Get Updates
Get notified of breaking news, exclusive insights, and must-see stories!

ಸ ರಘುನಾಥ ಅಂಕಣ; ಸೋಮೇಶನ ಸಾವಿನ ನಂತರ ಮತ್ತೆ ನಾಟಕದ ಮಾತು

ಸೂತಕ ಕಳೆದ ಮೇಲೆ ಮನೆಗೆ ಪುಣೋಜನ (ಪುಣ್ಯಜಲ ಸಂಪ್ರೋಕ್ಷಣೆ ಕಾರ್ಯ) ಮಾಡಿಸಿ, ಮಡದಿಯೊಂದಿಗೆ ಬೀರಣ್ಣ ತಿರುಪತಿಗೆ ಹೋಗಿ ಬಂದ. ದೀಪದ ಮುಡಿಸುವ ಹೊತ್ತಿನವರೆಗೆ ಗೋಪಾಲಸ್ವಾಮಿ ಗುಡಿಯ ಹೊರಗಿದ್ದು, ಪೂಜೆ ಮಾಡಿಸಿ ಮನೆಗೆ ಹೋಗಿ ದೀಪದರ್ಶನ ಮಾಡಿದ.

Recommended Video

      India ಹಾಗು China ನಡುವೆ ಶಾಂತಿ ಬೇಕೆಂದ Trump | Oneindia Kannada

      ಇದಾದ ತಿಂಗಳಿಗೆ ಊರಿನಲ್ಲಿ ನಾಟಕದ ಮಾತು ಹುಟ್ಟಿತು. ಚಲ್ಲಾಪರಮ್ಮನ ಗುಡಿಯ ಮುಂದೆ ಸಭೆ ನೆರೆಯಿತು. ಅಮ್ಮನಿಗೆ ಪೂಜೆ ಮಾಡಿ ಬಂದ ಶೇಷಪ್ಪ ಮಾತು ತೆಗೆದ. ಆಗಬಾರದ್ದು ಆಗಿ ಹೋಯ್ತು. ಬೀರಣ್ಣನ ದುಃಖದಲ್ಲಿ ಊರೇ ಪಾಲ್ಗೊಂಡಿತು.

      ಅಮ್ಮನು ಹೀಗೇಕೆ ಮಾಡಿದಳೋ ತಿಳಿಯದು. ಈ ನೆಲದ ಅಕ್ಕಿಕಾಳು ಸೋಮೇಶನಿಗೆ ತೀರಿತೇನೊ ಕರೆದುಕೊಂಡು ಬಿಟ್ಟಳು. ಈ ನೆಲದ ಮೇಲಿನ ಋಣ ತೀರಿದ ಮೇಲೆ ಶ್ರೀರಾಮಚಂದ್ರನೇ ಇರಲಿಲ್ಲ ಅಂದ ಮೇಲೆ ನಾವೇನು? ನೋವೇನಪ್ಪ ಅಂದ್ರೆ ಸಣ್ಣ ವಯಸ್ಸಿನಲ್ಲೇ ಹೋಗಿಬಿಟ್ಟಿದ್ದು. ಬೀರಣ್ಣ ತಿಮ್ಮಪ್ಪನ ದರ್ಶನ ಮಾಡಿ ಬಂದಿದ್ದಾನೆ. ಅವನಿಗೇ ಅಲ್ಲ ಊರಿಗೇ ಒಳ್ಳೆಯದಾಗುತ್ತೆ ಎಂದು ಹೇಳಿ ಸಭೆಗೆ ನಿಟ್ಟುಸಿರು ತಂದ. ಇದರ ಬೆನ್ನಲ್ಲೆ ನಾರಾಯಣಪ್ಪ, ಎಲ್ಲ ಸರಿಹೋಗಿದ್ದರೆ ನಾಟಕದ ತಾಲೀಮು ನಡೀಬೇಕಿತ್ತು. ಊರಿನ ಅದೃಷ್ಟ ನೆಟ್ಟಗಿರಲಿಲ್ಲ ಅಂದುಕೊಬೇಕು. ಏನೋ ಆಗೋಯ್ತು ಬಿಡಿ. ಈಗ ನಾಟಕ ಆಡೋದ ಬಿಡೋದ ಅನ್ನೊ ಮಾತು ನಡೀಲಿ ಅಂದ.

      After Somesha Death Incident Village People Gathered To Discuss About Drama

      ಅಪ್ಪಯ್ಯ, ದುಗ್ಗಪ್ಪ, ಮೋಟಪ್ಪ, ನರಸಿಂಗರಾಯನಾದಿಯಾಗಿ ಮುಖ್ಯರೆಲ್ಲ ಜನ ಏನು ಹೇಳುವರೋ ನೋಡೋಣ. ಅದರಲ್ಲೂ ಮುಖ್ಯವಾಗಿ ಬೀರಣ್ಣ ಏನು ಹೇಳುತ್ತಾನೊ ಕಾಯೋಣ ಎಂದು ಮೌನವಹಿಸಿ ಕುಳಿತರು. ಜನರ ಗುಸುಗುಸುವಿನಲ್ಲಿ ಚರ್ಚೆ ಸಾಗಿತು. ಮುನಿಕೃಷ್ಣಪ್ಪ ತನ್ನ ಮಾತು ಎಲ್ಲರಿಗೂ ಕೇಳಿಸಲಿ ಅನ್ನುವುದಕ್ಕಿಂತ, ತಾನು ಎಲ್ಲರಿಗೂ ಕಾಣಬೇಕೆಂಬ ಇರಾದೆಯಲ್ಲಿ ಎದ್ದು ನಿಂತು, ಅಂದುಕೊಂಡಿದ್ದಾಗಿದೆ. ನಿಲ್ಲಿಸೋದು ಬೇಡೆಂಬೋದು ಇಲ್ಲಿನ ಮಾತು ಅಂದ.

      ಬೀರಣ್ಣ ಏನು ಹೇಳುತ್ತಾನೊ ಕೇಳೋಣ ಎಂದು ಅಪ್ಪಯ್ಯ ಹೇಳಿದ. ಆ ಮಾತಿಗೆ ಬೀರಣ್ಣ, ಹತ್ತು ಜನದ ಮಾತೇ ನನ್ನದು. ಆಡಿದಂತೆ ನಾನು ದುಡ್ಡು ಕೊಡುತ್ತೇನೆ. ಸೋಮೇಶನ ಸಾವು, ಕ್ರಿಯೆಗಳಿಗೆ ಖರ್ಚಾಗಿ ಕೈ ಖಾಲಿ ಇದೆ. ಜಮಾಯಿಂಪು ನಡೆಯುವಾಗಲೇ ಕೊಡುತ್ತೇನೆ ಅಂದ. ಅದಕ್ಕೆ ಮೋಟಪ್ಪ, ದುಡ್ಡಿನ ಮಾತು ಪಕ್ಕಕ್ಕಿರಲಿ ಬೀರಣ್ಣ. ನಾಟಕ ಆಡೋದಾ ಅನ್ನೋದೆ ಮಾತು. ಅದನ್ನು ಹೇಳು ಅಂದ. ಆಗಲೆ ಹೇಳಿದೆನಲ್ಲ, ಹತ್ತು ಜನರ ಮಾತಿಗೆ ಕಟ್ಟು ಬೀಳುತೀನಂತ. ಇನ್ನೇನು ಅಂದ.

      ಕುಳ್ಳಪ್ಪ ಕುಳಿತಲ್ಲಿಂದಲೆ, ಶೇಷಪ್ಪ ದುಮೂತ್ರ ಇಟ್ಟನೇನೊ?ಅದಕೆ ಹಿಂಗಾಯ್ತು. ಈ ಸಲ ಒಳ್ಳೆ ಮೂತ್ರ ಇಡು ಅಂದ. ಶೇಷಪ್ಪನಿಗೆ ರೇಗಿತು. ಲೇ ಪಾಪಿ ನಾಲಗೆಯೋನೆ, ಮೂತ್ರ ಅಲ್ಲೊ ಅದು ಮುಹೂರ್ತ. ಮೂತ್ರ ಅಂದ್ರೆ ಉಚ್ಚೆನೊ ಸೊಟ್ಟ ನಾಲಿಗೆಯೋನೆ. ನಾನು ಇಟ್ಟ ಮುಹೂರ್ತ ಒಳ್ಳೇದೆ. ದುರದೃಷ್ಟ ಅಷ್ಟೆ ಎಂದು ಸಿಡುಕಿದ. ಅವನ ಸಿಡುಕು, ಕುಳ್ಳಪ್ಪ ಹೇಳಿದ ದುಮೂತ್ರದ ಅರ್ಥ ತಿಳಿದಿದ್ದರಿಂದ ಜನ ಬಹಳ ಹೊತ್ತು ನಗೆಯಲ್ಲಿದ್ದರು. ಯಾರೋ ಹಿಂದಿದ್ದವರು ಮೂತ್ರ ಕುಳ್ಳಪ್ಪ ಆಯ್ತಲ್ಲ ಕುಂತ್ಕೊ ಎಂದು ರೇಗಿಸಿದರು. ನಾನೂ ಸದುವಿದ್ರೆ (ಓದಿದ್ದರೆ) ಸರಿಯಾಗೆ ಅಂತಿದ್ದೆ. ಮುಚ್ಕಳಲೇ ಅಂದು ಕುಳಿತುಕೊಂಡ. ಇದರಿಂದ ಜಗಳ ನಿರೀಕ್ಷಿಸಿದ್ದವರಿಗೆ ನಿರಾಸೆಯಾಯಿತು.

      ಈಗ ದುಗ್ಗಪ್ಪ ಮಾತು ತೆಗೆದುಕೊಂಡ. ನನ್ನ ಮಾತೇನಪ್ಪಾ ಅಂದ್ರೆ, ಯಾಕೊ ಈ ಸಲ ಕಾಲ ಕೂಡಿಬರಲಿಲ್ಲ ಅನ್ನಿಸುತ್ತೆ. ಈ ವರ್ಷ ನಾಟಕ ಬೇಡ. ಮುಂದಿನ ಮಳೆಗಾಲಕ್ಕೆ ಮುಂಚೆ ಇಟ್ಟುಕೊಳ್ಳಾಣ. ನಾಟಕಕ್ಕೆ ಬದಲು ಗೋಪಾಲಸ್ವಾಮಿ ಗುಡೀಲಿ ಮೂರು ದಿನ ಭಜನೆ ನಡೀಲಿ. ಊರಿಗೆ ಬೇಕಾದೋನು ಬೀರಣ್ಣ. ಅವನು ಪುತ್ರಶೋಕದಲ್ಲಿರೋವಾಗ ನಾವು ನಾಟಕ ಆಡೋದು ಸರಿ ಕಾಣಲ್ಲ... ಇದು ನಿಮಗೆಲ್ಲ ಇಷ್ಟ ಆಗದಿದ್ದರೆ ನಿಮ್ಮಿಷ್ಟ ಬಂದಂತಾಗಲಿ ಅಂದ.

      ಈ ಮಾತು ಬೀರಣ್ಣನಿಗೆ ಒಪ್ಪಿಗೆಯಾದುದು ಅವನ ಮುಖದಲ್ಲಿ ಅಪ್ಪಯ್ಯ ಗುರುತಿಸಿದ. ಅದನ್ನೇ ಮೋಟಪ್ಪನಿಗೆ ಹೇಳಿದ್ದು ಮುನೆಕ್ಕನಿಗೆ ಕೇಳಿಸಿತು. ದುಗ್ಗಪ್ಪಣ್ಣ ಹೇಳಿದ್ದು ಸರಿ. ಈ ವರ್ಷ ನಾಟಕ ಬೇಡ ಅಂದಳು. ಬೀರಣ್ಣ ಎದ್ದು ನಿಂತು, ಭಜನೆ ನಡೀಲಿ. ಕಡೇದಿನ ಊರೂಟ ನನ್ನದಿರಲಿ ಅಂದ. ಇದಕ್ಕೆ ಮರುಮಾತು ಬರಲಿಲ್ಲ. ಮುಂದಿನ ಶನಿವಾರದಿಂದ ಸೋಮವಾರ ಸಾಯಂಕಾಲದವರೆಗೆ ಭಜನೆ ಮಾಡಲು ಒಪ್ಪಿಗೆ ಸಿಕ್ಕಿತು. ಶೇಷಪ್ಪ ಜೈ ಗೋಪಾಲಸ್ವಾಮಿ ಪಾದಾರವಿಂದ ಗೋವಿಂದಾ, ಚಲ್ಲಾಪುರಮ್ಮ ಪಾದಾಲ ಗೋವಿಂದಾ, ನಮಹ್ ಪಾರ್ವತೀಪತೆಯೇ ಹರಹರ ಮಹದೇವ ಎಂದು ಕೂಗಿದ. ಜನ ಧ್ವನಿಗೂಡಿಸಿ ಮನೆಗಳತ್ತ ನಡೆದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+