ಮಾಯೆ 2 : ನದಿಗಳ ಸಂಗಮ ಮತ್ತು ಸಂಗೀತ ಸಂಭ್ರಮ!
ಹಿಂದಿನ ದಿವಸ ಕಾಲು ನೋಯಿಸಿಕೊಂಡು, ಸುಮ್ಮನೆ ಕೆಲವು ಕನ್ನಡ ಬ್ಲಾಗ್ ಗಳನ್ನ ಓದಿಕೊಂಡು ಅರೆನಿದ್ರೆಯಲ್ಲಿದ್ದ ನನಗೆ ಎಬ್ಬಿಸಿದ್ದು "ಎದ್ದೇಳು ಮಂಜುನಾಥ" ಎಂಬ ಅಲಾರಾಮ್ ಸದ್ದು.
ಎದ್ದು ನಾವು ಇಳಿದುಕೊಂಡಿದ್ದ ಮನೆಯ ಒಡೆಯನನ್ನ ಭೇಟಿ ಮಾಡಿ ಅವತ್ತಿನ ಬೆಳಗ್ಗಿನ ಅದೇ ಬ್ರೆಡ್, ಕಾರ್ನ್ ಫ್ಲೇಕ್ಸ್, ಹಾಲು ಕುಡಿದು ಮತ್ತೆ ಅದೇನೋ ಬ್ರೆಡ್, ಚೀಸನ್ನ ಚೀಲಕ್ಕೆ ಹಾಕಿಕೊಳ್ಳುವಾಗ ಮನೆಯ ಒಡೆಯ "you are also vegetable, I am also vegetable" ಅಂದ. ನನಗೆ ಒಮ್ಮೆ ಕಕ್ಕಾಬಿಕ್ಕಿಯಾಗಿ ಏನು ಎಂದಾಗ ನನ್ನ ಅಣ್ಣನ ಸ್ನೇಹಿತ "ಸಸ್ಯಾಹಾರಿಗಳಾ ಎಂದು ಕೇಳಿದ್ದು ಅವನು ಹೀಗೆ" ಎಂದಾಗ ಬಿದ್ದು ಬಿದ್ದು ನಕ್ಕಿದ್ದೆ.
ಹಿಂದಿನ ದಿವಸಕ್ಕಿಂತ ಬಹು ಬೇಗ ತಯಾರಾಗಿ ನಿಂತಿದ್ದ ನನಗೆ ಅಣ್ಣ ಅಂದಿದ್ದು "ಇವತ್ತು 14 ಕಿಲೋಮೀಟರ್ ಇರೋ ನಡಿಗೆ, ಸಣ್ಣ ಸಣ್ಣ ಗುಡ್ಡಗಳು ಸಹ ಸಿಗುತ್ತವೆ. ನಿಂಗ್ಸ್ಲಿಂಗ್ಪೋ ದಾರಿಯಲ್ಲಿಯೇ ಹೋಗಬೇಕು, ನಿನ್ನೆ ಮಾಡಿದ್ದೆಲ್ಲಾ ಚಿಕ್ಕಮಕ್ಕಳು ಮಾಡೋದು" ಎಂದು ಹೇಳಿ ಮತ್ತೆ ಭಯ ಪಡಿಸಿದ.
ಬೆಳಗ್ಗೆ ಮೊದಲು ಕಂಡಿದ್ದೆ ನನಗೆ ಕಾಲು ದಾರಿ ಇಲ್ಲದ ಗುಡ್ಡ. ಹಿಡಿದುಕೊಳ್ಳಲು ಅಲ್ಲಲ್ಲಿ ದೊಡ್ಡ ದೊಡ್ಡ ಹಗ್ಗಗಳು. ಯಾವತ್ತು ನಂಬದ್ದಿದ್ದ ದೇವರುಗಳ ಹೆಸರೆಲ್ಲ ಅವತ್ತು ಬಾಯಿಂದ ಹೊರಬಂದಿದ್ವು. ನನ್ನ ಮುಂದೆ ಅಣ್ಣ ಹಾಗು ಅವನ ಸ್ನೇಹಿತರು ಆರಾಮಾಗಿ ನಡೆದು ಹೋಗುತ್ತಿದ್ದರೆ ನಾನು ಅದೆಲ್ಲಿ ಕಾಲಿಟ್ಟು ಎಲ್ಲಿ ಬೀಳುತ್ತೇನೋ ಎಂದು ತಲೆ ಕೆಡಿಸಿಕೊಂಡು ನಡೆಯುತ್ತಿದ್ದೆ. ಆ ಚಳಿಯಲ್ಲಿ ಮೆಲ್ಲಗೆ ಬೆವರಿಳಿಯಲು ಶುರುಮಾಡಿತ್ತು. ದಾರಿಯಿಲ್ಲ, ವಾಪಸ್ಸು ಹೋಗಲು ಭಾಷೆ ಗೊತ್ತಿಲ್ಲ ಎಂದೆಲ್ಲಾ ಎಂದುಕೊಂಡು ಮುಂದೆ ನಡೆದೆ.
ಅಲ್ಲೊಂದು ಕಲ್ಲಿಗೆ ಸಿಕ್ಕಿ ಬಿದ್ದು ಇನ್ನೇನು ಸದ್ಯ ಎಲ್ಲರೂ ವಾಪಸ್ಸು ಹೋಗೋದು ಎಂದು ಖುಶಿಯಾಗಿದ್ದಾಗ ಅಣ್ಣ "ನಾವು ದಾರಿ ತಪ್ಪಿದ್ದೀವಿ, ಈಗ ಸುತ್ತುಹಾಕಿಕೊಂಡು ಹೋಗಬೇಕು, ನೋಡೋಣ ಎಲ್ಲಿ ಹೋಗಿ ಮುಟ್ಟುತ್ತೇವೋ " ಎಂದು ಆರಾಮಾಗಿ ಹೇಳಿ ಅವನ ಜ್ಯೂಸ್ ಪ್ಯಾಕೆಟನ್ನ ಕುಡಿಯುತ್ತಾ ಕುಳಿತ. ಅವನ ಸ್ನೇಹಿತ ಇನ್ನೂ ಕಾಲೆಳಿಯುವುದಕ್ಕೆ "ನಿನ್ನ ಬರವಣಿಗೆಗೂ ನಡಿಗೆಗೂ ಇರುವ ವ್ಯತ್ಯಾಸವನ್ನ ಕಂಡು ಹಿಡಿಯುವುದಕ್ಕೆ ಒಂದು ಪಿಎಚ್ ಡಿ ಮಾಡಬಿಡಬಹುದು" ಎಂದು ರೇಗಿಸಿ ಮತ್ತಷ್ಟು ಕುಪಿತಗೊಳ್ಳಿಸುತ್ತಿದ್ದ.

ಹದಿನೈದೋ ಇಪ್ಪತ್ತೋ ದೇವರೇ ಬಲ್ಲ!
ಹೀಗೆ ಸಾಗುತ್ತಾ ಸಾಗುತ್ತಾ ಅಂತೂ ಒಂದು ಬೆಟ್ಟದ ತುದಿಯನ್ನ ತಲುಪಿದ್ವಿ. ಅಷ್ಟೊತ್ತಿಗೆ ಸೂರ್ಯ ಮುಳುಗಿದ್ದ. ಅದು 14 ಕಿಲೋಮೀಟರ್ ಆಗಿತ್ತೋ, ಹದಿನೈದಾಗಿತ್ತೋ ಇಲ್ಲ ಇಪ್ಪತ್ತಾಗಿತ್ತೋ ದೇವರೇ ಬಲ್ಲ. ಮತ್ತೆ ಅಣ್ಣ ನಮ್ಮ ಕಾರಿರೋದು ಆ ಬೆಟ್ಟದ ಹತ್ತಿರ ಮತ್ತೆ ಇಳಿದು ಹತ್ತಬೇಕು ನೋಡು ಅಂದಾಗ ಕಣ್ಣೀರು ಕೋಡಿ ಹರಿದು, ಕೋಪ ಬಂದು ಇನ್ನೇನು ಬಯ್ಯಲು ಶುರುಮಾಡಿದಾಗಲೇ ಅದು ತಮಾಶೆ ಎಂದು ಗೊತ್ತಾಗಿದ್ದು.

ದಾರಿ ತಪ್ಪಿಸಿದ್ದೇ ಎರಡು ನದಿಗಳ ತಿರುವು
ತೀರ ಅಂತರ್ಜಾಲ, ಮೊಬೈಲ್ ಫೋನ್ ಇವೆಲ್ಲವನ್ನೇ ನಂಬಿಕೊಂಡಿದ್ದ ನನಗೆ ಕಾಗದದ ನಕಾಶೆಯನ್ನ ಓದೋದಕ್ಕೆ ಕಲಿಸಿದ್ದು ಈ ಚಾರಣ. ಎರಡು ನದಿಗಳು ಸಂಗಮವಾಗುವ ಕಡೆ ಬಲಕ್ಕೆ ತಿರುಗುವ ಬದಲು ಎಡಕ್ಕೆ ತಿರುಗಿದ್ದೇ ನಮ್ಮ ಪೂರ್ತಿ ಚಾರಣದ ದಾರಿ ತಪ್ಪಿಸಿದ್ದು. ದಾರಿ ಇಲ್ಲದ ಕಡೆ ದಾರಿ ಮಾಡಿಕೊಂಡು, ಕಲ್ಲು ಗುಡ್ಡದ ಮೇಲೆ ನಡೆದಾಡುತ್ತಾ, ಉರುಳಾಡಿಕೊಂಡೆಲ್ಲಾ ಬಂದು ನೋಡಿದ್ದು ಸೂರ್ಯಾಸ್ತವನ್ನು ಮಾತ್ರ.

ಬೇರೆ ಲೋಕಕ್ಕೆ ಹೋಗಿದ್ದು ಸುಳ್ಳಲ್ಲ
ಕತ್ತಲಾವರಿಸಿದಾಗ ಆಗುವ ಮೌನ, ತದೇಕಚಿತ್ತದಿಂದ ನೋಡುವ ಭಾವನೆ ಇವೆಲ್ಲವೂ ಯಾವುದೋ ಬೇರೆ ಲೋಕಕ್ಕೆ ಕರೆದುಕೊಂಡು ಹೋಗಿದ್ದು ಸುಳ್ಳಲ್ಲ. ನಾಳೆ ಮತ್ತೆಷ್ಟು ನಡೆಸುತ್ತಾನೋ ಅಣ್ಣ ಎಂದು ಯೋಚನೆ ಮಾಡುತ್ತಿದ್ದಾಗ, ಇನ್ನು ಕೊರೆಯುವ ಚಳಿ ತಡೆದುಕೊಳ್ಳಲಾಗುವುದಿಲ್ಲ, ಸ್ನೇಹಿತನನ್ನ ಬೇರೆ ಕಡೆ ಬಿಡುವುದಕ್ಕೆ ಹೋಗೋದಕ್ಕೆ ಒಂದು ಸುಂದರ ಜಾಗಕ್ಕೆ ಹೋಗುವ ಯೋಜನೆ ಮಾಡಿಕೊಂಡಿದ್ದೀವಿ ಎಂದರು.

ಸೇತುವೆ ಮೇಲೆಲ್ಲಾ ಸಾಕ್ಸೋಫೋನ್ ಪ್ರತಿಕೃತಿ
ನಾನು ಇನ್ಯಾವ ಬೆಟ್ಟ ಹತ್ತೋದು ಅಂತ ಯೋಚನೆ ಮಾಡುತ್ತಿದ್ದಾಗ ಸಿಕ್ಕಿದ್ದೇ Dinant ಅನ್ನೋ ಜಾಗ. ಬ್ರುಸ್ಸೆಲ್ಸ್ ಇಂದ 90 ಕಿಲೋಮೀಟರ್ ದೂರ. ಮ್ಯುಎಸೆ ನದಿ ತೀರದಲ್ಲಿರುವ ಈ ಊರು, ಅದರ ಸೇತುವೆ ಮೇಲೆಲ್ಲಾ ಸಾಕ್ಸೋಫೋನ್ ನ ಪ್ರತಿಕೃತಿಗಳು. ನಾನು ಇದ್ಯಾಕೆ ಹೀಗೆ ಎಂದು ಯೋಚಿಸುತ್ತಿರುವಾಗ ಈ ನಗರದಲ್ಲಿಯೇ ಇಂತಹ ಸುಂದರವಾದ ವಾದ್ಯವನ್ನ ಕಂಡು ಹಿಡಿದ್ದಿದ್ದ ಅಡಾಲ್ಫ್ ಸ್ಯಾಕ್ಸ್ ನ ಹುಟ್ಟೂರು ಎಂದು ತಿಳಿಯಿತು.

ನಮ್ಮ ವಾದ್ಯಗಾರರನ್ನು ಸಂಭ್ರಮಿಸುವುದು ಯಾವತ್ತು?
ಹಿತ್ತಾಳೆಯಿಂದ ಮಾಡುವ ಈ ವಾದ್ಯವನ್ನ ಮೊದಲಬಾರಿಗೆ ಚಿಕ್ಕವಳ್ಳಿದ್ದಾಗ ನೋಡಿದ್ದೆ. ಮೊದಲ ಬಾರಿಗೆ ಊರಿಗೆ ಊರೇ ತನ್ನ ಊರಲ್ಲಿ ಹುಟ್ಟಿದ ವಾದ್ಯವನ್ನ ಸಂಭ್ರಮಿಸುವುದನ್ನು ಕಂಡಿದ್ದು. ಈ ಊರಿಗೆ ಯಾರೇ ಹೋದರೂ ಸ್ಯಾಕ್ಸೋಫೋನ್ ಬಗೆಗಿನ ಇತಿಹಾಸ, ಅಡಾಲ್ಫ್ ನ ಬಗ್ಗೆ ಕಥೆಗಳು ಹೇರಳವಾಗಿ ಸಿಗುತ್ತವೆ. ಒಮ್ಮೊಮ್ಮೆ ಬೇಜಾರಾಗೋದು ನಮ್ಮಲ್ಲಿ ಇಂತಹ ರೀತಿ ನಮ್ಮ ವಾದ್ಯ-ವಾದ್ಯಗಾರರನ್ನ ಯಾವಾಗ ಸಂಭ್ರಮಿಸುತ್ತೇವೆಯೋ ಎಂದು ಅಲ್ಲಿಂದ ಬ್ರುಸ್ಸೆಲ್ಸ್ ನಗರಕ್ಕೆ ಅರ್ಧ ರಾತ್ರಿ ಮುಟ್ಟಿ ನಂತರ ಐಂಧೋವೆನ್ ನಗರಕ್ಕೆ ಪ್ರಯಾಣ ಬೆಳೆಸಿದ್ವಿ.
ಮುಂದಿನ ವಾರ ಕ್ರೆಮ್ಲಿನ್ ಹಾಗೂ ಪಾನಿಪೂರಿ
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications