ಪ್ರೇಮ ಪಕ್ಷಿಗಳ ಪಾಲಿನ ಹನಿಮೂನ್ ಸ್ಪಾಟ್ ರಂಗನತಿಟ್ಟು!
ಕರ್ನಾಟಕದ ಹೆಮ್ಮೆಯ ಪಕ್ಷಿಧಾಮ ರಂಗನತಿಟ್ಟು. ಅಲ್ಲಿಗೆ ಹೋಗಲು ಇದು ಸೂಕ್ತ ಕಾಲ. ಎಲ್ಲೆಲ್ಲಿಂದಲೋ ಬಂದ ಹಕ್ಕಿಗಳನ್ನು ನೋಡಬಹುದು. ಜತೆಗೆ ಅಲ್ಲಿನ ಮೊಸಳೆಗಳನ್ನು ಸಹ ಕಾಣಬಹುದು. ಅಲ್ಲಿನ ವಿವರಗಳನ್ನು ಗಗನ್ ಪ್ರೀತ್ ನೀಡಿದ್ದಾರೆ
ಆ ದೋಣಿ ನಡೆಸುವವರು ಹೇಳಿದ ಮಾತು ನನಗೆ ಪದೇಪದೇ ನೆನಪಾಗುತ್ತೆ. "ನೋಡಿ, ಆ ಪಕ್ಷಿಗಳು ಎಷ್ಟು ಹೊಂದಾಣಿಕೆಯಿಂದ ಇರ್ತವೆ. ಮರಿ ಮಾಡಿಕೊಳ್ಳುವಾಗ ಆ ಗಂಡು ಹಕ್ಕಿಯ ಪ್ರೀತಿ, ಕಾಳಜಿ, ಹೆಣ್ಣು ಹಕ್ಕಿಯೊಂದಿಗಿನ ಅನ್ಯೋನ್ಯ..ಮನುಷ್ಯರು ಕಲಿಯಬೇಕು ಬಿಡಿ." -ಅಯ್ಯೋ, ಇದು ಹೊಳೆದೇ ಇರಲಿಲ್ಲವಲ್ಲಾ ಅಂತ ಅರೆ ಕ್ಷಣ ಅಚ್ಚರಿಯಾಯಿತು.
ಇಂಥದ್ದೊಂದು ಬದುಕಿನ ಪಾಠ ಕೇಳಿದ್ದು ರಂಗನತಿಟ್ಟು ಪಕ್ಷಿಧಾಮದಲ್ಲಿ. ಹೇಳಿದವರು ಅಲ್ಲೇ ದೋಣಿ ನಡೆಸುವ ಸಿಬ್ಬಂದಿ. ನಾನು ಕಳೆದ ವಾರ ನಿಮಗೆ ಹೊಸ ಹೊಸ ಜಾಗಗಳನ್ನು ಪರಿಚಯ ಮಾಡಿಸ್ತೀನಿ ಅಂತ ಹೇಳಿದ್ದೆ. ಈಗ ಪಕ್ಷಿ ವೀಕ್ಷಣೆಗೆ ಸೂಕ್ತವಾದ ಕಾಲ. ಆದ್ದರಿಂದ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿರುವ ಪಕ್ಷಿಧಾಮದ ಬಗ್ಗೆ ಹೇಳ್ತೀನಿ.[ಹಕ್ಕಿಗಳ ಸ್ವರ್ಗ ರಂಗನತಿಟ್ಟಿನಲ್ಲಿ ಕೃತಕ ನಡುಗಡ್ಡೆ]
ಮೈಸೂರಿಗೂ ಮುಂಚೆ ಅಂದರೆ ಸುಮಾರು 16 ಕಿ.ಮೀ ಹಿಂದೆಯೇ ಸಿಗುತ್ತದೆ ಮಂಡ್ಯ ತಾಲೂಕು ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮ. ಕಾವೇರಿ ನದಿಯ ದಡದಲ್ಲಿರುವ ಈ ಜಾಗದಲ್ಲಿ ಹಲವಾರು ಪಕ್ಷಿಗಳು ಗೂಡು ಮಾಡಿಕೊಂಡಿರುವುದನ್ನು ಗಮನಿಸಿದ್ದ ಭಾರತದ ಪಕ್ಷಿ ಪಿತಾಮಹ ಸಲೀಂ ಅಲಿ ಅವರು 1940ರಲ್ಲಿ ಮೈಸೂರು ಮಹಾರಾಜರಿಗೆ ಜಾಗದ ಮಹತ್ವ ವಿವರಿಸಿದರು. ಆಗ ಈ ಸ್ಥಳವನ್ನು ಪಕ್ಷಿಧಾಮವನ್ನಾಗಿ ಘೋಷಣೆ ಮಾಡಲಾಯಿತು.
ಮೂವತ್ತು ಸಾವಿರಕ್ಕೂ ಹೆಚ್ಚು ಪಕ್ಷಿಗಳು
ರಂಗನತಿಟ್ಟು ಪಕ್ಷಿಧಾಮ ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಇದ್ದು, ಭಾರತದಲ್ಲೇ ಅತಿ ದೊಡ್ಡ ಪಕ್ಷಿಧಾಮ ಎಂಬ ಅಗ್ಗಳಿಕೆ ಪಡೆದಿದೆ. ಇಲ್ಲಿ ಚಳಿಗಾಲದಲ್ಲಿ 170ಕ್ಕೂ ಹೆಚ್ಚು ಪ್ರಭೇದದ 30,000ಕ್ಕೂ ಹೆಚ್ಚು ಪಕ್ಷಿಗಳು ಕಂಡು ಬರುತ್ತವೆ. ಪಾಸ್ ಪೋರ್ಟ್-ವೀಸಾ ಹಂಗಿಲ್ಲದ ಪಕ್ಷಿಗಳು ಮಾನವ ನಿರ್ಮಿತ ಗಡಿಯನ್ನು ಮೀರಿ ನಾನಾ ಖಂಡದ-ನಾನಾ ದೇಶಗಳಿಂದ ಇಲ್ಲಿಗೆ ಬರುತ್ತವೆ.
ಯಾವುದೇ ಸಮಯದಲ್ಲಿ ನೋಡಬಹುದಾದ ಹಕ್ಕಿಗಳು
ಪೆಲಿಕನ್, ಓಪನ್ ಸ್ಪೂನ್ ಬಿಲ್, ಪೇಂಟೆಡ್ ಸ್ಟಾರ್ಕ್ಸ್, ರಿವರ್ ಟರ್ನ್, ಕಿಂಗ್ ಫಿಶರ್ ಸೇರಿದಂತೆ ಹಲವು ಪಕ್ಷಿಗಳನ್ನು ಯಾವುದೇ ಸಮಯದಲ್ಲೂ ನಾವಿಲ್ಲಿ ನೋಡಬಹುದು. ಜತೆಗೆ ಮೊಸಳೆಗಳನ್ನು ಕೂಡ ನೋಡಬಹುದು.
ಮೂರು ತಳಿಯ ಮೊಸಳೆ
ರಂಗನತಿಟ್ಟಿನಲ್ಲಿ ಕಂಡು ಬರುವುದು ಸಿಹಿ ನೀರಿನ ಮೊಸಳೆಗಳು. ಭಾರತದಲ್ಲಿ ಮೂರು ತಳಿಯ ಮೊಸಳೆಯನ್ನು ಕಾಣಬಹುದು. ಅವುಗಳನ್ನು ಮಗ್ಗರ್, ಘಾರಿಯಾಲ್ ಹಾಗೂ ಎಸ್ಟುರಿನ್ ಎಂದು ವರ್ಗೀಕರಿಸಬಹುದು. ಉಪ್ಪು ನೀರಿನ ಮೊಸಳೆಗಳನ್ನು ಬಂಗಾಲ ಕೊಲ್ಲಿ ಸಮುದ್ರದ ದಡಗಳಲ್ಲಿ ಕಾಣಬಹುದು.
ಮಗ್ಗರ್ ಮೊಸಳೆ
ರಂಗನತಿಟ್ಟಿನಲ್ಲಿ ಕಂಡುಬರುವುದು ಮಗ್ಗರ್ ಮೊಸಳೆಗಳು. 13ರಿಂದ 14 ಅಡಿವರೆಗೂ ಬೆಳೆಯುತ್ತವೆ. ಮೊಸಳೆಗಳು ರೇಪ್ಟೈಲ್ ಜಾತಿಗೆ ಸೇರುತ್ತವೆ. ಅವುಗಳು ಕೋಲ್ಡ್ ಬ್ಲಡೆಡ್ ಜೀವಿಗಳು. ಹಾಗಾಗಿ ಬಿಸಿಲಿದ್ದಾಗ ದೇಹವನ್ನು ಬಿಸಿ ಮಾಡಿಕೊಳ್ಳಲು ಬಂಡೆಯ ಮೇಲೆ ಬಂದು ಬಾಯಿ ತೆಗೆದು ಮಲಗಿ ಬಿಡುತ್ತವೆ. ನಿಮ್ಮನ್ನು ದೋಣಿಯಲ್ಲಿ ಅದರ ಬಳಿ ಕರೆದೊಯ್ದಾಗ ಸ್ವಲ್ಪ ಮಟ್ಟಿಗೆ ಭಯ ಆಗಬಹುದು. ಆದರೆ ಅವುಗಳಿಗೆ ಮನುಷ್ಯರ ರೂಡಿ ಆಗಿದೆ. ಆದ್ದರಿಮ್ದ ಯಾವುದೇ ತೊಂದರೆ ಇಲ್ಲ
ವಾರದ ಎಲ್ಲ ದಿನ ತೆರೆದಿರುತ್ತದೆ
ಕಾವೇರಿ ನದಿಯಲ್ಲಿ ದೋಣಿಯಲ್ಲಿ ವಿಹರಿಸುತ್ತ ಪಕ್ಷಿ ವೀಕ್ಷಣೆ ಮಾಡಲು ವ್ಯವಸ್ಥೆ ಇದ್ದು, ದೋಣಿ ನಡೆಸುವವರು ಪಕ್ಷಿಗಳ ಬಗ್ಗೆ ಉತ್ತಮ ತಿಳಿವಳಿಕೆ ಹೊಂದಿದ್ದಾರೆ. ಸರಿಯಾದ ಮಾಹಿತಿ ನೀಡುತ್ತಾರೆ. ಈ ಪಕ್ಷಿಧಾಮ ವಾರದ ಎಲ್ಲಾದಿನವೂ ತೆರೆದಿರುತ್ತದೆ.
ಬೆಳಗ್ಗೆ 9ರಿಂದ ಸಂಜೆ 6 ರವರೆಗೆ
ಬೆಳಗ್ಗೆ 9ರಿಂದ ಸಂಜೆ 6 ರವರೆಗೆ ಪಕ್ಷಿಧಾಮ ಸಾರ್ವಜನಿಕರಿಗೆ ತೆರೆದಿರುತ್ತದೆ. ಸಂಜೆ ವೇಳೆ ಪಕ್ಷಿಗಳನ್ನು ನೋಡುವುದು ಬಹಳ ಸಂತಸ ಕೊಡುತ್ತದೆ. ಸೂರ್ಯಾಸ್ತದ ಹಿನ್ನೆಲೆ, ಗೂಡಿಗೆ ಹಿಂತಿರುಗುವ ಹಕ್ಕಿಗಳ ಸೊಗಸನ್ನು ನೋಡುವುದೇ ಒಂದು ಖೂಷಿ.
ಒಳ್ಳೆ ಕ್ಯಾಂಟೀನ್ ವ್ಯವಸ್ಥೆ
ವಯಸ್ಕರಿಗೆ 50 ರುಪಾಯಿ ಹಾಗೂ ಮಕ್ಕಳಿಗೆ 25 ರುಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಇಲ್ಲಿರುವ ಕ್ಯಾಂಟೀನ್ ಉತ್ತಮವಾಗಿದ್ದು ಕಾಫಿ, ಟೀ, ತಿಂಡಿ, ಊಟ ಹಾಗೂ ಲಘು ಆಹಾರಗಳು ಸಿಗುತ್ತವೆ.
ಸಲಹೆ ಸೂಚನೆ
ಅರಣ್ಯ ಇಲಾಖೆಯವರು ದೋಣಿಯಲ್ಲಿ ಕೂರುವ ಮುನ್ನ ನೀಡುವ ಜೀವರಕ್ಷಕ ಕವಚ (ಲೈಫ್ ಜಾಕೆಟ್) ತಪ್ಪದೆ ಧರಿಸಿ. ಮೊಸಳೆ, ಮೀನುಗಳಿಗೆ ನೀವು ತಂದಿರುವ ಆಹಾರ ಎಸಯಬೇಡಿ. ನದಿಯಲ್ಲಿ ವಿಹರಿಸುವಾಗ ನೀರಿನಲ್ಲಿ ಕೈ ಇಡಬೇಡಿ. ದೋಣಿ ನಡೆಸುವವರ ಸೂಚನೆಗಳನ್ನು ಪಾಲಿಸಿ.
ಛಾಯಾಗ್ರಾಹಕರಿಗೆ ಮಾಹಿತಿ
ಪಕ್ಷಿಗಳ ಛಾಯಾಗ್ರಹಣಕ್ಕೆ ಟೆಲಿಪೋಟೋ ಲೆನ್ಸ್ ಬಳಸಿ (ಇವು ಬಾಡಿಗೆಗೆ ದೊರೆಯುತ್ತವೆ). ಫ್ಲಾಷ್ ಬಳಸಬೇಡಿ. ಅಪರ್ಚರ್ ಆದಷ್ಟು ಕಡಿಮೆ ಇರಲಿ, ಸ್ಪಾಟ್ ಮೀಟರಿಂಗ್ ಬಳಸಿ.