Get Updates
Get notified of breaking news, exclusive insights, and must-see stories!

ಜಯನಗರದ ನಮ್ ಏರಿಯಾದ ರೋಡ್ ಗಣೇಶ!

ಹೋದವಾರವಷ್ಟೆ ಗಣೇಶ ಹಬ್ಬ ಮುಗಿದು ಜಯನಗರ ಮಾರುಕಟ್ಟೆ ತಿಪ್ಪೆ ಗುಂಡಿಯಾಗಿದ್ರೂ ಸಹ, ಅಲ್ಲಲ್ಲಿ ದೊಡ್ಡ ರೆಕಾರ್ಡಿನಲ್ಲಿ "ಗಜಮುಖನೆ ಗಣಪತಿಯೆ" ಎಂದು ಚಿಕ್ಕಮಕ್ಕಳ ಧ್ವನಿಯಲ್ಲಿ ಹಾಡುಗಳು ಕೇಳುತ್ತಿದ್ದವು. ಈ ಹಾಡು ನನಗೆ ನನ್ನ ಬಾಲ್ಯದ ನೆನಪು ತರಿಸಿತ್ತು. ನಮ್ಮ ಮನೆಯ ಮುಂದೆ ಗಣೇಶನ ಹಬ್ಬದ ದಿವಸ ದೊಡ್ಡದಾಗಿ ಪೆಂಡಾಲ್ ಹಾಕಿ ಐದು ದಿವಸ ಭರ್ಜರಿಯಾಗಿ ಗಣೇಶನ ಉತ್ಸವವಾಗುವುದನ್ನು ನೆನೆಸಿಕೊಂಡೆ.

Recommended Video

      Ganesh Chaturthi 2017 : Lord Ganesha will be impressed if you do these things | Oneindia Kannada

      ಈ ಉತ್ಸವ ನನ್ನ ಅಮ್ಮ ಮದುವೆಯಾಗಿ ಜಯನಗರಕ್ಕೆ ಬಂದಾಗಿಲಿಂದಲೂ ಚಾಲ್ತಿಯಲ್ಲಿತ್ತಂತೆ. ಕತ್ತರಿಗುಪ್ಪೆಯಂತಹ ಆವಾಗಿನ ಕಾಲದ ಕಡಿಮೆ ಸದ್ದಿನ ಜಾಗದಿಂದ ಬಂದ ಅಮ್ಮನಿಗೆ ಇದೊಂದು ತರಹದ ಆಶ್ಚರ್ಯವೇ ಆಗಿತ್ತಂತೆ. ಹಬ್ಬದ ಹಿಂದಿನ ವಾರದಿಂದ ಪೆಂಡಾಲ್ ಹಾಕುವ ದಿನದಿಂದ ನಮ್ಮ ಸಂಭ್ರಮ ಶುರು. ರಸ್ತೆಯ ಕೊನೆಯಲ್ಲಿ ನಿಂತು "ಅಂಕಲ್ ರೋಡ್ ಬ್ಲಾಕ್" ಎಂದು ಹೇಳಿ ಕಳುಹಿಸುತ್ತಿದ್ದೆವು. ಇವೆಲ್ಲ ರಸ್ತೆಯ ಮಕ್ಕಳೆಲ್ಲಾ ಸ್ವಯಂ ಪ್ರೇರಿತರಾಗಿ ಮಾಡುತ್ತಿದ್ದದ್ದು. ನಮ್ಮ ಮನೆಗೆ ಅತಿಥಿ ಬರುತ್ತಿದ್ದಾನೇನೋ ಎಂಬ ಸಂತೋಷ.

      Road side public Ganesha of Jayanagar

      ನಾ ಹುಟ್ಟಿದ ವರ್ಷದಿಂದ ಪ್ರತಿ ಗಣೇಶನ ಹಬ್ಬದ ದಿವಸ ನಮ್ಮ ಮನೆಯ ಮುಂದೆ ಜೋರಾಗಿ ಹಾಡನ್ನ ಹಾಕಿ ಎಲ್ಲರನ್ನು ಎಬ್ಬಿಸುತ್ತಿದ್ದ "ಹೇ ವಿಘ್ನರಾಜನೇ" ಹಾಡನ್ನು ಶಪಿಸುತ್ತಿದ್ದದ್ದೆ ಹೆಚ್ಚು. ತಾತ ಅಲ್ಲಿ ರೆಕಾರ್ಡ್ ಹಾಕೋ ಮುಂಚೆ ನಮ್ಮನೆಯಲ್ಲಿ ಪೂಜೆಯಾಗಲಿ ಎಂದು ಬೇಗ ಬೇಗ ಮಾಡಿಸುತ್ತಿದ್ದರು. ಅಚ್ಚರಿಯೆಂದರೆ, ಆ ಗಣೇಶನ ಮುಂದೆಯೇ ನನ್ನ ಮೊದಲ ಪ್ರತಿಭಾ ಪ್ರದರ್ಶನವಾಗಿದ್ದು.

      ನಮ್ಮ ಸಂಗೀತ ಕ್ಲಾಸಿನ ಮಕ್ಕಳೆಲ್ಲಾ ಸೇರಿ 2ರಿಂದ 3 ಘಂಟೆ ಸಂಗೀತದ ಕಚೇರಿಯನ್ನ ನಡೆಸಿಕೊಡುತ್ತಿದ್ದೆವು. ಹಬ್ಬಕ್ಕೆ ಹೊಸ ಬಟ್ಟೆಯ ಜೊತೆ ಕಚೇರಿಗೆ ಹೊಸ ಲಂಗ, ಬ್ಲೌಸ್, ಅದಕ್ಕೆ ತಕ್ಕದಾದ ಬಳೆ, ಓಲೆ ಇವೆಲ್ಲವನ್ನು ತೆಗೆದುಕೊಂಡು, ಒಂದು ತಿಂಗಳು ಯಾವುದೇ ಐಸ್ಕ್ರೀಮ್, ಕುರುಕಲು ತಿಂಡಿಯನ್ನ ತಿನ್ನದೇ ಗಂಟಲನ್ನ ಚೆನ್ನಾಗಿ ತರಬೇತುಗೊಳಿಸುತ್ತಿದ್ದೆವು.

      ನಮ್ಮ ಕಾರ್ಯಕ್ರಮದ ನಂತರ ದೊಡ್ಡ ಕಲಾವಿದರ ಕಾರ್ಯಕ್ರಮಗಳಿದ್ದವು. ನಾನು ಪ್ರಥಮ ಬಾರಿಗೆ ರಾಜು ಅನಂತಸ್ವಾಮಿ, ಸುಪ್ರಿಯಾ ಆಚಾರ್ಯ, ಎಂ ಡಿ ಪಲ್ಲವಿ, ಸಿ ಅಶ್ವತ್ಥ್, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ, ಪುತ್ತೂರು ನರಸಿಂಹ ನಾಯಕ್, ಯಶವಂತ ಹಳಿಬಂಡಿ, ಬಿ ಆರ್ ಛಾಯಾ, ಚಂದ್ರಿಕಾ ಗುರುರಾಜ್ ಇವರೆಲ್ಲರನ್ನು ನಿಜವಾಗ್ಲೂ ನೋಡಿದ್ದು, ಸುಗಮ ಸಂಗೀತ ಎನ್ನುವ ಪ್ರಕಾರ ಇದೆ ಎಂದು ತಿಳಿದಿದ್ದೆ ಇವರೆಲ್ಲರ ಹಾಡಿನ ಮೂಲಕ.

      ನಮ್ಮ ಪುಟ್ಟ ಮಕ್ಕಳ ಕಾರ್ಯಕ್ರಮದ ನಂತರ ದೊಡ್ಡ ಕಲಾವಿದರೇ ಬಂದು ನಮಗೆ ಹರಸಿ ಹೋಗುತ್ತಿದ್ದದ್ದು ವಿಶೇಷ. ಒಮ್ಮೊಮ್ಮೆ ಅವರ ಕಾರ್ಯಕ್ರಮದಲ್ಲಿ ನಮ್ಮನ್ನು ಕೂರಿಸಿಕೊಂಡು "ಕುರಿಗಳು ಸಾರ್" ಸಾಲನ್ನ ಮಾತ್ರ ಹಾಡೋದಕ್ಕೆ ಅವಕಾಶ ಮಾಡಿಕೊಡುತ್ತಿದ್ದರು. ಸಿ ಅಶ್ವತ್ಥ್ ಅವರಂತೂ ನಮ್ಮ ಹತ್ತಿರವೇ ಬಂದು "ಎಲ್ಲೀ ಹಾಡು ಕಲಿಯೋದು, ಶಾಸ್ತ್ರೀಯ ಸರಿಯಾಗಿ ಕಲಿಬೇಕಾಯ್ತಾ" ಎಂದು ಹೇಳಿ ಹೋಗಿದ್ದರು. ಅವತ್ತು ತೀರ ಸಂಪ್ರದಾಯಸ್ಥರಾಗಿ ಗಾಂಭೀರ್ಯದಿಂದ ಕೂತಿರುತ್ತಿದ್ದ ನಾವು ಮರುದಿವಸದ orchestraದಲ್ಲಿ ಕುಣಿದು ಕುಪ್ಪಳಿಸುತ್ತಿದ್ದೆವು.

      Road side public Ganesha of Jayanagar

      ಈಗಿನ ಖ್ಯಾತನಾಮ ಕಲಾವಿದರೆಲ್ಲ ಆವಾಗ budding stars. ಆದ್ರೂ ನೋಡಿ ಖುಶಿ ಪಡುತ್ತಿದ್ದೆವು. ನಮ್ಮ ಇಷ್ಟವಾದ ಹಾಡುಗಳನ್ನ ಚೀಟಿ ಬರೆದು ಕಳಿಸುತ್ತಿದ್ದೆವು, ನಮ್ಮ ಹೆಸರು ಅವರು ಓದಿದ್ರೆ ಸಿಕ್ಕಾಪಟ್ಟೆ ಖುಷಿ ಪಡ್ತಿದ್ವಿ. ಒಮ್ಮೊಮ್ಮೆ ವಿಡಿಯೋದಲ್ಲಿ ನಾವು ಕಾಣಿಸಬೇಕು ಎಂದು ಮುಂದಿನ ಸಾಲಿನಲ್ಲಿ ಕೂತು ಸಂತೋಷಪಡುತ್ತಿದ್ದೆವು. ಮಧ್ಯದಲ್ಲಿ ರಾಜಕಾರಣಿಗಳು, ಚುನಾವಣೆ ಪ್ರಚಾರಗಳು, ನಮ್ಮ ಬಡಾವಣೆಯ ರಸ್ತೆಗಳ ಟಾರು, ಟ್ರಾಫಿಕ್, ಕಸ ಸಮಸ್ಯೆ ಇವೆಲ್ಲವೂ ಚರ್ಚೆ ಆದ ನಂತರ ಪ್ರತಿಭಾ ಪುರಸ್ಕಾರವಾಗುತ್ತಿತ್ತು. ನಮ್ಮ ಬಡಾವಣೆಯ ಅಸಾಮಾನ್ಯ ಸಾಧನೆಗಳನ್ನ ಮಾಡಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡುತ್ತಿದ್ದರು. ಒಂದೆರಡು ಬಾರಿ ನನಗೂ ಬಂದಿತ್ತು.

      ಮತ್ತೆ ಹಾಡುಗಳು ಶುರುವಾಗುತ್ತಿದ್ದವು. ತಾತ ಒಮ್ಮೊಮ್ಮೆ ಇದೇನು ಗಣೇಶನನ್ನ ಕೂಡಿಸಿ ಹೀಗೆಲ್ಲಾ ಹಾಡುಗಳನ್ನ ಹಾಡುತ್ತಾರಲ್ಲ ಎಂದು ಸಿಡಿಮಿಡಿಗೊಳ್ಳುತ್ತಿದ್ದರು. ಮನೆಗೆ ಬಂದಾಗ "ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಿಲಕರ ಕರೆಗೆ ಓಗೊಟ್ಟು ಗಣಪತಿಯನ್ನ ರಸ್ತೆಯಲ್ಲಿ ಕೂಡಿಸಿ, ಹೋರಾಟದ ರೂಪುರೇಷೆಯನ್ನ, ಒಗ್ಗಟ್ಟನ್ನ ಪ್ರದರ್ಶನ ಮಾಡುತ್ತಿದ್ದರು, ಅದನ್ನ ಬಿಟ್ಟೂ ಇದೇನು ಇಂಥದ್ದಿಕ್ಕೆ ನೀನು ಕುಣಿದುಕೊಂಡು" ಎಂದು ಬುದ್ಧಿ ಹೇಳಿದ್ದರು.

      ಈ ವರ್ಷ ಕಡೆ ತಾತ, ಮುಂದಿನ ವರ್ಷ ಹೋಗೋಲ್ಲ ಎಂದು ಹೇಳಿ ಮತ್ತೆ ಮುಂದಿನ ವರ್ಷ ಸ್ನೇಹಿತರು ಬಂದಾಗ ಓಡಿ ಹೋಗುತ್ತಿದ್ದೆ. ಪ್ರಾಯಶಃ ತಾತನ ಮಾತನ್ನ ಮೀರಿದ್ದು ಇದೇ ಸರ್ತಿಯೆ. ಇನ್ನು ಗಣೇಶನ ಹಬ್ಬದ ದಿವಸ ಚಂದ್ರನನ್ನ ನೋಡುವುದು ಉಚಿತವಲ್ಲ ಎಂದು ಗೊತ್ತಿದ್ದರೂ ಯಾವತ್ತೂ ಕಾಣಿಸದ್ದಿದ್ದ ಚಂದ್ರ ಅವತ್ತು ಕಾಣಿಸಿಕೊಳ್ಳುತ್ತಲೇ ಇದ್ದ. ಹಂಗೂ ಹಿಂಗೂ ತಾತನಿಗೆ ಪುಸಲಾಯಿಸಿ ಶ್ಯಮಂತಕ ಮಣಿಯ ಕಥೆಯನ್ನ ಓದಿಸಿಕೊಳ್ಳುತ್ತಿದ್ದೆವು.

      ಈ ಎಲ್ಲ ಸಂಭ್ರಮದ ನಂತರ ಗಣಪತಿಯ ವಿಸರ್ಜನೆಗೆ ಮುತ್ತಿನ ಪಲ್ಲಕ್ಕಿಯನ್ನ ತಯಾರು ಮಾಡುತ್ತಿದ್ದರು. ಅದನ್ನು ಕಟ್ಟುವುದ್ದನ್ನು ನೋಡುವುದಕ್ಕೆ ಶಾಲೆಯಿಂದ ಬೇಗ ಬರುತ್ತಿದ್ವಿ. ಗಲಾಟೆ ಜಾಸ್ತಿ, ಕೆಟ್ಟ ಹಾಡುಗಳು, ವಿಪರೀತ ರಾಜಕಾರಣಿಗಳು, ಕೆಟ್ಟ ಕನ್ನಡ ಮಾತುಗಳು ಅಂತೆಲ್ಲ ದೂರುತ್ತಿದ್ದ ದೊಡ್ಡವರು ವಿಸರ್ಜನೆಯ ಸಮಯದಲ್ಲಿ ಒಂದು ತೆಂಗಿನಕಾಯಿ, ಆರತಿ ತಟ್ಟೆ ಹಿಡಿದುಕೊಂಡು ನಿಂತಿರುತ್ತಿದ್ದರು. ಮುಂದಿನ ವರ್ಷ ತಪ್ಪದೇ ಬಾರಪ್ಪ ಎಂದು ಆರತಿ ಮಾಡಿ ಬೀಳ್ಕೊಡುತ್ತಿದ್ದರು.

      ನಮಗೆಲ್ಲ ಬೇಜಾರು, ವಿಸರ್ಜನೆಗೆ ವೀರಗಾಸೆಯವರು, ಕಂಸಾಳೆಯವರು ಎಲ್ಲ ಬಂದು ಕುಣಿಯುತ್ತಿದ್ದರು. ರಸ್ತೆ ತುಂಬಾ ಪಟಾಕಿ ಹಚ್ಚುತ್ತಿದ್ರು. ಅವರ ಹಾಗೆ ನನಗೂ ಮೀಸೆ ಬಳಿಸಿಕೊಳ್ಳಬೇಕು, ವಿಸರ್ಜನೆಗೆ ಲಾಲ್ ಬಾಗ್ ಕೆರೆಗೆ ಹೋಗಬೇಕೆಂದು ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದ್ದೆ. ಅವೆಲ್ಲಾ ನಡಿದೆ ಮನೇಲೆ ಕೂರಬೇಕಾಗಿತ್ತು. ನಂತರ ನಾವೂ ದೊಡ್ಡವಾರಾದ್ವಿ. ಈ ವರ್ಷ ಹಬ್ಬದ ಮುಂದಿನ ವಾರಕ್ಕೆ ಪೆಂಡಾಲ್. ರಸ್ತೆಯನ್ನ ಬ್ಲಾಕ್ ಮಾಡಿದ್ದಾರೆ. ರಸ್ತೆಗೆ ಅಡ್ಡವಾಗಿ ಪಿಲ್ಲರ್ ನಿಲ್ಸ್ತಾರಲ್ಲ ತಲೆ ಇಲ್ವಾ ಎಂದು ನಾನೆ ಬೈದು ಕೊಂಡೆ. ನಾನೂ ದೊಡ್ಡವಳಾಗೋದೆ!

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+