ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಸ್ತ್ರಚಿಕಿತ್ಸೆ ಬೇಡವೆಂದರೆ ಹೋಮಿಯೋಪಥಿಗೆ ಶರಣಾಗಿ

By Staff
|
Google Oneindia Kannada News

ಕಣ್ಣಲ್ಲಿ ನೀರು ಜಿನುಗುತ್ತಿದ್ದರೆ, ಹಲ್ಲು ನೋಯುತ್ತಿದ್ದರೆ, ತಲೆ ಸಿಡಿಯುತ್ತಿದ್ದರೆ ತಕ್ಷಣವೇ 'ಆಪರೇಷನ್'ಗೆ ಸಜ್ಜಾಗುವ ವೈದ್ಯರಿದ್ದಾರೆ. ಹಾಗೆ ನೋಡಿದರೆ ಬಹಳಷ್ಟು ರೋಗಗಳಿಗೆ ಶಸ್ತ್ರಚಿಕಿತ್ಸೆ ಅಗತ್ಯವೇ ಇರುವುದಿಲ್ಲ. ಕಿಡ್ನಿಯಲ್ಲಿ ಕಲ್ಲಿರಲಿ, ಹಲ್ಲು ನೋವಿರಲಿ ಹೋಮಿಯೋಪಥಿಯಲ್ಲಿ ಅದಕ್ಕೆ ತಕ್ಕ ಚಿಕಿತ್ಸೆಯಿದೆ ಎನ್ನುತ್ತಾರೆ 'ಜೀವಿ' ಕುಲಕರ್ಣಿ. ತಮ್ಮ ಕೈಚಳಕದಿಂದಲೇ ಅನೇಕ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಹೋಮಿಯೋಪಥಿ ತಜ್ಞ ರಹಾಳಕರ್ ಅವರನ್ನು ಇಲ್ಲಿ ಪರಿಚಯಿಸಿದ್ದಾರೆ. ತಮ್ಮ ಸ್ವಅನುಭವಗಳನ್ನು ಲೇಖಕರು ಹಂಚಿಕೊಂಡಿದ್ದಾರೆ.

ನನ್ನ ಮಗಳ ತಲೆಯಲ್ಲಿ ಉದುರಿದ ಕೂದಲನ್ನು ಮತ್ತೆ ಬೆಳೆಸಲು ಎಲೊಪಥಿ ಡಾಕ್ಟರರು (ಏಶಿಯಾದಲ್ಲೇ ಶ್ರೇಷ್ಠ ಎಂಬ ಖ್ಯಾತಿಯ ತ್ವಚೆರೋಗತಜ್ಞರು) ಸೋತಾಗ, ಸಕ್ಕರೆ ಗುಳಿಗೆ ಕೊಟ್ಟು ಕೂದಲು ಮತ್ತೆ ಬರಿಸಿದ ಹೋಮಿಯೋಪಥಿ ಡಾಕ್ಟರರ ಬಗ್ಗೆ ನಮಗೆಲ್ಲ ಬಹಳ ಗೌರವಾದರ ಅಭಿಮಾನ ಉಂಟಾಗಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಮುಂದೆ ಡಾ| ಮಾಧವ ರಹಾಳಕರರ ಪರಿಚಯ ಸ್ನೇಹವಾಗಿ ಪರಿಣಮಿಸಿತು, ಅದು ಗಾಢವಾಯಿತು. ನನ್ನ ಪರಿವಾರದವರು, ಸಂಬಂಧಿಕರು, ಮಿತ್ರರು ಅವರ ಔಷಧಿಯ ಚಮತ್ಕಾರದ ಅನುಭವ ಪಡೆದರು. ಅದರಲ್ಲಿ ಕೆಲವನ್ನು ಮಾತ್ರ ಇಲ್ಲಿ ದಾಖಲಿಸುವೆ.

ಉದ್ದ ಬೆಳೆಯಲು ಮದ್ದು : ಒಂದು ಸಲ ನಾನು ಡಾಕ್ಟರರ ಮನೆಗೆ ಹೋಗಿದ್ದೆ(1977). ಅಂದು ಅವರು ಒಂದು ಹೊಸ ಔಷಧಿಯನ್ನು ಕಂಡು ಹಿಡಿದ ಬಗ್ಗೆ ಹೇಳಿದರು. ಎರಡು ವರ್ಷ ಈ ಔಷಧಿಯನ್ನು 12ರಿಂದ 14ರವರೆಗಿರುವ ಮಕ್ಕಳಿಗೆ ಒಂದೆರಡು ವರ್ಷ ಕೊಟ್ಟರೆ ಅವರು ತಮ್ಮ ತಂದೆ-ತಾಯಿಗಿಂತ 3ರಿಂದ 5 ಇಂಚು ಎತ್ತರ ಬೆಳೆಯುತ್ತಾರೆ.'' ಎಂದು ಅವರು ಹೇಳಿದರು. ಆಗ ನನಗೆ ಫಿಜಿಸಿಯನ್ ಹೀಲ್ ದಾಯ್ ಸೆಲ್ಫ್' (Physician heel thyself!)ಎಂಬ ಉಕ್ತಿ ನೆನಪಾಯ್ತು, ನಸುನಕ್ಕೆ. ಆಗ ಡಾಕ್ಟರರು, ಪ್ರೊಫೆಸರ್ ಸಾಹೇಬ್, (ಮರಾಠಿಯಲ್ಲಿ ಎಲ್ಲರಿಗೂ ಸಾಹೇಬ್ ಎಂದು ಸಂಬೋಧಿಸುವ ಪದ್ಧತಿ ಇದೆ) ನೀವು ನಕ್ಕದ್ದು ಏತಕ್ಕೆ?'' ಎಂದು ಕೇಳಿದರು. ಡಾಕ್ಟರರೇ ನಿಮ್ಮ ಮಗಳು ಮತ್ತು ಮಗನ ಮೇಲೆ ನಿಮ್ಮ ಔಷಧಿ ಪ್ರಯೋಗ ಮಾಡಲಿಲ್ಲವೇ?'' ಎಂದು ಕೇಳಿದೆ. ಆಗ ಅವರೆಂದರು, ಇಬ್ಬರೂ ಬಹಳ ಕುಳ್ಳರಾಗಿದ್ದಾರೆ, ನಾನು ಒಪ್ಪುತ್ತೇನೆ. ಆದರೆ, ನಾನು ಈ ಔಷಧಿ ಕಂಡು ಹಿಡಿದಾಗ ಅವರು 14 ವಯಸ್ಸು ಮೀರಿದ್ದರು. ಬೇರೆ ಮಕ್ಕಳ ಮೇಲೆ ಪ್ರಯೋಗಿಸಿ ಯಶಸ್ಸು ಪಡೆದಿದ್ದೇನೆ.'' ನಾನು ಕುತೂಹಲದಿಂದ, ನನ್ನ ಹಿರಿಯ ಮಗನಿಗೀಗ 12 ವರ್ಷ. ನಾನು ಐದುಫೂಟು ಐದುವರೆ ಇಂಚು ಇದ್ದೇನೆ. ನನ್ನ ಮಡದಿ ಐದು ಫೂಟು ಎರಡು ಇಂಚು ಇದ್ದಾಳೆ. ನಮ್ಮ ಮಗ ನಮಗಿಂತ ಎತ್ತರವಾಗಬೇಕೆಂಬ ಬಯಕೆ ನಮಗಿದೆ. ನಿಮ್ಮ ಔಷಧಿ ಪ್ರಯೋಗಿಸಿ ನೋಡಬಹುದೇ?'' ಎಂದು ಕೇಳಿದೆ. ಅವರು ಔಷಧಿ ಕೊಟ್ಟರು. ಎರಡು ವರ್ಷಗಳಲ್ಲಿ ನನ್ನ ಜೇಷ್ಠ ಪುತ್ರ ನನಗಿಂತ ಐದುವರೆ ಇಂಚು ಎತ್ತರ ಬೆಳೆದು ನಿಂತ.

Tooth ache can be treated in homoeopathyಎಂಥ ಹಲ್ಲುನೋವಿಗೂ ಇಲ್ಲಿ ಪರಿಹಾರವಿದೆ : ನನ್ನ ಮೇಲ್ದವಡೆಯ(ಬಲ) ಹಲ್ಲು ವಿಪರೀತ ನೋಯತೊಡಗಿತು (1980). ಅದು ಅಲ್ಲಾಡುತ್ತಿತ್ತು. ನೋವು ತಾಳದೆ ದಂತವೈದ್ಯರ ಬಳಿಗೆ ಹೋದೆ. ಅವರು ಹಲ್ಲು ಕಿತ್ತಿಬಿಡಬೇಕೆಂದು ಹೇಳಿದರು. ನಾನು ಆ ಕಾಲದಲ್ಲಿ ದಂತರಕ್ಷಣೆಯ ವಿಷಯದಲ್ಲಿ ಬರೆದ ಒಂದು ಪುಸ್ತಿಕೆಯನ್ನು ಓದಿದ್ದೆ. ಅದರಲ್ಲಿ ಡೆಂಟಲ್ ಆರ್ಚ್ Dental Arch"(ದಂತ-ಕಮಾನು) ಬಗ್ಗೆ ಬರೆಯುತ್ತ, ಒಂದು ಹಲ್ಲು ಬಿದ್ದರೂ ಅದು (ಡೆಂಟಲ್ ಆರ್ಚ್) ಅಶಕ್ತವಾಗುತ್ತದೆ, ಆದ್ದರಿಂದ ಮೊದಲ ಹಲ್ಲು ಬೀಳದಂತೆ ಹೆಚ್ಚು ಎಚ್ಚರ ವಹಿಸಬೇಕು' ಎಂದು ಬರೆದಿದ್ದರು. ಡಾಕ್ಟರರೇ ನನಗೆ ಹಲ್ಲು ಕೀಳಿಸುವ ಮನಸ್ಸಿಲ್ಲ. ಅದು ನೈಸರ್ಗಿಕವಾಗಿ ಬೀಳಲಿ. ಆದರೆ ದಂತಶೂಲೆ ತಡೆದುಕೊಳ್ಳಲಿಕ್ಕೆ ಸಾಧ್ಯವಿಲ್ಲ. ಏನಾದರೂ ಔಷಧಿ ಕೊಡಿ.'' ಎಂದೆ. ಅವರು ಲವಂಗದ ಎಣ್ಣೆ ಲೇಪಿಸಲು ಕೊಟ್ಟರು. ನೋವು ಸ್ವಲ್ಪ ದಿನ ಕಡಿಮೆಯಾಯ್ತು. ಮತ್ತೆ ಶೂಲಿ ಪ್ರಾರಂಭವಾಯ್ತು. ಬಲಭಾಗದಲ್ಲಿ ಏನನ್ನೂ ತಿನ್ನುವುದು ಸಾಧ್ಯವಾಗುತ್ತಿರಲಿಲ್ಲ. ಏನು ತಿಂದರೂ ನೋವು ಅಸಹನೀಯವಾಗುತ್ತಿತ್ತು. ಕೊನೆಗೆ ನೀರು ಸೇವಿಸಿದರೂ ಹಲ್ಲು ಜುಮ್ಮೆನ್ನತೊಡಗಿತು. ಇನ್ನೊಬ್ಬ ಡೆಂಟಿಸ್ಟ್‌ರನ್ನು ಸಂಪರ್ಕಿಸಿದೆ. ಅವರು ಹಲ್ಲಿನ ಬೇರೆಲ್ಲ ಕೊಳೆತಿವೆ ಎಂದೂ ರೂಟ್ ಸ್ಕ್ಯಾನಿಂಗ' ಮಾಡಿಸದಿದ್ದರೆ ಬದಿಯ ಹಲ್ಲುಗಳೂ ಭಾಧಿತವಾಗುತ್ತವೆ ಎಂದು ಬೆದರಿಸಿದರು. ಕಿಂಕರ್ತವ್ಯಮೂಢನಾಗಿ' ನಾನು ಡಾ| ರಹಾಳಕರರಿಗೆ ಪೋನು ಮಾಡಿದೆ. ಚಿಂತಿಸದಿರಲು ಹೇಳಿ ಗುಣಪಡಿಸುವುದಾಗಿ ಆಶ್ವಾಸನೆ ಕೊಟ್ಟರು. ಅವರು ಮೊದಲು ನನಗೆ ನೋವು ನಿವಾರಕ ಮಾತ್ರೆ ಕೊಟ್ಟರು. ಹೀಗೆ ಎರಡು ಮೂರು ತಿಂಗಳು ಕಳೆದವು. ಮತ್ತೆ ಔಷಧಿ ಪಡೆಯಲು ಹೋದಾಗ ನಾನು ಹೇಳಿದೆ, ನಿಮ್ಮ ಔಷಧಿಯಿಂದ ನನಗೆ ಈಗ ನೋವಿಲ್ಲ. ಒಂದೇ ಭಾಗದ ಒಸಡಿನಿದ ಆಹಾರ ನುರಿಸುವೆ. ಆ ಹಲ್ಲು ಸ್ವಾಭಾವಿಕವಾಗಿ ಬೀಳಲಿ. ನಾನು ದಂತವೈದ್ಯರಿಂದ ಹಲ್ಲನ್ನು ಕಿತ್ತಿಸಿಕೊಳ್ಳುವುದಿಲ್ಲ'' ಎಂದು. ಆಗ ಅವರೆಂದರು, ಕುಲಕರ್ಣಿ ಸಾಹೇಬ್, ಹಲ್ಲು ಕಿತ್ತಿಸುವ ಮಾತು ಬದಿಗಿರಲಿ, ಆ ಹಲ್ಲನ್ನು ಗಟ್ಟಿ ಮಾಡಿ ಬಿಡೋಣ. ನನ್ನ ಸೋದರ ಮಾವ ದೊಡ್ಡ ಆಯುರ್ವೇದ ಪಂಡಿತರಾಗಿದ್ದರು. ಹೀಗೆ ಹಲ್ಲು ಅಲ್ಲಾಡುವುದನ್ನು ಅವರು ನಿಲ್ಲಿಸಿದ್ದರು. ಹೋಮಿಯೋಪಥಿ ಔಷಧಿಯೊಂದಿಗೆ ಅದನ್ನೂ ಪ್ರಯೋಗಿಸಿ ನೋಡೋಣ.''. ನಾನು, ಆಗಬಹುದು'' ಎಂದೆ. ಪೇಟೆಯಲ್ಲಿ ಪಟಕ Alum"(ಎಲಮ್) ದೊರೆಯುತ್ತದೆ. ನಾನು ಬರೆದುಕೊಡುವ ಚೂರ್ಣವನ್ನು ತಂದು ಸ್ವಲ್ಪ ಪಟಕದ ಪುಡಿಯನ್ನು ಬೆರೆಸಿ ಒಂದು ಬಟ್ಟಲದಲ್ಲಿ ನೀರು ಬೆರೆಸಿ ಪೇಸ್ಟ್ ತಯಾರಿಸಿರಿ. ರಾತ್ರಿ ಮಲಗುವಾಗ ಅದನ್ನು ಅಲ್ಲಾಡುತ್ತಿರುವ ಹಲ್ಲಿನ ಎರಡೂ ಬದಿ ಹಚ್ಚಿರಿ. ಎರಡು ತಾಸು ಹಾಗೆಯೇ ಇರಲಿ. ನಂತರ ಬಾಯಿತೊಳೆದುಕೊಂಡು ಮಲಗಿರಿ. ಒಂದು ವೇಳೆ ಬಾಯಿ ತೊಳೆಯಲು ಮರೆತರೆ, ಆ ಚೂರ್ಣ ಹೊಟ್ಟೆಯಲ್ಲಿ ಸೇರಬಹುದು. ಅದರಿಂದ ಅಪಾಯವೇನಿಲ್ಲ. ಅದರಿಂದ ಸ್ವಲ್ಪ ಲೂಸ್-ಮೋಶನ್' ಆಗಬಹುದು. ಹದಿನೈದು ದಿನಗಳಲ್ಲು ಹಲ್ಲು ಅಲ್ಲಾಡುವುದು ನಿಲ್ಲುತ್ತದೆ.'' ಅಂದರು. ನಾನು ಅವರು ಹೇಳಿದಂತೆ ಮಾಡಿದೆ. ಹಲ್ಲು ಗಟ್ಟಿಯಾಯಿತು. ಒಂದೆರಡು ತಿಂಗಳ ಮೇಲೆ ನಾನು ಕಬ್ಬು ತಿಂದೆ. ಮನೆಯಲ್ಲಿ ಎಲ್ಲರಿಗೂ ಆನಂದ ಹಾಗೂ ಆಶ್ಚರ್ಯ. (ನನಗೆ ಬಾಲ್ಯದಿಂದಲೂ ನನ್ನ ಹಲ್ಲುಗಳ ಬಗ್ಗೆ ಬಹಳ ಅಭಿಮಾನವಿತ್ತು. ನನಗೆ ಹಲ್ಲುಗಳಿಂದ ಕಬ್ಬು ತಿನ್ನುವುದು ಬಹಳ ಪ್ರೀತಿಯ ಹವ್ಯಾಸವಾಗಿತ್ತು. ನಾನು ಬಾಲಕನಾಗಿದ್ದಾಗ ಆಕಾಲದಲ್ಲಿ ದೊರೆಯುವ ದುಡ್ಡು ಹಲ್ಲಿನಿಂದ ಬಾಗಿಸಿ ಸಹಪಾಠಿಗಳ ಮುಂದೆ ಪ್ರದರ್ಶನ ಮಾಡುತ್ತಿದ್ದೆ.) ಅಲ್ಲಾಡುವ ದವಡೆ ಹಲ್ಲು ಗಟ್ಟಿಯಾಗಿ ಸುಮಾರು ಮೂವತ್ತು ವರ್ಷ ಕಳೆದಿರಬೇಕು. ಇಂದು ಕೂಡ ಹಲ್ಲು ಗಟ್ಟಿಯಾಗಿದೆ.

ಕಣ್ಣು ಕತ್ತಲೆ ಬಾಧಿಸಿದಾಗ... : 1990ರಲ್ಲಿ ನಾನು ಪಿಎಚ್.ಡಿ. ಪ್ರಬಂಧ ಬರೆಯುವುದರಲ್ಲಿ ತೊಡಗಿದ್ದೆ. ರಾತ್ರಿ ಬಹಳ ಹೊತ್ತು ಓದುತ್ತ ಕೂಡುತ್ತಿದ್ದೆ. ಆಗ ಅಚಾನಕವಾಗಿ ನನ್ನ ಕಣ್ಣಿಗೆ ಕತ್ತಲೆ ಬರತೊಡಗಿತು. ಕಣ್ಣಮುಂದೆ ಮೋಡದಂತಹ ಕಪ್ಪಾದ ಆಕೃತಿಗಳು ತೇಲುತ್ತಿದ್ದವು. ನಮ್ಮ ಸಹೋದ್ಯೋಗಿಯ ಅಳಿಯ ಬಹಳ ಪ್ರಖ್ಯಾತ ಕಣ್ಣಿನ ಡಾಕ್ಟರ್ ಆಗಿದ್ದರು. ಅವರು ಪ್ರಸಿದ್ಧ ಬಾಂಬೇ ಹಾಸ್ಪಿಟಲ್'ಗೆ ಬಂದು ಕಾಣಲು ಹೇಳಿದರು. ಟೆಸ್ಟ್ ಮಾಡಿ, ನಿಮ್ಮ ರೆಟೀನಾದ ಹಿಂದಿನ ಭಾಗದಲ್ಲಿ ಬ್ಲೀಡಿಂಗ್ ಆಗಿದೆ. ಈಗ ಔಷಧಿ ಬರೆದು ಕೊಡುವೆ. ಒಂದು ತಿಂಗಳು ಸೇವಿಸಿರಿ. ಕಡಿಮೆಯಾಗದಿದ್ದರೆ ಶಸ್ತ್ರಚಿಕಿತ್ಸೆ ಮಾಡಬೇಕಾದೀತು.''ಅಂದರು. ಮರೀನ್‌ಲೈನ್ಸ್‌ನಿಂದ ಬೊರಿವಿಲಿಗೆ ಬಂದು ಭಂಡಾರಕರ್ ಮೆಡಿಕಲ್ ಸ್ಟೋರ್ಸ್‌ನಲ್ಲಿ ಔಷಧಿ ಪಡೆದು ಮನೆಗೆ ಬಂದೆ. ನನಗೆ ಡಾಕ್ಟರರು ಎರಡು ತಿಂಗಳು ಏನೂ ಓದಬಾರದೆಂದು ಕಟ್ಟಪ್ಪಣೆ ಮಾಡಿದ್ದರು. ಕಾಲೇಜಿಗೆ ರಜೆ ಹಾಕಿದರೆ ಒಳ್ಳೆಯದು. ಕಾಲೇಜಿಗೆ ಹೋದರೂ ಬರಿ ಸಹಿಮಾಡಿ ಬರಬೇಕು. ಲೆಕ್ಚರ್ ಕೊಡಬಹುದು ಆದರೆ ಕಣ್ಣಿಗೆ ಶ್ರಮವಾಗಬಾರದು, ಓದಬಾರದು' ಎಂದರು. ಪ್ರಾಧ್ಯಾಪಕರು ಓದದೇ ಇರುವುದು ಹೇಗೆ ಸಾಧ್ಯ?' ಎಂಬ ಚಿಂತೆ ಆವರಿಸಿತು. ಮನೆಯಲ್ಲಿ ಶ್ರೀಮತಿಗೆ ಹೇಳಿದೆ. ಅವಳೆಂದಳು, ಡಾ| ರಹಾಳಕರರಿಗೆ ಒಂದು ಮಾತು ತಿಳಿಸಬೇಕಾಗಿತ್ತು' ಎಂದು. ನಾನು ಡಾಕ್ಟರಾರಿಗೆ ಫೋನು ಮಾಡಿ ನನ್ನ ಪರಿಸ್ಥಿತಿಯನ್ನು ತಿಳಿಸಿದೆ. ನೀವು ಔಷಧಿ ಸೇವಿಸಲು ಪ್ರಾರಂಭಿಸಿದ್ದೀರಾ? ಇಲ್ಲದಿದ್ದರೆ ವಾಪಸ್ ಕೊಡಲು ಸಾಧ್ಯವೇ?'' ಎಂದು ಕೇಳಿದರು. ಇನ್ನೂ ಪ್ರಾರಂಭಿಸಿಲ್ಲ. ಕೆಮಿಸ್ಟ್‌ರ ಮಗ ನನ್ನ ವಿದ್ಯಾರ್ಥಿ. ವಾಪಸ್ ಕೊಡುಡುವುದು ಕಷ್ಟದ್ದಲ್ಲ.'' ಎಂದೆ. ಔಷಧಿ ವಾಪಸ್ ಕೊಡಿರಿ, ನಾಳೆ ಮುಂಜಾನೆ ಬನ್ನಿರಿ. ನಾನು ಔಷಧಿ ಕೊಡುತ್ತೇನೆ.'' ಎಂದರು. ಮರುದಿನ ನಾನು ಔಷಧಿ ವಾಪಸ್ ಕೊಟ್ಟು ನಾಲ್ಕುನೂರು ರೂಪಾಯಿ ವಾಪಸ್ ಪಡೆದೆ. ನಮ್ಮ ಡಾಕ್ಟರರನ್ನು ಕಂಡೆ. ಅವರು ಒಂದು ಚಿಕ್ಕ ಬಾಟಲಿಯಲ್ಲಿ ಔಷಧಿ ಕೊಟ್ಟು ಹೇಳಿದರು, ದಿನಕ್ಕೆ ನಾಲ್ಕು ಮಾತ್ರೆ ಮೂರು ಸಲ ಸೇವಿಸಿರಿ. ನಿಮ್ಮ ಕಣ್ಣಿನಲ್ಲಿದ್ದ ಕಪ್ಪು ಮೋಡಗಳನ್ನು ಚದುರಿಸುವ ಬಿರುಗಾಳಿ ಈ ಔಷಧಿಯಲ್ಲಿದೆ. ಎರಡು ವಾರದಲ್ಲಿ ನಿರಭ್ರ ಆಗಸದಂತೆ ಎಲ್ಲವೂ ತಿಳಿಯಾಗುವುದು.''ಎಂದು. ನಾನೆಂದೆ, ನಾನು ಏನನ್ನೂ ಓದಬಾರದೇ?''. ಅವರೆಂದರು, ಓದಬಹುದು, ಚಿಂತೆಮಾಡಬೇಡಿ.''ಎಂದು. ಒಂದು ವಾರದಲ್ಲೇ ಸಾಕಷ್ಟು ಸುಧಾರಣೆ ಕಂಡುಬಂತು. ಒಂದೆರಡು ತಿಂಗಳಲ್ಲಿ ಪೂರ್ತಿ ವಾಸಿಯಾಯಿತು. ನಾನು ಜೀವನದಲ್ಲಿ ಮರೆಯಲಾಗದ ಘಟನೆ ಇದು.

ಕಿಡ್ನಿಸ್ಟೋನ್ ಆದರೂ ಹೋಮಿಯೋಪಥಿಯಲ್ಲಿ ಚಿಕಿತ್ಸೆ : ನನ್ನ ಮಿತ್ರರಿಗೆ ಕಿಡ್ನಿಸ್ಟೋನ್ ಆದಾಗ ಇವರ ಬಳಿ ಕಳಿಸಿದ್ದೆ. ಶಸ್ತ್ರಚಿಕಿತ್ಸೆ ಕಾರಣವಿಲ್ಲ ಎಂದು ಹೇಳಿ ಗುಣಪಡಿಸಿದರು. ನನ್ನ ಕಿರಿಯ ಮಗನ ಪಿಯುಸಿ ಬೋರ್ಡ್ ಪರೀಕ್ಷಾ ಸಮಯದಲ್ಲಿ ಅವನಿಗೆ ಕಣ್ಣೆವೆಯಲ್ಲಿ ಉರಿಯೂತ(ಸ್ಟೈ) stye" ಆಗಿತ್ತು. ಅದು ಎಷ್ಟು ಉಲ್ಬಣಗೊಂಡಿತ್ತೆಂದರೆ ಓದುವುದು ಅವನಿಗೆ ದುಸ್ತರವಾಗಿತ್ತು. ಅವನು ವಿಜ್ಞಾನದ ವಿದ್ಯಾರ್ಥಿ ಆಗಿದ್ದರಿಂದ ಸ್ಪರ್ಧೆ ಬಹಳ ಇತ್ತು. ನೇತ್ರತಜ್ಞ ಡಾಕ್ಟರರ ಕಡೆಗೆ ಕರೆದೊಯ್ದೆ. ಅವರು ಔಷಧಿ ಹಾಗೂ ಕ್ರೀಮ್ ಬರೆದು ಕೊಟ್ಟರು. ಗುಣವಾಗದಿದ್ದರೆ ಶಸ್ತ್ರಚಿಕಿತ್ಸೆ ಮಾಡಬೇಕಾದೀತು ಅಂದರು. ನನಗೆ ನನ್ನ ಮಗನ ಸ್ಥಿತಿ ನೋಡಲಿಕ್ಕಾಗುತ್ತಿರಲಿಲ್ಲ. ಅವನ ಪರೀಕ್ಷೆ ಒಂದು ವಾರದಲ್ಲಿ ಶುರುವಾಗಲಿತ್ತು. ಅವನೂ ನಮ್ಮ ಕಾಲೇಜಿನಲ್ಲೇ ಕಲಿಯುತ್ತಿದ್ದ. ಅವನನ್ನು ಕರೆದುಕೊಂಡು ಡಾ| ರಹಾಳಕರರ ಮನೆಗೆ ಹೋದೆ. ಚಿಂತಾ ಕರೂನಕಾ(ಚಿಂತೆ ಮಾಡಬೇಡಿ)'' ಎಂದು ಹೇಳಿ ಸಕ್ಕರೆ ಮಾತ್ರೆ ಕೊಟ್ಟರು. ನಾಲ್ಕೇ ದಿನಗಳಲ್ಲಿ ಗುಣವಾಯ್ತು. ನಾನು ಡಾಕ್ಟರರಿಗೆ ಕೇಳಿದೆ, ನೀವು ಕೊಡುವ ಔಷಧಿಯಲ್ಲಿ ಚಮತ್ಕಾರವಿದೆಯಲ್ಲ. ಇದನ್ನೆಲ್ಲ ಹೇಗೆ ಸಾಧಿಸಿದಿರಿ?''. ಅವರೆಂದರು, ಇದರಲ್ಲಿ ಚಮತ್ಕಾರವೇನಿಲ್ಲ. ನಾನು ಎಲ್ಲವನ್ನು ಗುಣಪಡಿಸಲಾರೆ. ನನ್ನ ಲಿಮಿಟೇಶನ್ ನನಗೆ ಗೊತ್ತಿದೆ. ನನ್ನಿಂದ ಸಾಧ್ಯವಾಗದ್ದನ್ನು ವಿನಮ್ರನಾಗಿ ಸಾಧ್ಯವಿಲ್ಲ ಎಂದು ಹೇಳುತ್ತೇನೆ. ನನ್ನ ಹೆಂಡತಿಗೆ ಒಂದು ಕಾಯಿಲೆ ಬಂತು. ನಾನು ಎಲೋಪಥಿ ಡಾಕ್ಟರರಿಂದ ಶಸ್ತ್ರಚಿಕಿತ್ಸೆ ಮಾಡಿಸಬೇಕಾಯಿತು. ವೈದ್ಯವಿದ್ಯೆ ಒಲಿಯಬೇಕಾದರೆ ಸಿದ್ಧಿ ಇರಬೇಕು, ಕೈಗುಣ ಇರಬೇಕು, ಗುರುಗಳ ಅನುಗ್ರಹವೂ ಬೇಕು.''

ಎಸ್ಎಸ್‌ಸಿ (ಆಗಿನ ಮೆಟ್ರಿಕ್) ಪಾಸಾದ, ಇನ್ಶುರೆನ್ಸ್ ಕಂಪನಿಯಲ್ಲಿ ಕೆಲಸಮಾಡಲು ಮುಂಬೈಗೆ ಆಗಮಿಸಿದ ವ್ಯಕ್ತಿ ಹೋಮಿಯೋಪಥಿಯಲ್ಲಿ ನಿಷ್ಣಾತನಾದ ಗಾಥೆ ಕಟ್ಟುಕಥೆಗಿಂತ ರೋಚಕವಾಗಿದೆ. ಅದನ್ನು ಮುಂದೆ ತಿಳಿಯೋಣ.

ವಿ.ಸೂ. : ಯಾವುದೇ ಆರೋಗ್ಯ ಸಂಬಂಧಿ ಪ್ರಶ್ನೆಗಳಿದ್ದರೆ ಜೀವಿಯವರನ್ನು ಸಂಪರ್ಕಿಸಬಹುದು : [email protected]
ಡಾ. ರಹಾಳಕರ್ ಅವರನ್ನೂ ಜೀವಿ ಮುಖಾಂತರ ಸಂಪರ್ಕಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X