Get Updates
Get notified of breaking news, exclusive insights, and must-see stories!

ತಲೆಯಲ್ಲಿ ಹುಳ ಬಿಡುವುದು ಎಂದರೇನು ಗೊತ್ತಾ?

ಕಳೆದ ವಾರದಲ್ಲಿ ಆರಂಭ-ಅಂತ್ಯಗಳ ಬಗ್ಗೆ ಒಂದು ಲೇಖನ ಬರೆದಿದ್ದೆ. ಪ್ರತಿಕ್ರಿಯೆಗಳಲ್ಲಿ ಹೇಳಿದಂತೆ ಮತ್ತು ವಾಟ್ಸಪ್ ಮುಖೇನ ನನಗೆ ಬಂದ feedback/ಕಾಮೆಂಟ್ ಏನೆಂದರೆ, ಕೆಲವು ಅಂಶಗಳು ಸಲೀಸಾಗಿತ್ತು ಕೆಲವು ಕೊಂಚ ಆಳವಾಗಿತ್ತು ಅಂತ.

ಸ್ನೇಹಿತ ಅನಿಲ್ ಹೇಳಿದ ಮಾತು ಸ್ವಲ್ಪ different ಆಗಿತ್ತು ಮತ್ತು ಈ ಬರಹಕ್ಕೂ ಒಂದಷ್ಟು ಅಂಶ ನೀಡಿತು ಎನ್ನಬಹುದು. ಅನಿಲ್ ಹೇಳಿದ್ದು 'ಲೇಖನ ಚೆನ್ನಾಗಿದೆ. ಅಲ್ಲಲ್ಲೇ ಸ್ವಲ್ಪ ಉಪೇಂದ್ರ ಅನ್ನಿಸಿತು" ಅಂತ. ಒಂದು ಸುಂದರ ಪ್ರತಿಕ್ರಿಯೆ ಜೊತೆಗೆ ನನ್ನ ತಲೆಗೆ ಹುಳ ಬಿಟ್ಟ ಪ್ರತಿಕ್ರಿಯೆ ಕೂಡ. ಗೂಗಲ್ search engine ಬಳಸಿಯೇ ಹುಡುಕುವುದನ್ನು 'ಗೂಗಲ್' ಎಂದೇ ಕರೆಯುವಂತೆ ತಲೆಗೆ ಹುಳ ಬಿಡುವ ವಿಷಯಕ್ಕೆ 'ಉಪೇಂದ್ರ' ಅಂತಾನೂ ಹೆಸರಿದೆ.

ಮತ್ತೊಂದು ಪ್ರತಿಕ್ರಿಯೆಯ ಮೂಲಕ ಈ ಬರಹಕ್ಕೆ ನಾಂದಿ ಹಾಡಿದವರು ಕವಿತಾ ಮುಚ್ಚ೦ಡಿಯವರು. ಅವರು ಕೇಳಿದ ಪ್ರಶ್ನೆಯೇ ಈ ಬರಹದ ಶಿರೋನಾಮೆ "ತಲೆಯಲ್ಲಿ ಹುಳ ಬಿಡುವುದು". ಹೀಗೆಂದರೇನು?

 Some Matters Make Us Overthink In Life

ಒಂದು ಚಿಕ್ಕ ಪ್ರಶ್ನೆಯೊಂದಿಗೆ ಶುರು ಮಾಡೋಣ. Riddle/Puzzle ಅನ್ನೋದು ತಲೆಯನ್ನು ತಿನ್ನುವ ಪೈಕಿಗಳಲ್ಲಿ ಒಂದು. ಬಹುಶಃ ಈ ಪ್ರಶ್ನೆ ನಿಮ್ಮನ್ನೂ ಯಾರಾದ್ರೂ ಕೇಳಿರಬಹುದು: Mary's father has five daughters: 1.Nana, 2.Nene, 3.Nini, 4.Nono. What is the name of the fifth daughter?

ಮೇಲ್ನೋಟಕ್ಕೆ ಗಮನಿಸಿದಾಗ ಹೆಸರುಗಳಲ್ಲಿ ಕ್ರಮವಾಗಿ ಆಂಗ್ಲದ vowels ಕಂಡು ಬಂದು ಕೊನೆಯ ಹೆಸರು nunu ಎಂದಾಗ "ಪ್ರಶ್ನೆಯಲ್ಲಿ ಈಗಾಗಲೇ Mary ಎನ್ನುವ ಹೆಸರು ಇದೆಯಲ್ಲವೇ" ಎಂದು ಉತ್ತರ ನೀಡಿದಾಗ 'ಅರೆ ಹೌದಲ್ಲವೇ?' ಎನಿಸುತ್ತದೆ.

ಇಂಥ ತಲೆ ತಿನ್ನೋ ಪ್ರಶ್ನೆಗಳಿಂದ ಸಾಧಿಸೋದಾದ್ರೂ ಏನು? ಜ್ಞಾನ ಪ್ರದರ್ಶನವೇ? ಖಂಡಿತ ಅಲ್ಲ. "lateral thinking"ಗೆ ಅವಕಾಶ ಮಾಡಿಕೊಡುವುದೇ ತಲೆ ತಿನ್ನುವ ಪ್ರಶ್ನೆಗಳ ಪ್ರಯೋಜನ. ಒಂದು ಸಮಸ್ಯೆಯನ್ನು ಒಂದೇ ಕೋನದಿಂದ ನೋಡದೇ ಬೇರೊಂದು ಕೋನದಿಂದ ಅರ್ಥಾತ್ different perspective ಇಂದ ನೋಡುವ ಅಥವಾ ಆಲೋಚಿಸುವ ಬಗೆಯನ್ನು lateral thinking ಎನ್ನುತ್ತಾರೆ. ಈ ಪರಿಯ ಆಲೋಚನೆಗಳನ್ನು ಮಾಡುವವರು ದಿನನಿತ್ಯದಲ್ಲಿ ನಮ್ಮ ಸುತ್ತಲೂ ಇದ್ದೇ ಇರುತ್ತಾರೆ. ಕೆಲವೊಮ್ಮೆ ಕೆಲವೊಂದು ವಿಚಾರಗಳು 'ತರ್ಕಹೀನ' ಎನಿಸುವುದನ್ನು ಬೇರೊಂದು ತರ್ಕದಲ್ಲಿ ಆಲೋಚಿಸಿದರೆ ಮಾತ್ರ ಅರಿವಿಗೆ ಬರುತ್ತದೆ. ಒಂದು ದರೋಡೆ, ಕೊಲೆ ಇತ್ಯಾದಿಗಳಾದಾಗ ಪೊಲೀಸಿನವರು ಅಥವಾ ಬ್ಯೂರೋದವರು ನೇರವಾಗಿ ಆಲೋಚಿಸದೆ ಬೇರೊಂದು ದೃಷ್ಟಿಕೋನದಲ್ಲಿಯೇ ಆಲೋಚಿಸೋದು.

ಸಮಸ್ಯೆ ಎಂದಾಗ ಜೀವನದ ಸಮಸ್ಯೆ ಆಗಬೇಕು ಅಂತೇನಿಲ್ಲ. ಒಂದು ಸುಂದರ ಭಾನುವಾರ ಕೈಗೆತ್ತಿಕೊಂಡು ಕೂಡುವ ವಾರಪತ್ರಿಕೆಯ ಒಂದು ಪದಬಂಧ/ಪದರಂಗ ಅಥವಾ Sudoku ಕೂಡಾ ಆಗಬಹುದು. ಮೊನ್ನೆ ಇಂಟರ್ನೆಟ್ ನಲ್ಲಿ ಒಂದು ಪತ್ರಿಕೆಯ cartoon strip ನೋಡಿದೆ. ಸತ್ಯವನ್ನೇ ಹೇಳಬೇಕು ಅಂದ್ರೆ, ಮೊದಲ ಪದ ಓದಿದ ಕೂಡಲೇ ನಗುಬಂತು. ಮೊದಲ ಚಿತ್ರದಲ್ಲಿ ಯಾರೋ ಕಣ್ಣುಮುಚ್ಚಿ ಮಲಗಿರುತ್ತಾರೆ. ಅವರನ್ನು ಒಂದು cartoon ಪ್ರಾಣಿ ಕೇಳೋ ಪ್ರಶ್ನೆ "ಮಲಗಿಬಿಟ್ರಾ?" ಅಂತ. ಆಗ ಮಲಗಿರುವವರು 'ಹೌದು' ಅಂತಾರೆ. ಅದಕ್ಕೆ cartoon ಪ್ರಾಣಿ ಹೇಳೋದು "ಕಣ್ಣಿನ ರೆಪ್ಪೆಗಳ ತಳಭಾಗದಲ್ಲಿ ಪುಟ್ಟ ಕ್ರಿಮಿಗಳು ಇರುತ್ತವಂತೆ. ಕಣ್ಮುಚ್ಚಿದಾಗ ಅವು ಕಣ್ಣೊಳಗೆ ಇಳಿಯುತ್ತವಂತೆ. ಗೊತ್ತಿತ್ತಾ?" ಅಂತ ಹೇಳಿ ಜಾಗ ಖಾಲಿ ಮಾಡುತ್ತದೆ. ಮೊದಲನೆಯ ವ್ಯಕ್ತಿಯ ನಿದ್ದೆ ಢಮಾರ್. ಇದನ್ನು ಏನಂತಾರೆ ಗೊತ್ತೇ ? "ತಲೆಗೆ ಹುಳ ಬಿಡೋದು" ಅಂತ.

ಕನ್ನಡದ ಒಗಟುಗಳು ಕೂಡ ಈ ಸಾಲಿಗೆ ಸೇರುತ್ತವೆ. ಒಂದು ಒಗಟನ್ನು ಬಿಡಿಸಲು ಬರೀ ಅದನ್ನು ಅರ್ಥೈಸಿಕೊಂಡರೆ ಸಾಲದು. ಬದಲಿಗೆ ಗೂಢಾರ್ಥವನ್ನೂ ಬಿಡಿಸಬೇಕು. 'ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ' ಅಂದ್ರೆ ಈ ಅಟ್ಟ ಅಂದ್ರೆ ಏನು? ಪುಟ್ಟ ಅಂದ್ರೆ ಏನು? ಲಕ್ಷ್ಮಿ ಅಂದ್ರೆ ಏನು? ಅನ್ನೋದು ಒಂದಕ್ಕೊಂದು ಬೆಸೆದುಕೊಂಡಿರುವಂಥದ್ದು. ಅಟ್ಟ ಎಂಬ ಸಾಮಾನ್ಯ ಅರ್ಥವೇ ತಿಳಿಯದಿದ್ದರೆ ಇನ್ನು ಗೂಡಾರ್ಥ ಎಲ್ಲಿಂದ ತಿಳಿದೀತು? ಹಾಗಾಗಿ ಒಗಟುಗಳು ಎಂದರೆ ತಲೆಗೆ ಹುಳ ಬಿಟ್ಟುಕೊಳ್ಳೋದು ಅಂತಲೇ ಅರ್ಥ.

ಇನ್ನು ಕೆಲವರ ಪ್ರಶ್ನೆಗಳು ಕೂಡ ಈ ಸಾಲಿಗೆ ಸೇರಬಹುದು. ಉದಾಹರಣೆಗೆ "ರಾಮ ರಾವಣನ ಶಿರವನ್ನು ಒಂದೊಂದಾಗಿ ಕತ್ತರಿಸಿದ" ಅಂತ ಹೇಳುತ್ತೇವೆ. ಮೊದಲಿಗೆ ಎಡಭಾಗದ ತಲೆಯು ಉರುಳಿತೇ? ಬಲಭಾಗದ ತಲೆ ಉರುಳಿತೇ?". "ಜರಾಸಂಧನ ಮನೆಗೆ ಕೃಷ್ಣ, ಭೀಮ ಮತ್ತು ಅರ್ಜುನರು ಹಿಂಬಾಗಿಲಿನಿಂದ ಪ್ರವೇಶ ಮಾಡಿದರು. ಅವರ ಮೇಲೆ ಅನುಮಾನದ ಬಂದರೂ ಜರಾಸಂಧ ಬಂದ ಅತಿಥಿಗಳಿಗೆ ಊಟೋಪಚಾರ ನಡೆಸಿದ" ಅನ್ನೋ ಕಥೆ ಕೇಳಿದ್ದೇವೆ. ಪ್ರಶ್ನೆ ಏನಪ್ಪಾ ಅಂದ್ರೆ "ಅವತ್ತು ಊಟಕ್ಕೆ ಏನು ಅಡುಗೆ ಮಾಡಲಾಗಿತ್ತು?" ಇಂಥವೂ ತಲೆಗೆ ಹುಳ ಬಿಡುವ ಪ್ರಶ್ನೆಗಳು.

ಇವೆಲ್ಲವೂ ವಿಭಿನ್ನವಾಗಿ ಆಲೋಚಿಸಲು ಪ್ರಚೋದಕ. ಈ ತಲೆ ತಿನ್ನುವ ವಿಷಯದತ್ತ ಗಂಭೀರವಾಗಿ ಆಲೋಚಿಸೋಣ.

ಒಂದು ಜೀವಂತ ಮರ ಅಂದುಕೊಳ್ಳೋಣ... ಅದಕ್ಕೆ ಹುಳುಕು ಹಿಡಿದಾಗ ಆ ಗೆದ್ದಲ ಹುಳಗಳು ಮರದ ಒಳಗೆ ಸೇರಿಕೊಂಡು ಒಳಗೊಳಗೇ ತಿನ್ನುತ್ತಾ ಮರವನ್ನು ಟೊಳ್ಳಾಗಿಸುತ್ತದೆ. ಆದರೆ ಮರಕುಟಿಗ ಮರವನ್ನು ಹೊರಗಿನಿಂದ ಕುಕ್ಕುತ್ತಾ ಟೊಳ್ಳಾಗಿಸುತ್ತದೆ. ಎರಡೂ ಕ್ರಿಯೆಯಿಂದ ಮರ ಅಥವಾ ಮರದ ರೆಂಬೆಕೊಂಬೆ ಉದುರೋದು ಖಚಿತ.

ಒಳಗೇ ಕೊಲ್ಲುವ ಖಿನ್ನತೆಯನ್ನು ಮನದ ಒಳಗೆ ಕೂತು ಕೊಲ್ಲುವ ಹುಳಕ್ಕೆ ಹೋಲಿಸಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕರ್ಣ. ಹೊರಗಿನಿಂದ ಒಂದೇ ಸಮನೆ ಕೊರೆಯುತ್ತಾ ಟೊಳ್ಳಾಗಿಸುವುದನ್ನು, ನಮ್ಮ ಬುದ್ಧಿಯನ್ನೇ ಅವರಿಗೆ ಬಿಟ್ಟುಕೊಟ್ಟು ನಾವು ಅವರಾಡಿಸುವ ಸೂತ್ರದ ಬೊಂಬೆಯಾಗುವುದನ್ನು ಮರಕುಟಿಗದ ವಿಚಾರಕ್ಕೆ ಹೋಲಿಸಬಹುದು. ಈ ವಿಷಯಕ್ಕೆ ಉತ್ತಮ ಉದಾಹರಣೆ ಎಂದರೆ ಶಕುನಿ-ದುರ್ಯೋಧನ.

ದಿನನಿತ್ಯದ ಜೀವನದಲ್ಲಿ ಕೆಲವಾರು ವಿಚಾರಗಳು ನಮ್ಮ ಮನವನ್ನು ಮುತ್ತಿ ಕಾಡಿಸುತ್ತಾ ಇರುತ್ತದೆ. ಎಲ್ಲಾ ವಿಚಾರಗಳೂ ಸೀರಿಯಸ್ ಆಗಿ ಕಾಡಿಸಲೇಬೇಕು ಅಂತೇನಿಲ್ಲ. ಒಂದು ಚಿಕ್ಕ ಉದಾಹರಣೆಯನ್ನೇ ತೆಗೆದುಕೊಂಡರೆ ಎಲ್ಲೋ ಒಂದು ಕಡೆ ಯಾವುದೋ ಹಾಡಿನ ಟ್ಯೂನ್ ಕೇಳಿತು ಅಂದಾಗ, ಅದು ನಮಗೆ ಅರಿವಿರುವ ಹಾಡೇ ಆಗಿದ್ದರೆ, ಆ ಹಾಡು ಯಾವುದು ಎಂದು ತಿಳಿಯೋ ತನಕ ಅದೇ ಗುನುಗು ಮನವನ್ನು ಮುತ್ತಿ ಕಾಡುತ್ತಿರುತ್ತದೆ.

ಹಲವೊಮ್ಮೆ ವಿಚಾರಗಳು ಅತೀ ಗಂಭೀರವೂ ಆಗಿರಬಹುದು. ಒಂದು ಸಾವು ಅಥವಾ ನೋವು ಅಥವಾ ಹಣಕಾಸಿನ ವ್ಯವಹಾರ ಅಥವಾ ಗಂಭೀರ ಅನಾರೋಗ್ಯ, ಒಂದು ಮನೆಯ ಪರಿಸ್ಥಿತಿಯನ್ನೇ 'ಮುಂದೇನು?' ಎಂಬ ಚಿಂತೆಗೆ ನೂಕಬಹುದು. ಇವು ಹೊರಗಿನವರ ಕಣ್ಣಿಗೆ ಕಾಣೋದಕ್ಕಿಂತ ಒಳಗೇ ಬಾಧಿಸುತ್ತಾ ಇರುತ್ತದೆ. ಇಂಥ ಆಲೋಚನೆಗಳು ನಿಂತರೆ, ಕೂತರೆ ಬಾಧಿಸುವುದಷ್ಟೇ ಅಲ್ಲದೇ ಹಲವೊಮ್ಮೆ ಊಟ ತಿಂಡಿಯನ್ನೂ ಮರೆಸಿ, ನಿದ್ರೆಯನ್ನೂ ಕಿತ್ತುಕೊಳ್ಳುತ್ತದೆ. ಒಂದೇ ಮಾತಿನಲ್ಲಿ ಹೇಳಬಹುದು ಎಂದರೆ ಇಂಥ ಚಿಂತೆಗಳು ಯಾರಲ್ಲಿರುತ್ತದೋ ಅವರ ಬುದ್ಧಿಯನ್ನೇ ತಮ್ಮ ವಶಕ್ಕೆ ತೆಗೆದುಕೊಂಡು ಆಡಿಸಲೂ ತೊಡಗುತ್ತದೆ. ಅಂಥ ವ್ಯಕ್ತಿ ಆತ್ಮಹತ್ಯೆಗೆ ಆಲೋಚಿಸಿದರೂ ಅಚ್ಚರಿಯೇನಿಲ್ಲ.

ತಲೆಗೆ ಹುಳ ಎಂಬ ವಿಚಾರವನ್ನು ಯಥಾವತ್ತಾಗಿ ತೆಗೆದುಕೊಂಡಾಗ tapeworm ಬಗ್ಗೆ ತಿಳಿದುಕೊಳ್ಳಬೇಕು. ಕೆಲವು ಆಹಾರ ಪದ್ಧತಿಗಳಿಂದಾಗಿ ಇಂಥ tapeworm ನಮ್ಮ ದೇಹದೊಳಗೆ ಸೇರಿದಾಗ, ಅವು ಅಲ್ಲೇ ಮೊಟ್ಟೆಗಳನ್ನು ಇಟ್ಟು ಬೆಳೆದು ಸೀದಾ ಮೆದುಳನ್ನೇ ಆಕ್ರಮಿಸಿಕೊಳ್ಳುತ್ತದೆ. ಇದರ ವಿಷಯ ತೀರಾ ವಿಸ್ತಾರವಾಗಿ ಬೇಡಬಿಡಿ.

ಅತ್ಯಂತ ಬುದ್ಧಿಶಾಲಿ ಮೆದುಳು ತುಂಬಾ ಅಮಾಯಕ. ನಾವೇನು ವಿಷಯ ತುಂಬಿದರೂ ಮೆದುಳು ತುಂಬಿಕೊಳ್ಳುತ್ತೆ. ಅದರ ಹೊಟ್ಟೆ ತುಂಬಾ ದೊಡ್ಡದು. ಒಳಿತನ್ನೇ ತುಂಬಿಕೊಂಡು ಆಗಾಗ ಆಲೋಚಿಸಿದರೆ ಕನಸಿನಲ್ಲೂ, ನಿದ್ದೆಯಲ್ಲೂ ಅಂಥ ಆಲೋಚನೆಗಳೇ ಮೂಡಿಬರುತ್ತದೆ. ಅದರಂತೆಯೇ ಕೆಡುಕು ಆಲೋಚನೆಗಳನ್ನೂ ಬಿತ್ತರಿಸುವ ಮೆದುಳಿಗೆ ತಾರತಮ್ಯವಿಲ್ಲ.

ಹೀಗಿರುವಾಗ ಕೆಟ್ಟಬುದ್ಧಿ ಅನ್ನುವ ಮಾತಲ್ಲಿ ಹುರುಳಿಲ್ಲ ಅಂತಾಯ್ತು. ರಕ್ತವನ್ನು ದೇಹದ ಎಲ್ಲೆಡೆ ಹಂಚುವ ಹೃದಯಕ್ಕೆ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಆದರೂ ಭಾವನೆಗಳು ಹುಟ್ಟೋದು ಹೃದಯದಲ್ಲಂತೆ. ಈ ಹೃದಯಕ್ಕೂ ಕೆಟ್ಟದ್ದು ಒಳ್ಳೆಯದು ಎಂಬ ವಿಷಯವೇ ಗೊತ್ತಿಲ್ಲ. ಹಾಗಿದ್ದ ಮೇಲೆ ಒಬ್ಬ ವ್ಯಕ್ತಿ ಕೆಟ್ಟವನು ಅಥವಾ ಒಳ್ಳೆಯವನು ಅಂದಾಗ ಅದಕ್ಕೆ ಕಾರಣವೇನು? ಆಲೋಚಿಸಿ ಹೇಳಿ, ಆಯ್ತಾ?

ಚಿಂತೆಯ ಹುಳ ಮನಸ್ಸನ್ನು ಕೊರೆದು ದೇಹವನ್ನೇ ಹಾಳುಗೆಡವುತ್ತದೆ. ಕಾಯಿಲೆಗಳ ಗೂಡನ್ನಾಗಿಸುತ್ತದೆ. ಆದರೆ ಚಿಂತನೆಯ ಹುಳ ನಿಮ್ಮನ್ನು ತೇಜೋಮಯಿಯನ್ನಾಗಿಸುತ್ತದೆ. ನಮ್ಮ ತಲೆಗೆ ಚಿಂತನೆಯ ಹುಳ ಬಿಟ್ಟುಕೊಳ್ಳೋಣ. ಏನಂತೀರಿ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+