ್ನಿಂದ ಸಾಧ್ಯವಿಲ್ಲ. ಸಾಹಿತ್ಯದ ಒಬ್ಬ ವಿದ್ಯಾರ್ಥಿಯಾಗಿ, ಸಂಗೀತದ ಉಪಾಸಕನಾಗಿ ಸದಭಿರುಚಿ ಹೊಂದಿದ ಎಲ್ಲ ಸಹೃದಯ ಕನ್ನಡಿಗರಿಗೆ ಮತ್ತೆ ಮತ್ತೆ ಈ ಗೀತೆಗಳನ್ನು ಓದಿ, ಕೇಳಿ ಮತ್ತು ಕೇಳಿಸಿ ಎಂದು ಕೇಳಿಕೊಳ್ಳುವುದಷ್ಟೇ ನನ್ನ ಕರ್ತವ್ಯ. ಕನ್ನಡಕ್ಕಾಗಿ, ಕನ್ನಡತನಕ್ಕಾಗಿ ಕನ್ನಡಿಗರಾಗಿರುವ ನಾವು ಮಾಡಬಹುದಾದ ಸಣ್ಣ ಕೆಲಸ ಇದು ಎಂದೇ ನನ್ನ ಭಾವನೆ.