ಕಾಶ್ಮೀರಿಗಳನ್ನೇಕೆ ಆವರಿಸಿಕೊಂಡಿದೆ ಸಮೂಹ ಸನ್ನಿ? ಪರಿಹಾರವೇನು?
ಕಾಮಾಲೆ ಕಣ್ಣಿನವರಿಗೆ ಜಗತ್ತೇ ಹಳದಿಯಾಗಿ ಕಾಣಿಸುತ್ತದಂತೆ. ಈ ಮಾತು ಅದೆಷ್ಟು ನಿಜವಾದದ್ದು ಎಂಬುದನ್ನು ಇತ್ತೀಚೆಗೆ ಪಾಕಿಸ್ತಾನದ ಕುಖ್ಯಾತ ಪತ್ರಕರ್ತ ಹಮೀದ್ ಮೀರ್ ಹೇಳಿದ ಮಾತು ಸ್ಪಷ್ಟಗೊಳಿಸುತ್ತದೆ. "ಮಸೂದ್ ಅಜರ್ ವಿರುದ್ಧ ವಿಶ್ವ ಸಂಸ್ಥೆಯ ಗೊತ್ತುವಳಿಗೆ ವ್ಯತಿರಿಕ್ತವಾಗಿ ಚೀನ ಏಕೆ ಮತ ಚಲಾಯಿಸಿತು ಎಂಬುದನ್ನು ತಿಳಿದುಕೊಳ್ಳುವುದು ಅತೀ ಸುಲಭ. ಚೀನದ ವೈರಿಯಾದ ದಲೈ ಲಾಮಾ ಅವರಿಗೆ ಭಾರತ ದಶಕಗಳಿಂದ ಆಶ್ರಯ ನೀಡಿದೆ ಅದಕ್ಕಾಗಿ" ಎಂದು ಈ ಪತ್ರಕರ್ತ ಮಹಾಶಯ ತನ್ನ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾನೆ.
ಭಾರತದ ವಿರುದ್ಧ ವಿಷ ಕಕ್ಕುತ್ತಿರುವ ಪಾಕಿಸ್ತಾನದ ಪತ್ರಕರ್ತರಲ್ಲಿ ಈತನದು ಮೊದಲನೆಯ ಸ್ಥಾನ. ಹೀಗಾಗಿ ಆತನ ಈ ಅಸಂಬದ್ಧ ಪ್ರಲಾಪ ಸಹಜ ಕೂಡ. ಆದರೆ ದಲೈ ಲಾಮಾ ಅವರಂತಹ ಶಾಂತಿದೂತರನ್ನು ಉಗ್ರವಾದಿಗಳ ಪಿತಾಮಹನಾದ ಅಜರ್ ಮಹಮೂದನಿಗೆ ಹೋಲಿಸಿದ್ದು ತೀರಾ ಹಾಸ್ಯಾಸ್ಪದ. ತನ್ನ ಈ ಅವಲಕ್ಷಣ ಟ್ವಿಟ್ಟರ್ರಿಗೆ ವಿಶ್ವದೆಲ್ಲೆಡೆಯ ಜನರಿಂದ ಸಾಕಷ್ಟು ಛೀ ಛೀ ಎನ್ನಿಸಿಕೊಂಡಿದ್ದಾನೆ.
ಆದರೆ ಅನೇಕ ಬಾರಿ ನಾನು ಯೋಚನೆ ಮಾಡಿದ್ದುಂಟು. ಈ ಬಾರಿ ಇಡೀ ವಿಶ್ವವೇ ಒಂದಾಗಿ ಭಾರತದ ಪರವಾಗಿ ನಿಂತರೂ ಅದೇಕೆ ಚೀನಾದ ಆಲೋಚನೆ ಎಲ್ಲರಿಗಿಂತ ಭಿನ್ನವಾಗಿದೆ? ಎಲ್ಲರಿಂದಲೂ ಛಿ ಛಿ ಎನ್ನಿಸಿಕೊಂಡರೂ ಪಾಕಿಸ್ತಾನ ಮಾತ್ರ ತನ್ನ ಭಾರತ ವಿರೋಧಿ ನಿಲುವನ್ನು ಮುಂದುವರೆಸಿದೆ? ಅದೇಕೆ ಇದೆಲ್ಲದಕ್ಕೆ ಮೂಲ ಕಾರಣವಾದ ಕಾಶ್ಮೀರ ಸಮಸ್ಯೆ ಕೊತ ಕೊತ ಕುದಿಯುತ್ತಲೇ ಇದೆ? ಕಾಶ್ಮೀರ ಸಮಸ್ಯೆ ರಾಜಕೀಯವೋ? ಧಾರ್ಮಿಕವೋ? ಸಾಮಾಜಿಕವೋ? ಅಥವಾ ಇವೆಲ್ಲವುಗಳ ವಿಷಭರಿತ ಮಿಶ್ರಣವೋ? ಅಥವಾ ಈ ವಿಷಭರಿತ ಮಿಶ್ರಣವನ್ನು ಇನ್ನಷ್ಟು ಮಾರಕಗೊಳಿಸುವ ವ್ಯವಸ್ಥಿತ ರಾಜಕೀಯ ಸಂಚೋ? ನನಗನಿಸುವ ಮಟ್ಟಿಗೆ ಇವುಗಳ ಈ ಋಣಾತ್ಮಕ ಕ್ರಿಯೆ ಮತ್ತು ಪ್ರತಿಕ್ರಿಯಗಳಿಗೆ ಒಂದು ಋಣಾತ್ಮಕ ಸಮೂಹ ಸನ್ನಿ ಕಾರಣ.

ಅದೇನೇ ಇರಲಿ, ಕಳೆದ ದಶಕದಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರಗಾಮಿಗಳ ಕೃತ್ಯಗಳು ಯಾವುದೇ ಮಾನವೀಯ ಮೌಲ್ಯಗಳನ್ನು ಮೀರಿದ ರಾಕ್ಷಸೀ ಪ್ರವೃತ್ತಿಯ ಕುರುಹುಗಳು. ಇದಕ್ಕೆ ಪಾಕಿಸ್ತಾನದ ಕುಮ್ಮಕ್ಕು ಇದೆ ಎನ್ನುವುದಕ್ಕೆ ಯಾವ ಸಂಶಯವೂ ಇಲ್ಲ. ಆದರೆ ಇದರಲ್ಲಿ ಕಾಶ್ಮೀರ ಕಣಿವೆಯ ಕೆಲವು ಜನರ ಕುರುಡು ಸೈದ್ಧಾಂತಿಕ ನಿಲುವುಗಳ ಪಾತ್ರವೂ ಕಡಿಮೆ ಏನಿಲ್ಲ.
ಕಾಶ್ಮೀರದ ಸಾಮಾನ್ಯ ಜನತೆಗೆ ಅಲ್ಲಿ ಬೀಡು ಬಿಟ್ಟಿರುವ ಲಕ್ಷಗಟ್ಟಲೇ ಸೈನ್ಯದಿಂದ ಕಿರುಕುಳವಾಗುತ್ತಿದೆ ಎನ್ನುವುದು ನಿಜ. ಭಾರತದ ಅಪಕ್ವ ರಾಜಕಾರಣಿಗಳಿಂದ ಅಲ್ಲಿನ ಜನರಿಗೆ ಅನ್ಯಾಯವಾಗಿದೆ ಎನ್ನುವುದೂ ನಿಜ. ಹತ್ತು ಹಲವು ಬಾರಿ ಅಲ್ಲಿನ ಪ್ರಾದೇಶಿಕ ರಾಜಕಾರಣದಲ್ಲಿ ಕೇಂದ್ರದ ನೇತಾರರಿಂದ ಹಸ್ತಕ್ಷೇಪವಾಗಿರುವುದೂ ನಿಜ. ಭಾರತದ ಇತರ ರಾಜ್ಯಗಳಲ್ಲಿ ಅನೇಕ ಬಾರಿ ಕಾಶ್ಮೀರಿ ಜನರನ್ನು ಅಪನಂಬಿಕೆಯ ಕಣ್ಣುಗಳಿಂದ ನೋಡುತ್ತಿರುವುದೂ ನಿಜ. ಅಲ್ಲಿ ನಿರುದ್ಯೋಗದ ಸಮಸ್ಯೆ ಇರುವುದು, ಅಭಿವೃದ್ಧಿಯ ಕಾರ್ಯಗಳು ಆಮೆಯ ವೇಗದಿಂದ ಆಗುತ್ತಿರುವುದೂ ಇವೆಲ್ಲವೂ ಸತ್ಯ.
ಆದರೆ ಸೈನ್ಯದ ಭಾರಿ ಮಟ್ಟದ ಜಮಾವಣೆಯ ಸಮಸ್ಯೆಯನ್ನು ಬಿಟ್ಟು ಉಳಿದೆಲ್ಲ ಸಮಸ್ಯೆಗಳು ಭಾರತದ ಇತರ ಪ್ರದೇಶಗಳಲ್ಲಿ ಕೂಡ ಇಲ್ಲವೇ? ಇತರ ಹಲವಾರು ರಾಜ್ಯಗಳಲ್ಲಿ ಕೂಡ ಹಿಂದೆ ಅನೇಕ ಬಾರಿ ಕೇಂದ್ರದ ಸರಕಾರದಿಂದ ಹಸ್ತಕ್ಷೇಪವಾಗಿದೆ. ನಿರುದ್ಯೋಗದ ಸಮಸ್ಯೆಯಿದೆ ಮತ್ತು ಅಭಿವೃದ್ಧಿಯ ಕಾರ್ಯ ಮಂದಗತಿಯಿಂದ ಸಾಗುತ್ತಿದೆ. ಕೇವಲ ಕಾಶ್ಮೀರಿಗಳೇಕೆ ತಮ್ಮನ್ನು ತಾವು ಈ ಎಲ್ಲ ಸಮಸ್ಯೆಗಳ ಬಲಿಪಶುಗಳೆಂದು ಅಂದುಕೊಳ್ಳುತ್ತಿದ್ದಾರೆ? ಭಾರತದ ಇತರ ಪ್ರದೇಶಗಳಂತೆ ನ್ಯಾಯಯುತವಾದ ಹೋರಾಟ ಮಾಡಿ ತಮ್ಮ ಅಭಿವೃದ್ಧಿಯ ಹಾದಿಯನ್ನು ತಾವೇ ಏಕೆ ಕಂಡುಕೊಳ್ಳುತ್ತಿಲ್ಲ?

ತಾವು ಇತರರಿಗಿಂತ ಬೇರೆ ಎಂಬ ಸೋಗು ಹಾಕಿಕೊಂಡು ದೇಶದಿಂದ ಎಲ್ಲ ತರಹದ ಆರ್ಥಿಕ ನೆರವು ಪಡೆದುಕೊಂಡರೂ ತಮ್ಮದೇ ಪ್ರತ್ಯೇಕ ಕಾನೂನಿನ ಜಾಲದಲ್ಲಿ ಸಿಲುಕಿ ಅಲ್ಲಿ ಯಾವುದೇ ಬಂಡವಾಳ ಹೂಡಿಕೆಗೆ ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಬಂಡವಾಳ ಹೂಡುವಂತಿಲ್ಲ ಎಂದರೆ ನಿರುದ್ಯೋಗದ ಸಮಸ್ಯೆ ಹೇಗೆ ನಿವಾರಣೆಯಾಗಬೇಕು?
ನನಗನಿಸುವ ಮಟ್ಟಿಗೆ ಕಾಶ್ಮೀರ ಕಣಿವೆಯ ಕೆಲವು ಸ್ವಾರ್ಥ ಸಂಧರಿಗೆ ಭಾರತದ ಪ್ರಜಾಸತ್ತಾತ್ಮಕ ಮೂಲಭೂತ ತತ್ವಗಳಲ್ಲಿಯೇ ನಂಬಿಕೆ ಇಲ್ಲ ಎಂದೆನಿಸುತ್ತದೆ. ಉಳಿದೆಲ್ಲರಿಗಿಂತ ನಾವು ಬೇರೆ ಎಂಬ ವಿಭಜಿತ ಮನೋಭಾವ ಅವರನ್ನು ಸ್ವಾತಂತ್ರಾನಂತರದ ದಿನಗಳಿಂದಲೇ ಕಾಡುತ್ತಿದೆ. ದುರಾದೃಷ್ಟವಶಾತ್ ನಮ್ಮ ರಾಜಕೀಯ ನಾಯಕರು ಕಾಶ್ಮೀರಿಗಳ ಈ ಮನೋಭಾವವನ್ನು ಪೋಷಿಸಿ ಬೆಳೆಸಿದ್ದಾರೆ. ಈಗ ಅದು ನಮ್ಮನ್ನು ಪೆಡಂಭೂತವಾಗಿ ಮಾರ್ಪಟ್ಟು ಕಾಡುತ್ತಿದೆ.
ಕಾಶ್ಮೀರವೇ ಆಗಲಿ, ಉತ್ತರಪೂರ್ವದ ಕೆಲವು ಉಗ್ರಗಾಮಿಗಳ ಸಂಘಟನೆಗಳೇ ಆಗಲಿ, ಕಾಡುವ ಪ್ರಶ್ನೆ ಏನೆಂದರೆ, ಅದೇಕೆ ಸೈದ್ಧಾಂತಿಕ ನಿಲುವುಗಳು ಮಾನವೀಯ ಮಿತಿಗಳನ್ನು ಮೀರಿ ಉಗ್ರವಾದದತ್ತ ವಾಲುತ್ತಿವೆ? ತಮ್ಮ ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಗಳ ಮೇಲ್ಮೆಯ ಬಗ್ಗೆ ಇರುವ ಕುರುಡು ನಂಬಿಕೆ ಇದಕ್ಕೆ ಕಾರಣವೇ? ತಮ್ಮನ್ನು ತಾವು ಇತರರಿಂದ ಬೇರೆ ಎಂದು ಸಮರ್ಥಿಸಿಕೊಳ್ಳುವ ಭರದಲ್ಲಿ ಮಾನವೀಯತೆಯ ಹದ್ದನ್ನು ಮೀರುವುದು ಇದಕ್ಕೆ ಕಾರಣವೇ? ಧಾರ್ಮಿಕ, ರಾಜಕೀಯ ಅಥವಾ ಸಾಮಾಜಿಕ ಕಾರಣಗಳನ್ನು ಮುಂದೆ ಮಾಡಿ ತಮ್ಮ ಸ್ವಂತಿಕೆಯನ್ನು ರಾಷ್ಟ್ರೀಯ ಏಕತೆಗಿಂತ ಹೆಚ್ಚು ಎಂದು ತೋರಿಸಿಕೊಳ್ಳುವ ಹುನ್ನಾರವೇ? ಅಥವಾ ಪ್ರತ್ಯೇಕತೆಯನ್ನು ಪಣವಾಗಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಲವೇ ಜನರು ಮಾಡುತ್ತಿರುವ ಪಿತೂರಿಯೇ? ಅದೇನಿದ್ದರೂ ಅಲ್ಲಿನ ಕ್ಷೋಭೆಯಲ್ಲಿ ಬಳಲುತ್ತಿರುವವರು ಯಾರು? ಎಂಬ ಸತ್ಯವನ್ನು ಅವರೇ ಹುಡುಕಬೇಕು.

ಮನುಷ್ಯ ತನ್ನ ಬಾಲ್ಯಾವಸ್ಥೆಯಿಂದ ಕಿಶೋರಾವಸ್ಥೆ ತಲುಪುವುದರಲ್ಲಿಯೇ ಕೆಲವು ಮುಖ್ಯ ಧೋರಣೆಗಳನ್ನು ಹೃದ್ಗತ ಮಾಡಿಕೊಂಡು ಬಿಟ್ಟಿರುತ್ತಾನೆ. ಈ ಧೋರಣೆಗಳು ಅವನ ಮುಂದಿನ ಜೀವನಕ್ಕೆ ಸಾರಥಿಯಾಗಿ ಬಿಡುತ್ತವೆ. ಎಲ್ಲಿಯವರೆಗೆ ಇವುಗಳು ತಮ್ಮ ಸಾರಥಿಯ ಪಾತ್ರಕ್ಕೆ ಮಾತ್ರ ಸೀಮಿತವಾಗಿರುತ್ತವೋ ಅಲ್ಲಿಯವರೆಗೆ ಎಲ್ಲವೂ ಸರಿಯಾಗಿರುತ್ತದೆ. ಅದರೆ ಅವುಗಳಿಗೆ ನಾವು ಪೂರ್ತಿ ಶರಣಾಗಿ ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯವನ್ನೇ ಕಳೆದುಕೊಂಡು ಬಿಡುತ್ತೇವೇನೋ? ನಾವೆಷ್ಟೇ ಸ್ವತಂತ್ರರು ಎಂದು ಅಂದುಕೊಂಡರೂ ನಿಜವಾಗಿಯೂ ನಮ್ಮ ಧೋರಣೆಗಳು ನಮ್ಮನ್ನು ತಮ್ಮ ದಾಸರನ್ನಾಗಿ ಮಾಡಿಕೊಂಡು ಬಿಟ್ಟಿರುತ್ತವೆ. ಅವುಗಳು ಹಾಕಿದ ಮಿತಿಯ ಆಚೆಗೆ ಹೋಗಲು ನಾವು ಇಷ್ಟಪಡುವುದಿಲ್ಲ. ಬಹುಶಃ ಕಾಶ್ಮೀರಿಗಳಿಗೆ ಅಗಿದ್ದೂ ಇದೇ.
ತಮ್ಮ ಧೋರಣೆಗಳಿಗೆ ಬಲಿಯಾಗಿ ತಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿರುವ ರಾಜಕೀಯ ಹಿತಾಸಕ್ತಿಗಳ ಮತ್ತು ಅವರ ಸೀಮೆಯಾಚೆಗಿನ ಒಡೆಯರ ಕೈಗೊಂಬೆಯಾಗಿ ಬದಲಾಗುತ್ತಿದ್ದಾರೆ. ದುರಾದೃಷ್ಟವಶಾತ್ ಇಡೀ ಕಾಶ್ಮೀರಿ ಸಮಾಜ ಈ ಸಮೂಹ ಸನ್ನಿಗೆ ಒಳಗಾಗುತ್ತಿದೆ. ಸಮೂಹ ಸನ್ನಿಗೆ ಒಳಗಾಗಿ ಉಗ್ರಗಾಮಿಗಳಿಗೆ ಭೀಕರ ಕೃತ್ಯಗಳನ್ನು ಎಸಗಿದರೂ ಅಲ್ಲಿನ ಅನೇಕರಿಗೆ ಅದರ ಬಗ್ಗೆ ಯಾವುದೇ ಪಶ್ಚಾತ್ತಾಪವಿರುವಂತೆ ಕಾಣುತ್ತಿಲ್ಲ.
ಈ ಸಮೂಹ ಸನ್ನಿಯ ಕಾರಣದಿಂದಲೇ ಪುಲ್ವಾಮಾದಂತಹ ಭೀಕರ ಕೃತ್ಯವನ್ನೆಸಗಿದ ಉಗ್ರಗಾಮಿಗಳಿಗೂ ತಾವು ಬಹಳ ಪುಣ್ಯದ ಕೆಲಸ ಮಾಡಿದ್ದೇವೆ ಎಂದು ಅನಿಸುತ್ತದೆ. ಅದರಲ್ಲಿ ಬಲಿಯಾದ ಅಮಾಯಕ ಜನರ ಬಗ್ಗೆ ಎರಡು ಮಾತುಗಳನ್ನೂ ಆಡದ ಅಲ್ಲಿನ ನಾಯಕರುಗಳಿಗೆ ಉಗ್ರಗಾಮಿಗಳು ಹಾದಿತಪ್ಪಿದ ಅಮಾಯಕ ಯುವಕರಾಗಿ ಕಾಣುತ್ತಾರೆ. ದಶಕಗಳಿಂದ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳು ಅವರಿಗೆ ಸಹ್ಯ ಎನಿಸುತ್ತವೆ. ಸಾವಿರಾರು ಜನರ ಬಲಿಗೆ ರಾಜಕೀಯ ಕಾರಣಗಳನ್ನು ಹುಡುಕಲಾಗುತ್ತದೆ. ತಮ್ಮನ್ನು ಬಿಟ್ಟು ಬೇರೆಲ್ಲರನ್ನೂ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ. ಯಾರೂ ತಾವೂ ಕೂಡ ಸಮಸ್ಯೆಯ ಮುಖ್ಯ ಭಾಗ, ಸಮಸ್ಯೆಯ ಮುಖ್ಯ ಕಾರಣ ಎಂದು ಅಂದುಕೊಳ್ಳುವುದೇ ಇಲ್ಲ. ಆತ್ಮ ವಿಮರ್ಶೆ ಮಾಡಿಕೊಳ್ಳುವುದೇ ಇಲ್ಲ. ಇದು ಕಾಶ್ಮೀರದ ದೌರ್ಭಾಗ್ಯ.
ಕಾಶ್ಮೀರಿಗಳಷ್ಟೇ ಏಕೆ? ಒಂದಿಲ್ಲೊಂದು ವಿಷಯದಲ್ಲಿ ನಾವೆಲ್ಲ ಸಮೂಹ ಸನ್ನಿಗೆ ಒಳಗಾಗುತ್ತೇವೆ. ನಮ್ಮ ಧೋರಣೆಗಳ ದಾಸರಾಗುತ್ತೇವೆ. ಆದರೆ ನಮ್ಮ ಪ್ರತಿಕ್ರಿಯೆ ಕಾಶ್ಮೀರಿಗಳಷ್ಟು ತೀವ್ರವಾಗಿಲ್ಲ. ಪ್ರಾಯಶಃ ನಾವು ಮಾಡಿಕೊಳ್ಳುವ ಆತ್ಮವಿಮರ್ಶೆ ನಮ್ಮನ್ನು ವಾಸ್ತವಿಕತೆಗೆ ಎಳೆದು ನಮ್ಮ ಧೋರಣೆಗಳನ್ನು ಬದಲಿಸಿಕೊಳ್ಳುತ್ತೇವೆ. ಕಾಶ್ಮೀರಿ ಸಮಾಜದ ದೊಡ್ಡ ಭಾಗ ಈಗ ತಮ್ಮ ಧೋರಣೆಗಳ ಸಮೂಹ ಸನ್ನಿಗೆ ಒಳಗಾಗಿದ್ದು, ಎಂದೋ ಒಂದು ದಿನ ಅಲ್ಲಿ ಸ್ವಯಂ ವಿಮರ್ಶೆ ನಡೆಯುತ್ತದೆ ಎಂದು ನನ್ನ ಅನಿಸಿಕೆ. ಹಿಂಸೆ ಯಾವುದೇ ಸಮಸ್ಯೆಯ ಪರಿಹಾರವಲ್ಲ. ಭಾರತದ ವಿವಿಧತೆಯಲ್ಲಿಯೇ ತಮ್ಮ ಅಸ್ಮಿತೆಗೆ ಕೂಡ ಗೌರವಯುತ ಸ್ಥಾನವಿದೆ ಎಂಬುದನ್ನು ಅಲ್ಲಿನ ಜನ ಕಂಡುಕೊಳ್ಳುತ್ತಾರೆ ಎಂಬುದು ನನ್ನ ಒಡಲಾಳದ ಆಶಾವಾದ. ಹಾಗಾಗಲಿ ಎಂಬ ಹಾರೈಕೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications