ಮನಸ್ಸಿಗೆ, ಹೃದಯಕ್ಕೆ ನಾವು ಏನೇನ್ ಕಷ್ಟ ಕೊಡ್ತೀವಿ ಗೊತ್ತಾ...

ಆಸ್ತಿ ನಮ್ಮದು ಅಂತ ನಾವು ಏನ್ ಬೇಕಾದ್ರೂ ಮಾಡಬಹುದು ಅನ್ನೋದು ತಪ್ಪಲ್ವಾ? ಈಗ ಒಂದು ಮನೆ ಅಂದುಕೊಳ್ಳಿ. ಆ ಮನೆ ಕೆಳಗೆ ಕಾರು ನಿಲ್ಲಿಸೋದಕ್ಕೆ ಜಾಗ ಬೇಕು ಅಂತ ಹತ್ತಾರು pillarಗಳ ಮನೆ ಮೇಲೆ ಕಟ್ಟಿ ಕೂರಿಸಿರುತ್ತೀರ. ಈಗ ಆ ಪಿಲ್ಲರ್ ನಿಮ್ಮದು, ಮನೆ ನಿಮ್ಮದು ಅಂತ ಹೇಳಿ ಒಂದೋ ಎರಡೂ ಪಿಲ್ಲರ್ ಗಳನ್ನೂ ಕಡಿದು ಹಾಕ್ತೀನಿ ಅಂದ್ರೆ ಮನೆ ಉಳಿಯುತ್ತಾ? ಯಾವ ಪಿಲ್ಲರ್ ಒಡೆಯುತ್ತೀರಿ ಅನ್ನೋದರ ಮೇಲೆ ಅವಲಂಬಿತ, ಮನೆಯ ಯಾವ ಭಾಗ ನಿಲ್ಲಬಹುದು ಅಥವಾ ಕುಂಠಿತವಾಗಬಹುದು. ಇಂಥದ್ದೇ ಮೂರ್ಖತನ ಮುಂದುವರೆಸಿದರೆ ಮನೆಯೇ ಕಳಚಿಬೀಳಬಹುದು.

ಮನೆಯ ಭಾಗಗಳನ್ನು ಅಲ್ಲಲ್ಲೇ ಕಡಿದರೂ ಪೂರ್ಣವಾಗಿ ಕಳಚಿ ಉದುರಬಹುದು. ಪುಣ್ಯಕ್ಕೆ ನಮ್ಮ ದೇಹ ಇಷ್ಟು ಶಿಥಿಲವಲ್ಲ. ಕೆಲವನ್ನು ಕಡಿದರೆ ಬಾಳು ಹಸನು ಕೂಡ. ಸಕ್ಕರೆ ಕಾಯಿಲೆ ಇರುವವರಿಗೆ ಕಾಲಿನಲ್ಲಿ ತೊಂದರೆಯಾಗಿ ಹಲವೊಮ್ಮೆ ಕಾಲನ್ನೇ ಕತ್ತರಿಸಬೇಕಾಗಿ ಬರಬಹುದು. ಇಲ್ಲಿ ಕಡಿಯುವಿಕೆಯಿಂದ ದೇಹಕ್ಕೆ ತೊಂದರೆಯಾದರೂ ಜೀವ ಉಳಿಯಬೇಕು ಎಂದರೆ ತ್ಯಜಿಸಲೇಬೇಕು. ಇದು ಅನಿವಾರ್ಯತೆ. ಕೆಲವರಿಗೆ ಗರ್ಭಕೋಶವನ್ನೇ ತೆಗೆಯಬಹುದು. ಇವಕ್ಕೆ ಹೋಲಿಸಿದರೆ wisdom tooth ಕಿತ್ತೊಗೆಯುವುದು ಬಹಳ ಚಿಕ್ಕ ವಿಷಯವಾಗಬಹುದು. ಒಟ್ಟಾರೆ ದೇಹದಲ್ಲಿ ಕೆಲವನ್ನು ತೆಗೆದರೆ ಜೀವಕ್ಕೆ ಆಗೋ ತೊಂದರೆ ಕಡಿಮೆಯಾಗಬಹುದು ಆದರೆ ದೇಹ ಶಿಥಿಲವಾಗೋದು ನಿಜ. ದವಡೆ ಹಲ್ಲುಗಳನ್ನು ತೆಗೆದಾಗ ಕೆನ್ನೆಯು ಕ್ರಮೇಣ ಒಳಕ್ಕೆ ಸರಿದು ಮುದಿಯರಂತೆ ಕಾಣಬಹುದು.

ದೇಹದ ಹಲವಾರು ಅಂಗಗಳನ್ನು ಹೀಗೆ ತ್ಯಜಿಸಿಯೂ ಬದುಕಿರಬಲ್ಲರು ಎಂಬುದು ನಿಜವೇ ಆದರೂ ತೊಂದರೆ ಆಗ್ತಿದೆ ಅಂತ ತಲೆಯನ್ನೇ ತೆಗೆಸಿ ಬದುಕಿರುವವರು ಎಲ್ಲಿಯೂ ಇಲ್ಲ... ಹೃದಯದಿಂದ ತೊಂದರೆ ಆಗ್ತಿದೆ ಅಂತ ಹೃದಯವನ್ನೇ ಕಿತ್ತೊಗೆದು ಜೀವಿಸುವವರು ಖಂಡಿತವಾಗಿಯೂ ಇಲ್ಲ. heart transplant ವಿಷಯ ಇಲ್ಲಿ ಬೇಡ.

What Are All We Fill To Our Mind And Heart

ಸದ್ಯಕ್ಕೆ ತಲೆ ಎಂದರೆ ಬುದ್ಧಿ/ಮೆದುಳು/ಮನಸ್ಸು ಅಂತ ಹೇಗೆ ಬೇಕಾದರೂ ಅರ್ಥೈಸಿಕೊಳ್ಳಿ. ಭಾವನೆಗಳ ಸಮುದ್ರವೇ ಆದ ಹೃದಯ ಇಡೀ ದೇಹದ ಒಂದು ಅತ್ಯಂತ ಪ್ರಮುಖ ಅಂಗ. ಮೆದುಳು ಸಂಪೂರ್ಣ ನಿಷ್ಕ್ರಿಯವಾದರೂ ಹೃದಯ ಓಡ್ತಿದ್ರೆ ಸತ್ತಂತಿದ್ದರೂ ಬದುಕಬಹುದು. ಬದುಕಿಯೂ ಸತ್ತಂತೆ ಇರುವವರು ಎಷ್ಟು ಮಂದಿ ಇಲ್ಲ? ಈ ದಿಶೆಯಲ್ಲಿ ನೋಡಿದಾಗ ತಲೆಯಲ್ಲಿರೋದಕ್ಕಿಂತ ಹೃದಯ ಒಂದು ಕೈ ಹೆಚ್ಚು ಮುಖ್ಯ ಅಂತಾಗುತ್ತದೆ.

ಇಂಥ ಪ್ರಮುಖವಾದ ಅಂಗಗಳನ್ನು ಹೊಂದಿರುವ ನಮಗೆ ತಲೆಯ ಒಳಗೇನಿದೆ ಎಂದಾಗಲಿ, ದೇಹ ಒಳಗೆ ಹುದುಗಿರುವ ಹೃದಯ ಎಲ್ಲಿ/ಹೇಗಿದೆ ಎಂದು ನೋಡಲಾಗದೆ ಇರೋದ್ರಿಂದ ಅವುಗಳ ಬಗ್ಗೆ ಒಂದು ರೀತಿ ಉಡಾಫೆ ಎಂದೇ ಎನಿಸುತ್ತದೆ. ಈ ಅಂಗಗಳನ್ನು ನಾವು taken for granted ಅನ್ನೋ ಹಾಗೆ ನೋಡಿಕೊಳ್ಳುತ್ತೇವೆ. ಬೇಡದ್ದನ್ನೆಲ್ಲಾ ತುಂಬಿಸಿ ತುಂಬಿಸಿ ಗಬ್ಬೆಬ್ಬಿಸಿಬಿಡುತ್ತೇವೆ. ಅವಕ್ಕೆ ತೊಂದರೆಯಾದಾಗ ಕೆಲವರು ದೈವವನ್ನು ಹಳಿಯುತ್ತಾರೆ, ಕೆಲವರು ಪೂರ್ವಜರಿಂದ ಬಂದ ವರಪ್ರಸಾದ ಅಂತ ವಂಶವಾಹಿನಿಯನ್ನು ಹಳಿಯುತ್ತಾರೆ, ಆಹಾರವನ್ನು ಹಳಿಯುತ್ತಾರೆ ಹೀಗೇ ಎಲ್ಲರನ್ನೂ ಹಳಿಯುವ ಮುನ್ನ ನಮ್ಮಿಂದ ಆಗಿರುವ ಕೊಡುಗೆ ಏನು ಅಂತ ಒಮ್ಮೆಯೂ ಆಲೋಚಿಸುವುದೇ ಇಲ್ಲ.

ದಿನವೊಂದರಲ್ಲಿ ಅರ್ಥಾತ್ ಇಷ್ಟೆಲ್ಲಾ ಮುಂದುವರೆದಿರುವ 'ಈ ದಿನಗಳಲ್ಲಿ' ನಮ್ಮ ಮನಸ್ಸಿಗೆ, ಹೃದಯಕ್ಕೆ ಅದೆಷ್ಟು ತ್ರಾಸ ಕೊಡುತ್ತೇವೆ ಎಂದು ಕೊಂಚ ನೋಡೋಣ ಬನ್ನಿ.

What Are All We Fill To Our Mind And Heart

ಹಿಂದಿನ ರಾತ್ರಿ ಮಲಗೋದು ಕಾರಣಾಂತರಗಳಿಂದ ತಡವಾಗಿದೆ ಅಂದುಕೊಳ್ಳಿ. ಬೆಳಿಗ್ಗೆ ಐದಕ್ಕೆ ಅಲಾರಾಂ ಹೊಡ್ಕೊಂಡಾಗ 'ಥತ್ ದರಿದ್ರ! ಇಷ್ಟು ಬೇಗ ಈ ಹಾಳು ಅಲಾರಾಂ ಹೊಡ್ಕೊಳ್ತಿದೆ' ಎಂಬ ಅನಿಸಿಕೆಯಿಂದ ಎದ್ದಾಗಲೇ ಮನಸ್ಸಿಗೆ ಆಘಾತವಾಯ್ತು. ಪಾಪ ನೆಮ್ಮದಿಯಾಗಿ ನಿದ್ರಿಸುತ್ತಿತ್ತು ಆ ಮನಸ್ಸು. ಅಂಗಡಿಯ ಮುಂದೆ ಮಲಗಿದ್ದ ಕುನ್ನಿಯ ಮೇಲೆ ನೀರೆರಚಿ ಎಬ್ಬಿಸುವಂತೆ ಆ ಮನಸ್ಸನ್ನು ಎಬ್ಬಿಸುವ ಅವಶ್ಯಕತೆ ಇತ್ತೇ? ಅಲಾರಾಂ ಇಟ್ಟವರೂ ನಾವೇ, ತಡವಾಗಿ ಮಲಗಿದವರೂ ನಾವೇ ! ಸಮಯಕ್ಕೆ ಸರಿಯಾಗಿ ಎಬ್ಬಿಸಿದ್ದು ಅದರ ತಪ್ಪೇ? ಮನಸ್ಸೇಕೆ ಕಹಿ ಮಾಡಿಕೊಳ್ಳೋದು?

ಹೋಗ್ಲಿ ಬಿಡಿ, ಲವಲವಿಕೆಯಿಂದಲೇ ಎದ್ವಿ ಅಂತಾನೇ ಇಟ್ಟುಕೊಳ್ಳೋಣ. ಎದ್ದೊಡನೆ ಕೈಗೆ ಮೊಬೈಲು ತೆಗೆದುಕೊಳ್ಳುವ ಹವ್ಯಾಸ/ಅಭ್ಯಾಸ (ದುರಭ್ಯಾಸ?) ಕೆಲವರಿಗೆ ಇರುತ್ತದೆ. ವಾಟ್ಸಾಪ್ ವಿಷಯ ತೆಗೆದುಕೊಳ್ಳಿ. ಹಲವು ಬಾರಿ 'ಗುಡ್ ಮಾರ್ನಿಂಗ್' ಸಂದೇಶಗಳು ಇರುತ್ತವೆ. ಕೆಲವೊಮ್ಮೆ ಒಂದೆರಡು ಸಾಲುಗಳು ಹಲವೊಮ್ಮೆ ನಾಲ್ಕಾರು ಸಾಲುಗಳು. ಎಷ್ಟು ಮಂದಿ ಇವನ್ನು ಓದಿ ರೂಢಿಸಿಕೊಳ್ತಾರೋ ಅದು ಬೇರೆ ವಿಷಯ. ಇವೆಲ್ಲ ಒಂದು ಕಡೆಯಾದರೆ, ಕೆಲವೊಂದು ಪೋಸ್ಟ್/ಮುಂದೂಡಲ್ಪಟ್ಟ ಮೆಸೇಜುಗಳು ಮೆದುಳು/ಹೃದಯ ಕಲಕುತ್ತವೆ. ಇಂಥ ಕಡೆ ಅಪಘಾತವಾಗಿದೆ ಅಂತ ರಕ್ತದೋಕುಳಿಯಲ್ಲಿ ಬಿದ್ದವರ ಚಿತ್ರವನ್ನೂ, ರಕ್ತಸಿಕ್ತ ಮುಖವನ್ನೂ ಹಾಕಿರುತ್ತಾರೆ. ಮನಸ್ಸಿಗೆ ತೀರಾ ಹಿಂಸೆಯಾಗುತ್ತದೆ. ಇನ್ಯಾರೋ ಪಾಪ 'ಎಲ್ಲಿ ಆಗಿದ್ದು? ರಕ್ತ ಬೇಕಿತ್ತಾ?' ಅಂತೆಲ್ಲಾ ವಿಚಾರಿಸುತ್ತಾರೆ. ಆ ಮೆಸೇಜ್ ಕಳಿಸಿದವರಿಂದ ಬಹುತೇಕ ಸಂದರ್ಭಗಳಲ್ಲಿ ಉತ್ತರವೇ ಬರೋದಿಲ್ಲ ಅಕಸ್ಮಾತ್ ಬಂದರೂ 'ನನಗೆ ಬಂದಿತ್ತು, ನಿಮಗೆ ಕಳಿಸಿದೆ... ನನಗೂ ಗೊತ್ತಿಲ್ಲ' ಎಂದಾಗ ಮನಸ್ಸಿಗೆ ಆಘಾತ ಸಿಟ್ಟಿಗೆ ತಿರುಗುತ್ತದೆ. ನಾಲ್ಕು ತಲೆ ಹಾವು, ಎರಡು ತಲೆ ಹಸು ಇಂಥ ಚಿತ್ರ ಹಾಕಿ forward ಮಾಡಿದರೆ ಪುಣ್ಯ ಎಂದು ಹೇಳಿದಾಗ ಮನಸ್ಸು ರೊಚ್ಚಿಗೇಳುತ್ತೆ. ಒಂದೇ ಪೋಸ್ಟ್ ನಿಂದ ಮನಸ್ಸಿಗೂ, ಹೃದಯಕ್ಕೂ ಒಮ್ಮೆಲೇ ವಿಪರೀತ ಕೆಲಸ.

ಜೀವನ ಸಂದೇಶಗಳನ್ನು ಹೊತ್ತ ಮೆಸೇಜುಗಳು ಹಲವೊಮ್ಮೆ ಓದಲು ಚೆನ್ನ. ಆದರೆ ಖಂಡಿತ ಗೊತ್ತು ಅದನ್ನು ಕಳಿಸಿದವರಿಗೂ ಆ ಸಂದೇಶಕ್ಕೂ ಯಾವ ಸಂಬಂಧವೂ ಇಲ್ಲ. ಪಾಲಿಸದಿದ್ದ ಮೇಲೆ ಕಳಿಸೋದ್ಯಾಕೆ ಅಂತ ಅನ್ನಿಸೋದು ಸತ್ಯ. ಭಾಷಾ ಪ್ರೇಮಿಗಳಿಗೆ, ಭಾಷಾ ತಜ್ಞರಿಗೆ ಕೆಲವೊಮ್ಮೆ ಈ ಸಂದೇಶಗಳನ್ನು ಓದಿದಾಗ ಮನಸ್ಸು ಕೆಟ್ಟು, ಏನೇನೋ ಹಿಂಸೆಯಾಗುತ್ತೆ.

What Are All We Fill To Our Mind And Heart

ಮತ್ತೊಂದು ರೀತಿಯ ಪೋಸ್ಟ್ ಎಂದರೆ ಕಾವಿಧಾರಿ ಬಗೆಗಿನ ಹಾಸ್ಯದ ಪೋಸ್ಟ್. ಇಂಥ ಪೋಸ್ಟ್ ನೋಡಿದಾಗ ಹಾಸ್ಯಕ್ಕಿಂತ ಖೇದವೇ ಹೆಚ್ಚಾಗುತ್ತದೆ. ಇಂಥವರು ಕಾವಿ ಹೊದ್ದು ಕಾವಿಗೆ ಮರ್ಯಾದೆ ಕಳೆಯುತ್ತಾರಲ್ಲಾ, ಇದಕ್ಕೆ ಕೊನೆಯೆಂದು? ಎಷ್ಟೆಲ್ಲಾ ಜನರ ಕಣ್ಣಿಗೆ ಮಣ್ಣೆರಚಿ ತಮ್ಮ ಜೀವನವನ್ನು ಸುಖವಾಗಿ ಕಳೆಯುತ್ತಾರಲ್ಲಾ, ಇದಕ್ಕೆ ಕೊನೆಯೆಂದು? ಇಂಥವರ ಬಗ್ಗೆ ಅಲ್ಲಲ್ಲೇ ಹೇರಳವಾದ ಋಣಾತ್ಮಕ ವಿಷಯಗಳು ಹೊರಬೀಳುತ್ತಿದ್ದರೂ ಅಷ್ಟೆಲ್ಲಾ 'ಭಕ್ತಜನ' ಎಲ್ಲಿಯವರು? ಎಲ್ಲಿಂದ ಬಂದರು? ಇಂಥ ಪ್ರಶ್ನೆಗಳು ಎದ್ದು ಮನಸ್ಸು ಹೃದಯ ಎಲ್ಲ ಕೆಟ್ಟು ಕುಲಗೆಡುತ್ತದೆ.

ಇನ್ನು ಸಾಮಾಜಿಕ ತಾಣಗಳಾದ ಫೇಸ್ಬುಕ್, ಟ್ವಿಟ್ಟರ್, ಇತ್ಯಾದಿ... ಹತ್ತು ಹಲವು ರೀತಿಯ ರಾಜಕೀಯ ಗಾಳಿ ಸುದ್ದಿಗಳು, ಅಂದೆಂದೋ ಮಹಾಮಹಿಮರು ಎಂದು ನಂಬಿದ್ದವರ ಅಸಲಿ ಬಣ್ಣ, ಸುದ್ದಿಗಳು ನಿಜಕ್ಕೂ ಅಸಲಿಯೇ ಎಂಬ ಗಾಢ ಅನುಮಾನ, ಸಿನಿಮಾ ರಂಗದ ವಾಕರಿಕೆ ತರಿಸುವ ಸುದ್ದಿಗಳು, ಕೆಲವು ವೆಬ್ ಸುದ್ದಿ ಪತ್ರಿಕೆಗಳ ಹಾದಿ ತಪ್ಪಿಸುವ ಸುದ್ದಿಗಳು, ತಲೆಬರಹಕ್ಕೂ ಸುದ್ದಿಗೂ ಸಂಬಂಧವೇ ಇಲ್ಲದಿರಬಹುದು.

ಇವೆಲ್ಲಾ ಕೇವಲ ಒಂದು ಗಂಟೆಯ ಅವಧಿಯಲ್ಲಿ ನಡೆಯುತ್ತೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಹೀಗೆ, ದಿನವೊಂದರಲ್ಲಿ, ತಿಂಗಳಲ್ಲಿ, ವರುಷದಲ್ಲಿ ಮತ್ತು ಇಡೀ ನಮ್ಮ ಜೀವಮಾನದಲ್ಲಿ ಎಷ್ಟೆಲ್ಲಾ ಹಿಂಸೆ ಮಾಡ್ಕೋತೀವಿ ಅನ್ನೋದನ್ನ ಅಳೆಯೋದಕ್ಕೆ ಮಾಪನವೇನಾದರೂ ಇದೆಯೇ? ಇಷ್ಟು ಹಿಂಸೆ ಅನುಭವಿಸುವ ದೇಹ ಕೊನೆಗಾಲದವರೆಗೂ ಸುಸ್ಥಿತಿಯಲ್ಲಿರಬೇಕು ಎಂದರೆ ಹೇಗೆ ಸಾಧ್ಯ? ಈ ದೇಹದ ಕುರಿತು ಕೆಲವೊಮ್ಮೆ ನಾವು ಸಕತ್ ಆರೋಗ್ಯ ಅಂತ ಸೋಗು ಹಾಕುತ್ತೇವೆ... ಮತ್ತೊಬ್ಬರಿಗೆ ಆರೋಗ್ಯ ಸರಿ ಇಲ್ಲ ಎಂದಾಗ ಅನುಕಂಪ ತೋರುವ ಬದಲು ಹೀಯಾಳಿಸುವಂತೆ ನೋಡುವುದು ಯಾಕೆ?

ಒಂದು ಚೂರು ವ್ಯತ್ಯಾಸವಾದರೆ ಓಡೋ ಗಾಡಿ ನಿಂತು ಬಿಡುತ್ತೆ, ಅಂಥದ್ರಲ್ಲಿ ಪ್ರತಿ ನಿಮಿಷ ಏನೆಲ್ಲಾ ಹಿಂಸೆ ಅನುಭವಿಸಿದರೂ ಈ ಬಾಡಿ ಓಡಿಕೊಂಡು ಹೋಗುತ್ತಲ್ಲಾ ಅಂತಹ ಈ ದೇಹದ ರಚನೆಕಾರನಿಗೆ ಈ Thanksgiving ಶುಭದಿನದಂದು ಧನ್ಯವಾದಗಳನ್ನು ಅರ್ಪಿಸೋಣವೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+