ಕ್ಯಾರೆಕ್ಟರ್ ಸರೀಯಿದಿಯಾ ಅಂತ ಕೇಳ್ತೀರಾ?
ಅವಳ ಹೆಸರು ಸಂಪಿಗೆ. ಬೆಂಗಳೂರಿನ ತ್ಯಾಗರಾಜನಗರದಲ್ಲಿ ಶಾಸ್ತ್ರಿ ಬೇಕರಿ ಇದೆಯಲ್ಲ? ಆ ಏರಿಯಾದಲ್ಲೇ ಅವಳ ಮನೆಯಿದೆ. ಹುಡುಗಿ, ಹೆಸರಿಗೆ ತಕ್ಕ ಹಾಗೆ ಹೂವಿನಂಥವಳು. ಆ ಕಡೆಗೆ ಕೆಂಪೂ ಅಲ್ಲ, ಇತ್ಲಾಗೆ ಕಪ್ಪೂ ಅಲ್ಲ ಎಂಬಂಥ ಮೈಬಣ್ಣ. ಗೋದಿ ಕಲರ್ರು ಅಂತಾರಲ್ಲ ಸಾರ್? ಹಾಗಿದಾಳೆ ಹುಡುಗಿ. ಅವಳಿಗೆ ಸಂಪಿಗೆ ಅಂತ ಹೆಸರು ಕಟ್ಟಿದ್ದಕ್ಕೂ ಒಂದು ಬೊಂಬಾಟ್ ಕತೇನೇ ಇದೆ.
ಅಂಕಣಕಾರ : ಎ.ಆರ್. ಮಣಿಕಾಂತ್
ಏನೆಂದರೆ, ಬರಾಬರ್ ಇಪ್ಪತ್ನಾಲ್ಕು ವರ್ಷದ ಹಿಂದೆ ಈ ಹುಡುಗಿ ಗೋರಿಪಾಳ್ಯದ ಕಾರ್ಪೊರೇಷನ್ ಆಸ್ಪತ್ರೇಲಿ ಹುಟ್ಟಿದ್ದಂತೆ. ಕಾರ್ಪೊರೇಷನ್ ಆಸ್ಪತ್ರೆ ಅಂದ್ಮೇಲೆ ಕೇಳ್ಬೇಕಾ ಸಾರ್? ಕೊಳಕೂ ಅಂದ್ರೆ ಕೊಳಕು. ಆಗಷ್ಟೇ ಹುಟ್ಟಿದ ಮಗೂಗೆ ಸ್ನಾನ ಮಾಡಿಸೋಣ ಅಂದ್ರೂ ಅವತ್ತು ನೀರು ಸಿಗಲಿಲ್ವಂತೆ. ಇದರಿಂದ ತುಂಬ ಬೇಜಾರು ಮಾಡಿಕೊಂಡ ಈ ಹುಡುಗಿಯ ಅಜ್ಜಿ, ನರ್ಸ್ಗಳಿಗೆ ಚೆನ್ನಾಗಿ ಬಯ್ದು, ಗ್ರಹಚಾರ ಬಿಡಿಸಿ, ಸುಸ್ತಾಗಿದ್ದ ಮಗಳಿಗೆ 'ಈಗ ಬಂದೆ" ಎಂದು ಹೇಳಿದವಳೇ- ಆ ಎಳೆಎಳೇ ಕಂದಮ್ಮನನ್ನು ಆಟೊದಲ್ಲಿಟ್ಕೊಂಡು ಸೀದಾ ತ್ಯಾಗರಾಜನಗರದ ಮನೆಗೆ ಬಂದಳಂತೆ. ಅಲ್ಲಿ ಬಿಸಿ ನೀರು ಕಾಯಿಸಿ, ಲೈಫ್ಬಾಯ್ ಸೋಪು ಹಾಕಿ, ಸ್ನಾನ ಮಾಡಿಸಿ, ಜೋಗುಳ ಹಾಡಿ, ಹರಳೆಣ್ಣೆ ತೀಡಿ, ಮೂಗನ್ನು ಉದ್ದಕ್ಕೆ ಒಂಚೂರು ಎಳೆದು, ಧೂಪದ ಹೊಗೆ ಹಾಕಿ, ಮೈತುಂಬಾ ಪಾಂಡ್ಸ್ ಪೌಡರು ಹಚ್ಚಿ, ಮತ್ತೆ ಆಟೊ ಹಿಡಿದು ಆಸ್ಪತ್ರೆಗೆ ಬಂದಳಂತೆ.
ಅವಾಗಷ್ಟೇ ಡ್ಯೂಟಿಗೆ ಬಂದ ಡಾಕ್ಟರು, ಈ ಘಂಘಮಾ ಅನ್ನುತ್ತಿದ್ದ ಮಗೂನ ನೋಡಿ "ಅಲಲಲೆ, ಒಳ್ಳೇ ಸಂಪಿಗೆ ಹೂವಿನ ಥರಾ ಘಮ ಘಮಾ ಅಂತಿದೆಯಲ್ರಿ ಮಗೂ? ಬಣ್ಣಾನೂ ಸಂಪಿಗೆ ಹೂವಿನ ಥರಾನೇ ಇದೆ. ಹೆಸರು ಕಟ್ಟೋದಾದ್ರೆ ಸಂಪಿಗೆ ಅಂತಾನೇ ಕಟ್ಟಿ" ಅಂದರಂತೆ! ಡಾಕ್ಟರೇ ಹೇಳಿದ ಮಾತು ಅಂದಮೇಲೆ 'ಉಹುಂ" ಅನ್ನೋದುಂಟಾ? ಈ ಹುಡುಗಿಯ ಮನೆಮಂದಿ, ಆ ಕಾರ್ಪೊರೇಷನ್ ಆಸ್ಪತ್ರೇಲಿ ನಿಂತೇ, ಅಲ್ಲಿಂದಾನೇ ಮನೆ ದೇವ್ರಿಗೆ ಕೈ ಮುಗಿದು, ಇವಳಿಗೆ 'ಸಂಪಿಗೆ" ಅಂತಾನೇ ಹೆಸರಿಟ್ಟರಂತೆ.
ಹಾಗಂತ, ಈ ಸಂಪಿಗೆ ಬಡವರ ಮನೆಯ ಹುಡುಗಿಯೇನಲ್ಲ ಸಾರ್. ಮಧ್ಯಮ ವರ್ಗ ಅಂತಾರಲ್ಲ? ಆ ಗುಂಪಿಗೆ ಸೇರಿದ ಫ್ಯಾಮಿಲಿ ಅವಳದು. ಅವಳ ತಂದೆಗೆ ಪಿಡಬ್ಲ್ಯುಡಿನಲ್ಲಿ ಗುಮಾಸ್ತರ ಕೆಲಸವಿತ್ತು. ಸಂಬಳದಷ್ಟೇ ಗಿಂಬಳವೂ ಸಿಗ್ತಿತ್ತು. ಯಾವಾಗ್ಲೂ ಕೈ ತುಂಬಾ ದುಡ್ಡು ಇರ್ತಿತ್ತು ನೋಡಿ, ಅದೇ ಕಾರಣಕ್ಕೆ ಆ ಪುಣ್ಯಾತ್ಮ ಶೋಕಿ ಕಲಿತ. ಗುಂಡು ಹಾಕೋದು ಕಲಿತ. ಧಿಂರಂಗ ಅಂತ ಮೆರೆಯೋದು ಕಲಿತ. 'ನಿನ್ನನ್ನೇ ನಂಬಿರುವ ಹೆಂಡತಿ ಮಕ್ಳು ಇದಾರೆ ಕಣಯ್ಯ. ಇಷ್ಟೆಲ್ಲ ಮೇರಿಬಾರ್ದು ನೀನು" ಅಂತ ಯಾರೆಷ್ಟೇ ಹೇಳಿದ್ರೂ ಆ ಭೂಪ ಕೇಳಲಿಲ್ಲ. ಬದಲಿಗೆ- 'ಪರಮಾತ್ಮ ಆಡಿಸಿದಂತೆ ಆಡುವೆ ನಾನು" ಅಂತ ಉಳಿದುಬಿಟ್ಟ. ಕಡೆಗೊಂದು ದಿನ ಯಾರಿಗೂ ಸಣ್ಣ ಸುಳಿವನ್ನೂ ಕೊಡದೆ, ಪರಮಾತ್ಮನ ಪಾದ ಸೇರ್ಕೊಂಡು ಬಿಟ್ಟ.
ಇದಾಗಿ, ಒಂದೆರಡು ತಿಂಗಳ ನಂತರ ಬಂಧು ಬಳಗದವರೆಲ್ಲ ಸಂಪಿಗೆಯ ಅಮ್ಮನ ಬಳಿ ಬಂದರು. 'ಗಂಡನ ಕೆಲ್ಸವೇನೋ ನಿಂಗೇ ಸಿಗುತ್ತೆ. ಹಾಗಾಗಿ ಬದುಕೋಕೆ ತೊಂದ್ರೆ ಇಲ್ಲ ನಿಜ. ಆದರೆ, ಮನೆಗೆ ಒಬ್ಬ ಯಜಮಾನ ಅಂತ ಬೇಕಲ್ವ? ಇನ್ನೊಂದು ಮದುವೆ ಮಾಡ್ಕೊ" ಎಂದರು. ಉಹುಂ, ನಂಗೆ ಅಂಥ ಯೋಚನೇನೇ ಇಲ್ಲ ಅಂದಳು ಸಂಪಿಗೆಯ ಅಮ್ಮ. ಆಗ ಕುಟುಂಬದ ಹೆಂಗಸರೆಲ್ಲ 'ಹಂಗಂದ್ರೆ ಆಗುತ್ತೇನವ್ವ? ನಿಂದು ಇನ್ನೂ ಚಿಕ್ಕ ವಯಸ್ಸು. ಹಸೀ ಮೈಯ್ಯಿ. ಉಪ್ಪು ಹುಳಿ ತಿಂದವಳು ನೀನು. ಎಷ್ಟು ದಿನ ಅಂತ ಒಬ್ಬಳೇ ಇರೋಕಾಗ್ತದೆ. ನೀನೇನೋ ಗಟ್ಟಿ ಮನಸ್ಸು ಮಾಡಿ ಇರ್ತೀಯ ಅಂತಾನೇ ಇಟ್ಕೊ. ಆದ್ರೆ, ಹಾಳು ಗಂಡಸರು ಸುಮ್ನೆ ಬಿಡ್ತಾರಾ? ಕಣ್ಣು, ಕಣ್ಣಲ್ಲೇ ಹುರ್ಕೊಂಡು ತಿನ್ಕೋತಾರೆ ಕಣವ್ವ. ಉಹುಂ ಅನ್ನಬೇಡ. ಒಪ್ಕೊ. ನಮ್ಮ ಸಂಬಂಧದಲ್ಲೇ ಯಾರಾದ್ರೂ ಸಿಕ್ಕೇ ಸಿಕ್ತಾನೆ" ಅಂದರು.
ದೊಡ್ಡವರ ಮಾತು ಮೀರಿ ಯಾಕೆ ನಿಷ್ಠೂರ ಕಟ್ಕೋಬೇಕು? ನಾಳೆ ಏನಾದ್ರೂ ಹೆಚ್ಚು ಕಡಿಮೆಯಾದ್ರೆ ಕೆಟ್ಟ ಹೆಸರು ಬರೋದು ನನಗೇ ತಾನೇ ಅಂದುಕೊಂಡು, ಈ ಸಂಪಿಗೆಯ ಅಮ್ಮ ಆನಂತರವೂ ವಿಪರೀತ ಯೋಚಿಸಿ, ಕಡೆಗೊಮ್ಮೆ 'ಎರಡನೇ ಮದುವೆಗೆ ಸೈ" ಅಂದರು. ಆದರೆ, ಹಾಗೆ ಒಪ್ಪಿಕೊಳ್ಳುವ ಮೊದಲು ಆಕೆ ಬಿಕ್ಕಳಿಸಿದ್ದು, ಇಡೀ ರಾತ್ರಿ ಬೆಚ್ಚಿಬಿದ್ದದ್ದು, ಹಳೆಯ ಬದುಕು ನೆನಪಾದಾಗಲೆಲ್ಲ ಈ ಹೂವಂಥ ಹುಡುಗೀನ ಬಾಚಿ ತಬ್ಬಿಕೊಂಡು ಮೌನವಾಗಿ ಕಂಬನಿ ಮಿಡಿದಿದ್ದು... ಬಿಡಿ, ಅದೆಲ್ಲ ಲೋಕಕ್ಕೆ ಗೊತ್ತಾಗಲೇ ಇಲ್ಲ.
***
ಮನೆಗೆ, ಎರಡನೇ ಅಪ್ಪ ಬಂದನಲ್ಲ? ಈ ಸಂಪಿಗೆಯ ಸಂಕಟಗಳು ಶುರುವಾಗಿದ್ದೇ ಆಗಿನಿಂದ. ಆಗಲೇ ಅವಳು ಆರನೇ ಕ್ಲಾಸಲ್ಲಿದ್ದಳು. ಸ್ಕೂಲಲ್ಲಿ, ವೆರಿಗುಡ್ ಅನ್ನಿಸಿಕೊಂಡಿದ್ದಳು. ಅಂಥವಳಿಗೆ, ಆಗಷ್ಟೇ ನೆಂಟರ ಥರಾ ಮನೆಗೆ ಬಂದು ಸೇರಿಕೊಂಡಾತನನ್ನು 'ಅಪ್ಪ" ಅನ್ನಲು ಮನಸ್ಸು ಬರಲಿಲ್ಲ. ಅಮ್ಮ, ನಂತರದ ದಿನಗಳಲ್ಲಿ ಸದಾ ಆತನಿಗೆ ಅಂಟಿಕೊಂಡೇ ಇದ್ದುದನ್ನು ಸಹಿಸುವುದಕ್ಕೂ ಆಗಲಿಲ್ಲ. ಇದನ್ನೇ ಅಮ್ಮನಲ್ಲಿ ಹೇಳಿಕೊಂಡಳು. ಪ್ರಯೋಜನವಾಗಲಿಲ್ಲ. ಜಾಸ್ತಿ ಹೊತ್ತು ಮನೇಲಿದ್ರೆ ನನಗೆ ಇಷ್ಟವಾಗದ ಸೀನ್ಗಳನ್ನೇ ನೋಡಬೇಕಾಗುತ್ತೆ. ಮನೇಲಿದ್ರೆ ತಾನೇ ಈ ಫಜೀತಿ? ಆದಷ್ಟೂ ಹೊತ್ತು ಮನೆಯಿಂದ ಹೊರಗೇ ಇರೋಣ ಎಂದುಕೊಂಡಳು ಸಂಪಿಗೆ. ಅವತ್ತೇ ಅಮ್ಮನಿಗೂ ಎಲ್ಲ ವಿಷಯ ಹೇಳಿ ಭರತನಾಟ್ಯಕ್ಕೆ, ಸಂಗೀತಕ್ಕೆ ಸೇರಿಕೊಂಡಳು.
ಶ್ರದ್ಧೆ ಅನ್ನೋದು, ನಿಷ್ಠೆ ಅನ್ನೋದು ಈ ಹೂವಂಥ ಹುಡುಗಿಗೆ ಬಾಲ್ಯದಿಂದಲೂ ಜತೇಗಿತ್ತು. ತನ್ನ ಎಲ್ಲ ಸಂಕಟಗಳನ್ನೂ ಮರೆತುಬಿಡಬೇಕು ಅಂತಾನೇ ಅದೆಷ್ಟು ಚೆನ್ನಾಗಿ ಈ ಹುಡುಗಿ ಹಾಡು, ಡ್ಯಾನ್ಸು ಕಲಿತಳು ಅಂದರೆ-ಪಿಯೂಸಿಗೆ ಬರುವುದರೊಳಗೆ ಈ ಬೆಂಗಳೂರಲ್ಲೇ 'ವರ್ಲ್ಡ್ ಫೇಮಸ್" ಆಗಿಬಿಟ್ಳು. ಪ್ರೋಗ್ರಾಂ ಕೊಡೋಕೆ ಶುರುಮಾಡಿದ್ಲು ನೋಡಿ, ಒಂದಿಷ್ಟು ಕಾಸು ಬಂತು. ಒಳ್ಳೆಯ ಹೆಸರೂ ಬಂತು. ನೋಡ್ತ ನೋಡ್ತಾನೇ ಈಕೆ ಕೊಟ್ಟ ಕಾರ್ಯಕ್ರಮಗಳ ಸಂಖ್ಯೆ ನೂರು ದಾಟಿತು. ಭರತನಾಟ್ಯ ಅಂದಾಕ್ಷಣ, ಸುಗಮ ಸಂಗೀತ ಅಂದಾಕ್ಷಣ 'ಸಂಪಿಗೆ ಅಂತಿದಾರಲ್ಲ, ಅವರನ್ನು ಮೀರಿಸೋರೇ ಇಲ್ಲ..." ಎಂಬ ಮಾತೂ ಚಾಲ್ತಿಗೆ ಬಂದುಬಿಡ್ತು.
ಆದರೆ, ಮನೆಯೊಳಗಿನ ಪರಿಸ್ಥಿತಿ ಮಾತ್ರ ಯಾಕೋ ಸರೀಗಿರಲಿಲ್ಲ. ಈ ಹುಡುಗಿಯ ಯೋಚನೆಗೆ ಯಾರೂ ಸ್ಪಂದಿಸಲೇ ಇಲ್ಲ. ಯಾಕೋ, ಈ ಮನೆ ನನ್ನದಲ್ಲ. ನನಗಿಲ್ಲಿ ಜಾಗವಿಲ್ಲ. ಎಲ್ಲರಿಂದ ನಾನು ಬೇರೆಯೇ, ದೂರವೇ ಇರಬೇಕು ಅಂತ ಸಂಪಿಗೆ ಯೋಚಿಸಿದ್ದೇ ಆಗ. ಸಂದರ್ಭಕ್ಕೆ ಸರಿಯಾಗಿ, ಅದೇ ಏರಿಯಾದಲ್ಲಿ ಒಂದಿಷ್ಟು ಪುಂಡು ಹುಡುಗರ ಕಾಟಾನೂ ಶುರುವಾಗಿಬಿಡ್ತು. ತಕ್ಷಣವೇ ಅಮ್ಮನ ಮುಂದೆ ಕೂತ ಈ ಹುಡುಗಿ, ದೃಢವಾಗಿಯೇ ಹೇಳಿದ್ಲು "ಇನ್ನೇನಮ್ಮ? ನಂದು ಪಿಯುಸಿ ಮುಗಿದು ಎರಡು ವರ್ಷ ಆಗಿದೆ. ಕಂಪ್ಯೂಟರ್ ಕೋರ್ಸೂ ಮುಗಿದಿದೆ. ಇಲ್ಲಿ ಯಾಕೋ ಸಂತೋಷ ಅನ್ನೋದೇ ಮರೀಚಿಕೆಯಾಗಿದೆ. ಇರಲಿ, ನನ್ನ ಬದುಕು ಹೇಗೋ ಸಾಗುತ್ತೆ. ಆದಷ್ಟೂ ಬೇಗ ನಂಗೆ ಮದುವೆ ಮಾಡಿಬಿಡು".
ನೋಡ್ತಿದ್ದ ಹಾಗೇನೇ ಅದ್ಯಾರೋ ಗಂಡಿನ ಕಡೆಯವರು ಬಂದ್ರು. ಈ ಬೆಡಗೀನ ನೋಡಿದ್ರು. ಒಪ್ಪಿಕೊಂಡ್ರು. ಇದಾಗಿ ಐದಾರು ದಿನಕ್ಕೆ ಹುಡುಗನೂ ಬಂದ. ನೋಡಿದ ಎರಡೇ ನಿಮಿಷಕ್ಕೆ 'ನೀವು ನಂಗಿಷ್ಟವಾಗಿದೀರಿ ಕಣ್ರೀ" ಅಂದೇಬಿಟ್ಟ. ಆ ಮಾತಿಗೆ ಗೋದಿಬಣ್ಣದ ಹುಡುಗಿ ರಕ್ತಗೆಂಪಿಗೆ ಬಂದು ನಕ್ಕಳು. ಹೇಗಿದ್ರೂ ಗಂಡನಾಗಲಿರುವ ಹುಡುಗ ಅಲ್ವ ಅಂದುಕೊಂಡು ತನ್ನ ಹಾಡುಗಾರಿಕೆ, ಭರತನಾಟ್ಯದ ಫೋಟೊ ಆಲ್ಬಂ ಕೊಟ್ಟು ಖುಷಿಪಟ್ಟಳು. ಹಿಂದೆಯೇ 'ನಂಗೂ ನೀವಿಷ್ಟ" ಅಂದುಬಿಟ್ಟಳು.
ಆಮೇಲೆ, ಅರ್ಜೆಂಟರ್ಜೆಂಟಾಗಿಯೇ ಇವಳ ಎಂಗೇಜ್ಮೆಂಟು ಫಿಕ್ಸಾಯಿತು. ಎಂಗೇಜ್ಮೆಂಟಿನ ಹಿಂದಿನ ದಿನವೇ ಈ ಹುಡುಗಿ ಕೈ ತುಂಬ ಗೋರಂಟಿಯ ಚಿತ್ತಾರ ಹಾಕಿಸಿಕೊಂಡಳು. ಅವಳಿಗೋ ಕಣ್ತುಂಬ ಕನಸು, ಮೈತುಂಬ ಆಸೆ! ಹೊಸ ಬದುಕಿನ ನಿರೀಕ್ಷೆಯಲ್ಲೇ ರಾತ್ರಿ ಕಳೆದಳು. ಅವತ್ತು, ನಿದ್ರೆಯಿಲ್ಲದೇ ಹರಟೆಗೆ ಕೂತ ಗೆಳತಿಯರು "ನೀನು ಕಡೆಗೂ ಯಾರನ್ನೂ ಲವ್ ಮಾಡಲೇ ಇಲ್ಲ. ವೇಸ್ಟು ಕಣೇ ನೀನು" ಅಂದರು! ಪರವಾಗಿಲ್ಲ, ಮುಂದೆ ಗಂಡನನ್ನೇ ಲವ್ ಮಾಡಿದ್ರಾಯ್ತು ಬಿಡ್ರೇ ಎಂದು ತಮಾಷೆ ಮಾಡಿ ಮೌನವಾದಳು ಸಂಪಿಗೆ.
ಮರುದಿನ, ಗಂಡಿನ ಕಡೆಯವರು ಥೇಟ್ ಗೂಂಡಾಗಳ ಥರಾನೇ ಈ ಬೆಡಗಿಯ ಮನೆಗೆ ಬಂದರು. ಯಾರ ಚಾಡಿಗೆ ಕಿವಿಗೊಟ್ಟಿದ್ದರೋ ಏನೋ ಮಾತಿಗೊಮ್ಮೆ ಕಿಡಿಕಿಡಿಯಾಗುತ್ತಿದ್ದರು. ವಿನಾಕಾರಣ ಕೆಣಕುತ್ತಿದ್ದರು. ಎಂಗೇಜ್ಮೆಂಟ್ಗೆ ಬದಲು ಮಾತು ಎತ್ತೆತ್ತಲೋ ಸಾಗುತ್ತಿದ್ದಾಗ ಗಂಡು ಅನ್ನಿಸಿಕೊಂಡವ ಹೇಳಿದ: ನನಗೆ ಈ ಫ್ಯಾಮಿಲಿಯ ಹಿನ್ನೆಲೆ ಮೊದಲು ಗೊತ್ತಿರಲಿಲ್ಲ. ಈಗ ಗೊತ್ತಾಗಿದೆ. ಹಾಗಾಗಿ ನನಗೆ ಈ ಸಂಬಂಧ ಇಷ್ಟವಿಲ್ಲ. ಬೆಂಗಳೂರು ಹುಡುಗೀರ ಕ್ಯಾರೆಕ್ಟರ್ ಸರೀಗಿರಲ್ಲ ಅಂತಾರೆ ಜನ. ಅದೂ ಅಲ್ಲದೆ, ಈಕೆ ಹಾಡು, ಡ್ಯಾನ್ಸು ಅಂತೆಲ್ಲ ಆಗಿಂದಾಗ್ಗೆ ಓಡಾಡ್ತಿದ್ದಾಳಂತೆ. ಅಂದ್ಮೇಲೆ ಹೇಗೋ ಏನೋ? ಹೇಳಿದ್ನಲ್ಲ, ನಂಗಿಷ್ಟವಿಲ್ಲ ಅಂದುಬಿಟ್ಟ!
ಅವತ್ತಿನ ತನಕ ತಮಾಷೆಗೂ ಯಾರ ಮುಂದೂ ಮಾತಾಡದಿದ್ದ ಸಂಪಿಗೆ, ಅವತ್ತು ಸ್ಫೋಟಿಸಿದಳು. 'ರೀ ಮಿಸ್ಟರ್, ನೀವು ಈ ಸಂಬಂಧ ಒಪ್ಪದೇ ಇದ್ರೆ ಕತ್ತೆಬಾಲ. ಆದರೆ, ನನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡೋಕೆ ನೀವ್ಯಾರು? ನಿಮ್ಮ ಕ್ಯಾರೆಕ್ಟರ್ರು ಸರೀಗಿದೆಯಾ? ನನ್ನ ಬಗ್ಗೆ, ನಮ್ಮ ಫ್ಯಾಮಿಲಿ ಬಗ್ಗೆ ನಮ್ಮ ಅಮ್ಮನ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದ್ರೆ ಹುಶಾರ್" ಅಂದೇಬಿಟ್ಟಳು. ಹೇಳಿ ಕೇಳಿ ಗಂಡಿನ ಕಡೆಯವರು ನೋಡಿ, ಆನಂತರ ಕೂಡ ಅವರು ತುಂಬಾ ಮಾಕಿನಿಂದ ಬಾಯಿಗೆ ಬಂದಂತೆ ಮಾತಾಡಿ ಹೋದರು. ಅವರ ಬಿರುಮಾತಿನ ಬಿಸಿಗೆ ಬಾಳೆ ದಿಂಡು ಬಾಡೇ ಹೋಯ್ತು. ತೋರಣವೂ ಒಣಗೇ ಹೋಯ್ತು!ಅವತ್ತು ಇಡೀ ದಿನ ಸಂಪಿಗೆಯೂ, ಅವಳ ತಾಯಿಯೂ ಕನ್ನಂಬಾಡಿ ತುಂಬುವಷ್ಟು ಕಂಬನಿ ಮಿಡಿದರು.
****
ರೀಡರ್ ಡಿಯರ್, ಈಗ ಒಂದು ಮಾತು: ನೂರಲ್ಲ, ಸಾವಿರ ಮಂದಿಯಿಂದ ಶ್ರೀರಾಮಚಂದ್ರ ಎಂದು ಕರೆಸಿಕೊಂಡವ ಕೂಡ, ಕನಸಲ್ಲಿಯಾದರೂ ಹತ್ತಾರು ಮಂದಿ ಬೆಡಗಿಯರನ್ನು ಪ್ರೀತಿಸಿರುತ್ತಾನೆ. ಮುತ್ತಿಟ್ಟಿರುತ್ತಾನೆ. ರಾತ್ರಿಯಾದ ತಕ್ಷಣ 'ಮೊನ್ನೆ ಬಿದ್ದ ಕನಸು ಇವತ್ತೂ ಬೀಳಬಾರದೆ" ಎಂದು ತನ್ನಷ್ಟಕ್ಕೆ ತಾನೇ ಅಂದುಕೊಂಡಿರುತ್ತಾನೆ. ಒಂದು ಮದುವೆಯೋ, ದೇವಸ್ಥಾನವೋ, ಆಸ್ಪತ್ರೆಯೋ ಅಥವಾ ಶ್ರಾದ್ಧದ ಮನೆಯೋ... ಯಾವುದೋ ಒಂದು... ಅಲ್ಲಿ ಕೂಡ ಸುಂದರಿಯೊಬ್ಬಳ ಸೆರಗು ಸ್ವಲ್ಪ ಜಾರಿದರೆ ಆ ಕಡೆಗೇ ಆಸೆಯಿಂದ ನೋಡಿರುತ್ತಾನೆ. ಆ ನೋಟದಲ್ಲಿ ಏನಿರುತ್ತದೆ ಅಂತ ಬಿಡಿಸಿ ಹೇಳಬೇಕಿಲ್ಲ ತಾನೆ?
ಹುಡುಗಿಯರ ವಿಷಯದಲ್ಲಿ ಕೂಡ ಅಷ್ಟೇನೇ. ಅದೇನೇ ಸಾಫ್ಟು, ಸೆಕ್ಯೂರ್ಡು ಅಂದುಕೊಂಡರೂ, ಪ್ರತಿಯೊಬ್ಬ ಹುಡುಗಿಯ / ಹೆಂಗಸಿನ ಮನದ ಕದವನ್ನೂ ಪ್ರಿಯತಮನಲ್ಲದ / ಗಂಡನಲ್ಲದ ಇನ್ನೊಬ್ಬ ತಟ್ಟಿಯೇ ಇರುತ್ತಾನೆ. ಇಲ್ಲಿಯೂ ಅಷ್ಟೆ, ಎಲ್ಲವೂ ಕನಸಿನಲ್ಲೇ ಮುಗಿದಿರುತ್ತದೆ. ಆನಂತರ ಬೆಳ್ಳಂಬೆಳಗ್ಗೆ ದಡ ಬಡಿಸಿ ಎದ್ದು, ದೇವರ ಫೋಟೊ ಮುಂದೆ ನಿಂತು ಕೆನ್ನೆ ಕೆನ್ನೆ ಬಡಿದುಕೊಂಡು, ಥತ್, ದರಿದ್ರದ್ದು ರಾತ್ರಿ ಕೆಟ್ಟ ಕನಸು ಬಿದ್ದು ಬಿಡ್ತು ಎಂದುಕೊಳ್ಳುತ್ತಾ ಪಶ್ಚಾತ್ತಾಪ ಪಡುವುದು ಸುಳ್ಳಲ್ಲ. ಹಾಗೇನೇ, ರಾತ್ರಿಯ ಕನಸಿನಲ್ಲಿ ಆಕಸ್ಮಿಕವಾಗಿಯೇ ಒಂದರೆಕ್ಷಣದ ಸುಖದಲ್ಲಿ ಮೈಮರೆತಿದ್ದೂ ಸುಳ್ಳಲ್ಲವಲ್ಲ?
ಅದರರ್ಥ, ಒಂದು ರೀತಿಯಲ್ಲಿ ಎಲ್ಲರೂ ಫ್ಲರ್ಟ್ಗಳೇ. ಅಂದ ಮೇಲೆ ನಿಮ್ಮ ಕ್ಯಾರೆಕ್ಟರು ಸರೀಗಿದೆಯಾ ಅಂತ ಇನ್ನೊಬ್ಬರನ್ನು ಕೇಳುವುದರಲ್ಲಿ ಅರ್ಥವಿದೆಯಾ? ಅಂದಹಾಗೆ, ಈ ಕತೆಯಲ್ಲಿ ಬಂದ ಸಂಪಿಗೆಯಂಥ ಹುಡುಗಿಯರು, ಅವಳನ್ನು ಹಂಗಿಸಿ ಹೋದ ಹುಡುಗನಂಥವರು ನಮ್ಮ ಮಧ್ಯೆಯೇ ಇದ್ದಾರೆ. ಸಂಪಿಗೆಯಂಥ ಅಮಾಯಕ ಹುಡುಗಿಯರೆಡೆಗೆ ಒಂದಿಷ್ಟು ಅನುಕಂಪವಿರಲಿ. ಕ್ಯಾರೆಕ್ಟರ್, ಕ್ಯಾರೆಕ್ಟರ್ ಎಂದು ಕಿರುಚುವವರೆಡೆಗೆ ದೊಡ್ಡ ತಿರಸ್ಕಾರವಿರಲಿ.












Click it and Unblock the Notifications