ಮಾರ್ಕ್ಸ್ ಕಡಿಮೆ ಬಂದ್ರ ಕಪಾಳದ ಮೇಲೆ ಮಾರ್ಕು!

ಮಾರ್ಕುಗಳ ವಿಷಯ ಬಂದಾಗಲೆಲ್ಲಾ ನನಗೆ ನನ್ನ ಆರನೇ ತರಗತಿಯ ಸ್ನೇಹಿತ ನೆನಪಾಗುತ್ತಾನೆ. ಆಗ ನಮ್ಮ ಗಣಿತದ ಗುರುಗಳು ಒಂದು ಒಳ್ಳೆಯ ರೂಢಿಯನ್ನು ನಮಗೆ ಕಲಿಸುವ ಪ್ರಯತ್ನದಲ್ಲಿದ್ದರು. ಯಾವುದೇ ಲೆಕ್ಕದ ಕೊನೆಗೆ ಬರುವ ಉತ್ತರವನ್ನು ಅಂಡರ್ಲೈನ್ ಮಾಡಿ, ಅದರ ಪಕ್ಕ ನಾವು ಕೋಡಿನಲ್ಲಿ ಕಮೆಂಟು ಬರೆಯುವ ರೀತಿಯಲ್ಲಿ "Ans" ಎಂದು ಬರೆಯಿರಿ ಎಂದಿದ್ದ ನಮ್ಮ ಗುರುಗಳು ಪರೀಕ್ಷೆಯಲ್ಲಿ ಹಾಗೇ ಮಾಡದಿದ್ದರೆ ಅರ್ಧ ಮಾರ್ಕು ಕಡಿಯುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಆ ಸಲದ ಯುನಿಟ್ ಟೆಸ್ಟಿನಲ್ಲಿ ನಾನು ಚೆನ್ನಾಗಿ ಮಾಡಿದ್ದರಿಂದ ಇಪ್ಪತ್ತೈದಕ್ಕೆ ಇಪ್ಪತ್ತೈದು ಬಂದಿತ್ತು. ನಾವೆಲ್ಲಾ ಉತ್ತರಪತ್ರಿಕೆಗಳನ್ನು ನೋಡಿಕೋಳ್ಳುತ್ತಿರುವಾಗ ನನ್ನ ಸ್ನೇಹಿತ ನನ್ನ ಉತ್ತರ ಪತ್ರಿಕೆಯನ್ನು ಇಸಿದುಕೊಂಡು ತನ್ನ ಉತ್ತರಗಳೊಡನೆ ಹೊಲಿಸಿಕೊಳ್ಳತೊಡಗಿದ. ಒಂದು ಉತ್ತರಕ್ಕೆ ನಾನು "Ans" ಎಂಬ ಶ್ರೀಕಾರ ಹಾಕಿರಲಿಲ್ಲ. ನನ್ನ ಸ್ನೇಹಿತ ನೇರವಾಗಿ ನಮ್ಮ ಗುರುಗಳ ಹತ್ತಿರಹೋಗಿ ಅದನ್ನು ತೋರಿಸಿದ್ದ. ಕೊಟ್ಟ ಮಾತಿಗೆ ತಪ್ಪದ ಗುರುಗಳು, ಅರ್ಧ ಮಾರ್ಕು ಕಡಿದು ಕೊಟ್ಟಿದ್ದರು. ಇಪ್ಪತ್ತೈದಕ್ಕೆ ಇಪ್ಪತ್ತೈದು ಬಂದ ಖುಷಿಯಲ್ಲಿದ್ದ ನನ್ನ ಬಲೂನಿಗೆ ಸೂಜಿ ಚುಚಿದ್ದರು. ಈ ಘಟನೆಯಾಗಿ ಈಗ ಇಪ್ಪತ್ತು-ಇಪ್ಪತ್ತೈದು ವರುಷಗಳಾಗಿವೆ. ಮಾರ್ಕುಗಳ ವಿಷಯ ಬಂದಾಗಲೆಲ್ಲ ನನಗೆ ಅರ್ಧ ಮಾರ್ಕು ಕಡಿಸಿದ ಗೆಳೆಯ ನೆನಪಾಗುತ್ತಾನೆ, ಮತ್ತು ಪ್ರತೀ ಸಲವೂ ಅವನು ಮಾರ್ಕು ಕಡಿಸಿದ್ದಕ್ಕೆ ನಾನು ಹಲ್ಲು ಕಡಿಯುತ್ತೇನೆ!
ಈಗ ಹೇಗೊ ಏನೋ ಗೊತ್ತಿಲ್ಲ, ನಾವು ಸಣ್ಣವರಿದ್ದಾಗ ಮಾತ್ರ ಮಾಸ್ತರುಗಳು ನಮ್ಮ ಮಾರ್ಕುಗಳಿಗೆ ಬಹಳ ಮಹತ್ವಕೊಡುತ್ತಿದ್ದರು. ಈಗ ವಿಶ್ವವಿದ್ಯಾಲಯಗಳಲ್ಲಿ ಮಾರ್ಕ್ಸವಾದಿಗಳು ಸೇರಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆಂದು ಆರೋಪಗಳಿವೆ. ನಮ್ಮ 'ಮಾರ್ಕ್ಸ್'ವಾದಿ ಮಾಸ್ತರುಗಳು ಕೂಡ ನಮಗೆ ಕಡಿಮೆ ಮಾರ್ಕು ಬಂದಾಗ ಕೊಡುತ್ತಿದ್ದ ಹಿಂಸೆಯೇನು ಕಡಿಮೆಯಿರಲಿಲ್ಲ. ಕಡಿಮೆ ಮಾರ್ಕು ಬಂದರೆ ಅವರು ನಮ್ಮ ಕಪಾಳದ ಮೇಲೆ ತಮ್ಮ ಬೆರಳುಗಳ ಮಾರ್ಕು ಮೂಡಿಸಿ ಕಡಿಮೆಯಾದ ಮಾರ್ಕುಗಳಿಗೆ ಸಮಾ ಮಾಡಿಕೊಳ್ಳುತ್ತಿದ್ದರು. ನಾವು ಏನಾದರೂ ಕಿತಾಪತಿ ಮಾಡಿದಾಗ, I mean ಮಾಡಿ ಸಿಕ್ಕಿಕೂಡ ಬಿದ್ದಾಗ, ನಮ್ಮ ಗುರುಗಳು ಪೂಜೆ ಶುರುಮಾಡುತ್ತಿದ್ದುದುದೇ "ಈ ಸಲದ ಯುನಿಟ್ ಟೆಸ್ಟನ್ಯಾಗ ಮಾರ್ಕು ಎಷ್ಟು ಬಂದಾವು?" ಎಂಬ ನಾಂದಿಯಿಂದ. ಕಡಿಮೆ ಮಾರ್ಕು ಬಂದಿದ್ದರೆ ಉಗ್ರವಾಗುತ್ತಿದ್ದ ಪೂಜೆ, "ಎದೀ ಸೀಳಿದರ ನಾಕ ಅಕ್ಷರ ಇಲ್ಲ, ಕಿತಾಪತಿ ಮಾಡ್ತಾನ, ಕಿತಾಪತಿ" ಎಂಬ ಮಂತ್ರದ ಪುನರುಚ್ಚಾರದ ನಡುವೆ ಸಾಂಗವಾಗುತ್ತಿತ್ತು. ಒಂಚೂರು ಅಡ್ದಿಯಿಲ್ಲ ಎನ್ನಬಹುದಾದ ಮಾರ್ಕು ಬಂದಿದ್ದರೆ, "ಏನು ಅಷ್ಟೇ ಸಾಕಾ?" ಎಂತಲೊ, "ಮಾರ್ಕು ಛಲೊ ಬಂದಾವಂತ ಕೊಡು ಮೂಡ್ಯಾವಾ?" ಎಂಬ ಸ್ತುತಿಯಿಂದ ಸೌಮ್ಯವಾಗಿಯೇ ಮುಗಿಯುತ್ತಿತ್ತು.
ಶಾಲೆಯಲ್ಲಷ್ಟೇ ಅಲ್ಲ, ನಮ್ಮ ಮಾಸ್ತರುಗಳ ಜೀವನದಲ್ಲಿ ಕೂಡ ಮಾತು ಮಾರ್ಕು, ಪಾಸು-ನಪಾಸು, ಫಸ್ಟ್ ಕ್ಲಾಸು-ಸೆಕೆಂಡು ಕ್ಲಾಸುಗಳ ಸುತ್ತನೇ ಸುತ್ತುತ್ತಿದ್ದವು. ಉದಾಹರಣೆಗೆ ಶಾಲೆಯಿಂದ ಮರಳಿದ ತಕ್ಷಣ ಹೆಂಡತಿ ತಿಂಡಿ ಕೊಟ್ಟರೆ ಅದಕ್ಕೆ ನಮ್ಮ ಮಾಸ್ತರರು ಕೊಡುತ್ತಿದ್ದ ಟಿಪಿಕಲ್ ಫೀಡ್ಬ್ಯಾಕ್ ಹೀಗಿರುತ್ತಿತ್ತು "ಮೆಣಸಿನಕಾಯಿಬಜಿ ಫಸ್ಟ್ ಕ್ಲಾಸ್ ಆಗ್ಯಾವು. ಚುಮ್ಮರಿ ಅಡ್ಡಿಯಿಲ್ಲ, ನೂರಕ್ಕ ಐವತ್ತು ಕೊಡಬಹುದು. ಆದರ ಚಾ ಮಾತ್ರ ನಪಾಸ್ - ತೀರ ಕಲಗಚ್ಚ ಆಗೇತಿ"!
ಈ 'ಅಂಕಾ'ಲಾಜಿ - ಅಂಕಗಳಿಗೆ ಅನವಶ್ಯಕ ಪ್ರಾಮುಖ್ಯತೆ ಕೊಡುವ ರೋಗ, ಒಂದು ಬಗೆಯ ಕ್ಯಾನ್ಸರ್ - ಆವಾಗ ಬಹಳ ಪಾಲಕರಿಗೆ ಅಮರಿಕೊಂಡಿತ್ತು. ನಮ್ಮಂತಹ ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಅಷ್ಟೇನು ಹದಗೆಟ್ಟಿರಲಿಲ್ಲವಾದರೂ, ನಗರ ಪ್ರದೇಶದಲ್ಲಿ ಅದು ಅತಿಯಾಗಿತ್ತು. ಇಲ್ಲವಾದರೆ, ಜೀವನದಲ್ಲಿ ಎಂದೆಂದಿಗೂ, ಯಾರ್ಯಾರಿಗೂ ಉಪಯೋಗವಾಗದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚಿನ ಮಾರ್ಕ್ಸ್ ಬರುತ್ತವೆ ಎಂಬ ಮೂಢನಂಬಿಕೆಯಿಂದ ಕನ್ನಡದ ಬದಲು ಸಂಸ್ಕೃತ ವಿಷಯ ತೆಗೆದುಕೊಳ್ಳಲು ಪಾಲಕರು ಯಾಕೆ ಒತ್ತಾಯ ಮಾಡುತ್ತಿದ್ದರು? ಅದಿರಲಿ, ಆದ್ಯಾವನೋ ಅಡ್ಡಕಸುಬಿ ಮಾಸ್ತರು ತನ್ನ ಹತ್ತಿರ ಟ್ಯೂಶನ್ನಿಗೆ ಬಂದವರಿಗೆ ಕ್ಲಾಸ್ ಪರೀಕ್ಷೆಗಳಲ್ಲಿ ಹೆಚ್ಚಿನ ಮಾರ್ಕು ಕೊಡುತ್ತಾನೆ ಎಂದು ಅವನ ಹತ್ತಿರ ತಮ್ಮ ಮಕ್ಕಳನ್ನು ಯಾಕೆ ಕಳುಹಿಸುತ್ತಿದ್ದರು?
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications