ಬೇಸರದ ಮನಸ್ಸಿಗೆ ಕೊಂಡಮಾಮನ ಪಲುಕಿನ ತಂಪು

ದನಗಳನ್ನು ಮೇಯಲು ಬಿಟ್ಟು, ಹೊಲವನ್ನು ಒಂದು ಸುತ್ತು ಹಾಕಿ ಬಂದ ನರಸಿಂಗರಾಯನ ಬೇಸರ, ನಿರಾಸೆ ಹಿಡಿದಿದ್ದ ಮನಸ್ಸಿಗೆ ರಾಗಿ ಪೈರಿನ ತುಂಬು ಹಸಿರು ಕೊಂಚ ಸಾಂತ್ವನ ನೀಡಿತು. 'ಹುತ್ತಗಳಿಗೆ ಮಳೆ ನೀರು ಹರಿಸಿದರೆ ಅಂರ್ಜಲ ಹೆಚ್ಚುತ್ತೆ' ಎಂದು ಚಾಗನೂರಿನ ಭೂ ಹೋರಾಟದ ರೈತನಾಯಕ ಮಲ್ಲಿಕಾರ್ಜುನರೆಡ್ಡಿ ಕೊಟ್ಟ ಹೇಳಿಕೆ ನೆನಪಾಗಿ, ಸನಿಕೆ ಹಿಡಿದು ಹುತ್ತಕ್ಕೆ ಕಾಲುವೆ ತೆಗೆದ.

ನಾಗಿಣಿ, ಮಾತಂಗಿ ನೆನಪಾದರು. ಹೋದೆನೆಂದಿದ್ದ ಬೇಸರ ಮರುಕಳಿಸಿತು. ತಂದಿದ್ದ ತಂಗಳಗಂಟು ಬಿಚ್ಚುವ ಮನಸ್ಸಾಗಲಿಲ್ಲ. ಹೊಂಗೆ ಮರದಡಿ ಕುಳಿತ. ತನ್ನ ತಲೆಯಲ್ಲೆಲ್ಲೋ 'ಪರಕೆಸುಳಿ' ಇರಬೇಕು. ಆದುದರಿಂದಲೇ ಹೆಣ್ಣು ನನಗೆ ಆಗಿಬರುತ್ತಿಲ್ಲ. ಅಮ್ಮನ ಮುಂದೆ ತಲೆಯಿಟ್ಟು, ಆ ಸುಳಿ ಇದೆಯೇನೊ ನೋಡೆಂದು ಹೇಳಬೇಕೆಂದುಕೊಂಡ.

'ಸ್ವಾಮಿ, ಹಸಿವು. ತಿನ್ನಲು ಏನಾದರೂ ಇದೆಯಾ?' ಧ್ವನಿ ಕೇಳಿ ತಲೆ ಎತ್ತಿದ. ಎದುರಲ್ಲಿ 'ಕೊಂಡಮಾಮ' ನಿಂತಿದ್ದ. ಉಣ್ಣಲು ಒಬ್ಬ ಜೊತೆಯಾದನಲ್ಲ ಎಂದು ಗಂಟು ಬಿಚ್ಚಿ, ದೊಡ್ಡ ಮುದ್ದೆಯಲ್ಲಿ ಅರ್ಧ ಮುರಿದು 'ಗೊಡ್ಡುಕಾರ'ವನ್ನು (ಹುಣಿಸೆಹಣ್ಣಿಗೆ ಈರುಳ್ಳಿ, ಬೆಳ್ಳುಳ್ಳಿ, ಜೀರಿಗೆ ಹಾಕಿ ಅರೆದ ಕಾರವಾದ ಚಟ್ನಿ) ಅದರ ಮೇಲೆ ಹಾಕಿ ಕೊಟ್ಟ.

Kannada Romantic Stories: Narasingaraya Future Prediction By Kondamama

ಅವನು ಅದನ್ನು ಎಡ ಅಂಗೈಯಲ್ಲಿಟ್ಟು ತಿನ್ನತೊಡಗಿದ. ಇವನೂ ಹಾಗೆಯೇ ತಿಂದ. ಬಾಟಲಿಯಲ್ಲಿದ್ದ ನೀರುಮಜ್ಜಿಗೆಯನ್ನು ಇಬ್ಬರೂ ಕುಡಿದರು. ಅವನು ಕುಂಟೆಗೆ ಹೋಗಿ ಕೈ ತೊಳೆದು ಬಂದ. ನೀರನ್ನು ಮರೆತು ಬಂದುದು ನೆನಪಾಯಿತು. ಕೊಂಡಮಾಮ ಜೋಳಿಗೆಯಿಂದ ನೀರಿನ ಬಾಟಲು ತೆಗೆದು ಕುಡಿಯುತ್ತಿದ್ದ. ಇವನೂ ಇಸಿದುಕೊಂಡು ಕುಡಿದ.

ಊರು- ಕೇರಿಯ ಮಾತುಗಳಾದ ಮೇಲೆ 'ಅನ್ನಮಿಚ್ಚಾವು ತಂಡ್ರಿ. ನಾಕು ತೋಚಿನಂತ ಶಾಸ್ತ್ರಮು ಸೆಪ್ಪಿ ರುಣಮು ತೀರ್ಚಾಲನಿ ಮದುರ ಮೀನಾಕ್ಷಿ ಆನ' (ಅನ್ನ ಕೊಟ್ಟೆ ತಂದೆ. ನನಗೆ ತೋಚಿದಷ್ಟು ಶಾಸ್ತ್ರ ಹೇಳಿ ಋಣ ತೀರಿಸಬೇಕೆಂದು ಮದುರ ಮೀನಾಕ್ಷಿ ಆಣೆ) ಎಂದು ಕೇಳಿಕೊಂಡ.

ಎಡಗೈಲಿ ತಂಬೂರಿ ಹಿಡಿದು ಟಿಂಗ್ ಟಿಂಗ್ ಎಂದು ಬಾರಿಸುತ್ತ, 'ಕುರ್ರುಮಾಮಾ ಕುರುಕುರು ಮಾಮಾ, ಕೊಂಡದೇವರ ರಾರಾ ಮಾಮಾ...' ಎಂದು ಹಾಡುತ್ತ, 'ಮನೆಯ ವಿಚಾರ, ಮನದ ವಿಚಾರ, ಮಗುವ (ಹೆಣ್ಣಿನ) ವಿಚಾರ, ಪ್ರೀತಿ ವಿಚಾರ, ಬಾವಿ ವಿಚಾರ, ನೀರು ವಿಚಾರ ... ಹೇಳುವೆ ಕೇಳು.

ಕುರ್ರುಮಮಾ ಕುರುಕುರು ಮಾಮಾ, ಬಂದ ಹೆಣ್ಣುಗಳ ಬಿಟ್ಟಿಯೊ ತಮ್ಮ, ಬರದ ಹೆಣ್ಣನು ಬಯಸಿದೆ ತಮ್ಮ... ನಿಜವೊ ಸುಳ್ಳೊ ಹೇಳೊ ಗುರುವೆ... ನಿನ್ನ ಮನೆಯ ದೇವಮೂಲೆಗೆ ಕಿವಿಯನ್ನು ಇಟ್ಟು ಕೇಳೋ ಗುರುವೆ. ಹಲ್ಲಿ ನುಡಿಯುವುದು ಒಳ್ಳೆಯ ಶಕುನ. ಕೋರಿದ ಕೋರಿಕೆ ಹಣ್ಣಾಗುವುದು. ಅಲಮೇಲುಮಂಗ ವೆಂಕಟರಮಣ ಕಾಣುತಿರುವರೊ ತಂದೆ. ಶ್ರಾವಣದಲ್ಲಿ ತಿರುಪತಿ ಯಾತ್ರೆ ಮಾಡಿಬಾರೊ ಗುರುವೆ. ಕಲ್ಯಾಣದ ಯೋಗ ಆಗುವುದಪ್ಪ. ಮಾರಾಜನ ಕೈ ನಿನಗಿದೆ ತಂದೆ. ಯಾರಿಗೂ ತೋರಿಸಬೇಡ ಗುರುವೆ... ಎಂದು ನುಡಿದ.

'ಜೇಬುಲೊ ಚೆಯ್ಯಿ ಯೇಯರ ಗುರುಡ. ಮದುರ ಮೀನಾಕ್ಷಮ್ಮ ಮಂಚಿದಿ ಸೇಸ್ತದಿ' (ಕಿಸೆಯಲಿ ಕೈಯಿ ಹಾಕೋ ಗುರುವೆ. ಮದುರೆ ಮೀನಾಕ್ಷಮ್ಮ ಒಳ್ಳೆಯದು ಮಾಡುವಳು) ಅಂದ. ನರಸಿಂಗರಾಯ ನಗುತ್ತ ಐದರ ನೋಟು ಕೊಟ್ಟ.

ಕೊಂಡಮಾಮನ ಹಿತದ ನುಡಿಗಳೋ, ಅದರಿಂದ ಹುಟ್ಟಿದ ಭರವಸೆಯೋ ನರಸಿಂಗರಾಯನ ಮನಸ್ಸು ಹಗುರಾಯಿತು. ಮನೆಗೆ ಹೋಗೋಣವೆಂಬಂತೆ ದನಗಳು ಹೊಂಗೆ ಮರದಡಿಗೆ ಬಂದವು. ಗಿಳಿಗಳೆರಡು ಬಂದು ಪೊಟರೆ ಸೇರಿದನ್ನು ಕಂಡು, ಅಪ್ಪಯ್ಯ ನಳ- ದಮಯಂತಿ ನಾಟಕಕ್ಕೆ ಬರೆದಿದ್ದ ಮಟ್ಟು ಕೊರಳಿಗೆ ಬಂದಿತು,

ಆಲಿಪುದೌ ಕಾಂತೇ ಚಾರುಚರಿತೆ

ತೊರೆ ಕಾನನ ವಾಸದ ಚಿಂತೆ

ಕಾವುದೆಮ್ಮನು ವರಕಾಂತೆ

ಪಾಡುತಲಿರೆ ಹರಿಚರಿತೆ ||ಆಲಿಪುದೌ||

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+