ವೇಸ್ಟ್ ಅಂತಾದರೂ ಅವು ನಿಜಕ್ಕೂ ವೇಸ್ಟ್ ಅಲ್ಲ
ವೇಸ್ಟ್ ಅಂದ್ರೆ ದಂಡ ಅಂತ ಅಲ್ಲವೇ? ಇಷ್ಟೂ ದಿನಗಳಲ್ಲಿ ಹಲವಾರು ವಿಚಾರಗಳನ್ನು ನಾನಾ ರೀತಿ ಹೇಳಿದ್ದೆ/ಕೇಳಿದ್ದೆ. "ಅನ್ನ ಮಿಕ್ಕಿದರೆ ಏನು ಮಾಡ್ತೀರಿ?" ಅಂತ ಕೇಳಿದ್ದೆ. ನಾವು ಅನ್ನವನ್ನು ದಂಡ ಮಾಡೋದಿಲ್ಲ ಎಂಬ ಮಾತು ಬಂದಿದ್ದೇ ಅಲ್ಲದೇ ಅದನ್ನು ಹೇಗೆಲ್ಲಾ ಬಳಸುತ್ತೇವೆ ಎಂದೂ ಮಂದಿ ಜ್ಞಾನ ಹಂಚಿದ್ದಾರೆ.
ಹಾಗೆಯೇ ಜಂಕ್ ಬಗ್ಗೆ ದೀರ್ಘವಾಗಿ ಮಾತನಾಡಿದ್ದೇವೆ... ಜಂಕ್ ಊಟವನ್ನು ಹೊರತು ಪಡಿಸಿದರೆ ಇತರ ವಿಷಯದ ಸಾರಾಂಶ ಏನಿತ್ತು ಎಂದರೆ ಅಟ್ಟದ ಮೇಲಿನ ವಸ್ತುಗಳು, ಹಳೆಯ ಸೋಫಾ/ಮೇಜು/ಪಾತ್ರೆ ಇತ್ಯಾದಿಗಳೆಲ್ಲಾ ಜಂಕ್ ಅಂದಿದ್ದೆವು. ಅರ್ಥಾತ್ ಈಗ ಅವುಗಳ ಅವಶ್ಯಕತೆ ನಮಗೆ ಇಲ್ಲ, ಹಾಗಾಗಿ ಅವು ಬೇಡದ ಅಥವಾ ಬೇಕಿಲ್ಲದ ವಸ್ತುಗಳು. ಆದರೆ ಕೆಲವು ವಸ್ತುಗಳನ್ನು ಜಂಕ್ ಎಂದು ಕರೆಯಲೇ ಮನಸ್ಸು ಬರೋದಿಲ್ಲ. ಕಾರಣ ಇಷ್ಟೇ, ಆ ನಿರ್ಜೀವ ವಸ್ತುಗಳಲ್ಲೂ ನಾವು ಜೀವ ಕಾಣುತ್ತೇವೆ. ಅಪ್ಪನ ಪೆಟ್ಟಿಗೆ, ತಾತನ ಬೀರು, ಅಮ್ಮನ ಉಪ್ಪಿನಕಾಯಿ ಜಾಡಿ ಅಂತೆಲ್ಲಾ ಸವಿ ನೆನಪುಗಳನ್ನು ಅದಕ್ಕೆ ಅಂಟಿಸಿ ಬಿಡೋದ್ರಿಂದ ಅವುಗಳನ್ನು ಜಂಕ್ ಎಂದು ಕರೆಯೋದಕ್ಕೆ ಮನಸ್ಸು ಬರೋದಿಲ್ಲ. ಹಾಗಾಗಿ ಅವುಗಳ ಬಳಕೆ ಇಲ್ಲದೇ ಇದ್ದರೂ ಅವು ಅಟ್ಟದಲ್ಲಿರುತ್ತದೆ. ಮನಸ್ಸು ಏಕೆ ಬರೋದಿಲ್ಲ ಎಂದರೆ ಇಂದಿನ ಜಂಕ್ ಗಳೂ ವಿರಾಜಮಾನವಾಗಿದ್ದ ಅಂದಿನ ಕಾಲವೊಂದಿತ್ತು.
ಇಂದಿನ ವಿಷಯ ಇದೇ ... waste ಅಂತ ಇಂದು ಹೇಳಿದರೂ ಅವು ನಿಜಕ್ಕೂ ವೇಸ್ಟ್ ಅಲ್ಲವಾಗಿತ್ತು ಅಥವಾ ಅಲ್ಲವಾಗಿರುತ್ತದೆ... ಇಂತೆಯೇ ಹಲವಾರು ವಿಷಯಗಳು, ವಿಚಾರಗಳು, ಕಾರ್ಯಗಳು, ವಸ್ತುಗಳು ವೇಸ್ಟ್ ಅಂತಾದರೂ ಅವು ವೇಸ್ಟ್ ಅಲ್ಲ! ತುಂಬಾ confusing ಆಗಿ ಇದೆಯಲ್ಲವೇ? ಹೌದು, ವೇಸ್ಟ್ ಅನ್ನುವುದರಲ್ಲಿ ಅಗಾಧವಾದ ಕ್ಲಿಷ್ಟತೆ ಇದೆ.

ಯಾವುದೋ ಒಂದು ಸಿನಿಮಾ ನೋಡ್ತೀವಿ... ಸಿನಿಮಾ ಚೆನ್ನಾಗಿಲ್ಲ ಅಂತಾಗಿ ಬಹುಶಃ ಒಂದು ಸಾಲಿನ ರಿವ್ಯೂ ಹೇಳುವುದಾದರೆ 'time waste' ಎನ್ನಬಹುದು. ನಿಜ, ನಮಗೆ ವೇಸ್ಟ್ ಆಗಿರಬಹುದು, ಆದರೆ ನಿಜಕ್ಕೂ ವೇಸ್ಟ್ ಆಗಿದೆಯೇ? ಇರಲಾರದು... ಒಂದು ನಿಷ್ಠೆಯ ಸನ್ನಿವೇಶವನ್ನೇ ತೆಗೆದುಕೊಂಡರೆ, ಆ ಸಿನಿಮಾದಿಂದ ಹಲವಾರು ಮಂದಿ ಊಟ ಕಂಡಿದ್ದಾರೆ, ಜೀವನ ಕಂಡಿರುತ್ತಾರೆ ಇತ್ಯಾದಿ. ವೇಸ್ಟ್ ಅಂದುಕೊಂಡರೂ ಅದು ಒಬ್ಬರ ದೃಷ್ಟಿಯಿಂದ ವೇಸ್ಟ್ ಆಗಿರಬಹುದು ಸಂಪೂರ್ಣವಾಗಿ ಅಲ್ಲ.
ಮರಗಿಡಗಳಿಂದ ಉದುರಿದ ಒಣಕಡ್ಡಿಗಳಿಗೂ ಒಂದೊಮ್ಮೆ ಬೆಲೆ ಇತ್ತು. ಅರ್ಥಾತ್ ಅದು ಹುಟ್ಟುವಾಗಲೇ ದಂಡವಾಗಿ ಹುಟ್ಟಿರಲಿಲ್ಲ. ದಂಡವಾಗಲು ಹುಟ್ಟಿರಲಿಲ್ಲ. ಅದು ಉದುರಿದ ಮೇಲೂ ದಂಡವಾಗಲಿಲ್ಲ. ಆ ಪುರುಳೆ ಯಾರದ್ದೋ ಊಟವನ್ನು ಸಿದ್ಧಮಾಡಲು ತನ್ನನ್ನೇ ಸುಟ್ಟುಕೊಂಡಿತ್ತು. ಯಾರದ್ದೋ ಸ್ನಾನದ ನೀರನ್ನು ಕಾಯಿಸಿತ್ತು. ಏನೋ ಒಂದು ಕಾರಣಕ್ಕಾಗಿಯೇ ಅದು ಚಿಗುರಿತ್ತು, ಬೆಳೆದಿತ್ತು, ಒಣಗಿತ್ತು, ಉದುರಿತ್ತು. ನಮ್ಮ ಕಣ್ಣಿಗೆ ವೇಸ್ಟ್ ಅಂತಾದರೆ, ಆ ಕಡ್ಡಿಯ ಬಾಳನ್ನೇ ವೇಸ್ಟ್ ಎಂದು ಜರಿಯುವುದು ನ್ಯಾಯವಲ್ಲ.
ಬ್ಯಾಟರಿ ಚಾಲಿತ ಗೋಡೆ ಗಡಿಯಾರ ಇರುತ್ತದೆ. ಅದು ಸಮಯ ತೋರಿಸುತ್ತಾ ಸಾಗುತ್ತದೆ. ಅದರ ಕೆಲಸವೇ ಸಮಯ ತೋರಿಸೋದು. ನಾವು ನೋಡಲಿ ಬಿಡಲಿ ಅದರ ಕೆಲಸವೇ ಸಾಗುತ್ತಾ ನಡೆಯೋದು, ಸಮಯವನ್ನು ತೋರಿಸೋದು. ನಾವು ಮನೆಯಲ್ಲಿ ಇಲ್ಲ ಅಂತ ಅದಕ್ಕೇನಾದರೂ ಗೊತ್ತೇ? ಆ ವೇಳೆಯಲ್ಲೂ ತನ್ನ ಕೆಲಸ ಮಾಡುತ್ತಾ ಸಾಗುತ್ತದಲ್ಲ ಅದನ್ನು ವೇಸ್ಟ್ ಎಂದು ಕರೆಯಲಾದೀತೇ? ತನ್ನ ಕೆಲಸ ತಾನು ಮಾಡಿಕೊಂಡು ಸಾಗುವ ಸಮಯಕ್ಕೆ 'ವೇಸ್ಟ್' ಅಂದ್ರೇನು ಅಂತಲೇ ಗೊತ್ತಿಲ್ಲ.

ಒಂದು ಟಿ.ವಿ, ಮ್ಯೂಸಿಕ್ ಸಿಸ್ಟಮ್, ಡಿವಿಡಿ ಪ್ಲೇಯರ್, ಸೌಂಡ್ ಬಾರ್ ಮುಂತಾದ ವಿದ್ಯುತ್ ಚಾಲಿತ ವಸ್ತುಗಳಿಗೆ ನಾವು ಸದಾ ವಿದ್ಯುತ್ ಹರಿಸುತ್ತಲೇ ಇರುತ್ತೇವೆ. ಈಗ ಟಿವಿಯಲ್ಲಿ ಒಂದು ಕಾರ್ಯಕ್ರಮ ನೋಡುತ್ತಿದ್ದೆವು ಅಂದುಕೊಳ್ಳಿ. ಆ ಕಾರ್ಯಕ್ರಮ ಆದ ಮೇಲೆ ಟಿವಿ ಆಫ್ ಮಾಡುತ್ತೇವೆಯೇ ಹೊರತು ಗೋಡೆಯಿಂದಲೇ ಪ್ಲಗ್ ತೆಗೆದು ವಿದ್ಯುತ್ ಹರಿಸೋದನ್ನು ನಿಲ್ಲಿಸೋದಿಲ್ಲ. ನಾವು ಟಿ.ವಿ ನೋಡದೆ ಇದ್ದಾಗ ಆ ಟಿ.ವಿಗೆ ಹರಿಯುವ ವಿದ್ಯುತ್ ವೇಸ್ಟ್ ಅಂತೀರಾ? ಇಲ್ಲವಾ? ಇದನ್ನೇ ಕೊಂಚ ವಿಸ್ತರಿಸಿದರೆ ರಿಮೋಟ್ ನಲ್ಲಿರೋ ಬ್ಯಾಟರಿ ಕೂಡ ಹಾಗೆಯೇ ಇರುತ್ತದೆಯೇ ವಿನಃ, ಹೇಗಿದ್ರೂ ಬಳಸುತ್ತಿಲ್ಲ ಅಂತ ಬ್ಯಾಟರಿ ತೆಗೆದು ಹೊರಗೆ ಇಡೋಲ್ಲ. ವೇಸ್ಟ್ ಅಂದುಕೊಳ್ಳೋದೆಲ್ಲಾ ವೇಸ್ಟ್ ಅಲ್ಲ !
ಇದಕ್ಕಿಂತ ಒಂದು ಉತ್ತಮ ಉದಾಹರಣೆ ಎಂದರೆ ರೆಫ್ರಿಜಿರೇಟರ್. ದಿನವೊಂದರಲ್ಲಿ ಅದರ ಬಾಗಿಲೇ ತೆರೆಯದೇ ಹೋಗಬಹುದು. ಹಾಗಂತ ಆ ರೆಫ್ರಿಜಿರೇಟರ್ ನ ಹೊಟ್ಟೆಗೆ ವಿದ್ಯುತ್ ನೀಡದೇ ಹೋಗುತ್ತೀವಾ?
ಹೇಗಿದ್ರೂ ಮಲಗಿದ್ದಾನೆ, ಸುಮ್ಮನೆ ಏನು ಓಡೋದು ಅಂದುಕೊಂಡು ಬುದ್ಧಿ ಓಡೋದು ನಿಂತೇ ಹೋಯ್ತು ಅಂದುಕೊಳ್ಳಿ, ಏನಾಗುತ್ತೆ?

ಅಂಗೈಯಲ್ಲಿರೋ ಮೊಬೈಲನ್ನೇ ತೆಗೆದುಕೊಂಡರೆ ಆ ಮೊಬೈಲಿನ ಬ್ಯಾಟರಿಯಲ್ಲಿ ಜೀವವಿರುವ ತನಕ ಸಮಯ ತೋರಿಸುತ್ತಲೇ ಇರುತ್ತದೆ, ವಿಷಯಗಳನ್ನು ಹೆಕ್ಕಿ ತರುತ್ತದೆ ಅಥವಾ ಸ್ವೀಕರಿಸುತ್ತಲೇ ಇರುತ್ತದೆ. ಮೊಬೈಲನ್ನು ಕೈಗೆತ್ತಿಕೊಂಡು ಒಂದು ಬಟನ್ ಒತ್ತಿದ ಕೂಡಲೇ ಥಟ್ಟನೆ ಇಡೀ ಜಗತ್ತನ್ನೇ ನಿಮ್ಮ ಮುಂದೆ ಇಡುತ್ತದೆ. ಇಲ್ಲ, ಇಡುತ್ತದೆ ಅಲ್ಲ, ಇಡಲೇಬೇಕು ಅಂತ ನೀವು ಬಯಸೋದು. ನೀವು ಬಳಸದೇ ಇದ್ದಾಗ ತನ್ನ ಕೆಲಸ ತಾನು ಮಾಡುವ ಮೊಬೈಲ್ ವೇಸ್ಟ್ ಅನ್ನೋಕ್ಕಾಗುತ್ತ?
ನೀವು ಎಷ್ಟು ಬಾರಿ ನಡೆದಿರಿ, ಎಷ್ಟು ಕಾಲ ನಿಂತಿರಿ, ಕೂತಿರಿ ಅಂತೆಲ್ಲಾ background ನಲ್ಲಿ ಕೆಲಸ ಮಾಡುತ್ತಲೇ ಇರುವ appಗಳು waste of time ಅಂದುಕೊಳ್ಳೋಕ್ಕಾಗಲ್ಲ. ಯಾರು ನೋಡುತ್ತಾರೆ, ನೋಡೋದಿಲ್ಲ, ಯಾರಿಗೆ ಬೇಕು, ಬೇಡ ಎಂಬುದನ್ನು ಲೆಕ್ಕಿಸದೇ ತನ್ನ ಕೆಲಸ ತಾನು ಮಾಡಿಕೊಂಡೇ ಸಾಗುತ್ತಿರುತ್ತದೆ. ಮೊಬೈಲ್ ಗಮನಿಸದೇ ಇದ್ದಾಗ, ಅರ್ಥಾತ್ ಸ್ನಾನ ಮಾಡುವಾಗ ಅಥವಾ ನಿಜಕ್ಕೂ ದೀರ್ಘವಾಗಿ ನಿದ್ರಿಸುವಾಗ ಮೊಬೈಲ್ ನಿದ್ರಿಸೋಲ್ಲ. ತನ್ನನ್ನು ಗಮನಿಸುವವರು ಯಾರೂ ಇಲ್ಲ ಎಂದಾಗಲೂ ತನ್ನ ಕೆಲಸ ವೇಸ್ಟ್ ಎಂದುಕೊಂಡು ಕೆಲಸ ಮಾಡದೇ ಇರೋಲ್ಲ.
ಹೀಗೆಲ್ಲಾ ಹೇಳುವಾಗ ಒಂದು ವಿಷಯ ಮನಸ್ಸಿಗೆ ಬರಲೇಬೇಕು - ಸೂರ್ಯದೇವನ ಕೆಲಸ ಕಾರ್ಯಗಳು. ಸೂರ್ಯ ಹುಟ್ಟೋ ಮುಂಚೆ ಕೆಲಸಕ್ಕೆ ಹೋಗ್ತೀನಿ, ಏಸಿ ಕೋಣೆಯಲ್ಲೇ ನನ್ನ ಕೆಲಸ, ಹೊರಗೆ ಬರೋಷ್ಟರಲ್ಲಿ ಚಂದ್ರ ತನ್ನ ಕಾಲು ಭಾಗದ ಕೆಲಸ ಮುಗಿಸಿರುತ್ತಾನೆ. ಸೂರ್ಯ ಬರುತ್ತಾನೋ ಇಲ್ಲವೋ ಗೊತ್ತಿಲ್ಲದವರೂ ಇರುತ್ತಾರೆ ಈ ಜಗತ್ತಿನಲ್ಲಿ. ಅವನು ಇರುವು ಅರಿಯದಿದ್ದ ಮೇಲೆ ಸೂರ್ಯ ಹುಟ್ಟೋದು ಮುಳುಗೋದು ವೇಸ್ಟ್ ಅನ್ನೋಕ್ಕಾಗುತ್ತ?
ಇದು ದಡ್ಡತನವಾದೀತು... ಯಾಕಂದ್ರೆ ಸೂರ್ಯ ನನ್ನೊಬ್ಬನಿಗೆ ಅಂತ ಹುಟ್ಟಿಬರೋಲ್ಲ. ಮನುಕುಲಕ್ಕೆ ಅಂತ ಹುಟ್ಟಿಬರೋಲ್ಲ. ಸಕಲ ಜೀವರಾಶಿಗೆ ಅವನ ಇರುವಿನ ಅವಶ್ಯಕತೆ ಇದೆ. ಜಗತ್ತಿನ ಪ್ರತಿ ಕ್ರಿಯೆಗಳಿಗೆ ಮನುಷ್ಯ ಒಬ್ಬನೇ ಗ್ರಾಹಕ ಅಂತ ಅಂದುಕೊಳ್ಳೋದು ಯಾಕೆ? ಬಿಸಿಲನ್ನೇ ನೆಚ್ಚಿಕೊಂಡ ಹಲವಾರು ಜೀವಿಗಳು ಇಲ್ಲಿವೆ. ಅಂಥ ಹಲವಾರು ಜೀವಿಗಳಿಗೆ ಸೂರ್ಯನಿಲ್ಲದಿದ್ದರೆ ನಾವು ಮಣ್ಣು ತಿನ್ನಬೇಕಾದೀತು. ಸೂರ್ಯನೇ ಇಲ್ಲದಿರೆ ಮಣ್ಣು ತಿನ್ನಲು ಯೋಗ್ಯವಾದೀತೇ?
ಈಗ ಒಂದು ವಿಷಯ ಅರಿವಾಗೋದು ಏನಪ್ಪಾ ಅಂದ್ರೆ, ಯಾವುದನ್ನೇ ಆಗಲಿ ನಾವು ವೇಸ್ಟ್ ಅಂತ ಕರೆದರೆ, ಯಾವುದನ್ನೇ ನಾವು ಉಪಯುಕ್ತ ಅಂತ ಹೆಸರಿಟ್ಟರೆ ಅದು ನಮ್ಮ ನಮ್ಮ ದೃಷ್ಟಿಕೋನದಿಂದ ಮಾತ್ರ ಅವು ವೇಸ್ಟ್ ಅಥವಾ ಉಪಯುಕ್ತ ಅನ್ನಿಸೋದು. ಸಿಗ್ನಲ್ ನಲ್ಲಿ ನಿಲ್ಲೋದು ಸಕತ್ waste of time ಅನ್ನೋದು ನಮ್ಮ ದಿನನಿತ್ಯದ ಗೊಣಗಾಟ. ನಾಲ್ಕು ಬೀದಿ ಸೇರೋ ಕಡೆ ಸಿಗ್ನಲ್ ನಲ್ಲಿ ನಿಂತ ನಾವು ಟೈಮ್ ವೇಸ್ಟ್ ಅಂದುಕೊಂಡು ಮುಂದೆ ಸಾಗಿದಂತೆಯೇ ಮಿಕ್ಕ ಮೂರು ಕಡೆಯಲ್ಲಿರುವ ವಾಹನಗಳೂ ಅಂದುಕೊಂಡು ಮುಂದೆ ಸಾಗಿದರೆ ಏನಾಗುತ್ತೆ? ವೇಸ್ಟ್ ಎಲ್ಲವೂ ವೇಸ್ಟ್ ಅಲ್ಲ...
ಹೂದಾನಿಯಲ್ಲಿ ಇಟ್ಟ ಹೂವುಗಳು, ಮುಡಿಗೆ ಮುಡಿದಾ ಹೂವುಗಳು ಸಂಜೆಗೆ ಬಾಡುತ್ತವೆ ನಿಜ. ಹಾಗಂತ ಹೂದಾನಿಯಲ್ಲಿಡೋದು ಅಥವಾ ಮುಡಿದುಕೊಳ್ಳೋದು ವೇಸ್ಟ್ ಅನ್ನೋಕ್ಕಾಗುತ್ತಾ?
"ನೀನೊಂದು ಶುದ್ಧ ದಂಡ/waste body" ಅಂತ ಯಾರಾದ್ರೂ ಅಂದರೆ ಅದು ಅವರ ಕಣ್ಣಲ್ಲಿ ಅಷ್ಟೇ... ನಾವು ವೇಸ್ಟ್ ಅಂತಲ್ಲ. ಪ್ರತಿಯೊಂದೂ ಜೀವ ನಿರ್ಜೀವ ವಸ್ತುಗಳಿಗೂ ಅದರದ್ದೇ ಆದ ಕರ್ತವ್ಯಗಳು ಅಂತ ಇರುತ್ತೆ. ನಮಗೆ ಅವುಗಳ ಕರ್ತವ್ಯ ಉಪಯುಕ್ತವಲ್ಲ ಅಂದ ಮಾತ್ರಕ್ಕೆ ಅವು ವೇಸ್ಟ್ ಅಲ್ಲ. ಏನನ್ನಾದರೂ ವೇಸ್ಟ್ ಅನ್ನೋ ಮುನ್ನ ಕೊಂಚ ಹೃದಯ ವೈಶಾಲ್ಯದಿಂದ ಆಲೋಚಿಸುವುದು ಒಳಿತು.
ದಂಡವಲ್ಲದ್ದನ್ನು ದಂಡವೆಂದು ಜರಿದು ದಂಡ ತೆತ್ತ ಉದಾಹರಣೆಗಳು ಅನೇಕ ಇವೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications