Get Updates
Get notified of breaking news, exclusive insights, and must-see stories!

ದೇವೇಗೌಡರ ಹೊಸಾ ಡೀಲು

Venkatesh Dodmane
* ವೆಂಕಟೇಶ್ ದೊಡ್ಡಮನೆ

ಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು. ಮಸೀದಿ ಕಮಿಟಿಯವರು ಬಂದವ್ರೆ ಅಂದಮೇಲಂತೂ ಗೌಡರ ಮುಖ ಹುಣ್ಣಿಮೆ ಚಂದ್ರನಂತಾಯಿತು.

'ಎಲ್ಲಾ ಕಾಲ ಕೂಡಿ ಬರ್ತಾ ಐತೆ,... ಇನ್ನು ತಿರುಗಾ ಎಲ್ರೂ ಈ ಗೌಡನ್ನ ಆಶೀರ್ವಾದ ತಗಳಕ್ಕೆ ಎಲ್ಲಾ ಬತ್ತವ್ರೆ ನೋಡು....' ಮನಸ್ಸಿನಲ್ಲೇ ಅಂದ್ಕಳ್ತಾ ಮುದ್ದೆಯನ್ನು ಅರ್ಧಕ್ಕೇ ಬಿಟ್ಟು ಕೈಯನ್ನು ನೀರಿಗೆ ಮುಟ್ಟಿಸಿ ಹೆಗಲಮೇಲಿದ್ದ ಟವಲ್ಲಿಗೆ ಒರೆಸಿಕೊಂಡು ಮನೆಯ ಮುಂದಿನ ಮೀಟಿಂಗ್ ಹಾಲಿಗೆ ದಡಬಡಿಸಿಕೊಂಡು ಓಡಿದರು. ಹೋಗುವಾಗ ಅಲ್ಲೇ ಗೂಟದ ಮೇಲೆ ಇಟ್ಟಿದ್ದ ಬಿಳಿಯ (ಮಸೀದಿ) ಟೊಪ್ಪಿ ಹಾಕ್ಕೊಂಡು ಹೋಗಲು ಮರೆಯಲಿಲ್ಲ. ಚೆನ್ನಮ್ಮ ಅಡುಗೆ ಮನೆಯಿಂದಲೆ ತಾನು ಕೈಯ್ಯಾರೆ ಮಾಡಿದ ಮುದ್ದೆ-ಬಸ್ಸಾರು ಉಣ್ಣಲಿಲ್ಲವಲ್ಲ ಅಂತ ಮುನಿಸಿಕೊಂಡು ನೋಡ್ತಲೇ ಇದ್ದರು.

"ಸಲಾಂ ಗೌಡ ಸಾಬ್" ಮುಲ್ಲಾ ಸಾಬರು ಕೈ ಎದೆ ಹತ್ರ ಅಡ್ಡಾ ಇಟ್ಟು , ಗೌಡರೂ ಅದೇ ಸ್ಟೈಲಲ್ಲೇ ಕೈ ಅಡ್ಡ ಇಡ್ತಾ,"ಇದೇನ್ ಮುಲ್ಲಾ ಸಾಬರೇ, ಫೋನ್ ಮಾಡಿದ್ದರೆ ನಮ್ಮ ಸಿಸ್ಯನ್ನ ಕಳುಸ್ತಿದ್ನಲ?" ಸಿಸ್ಯ ಅಂದರೆ 'ಡ್ರೈವರ್ರು' ಅಂತ ಆ ಸಾಬರಿಗೇನು ಗೊತ್ತು. "ನೀವು ರೆಸ್ಟ್ ತೊಗೊಳ್ತಾ ಇದ್ರಿ ಅಂತ ಕಾಣುಸ್ತೈತೆ, ತೊಂದ್ರೆ ಕೊಟ್ಟೆ ಗೌಡ ಸಾಬ್" ಪಾಪ ಬೆಳಿಗ್ಗೆಯಿಂದ ಉಪಾಸ ಮಾಡಿದ್ದ ಅವ್ರಿಗೇನು ಗೊತ್ತು ಗೌಡರು ಏನ್ಮಾಡ್ತಿದ್ರು ಅಂತ.

"ಏ ಇಲ್ ಬುಡಿ, ರಂಜಾನ್ ಮಂತ್ ಅಲ್ವರಾ, ಅದಿಕ್ಕೆ ಬೆಳಿಗ್ಗಿಂದ ಉಪಾಸ ಇದ್ಕ್ಕೊಂಡು ಅಲ್ಲಾನ ಪ್ರೇಯರ್ ಮಾಡ್ತಿದ್ವಿ" ...YSV ದತ್ತುಗೆ ಒಳಗೊಳಗೇ ನಗು ಬಂದರೂ ತಡೆದುಕೊಂಡ್ರು. ಸರೋಯ್ತು,.... ಅವರ್ಗೆಲ್ಲ ನಿಜ ಹೇಳಕ್ಕಾಯ್ತದ? ಮುಲ್ಲಾ, ಗೌಡರ ತಲೆ ಮೇಲಿದ್ದ ಟೊಪ್ಪಿ ನೋಡಿ ಬಹಳ ಇಂಪ್ರೆಸ್ಸ್ ಆಗೋದ್ರು. ಏನು ತಲೆ, ಏನು ಬಾಡಿ, ಏನು ಲುಕ್ಕೂ...ಎಲ್ಲಾ ಅಲ್ಲಾನ ಮಹಿಮೆ.. ಆದರೆ ಟವಲ್ಲು ಇಷ್ಟ ಆಗಲಿಲ್ಲ! ಗೌಡರು ಸುಮ್ಮನೆ ನಿಂತೇ ಇದ್ದಿದ್ದು ನೋಡಿ, ಸಾಬರೇ ಅಪ್ಪಿಕೊಳ್ಳೋಕೆ ಕೈ ಚಾಚಿದರು. ಗೌಡ ಲಗುಬಗೆಯಿಂದ "ರಂಜಾನ್ ಮುಬಾರಕ್ ಸಾಬರೆ" ಅಂತ ನಿಂತಿದ್ದ ನಾಲ್ಕೂ ಜನ ಸಾಬರಿಗೆ ಎರೆಡೆರಡು ಕಡೆ ಅಪ್ಪಿ, ಅಪ್ಪಿ, ಮುದ್ದಾಡಿಬಿಟ್ಟರು. ಅವರಿಗಂತೂ ಬೆಳಿಗ್ಗೆಯಿಂದ ಕಂಡ ಕಂಡವರಿಗೆ ತಬ್ಬಿಕೊಂಡು ಸಾಕ್ ಸಾಕಾಗಿತ್ತು, ಆದರೂ ಗೌಡರು ಅಲ್ವಾ....ಹೆಂಗೂ ಮುಂದಿನ ಜನ್ಮದಲ್ಲಿ ನಮ್ಮೊಳಗೆ ಹುಟ್ತೀನಿ ಅಂತ ಹೇಳವ್ರೆ....

ಅಷ್ಟೊತ್ತಿಗೆ ಆ ಜಾಗವೆಲ್ಲಾ ಸೆಂಟ್ ನಿಂದ ಘಂಗುಡುತ್ತಿತ್ತು. ಈ ಸಾಬರುಗುಳು ಎಲ್ಲಿಂದ ಈಪಾಟಿ ಒಳ್ಳೆ ಸೆಂಟ್ ತತ್ತಾವ್ರೆ, ಹಿಂದಿನ ಸಲ ಅವರ್ಕೊಟ್ಟಿದ್ದು ಇಷ್ಟು ಘಮ್ ಗುಡ್ತಿರ್ಲಿಲ್ವಲ..... ಇರ್ಲಿ ಬುಡು..... ಈ ಸಲ ಸಿಸ್ಯನಿಗೆ ಹೇಳಿ ದುಬಾಯಿ ಸೆಂಟ್ ತರ್ಸಣ ...ಎಲ್ಲರೂ ಸುಮ್ನಿದ್ದಿದ್ದು ನೋಡಿ ದತ್ತು, "ಎಲ್ಲ ಕುಂತ್ಗಳಿ ಯಾಕೆ ನಿಂತೇ ಇದೀರಲ"... ಏನರ ಯವಾರ ಇದ್ರೆ ಕುದುರ್ಸನ ಅಂತ ಅವರೂ ಹೊಂಚ್ ಹಾಕ್ತಾ ಇದ್ರು. ಗೌಡರಿಗೂ ಸೆಂಟ್ ನಿಂದಾಗಿ ಒಂದಪ ಎಲ್ಲ ಮರ್ತೇ ಹೋಗಿತ್ತು. ಅವರೂ "ಕುಂತ್ಗಳಿ , ಕುಂತ್ಗಳಿ" ಅನ್ನುತ್ತಾ ಕೈಸನ್ನೆ ಮಾಡಿದರು. ಗೌಡರು ಸೋಫಾದಲ್ಲಿ ಕುಳಿತು, ದೆಹಲಿಯ ಸಿಂಹಾಸನ ದಿನಗಳ ಸ್ಟೈಲಿನಲ್ಲೇ ತಲೆಗೆ ಕೈ ಊರಲು ಹೊರಟರು. ಇದನ್ನು ನೋಡಿದ ಮುಲ್ಲಾ, ಡೆಲ್ಲಿ ದರ್ಬಾರ್ ತರ ಎಲ್ಲಾದ್ರೂ ನಿದ್ದೆ ಹೋಗ್ಬಿಟ್ರೆ ಮುಶ್ಕಿಲ್ ಆಗುತ್ತೆ ಅಂತ, "ಗೌಡ ಸಾಬ್, ನಾಳೆಗೆ ರಾತ್ರೀಗೆ ಇಫ್ತಾರ್ ಕೂಟ ಮಡಿಕ್ಕೊಂಡಿದೀವಿ, ನೀವು ಬರ್ಬೇಕು"

'ಛೆ, ಛೆ..ಎಲ್ಲಾದರೂ ತಪ್ಸೋದು ಉಂಟೆ ಬತ್ತೀವ್ ಬುಡಿ' ಅಂತ ಹೇಳಣಾಂತ ಬಾಯಿ ತೆಗದವ್ರು...ಏನೋ ನೆನಪು ಮಾಡ್ಕೊಂಡು, ಟವಲ್ ಸರಿಸಿ ಜೇಬಿಂದ ಡೈರಿ ತೆಗೆದರು. ಏನು, ಒಂದು ಸೆಕೆಂಡೂ ಪುರುಸೊತ್ತು ಇಲ್ಲ ಅನ್ನೋ ಹಾಗೆ, "ಪ್ರೋಗ್ರಾಮು ಭಾಳ ಟೈಟ್ ಆಗ್ ಬುಟೈತೆ ಇಮಾಂ ಸಾಬ್ರೇ" ಎನ್ನುತ್ತಾ ದತ್ತೂನ ಕಡೆ ನೋಡಿದ್ರು. ದತ್ತು ಅರ್ಥವಾಯಿತು ಬುಡಿ ಅಂದುಕೊಂಡು,"ನಾಳೆ ಸಾಯಂಕಾಲ ಭೈರವನ್ ಗುಡಿಲಿ ಪೂಜೆ ಇತ್ತಲ ಕ್ಯಾನ್ಸಲ್ ಮಾಡಿಬುಡಾಣ ಬಿಡಿ" ಗೌಡರೂ ಸುಸ್ತಾಗೋ ಹಾಗೆ ಪಟ್ಟಂತ ಬಿಟ್ರು!

'ಆಹಾ ಎಂಥ ಮುತ್ತಿನಂಥ ಮಾತಡಿದ್ಯೋ ಪಟ್ಟ ಸಿಸ್ಯ' ಅಂತ ಅನ್ನೋಣ ಅಂದ್ರೆ ಎದ್ರಿಗೆ ಸಾಬರು ಅವ್ರೆ, ಗೊತ್ತಾಗ್ಬುಡುತ್ತೆ...ತಡೆದುಕೊಂಡರು. ಟವಲ್ ಸರಿ ಮಾಡಿಕೊಂಡು,"ಯಾವ ಯಾವ ಮುಖಂಡರು ಬತ್ತವ್ರೆ ಇಮಾಂ ಸಾಬ್ರೆ?" ರಾಜಕೀಯದಲ್ಲಿ ಗೌಡರನ್ನ ಮೀರ್ಸಕ್ಕೆ ಆಗುತ್ಯೇ? ಒಳಅರ್ಥ ಆಗದ ಮುಲ್ಲಾ ಸಾಬರು ಖುಷಿಯಿಂದ "ಗೌಡ ಸಾಬ್, ನಮ್ ದೊಡ್ ಮಸೀದಿ ಕಮಿಟಿಯಿಂದ ಬುಡಾನ್ ಸಾಬ್, ಡೆಲ್ಲಿ ಲಾಲ್ ಮಸ್ಜಿದ್ ನಿಂದ ಮಸ್ತಾನ್ ಸಾಬ್, ಭಟ್ಕಳದ ಮೀರ್ ಸಾಬ್, ಗುಂಟೂರಿನ ಹಮೀದ್ ಸಾಬ್, ಕೊಚ್ಚಿ ಬಡಾ ಮಸ್ಜಿದ್ ನಿಂದ ಇಬ್ರಾಹಿಮ್ ಸಾಬ್....." ಬೆರಳು ಮಡಿಸುತ್ತಾ ಮುಲ್ಲಾ ಸಾಬರ ಪಟ್ಟಿ ಬೆಳೆಯುತ್ತಲೇ ಇತ್ತು, ಗೌಡರು ದತ್ತೂ ಮುಖ ನೋಡಿದರು.

ದತ್ತು ಚಕ್ಕನೆ ಅರ್ಥ ಮಾಡಿಕೊಂಡು,"ಅಲ್ಲ ಇಮಾಂ ಸಾಬ್ರೆ, ನಿಮ್ಮೊರು, ನಮ್ಮ್ ಪಕ್ಷ ಆಯ್ತಲ್ಲ, ಆ ಕಡೆಯಿಂದ ಯಾರೂ ಬರಾಕಿಲ್ವಾ.." ಮುಲ್ಲಾಗೆ ಈಗ ಅರ್ಥ ಆಯಿತು, "ಓ ಅವರಾ, ಅವ್ರುನ್ನ ಬುಟ್ಬುಡಕೆ ಆಯ್ತದ... ಖರ್ಗೆ ಸಾಬ್, ಧರಮ್ ಸಿಂಗ್ ಸಾಬ್, ಸಿದ್ರಾಮಯ್ಯ ಸಾಬ್...." ನೆನಪು ಮಾಡ್ ಮಾಡ್ಕೊಂಡು ಬೆಟ್ಟು ಮಾಡಿಸ್ತಾನೆ ಇದ್ರು. ಗೌಡ್ರ ಮುಖ ಸಣ್ಣಕಾಕ್ತ ಇದ್ದಿದ್ದನು ನೋಡಿದ ಜೋತೆಯಲ್ಲಿದ್ದವರೊಬ್ರು "ಸಿದ್ರಾಮಯ್ಯ ಸಾಬ್ ನಹಿ...ಆತಾ" ಅಂದ್ರು. ಸದ್ಯ...! ಗೌಡರು ಒಳಗಾದ ಆನಂದ ತೋರ್ಸ್ಲಿಲ್ಲ, ಔರದ್ದು ಒಳರೂಟು ಬೇರೆದೇ ಇತ್ತು,

"ದೇಶಪಾಂಡೆ ಬರಾಕಿಲ್ವಾ?" ಮುಲ್ಲಾ ಕಡೆ ನೋಡಿ. ಮರಿ ಮುಲ್ಲಾ ತಾವೇನು ಕಮ್ಮಿ ಅಂತ ಬಾಯಿ ಹಾಕಿದರು, "ಔರದ್ದು ಹೊಸ ಅಪಾಯಿಂಟು ಅಲ್ವ, ಅವ್ರನ್ನ ಕರೆಯಕ್ಕೆ, ಗಂದದ ಮರದ ಹಾರ ಜತೆಗೆ ಇಬ್ರನ್ನ ಕಳ್ಸಿ ಕೊಟ್ಟಿದೀವಿ" ಜುಬ್ಬದ ಕಾಲರ್ ಸರಿ ಮಾಡ್ಕಂಡ್ರು. "ಜೀ.. ಗಂದದ್ ಮರ ನಹೀಜಿ, ಗಂದದ್ ಪೂಲ್ ಹಾರ" ಬಡಾ ಇಮಾಂ ಸಾಬ್ ವಾಕ್ಯ ಸರಿ ಮಾಡಿದರು."ಹೂಂ ಹೂಂ ಅದೇ ಅದೆ... ಪೂಲ್ ಹಾರ." ಮರಿ ತಿದ್ದಿ ಕೊಂಡರು! ದೇಶಪಾಂಡೆ ಬಂದೇಬರ್ತಾರೆ ಅಂತ ಗೌಡರಿಗೆ ಕರಾರುವಾಕ್ಕಾಗಿ ಗೊತ್ತಿತ್ತು. ಹಾಗಾಗಿ ಇನ್ನೇನು ಕೆಲಸ ಆಯ್ತಲ ಅಂತ ಗೌಡರು ಆಕಳಿಸುತ್ತಾ ಗಡಿಯಾರದ ಕಡೆ ನೋಡಿದರು. ಇಮಾಂ ಸಾಬರಿಗೆ ಅರ್ಥವಾಯಿತು.

"ಹಂಗಾದ್ರೆ ನೀವು ಹಾಜುರ್ ಇರ್ತೀರಲ್ಲ ಗೌಡಸಾಬ್" ಮುಲ್ಲಾ ಎದ್ದು ನಿಂತರು. ಗೌಡರು ದತ್ತೂನ ಕಡೆ ನೋಡಿದ್ರು. ಮುಲ್ಲಾಗೆ ಗೌಡರ ಒಳ ಮನಸ್ಸು ಗೊತ್ತಾಗ್ಬುಡ್ತು. ಒಹ್ ಬೀಗದ ಕೈ ಇಲ್ಲೈತಾ, "ದತ್ತ ಸಾಬ್ ಆಪ್ ಭೀ ಹಾಜುರ್ ಹೋ ಸ್ಸಾಬ್" ಅವ್ರು ಕರಿದೆಇದ್ರು ಗೌಡರಿಗೆ ಅಸಿಸ್ತೆಂಟು ಒಬ್ರು ಬೇಕೆ ಬೇಕಲ್ಲ...ಅನಾಯಾಸವಾಗಿ "ಆಗ್ಲಿ ಬಿಡಿ ಹಂ ಆಯೇಂಗೆ" ತಪ್ಪೋ ಸರಿಯೋ ಆ ಟೈಮಿಗೆ ಅವರಾ ಭಾಷೇಲೆ ಉತ್ರ ಕೊಟ್ರು. ಎಲ್ರುನ್ನು ಮತ್ತೊಮ್ಮೆ ಎರೆಡೆರಡು ಕಡೆ ತಬ್ಬಿ ತಬ್ಬಿ "ಬರ್ತೀವಿ ಬುಡಿ" ಅಂತ ಕಳಿಸಿ ಕೊಟ್ರು.ಗೌಡರ ಟವಲ್ಲು ಈಗ ಸುಮಾರು ಸೆಂಟ್ ಅಂಟ್ಕಂಡು 'ಘಮ್' ಅಂತಿತ್ತು. ಕಾರು ಹತ್ತುವುದನ್ನೇ ನೋಡುತ್ತಾ ಟಾಟಾ ಮಾಡಿದರು ನಮ್ಮ 'ಮಾಜಿ'. ದತ್ತು ಕಾರು ಹತ್ತಿರಾನೆ ಹೋಗಿ ಮುಲ್ಲಾ ಸಾಬರ ಹತ್ತಿರ ಏನೋ ಪಿಸುಗುಟ್ಟಿ ವಾಪಾಸ್ ಬಂದರು.

ಮುಂದೆ ಓದಿ : ಗೌಡರ ಡ್ಯಾನ್ಸು ನೋಡಿ ಅದೆಷ್ಟು ದಿನವಾಗಿತ್ತು? »

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+