ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುನರ್ವಸು ನಕ್ಷತ್ರದವರು ಸಕಲಕಲಾವಲ್ಲಭರು

By ನಾಗನೂರಮಠ ಎಸ್.ಎಸ್.
|
Google Oneindia Kannada News

ಈ ನಕ್ಷತ್ರದ ಮೂರು ಪಾದಗಳಲ್ಲಿ ಜನಿಸಿದವರು ಮಿಥುನ ರಾಶಿಯವರಾದರೆ, ನಾಲ್ಕನೇ ಪಾದದಲ್ಲಿ ಜನಿಸಿದವರು ಕರ್ಕ ರಾಶಿಯವರಾಗುತ್ತಾರೆ. ಅಲ್ಲದೇ ಈ ನಕ್ಷತ್ರದ ಅಧಿಪತಿ ಗುರು ಆಗಿರುವುದರಿಂದ ಇವರಲ್ಲಿ ಕಲಿಯುವುದು ಮತ್ತು ಕಲಿಸುವ ಗುಣ ಜನ್ಮದಿಂದಲೇ ಬಂದಿರುತ್ತದೆ. ಇವರಿಗೆ ಕೇ, ಕೋ, ಹ, ಹಾ ಎಂಬುದಾಗಿ ನಾಲ್ಕೂ ಪಾದಗಳಿಗೆ ಜನ್ಮನಾಮಾಕ್ಷರ ಬರುತ್ತದೆ.

ಈ ನಕ್ಷತ್ರದಲ್ಲಿನ ಒಂದು ವಿಶೇಷವೆಂದರೆ ಲೆಕ್ಕಾಚಾರದಲ್ಲಿ ಬುದ್ಧಿವಂತನಾದ ಬುಧ ಮಿಥುನ ರಾಶಿಯ ಅಧಿಪತಿಯಾದರೆ, ಮನಃಕಾರಕ ಚಂದ್ರ ಕರ್ಕ ರಾಶಿಯ ಅಧಿಪತಿಯಾಗುತ್ತಾನೆ. ಹೀಗಾಗಿ ಈ ನಕ್ಷತ್ರದಲ್ಲಿ ಜನಿಸಿದವರ ಒಂದು ಪಾದ ಬದಲಾವಣೆ ಆದರೂ ಕೂಡ ಅವರ ಸ್ವಭಾವ ಬದಲಾಗುತ್ತದೆ.

ಇನ್ನು ಇವರು ತಮ್ಮನ್ನು ಯಾವಾಗಲೂ ರಕ್ಷಿಸಿಕೊಳ್ಳಲು ತಂತ್ರ (ಕುತಂತ್ರನೂ ಮಾಡಬಹುದು) ರಚಿಸುತ್ತಿರುತ್ತಾರೆ. ಏನಾದರೂ ವಿಷಯದ ಬಗ್ಗೆ ತಮ್ಮ ಮೇಲೆ ಅಪವಾದ ಬಂದರೆ ಸುಲಭವಾಗಿ ಏನಾದರೊಂದು ಸಬೂಬು ಹೇಳಿಕೊಂಡು ಜಾರಿಕೊಳ್ಳೊ ಸ್ವಭಾವ ಇವರದು. ಆದರೆ, ಧರ್ಮಿಷ್ಠರು. ತಮ್ಮ ಒಳ್ಳೆಯ ವ್ಯಕ್ತಿತ್ವದಿಂದ ಎಲ್ಲರ ಮಧ್ಯೆ ಮಿಂಚುತ್ತಿರುತ್ತಾರೆ. ಎಂಥ ಕಷ್ಟಕರ ಪರಿಸ್ಥಿತಿಯಲ್ಲೂ ಸಹ ತಾಳ್ಮೆ, ಸಮಾಧಾನದಿಂದ ಇವರಿರುವುದನ್ನು ನೋಡಿ ಉಳಿದವರು ತುಂಬಾ ಒಳ್ಳೆಯವರು ಎಂದು ಎಲ್ಲರಲ್ಲೂ ಹೇಳಿಕೊಳ್ಳುತ್ತಿರುತ್ತಾರೆ.

Birth star series : Punarvasu nakshatra characteristics

ಇದ್ದುದರಲ್ಲಿಯೇ ಸಂತಸದಿಂದ ಜೀವನ ಮಾಡಬೇಕೆನ್ನುವ ಗುರಿ ಇವರಿಗಿರುವುದರಿಂದ ತುಂಬಾ ತುಂಬಾನೇ ಒಳ್ಳೆಯ ಮನಸ್ಸು ಹೃದಯ ಹೊಂದಿರುತ್ತಾರೆ. ಸ್ವಲ್ಪವೂ ಸೊಕ್ಕು, ಜಂಭ ಮಾಡದೇ ಸ್ನೇಹದೊಂದಿಗೇನೆ ಎಲ್ಲರೊಂದಿಗೆ ಬೆರೆಯುತ್ತಿರುತ್ತಾರೆ. ಅಪರಿಚಿತ ಸ್ಥಳದಲ್ಲೂ ತಮ್ಮನ್ನು ಒಂಟಿಯಾಗಿಸಿಕೊಳ್ಳದೇ ಆ ಸಂದರ್ಭಕ್ಕೆ ತಕ್ಕಂತೆ ಹಾಗೂ ಅಲ್ಲಿನವರೊಂದಿಗೆ ಸುಮ್ಮನೆ ಮರುಮಾತನಾಡದೆ ಹೊಂದಿಕೊಳ್ಳುತ್ತಾರೆ.

ಅಷ್ಟೊಂದು ಮನಸ್ಸಿನ ನಿಯಂತ್ರಣ ಇವರಿಗಿರುತ್ತದೆ. ಭವಿಷ್ಯದ ಜೀವನದ ಬಗ್ಗೆ ಮುಂದಾಲೋಚನೆಯಿಂದಲೇ ಎಲ್ಲದಕ್ಕೂ ಮುಂದುವರೆಯುತ್ತಿರುತ್ತಾರೆ. ಹೀಗಾಗಿ ತಮಗೆ ಹೆಂಗೆ ಬೇಕೋ ಹಂಗೆನೆ ಇರುತ್ತಾರೆ. ಹೆಚ್ಚಾಗಿ ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವುದು ಹಾಗೂ ಧ್ಯಾನದಲ್ಲಿ ಮಗ್ನವಾಗಿ ಪರಮಾನಂದ ಹೊಂದಲು ಇಷ್ಟಪಡುತ್ತಿರುತ್ತಾರೆ. ತಮ್ಮನ್ನು ಇನ್ನಷ್ಟು ಶುದ್ಧ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಪಡುತ್ತಿರುತ್ತಾರೆ.

ಒಟ್ಟಿನಲ್ಲಿ ತಮ್ಮಷ್ಟು "ಪರ್ಫೆಕ್ಟ್" ಯಾರೂ ಇಲ್ಲ ಎನ್ನಬೇಕು ಎಲ್ಲರೂ ಎಂದೆಂದುಕೊಳ್ಳುತ್ತಿರುತ್ತಾರೆ. ಹೀಗಾಗಿಯೇ ಎಲ್ಲರೊಂದಿಗೆ ಒಳ್ಳೆಯ ಸಂಪರ್ಕ ಇಟ್ಟುಕೊಂಡು ಎಲ್ಲರ ಸ್ನೇಹವನ್ನು ಚೆನ್ನಾಗಿ ಕಾಪಾಡಿಕೊಂಡು ಬರುತ್ತಿರುತ್ತಾರೆ. ಯಾರೊಂದಿಗೂ ಸ್ನೇಹ ಕೆಡಿಸಿಕೊಳ್ಳುವುದಿಲ್ಲ.

ಬರವಣಿಗೆ ಇವರಿಗೆ ಸಿದ್ಧಿಸಿರುತ್ತದೆ. ತಮ್ಮ ಮನದಾಳದಲ್ಲಿದ್ದದ್ದನ್ನು ಎಲ್ಲರಿಗೂ ಅರ್ಥವಾಗುವಂತೆ ಅಕ್ಷರ ರೂಪದಲ್ಲಿಳಿಸುವಷ್ಟು ಸಾಹಿತ್ಯಿಕ ಪ್ರತಿಭೆ ಇವರು ಹೊಂದಿರುತ್ತಾರೆ. ಅಪರಿಮಿತ ಕಲ್ಪನಾ ಶಕ್ತಿಯಿಂದ ಇವರ ಬರವಣಿಗೆ ಎಲ್ಲರಿಗೂ ಓದಿಸಿಕೊಂಡು ಹೋಗುವಂತಿರುತ್ತದೆ. ಇನ್ನು ಇವರಿಗೆ ಮಾತನಾಡಲು ಅವಕಾಶ ಸಿಕ್ಕರೆ ಎಲ್ಲರೂ ಬೆರಗಾಗುವಂಗೆ ಮಾತನಾಡುತ್ತಾರೆ. ಸಮಯ ಹೋಗಿದ್ದೇ ಗೊತ್ತಾಗಲ್ಲ ಇವರ ಮಾತು ಕೇಳುತ್ತಿದ್ದರೆ ಎನ್ನುತ್ತಾರೆ ಸ್ನೇಹಿತರು. ಅಷ್ಟೊಂದು ವರ್ಣನಾತ್ಮಕವಾಗಿ ಮಾತನಾಡುತ್ತಾರೆ. ಕೈಗೆತ್ತಿಕೊಂಡ ಎಲ್ಲ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುತ್ತಾರೆ.

ಆದರೆ, ತಮ್ಮಲ್ಲಿ ಎಷ್ಟೇ ಶ್ರೀಮಂತಿಕೆಯಿದ್ದರೂ ಆಡಂಬರದ ಜೀವನ ಇವರಿಗೆ ಇಷ್ಟವಿರಲ್ಲ. ಹೀಗಾಗಿ ಹಣವನ್ನು ದುಂದುವೆಚ್ಚ ಮಾಡಲು ಹತ್ತತ್ತು ಬಾರಿ ಯೋಚಿಸುತ್ತಿರುತ್ತಾರೆ. ಇಷ್ಟಲ್ಲದೇ ಜೀವನದಲ್ಲಿ ಒಂದೇ ದಾರಿಯಲ್ಲಿ ಸಾಗುವುದಿಲ್ಲ. ತಮ್ಮ ಕೆಲಸದ ಫಿಲ್ಡ್ ಚೇಂಜ್ ಮಾಡುತ್ತಿರುತ್ತಾರೆ ಪದೇ ಪದೇ. ಇದರಿಂದ ಇತರರಿಗೆ ಇವರ ಈ ಗುಣ ತಲೆನೋವಾಗಿರುತ್ತದೆ. "ಏನೂಂತ ಮಾಡತೀಯಾ ನೀನು" ಎಂದು ಇವರನ್ನು ರೇಗಿಸುತ್ತಿರುತ್ತಾರೆ ಸ್ನೇಹಿತರು.

ತಮ್ಮ ದೇಹಾರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಕೊಡುವುದಿಲ್ಲ. ಹೀಗಾಗಿ ರೋಗ ಬಂದಾಗ ನರಳುತ್ತಿರುತ್ತಾರೆ. ಯಾರಾರದೂ ಇವರಿಗೇನಾದರೂ ಅಂದರೆ ಇವರು ಮುಖ ಉಬ್ಬಿಸಿಕೊಂಡು ಕುಳಿತು ಬಿಡುತ್ತಿರುತ್ತಾರೆ. ಮಾತು ಇಲ್ಲ ಕಥೆ ಇಲ್ಲ. ಅಷ್ಟೊಂದು ಸೂಕ್ಷ್ಮತೆ ಇವರಲ್ಲಿರುತ್ತದೆ. ಸಾಮಾನ್ಯವಾಗಿ ಲೇಖನ, ಕಥೆ, ಕಾದಂಬರಿ ಹಾಗೂ ಸುದ್ದಿಗಳನ್ನು ಬರೆಯುವವರು ಅಥವಾ ಪ್ರಕಾಶಕರು, ಪ್ರಚಾರಕರ್ತರು ಈ ನಕ್ಷತ್ರದವರಾಗಿರುತ್ತಾರೆ. ಇನ್ನು ಕೆಲವರು ಪ್ರವಾಸೋದ್ಯಮದಲ್ಲಿ ತುಂಬಾ ಆಸಕ್ತಿ ವಹಿಸಿಕೊಂಡಿರುತ್ತಾರೆ. ಇವರು ಯಾರಿಗಾದರೂ ಸಾಲ ಕೊಡಬೇಕೆಂದರೆ ಮೈ ಪರಚಿಕೊಳ್ಳುವಂಗೆ ಆಡುತ್ತಿರುತ್ತಾರೆ.

ನೀರು, ಜ್ಯೂಸ್ ಮುಂತಾದ ಪೇಯಗಳನ್ನು ಯಾವಾಗಲೂ ಕುಡಿಯುತ್ತಿರುತ್ತಾರೆ. ಜೀವನದಲ್ಲಿ ಎಲ್ಲ ಸಫಲತೆಗಳನ್ನು ಹೊಂದಿಕೊಂಡು ಸುಖದ ಸುಪ್ಪತ್ತಿಗೆಯಲ್ಲಿರುತ್ತದೆ ಇವರ ಜೀವನ. ಜೀವನದ ಮಧ್ಯಭಾಗದಲ್ಲಿ ಅತೀ ಉನ್ನತ ಹುದ್ದೆಯಲ್ಲಿದ್ದುಕೊಂಡು ತಮ್ಮ ಹೆಸರನ್ನು ಹೆಸರುವಾಸಿ ಮಾಡಿಕೊಂಡಿರುತ್ತಾರೆ.

ಈ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವರಿಗೆ ಯಾರೂ ಏನೂ ಹೇಳುವ ಹಾಗಿಲ್ಲ. ತಮ್ಮಷ್ಟಕ್ಕೆ ತಾವೇ ಬಿಂದಾಸ್ ಆಗಿ ಇರಬೇಕೆಂದು ಬಯಸುತ್ತಿರುತ್ತಾರೆ. ಎರಡನೇ ಪಾದದಲ್ಲಿ ಜನಿಸಿದವರು ಯಾವುದಾದರೊಂದು ಕಲೆಯಲ್ಲಿ ತಮ್ಮನ್ನು ಸಿದ್ದಿಸಿಕೊಂಡಿರುತ್ತಾರೆ. ಆದರೆ ಕಲೆಯನ್ನೇ ತಮ್ಮ ಜೀವನವೃತ್ತಿಯನ್ನಾಗಿಸಿಕೊಳ್ಳಲು ಹಿಂಜರಿಯುತ್ತಿರುತ್ತಾರೆ. ಮೂರನೇ ಪಾದದಲ್ಲಿ ಜನಿಸಿದವರಿಗೆ ದೇಹ ಸಣ್ಣಾಗಿದ್ದರೂ ಬುದ್ಧಿ ಚುರುಕು ಇರುತ್ತದೆ. ಹೀಗಾಗಿ ಇವರ ಬುದ್ಧಿಮಟ್ಟ ಉಳಿದವರೆಲ್ಲರಿಗಿಂತ ಹೆಚ್ಚಿರುತ್ತದೆ. ತಮ್ಮ ಸುತ್ತಮುತ್ತಲಿನವರೆಲ್ಲರ ಮಧ್ಯೆ ಇದ್ದರೂ ತಮ್ಮ ವಿಶಿಷ್ಟ ಐಡಿಯಾದಿಂದಲೇ ಎಲ್ಲರ ಮನಮೆಚ್ಚಿಸುತ್ತಿರುತ್ತಾರೆ. ಹಾಗೆಯೇ ನಾಲ್ಕನೇ ಪಾದದಲ್ಲಿ ಜನಿಸಿದವರು ಹೆಚ್ಚಾಗಿ ಭ್ರಮಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಒಟ್ಟಿನಲ್ಲಿ ತಮಗೆ ಹೆಂಗೆ ಬೇಕೋ ಹಂಗೆ ಕನಸು ಕಾಣುತ್ತಿರುತ್ತಾರೆ. ಆ ಕನಸು ನನಸಾಗದಿದ್ದರೂ ಚಿಂತೆಯಿರಲ್ಲ. ಇವರು ಮಾತ್ರ ಹಗಲುಗನಸು ಕಾಣುತ್ತ ತಮ್ಮಷ್ಟಕ್ಕೆ ತಾವೇ ಸಂತಸ ಪಡುತ್ತಿರುತ್ತಾರೆ.

ಇವಿಷ್ಟು ಈ ನಕ್ಷತ್ರದಲ್ಲಿ ಜನಿಸಿದವರಿಗೆ ಇರುವ ಕೆಲವೊಂದು ವಿಶೇಷತೆಗಳು. ಆದರೂ ವ್ಯಕ್ತಿಯ ಜನ್ಮಜಾತಕ ನೋಡಿ ಗ್ರಹಗಳ ಸ್ಥಿತಿ ಹೇಗಿದೆ ಎಂದು ತಿಳಿದುಕೊಂಡಾಗಲೇ ಇನ್ನಷ್ಟು ಮಾಹಿತಿಗಳನ್ನು ಅರ್ಥೈಸಿಕೊಳ್ಳಬಹುದು. ಏಕೆಂದರೆ ಒಂದೇ ನಕ್ಷತ್ರ, ರಾಶಿಯಲ್ಲಿ ಹುಟ್ಟಿದವರು ಐದಾರು ಜನರಿದ್ದರೂ ಅವರ ಭಾವಕುಂಡಲಿ ಹಾಗೂ ಗೋಚಾರ ಫಲದ ಕಾರಣದಿಂದ ಅವರು ಬೇರೆ ಬೇರೆ ಗುಣ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮ ಜೀವನ ಸಾಗಿಸುತ್ತಿರುತ್ತಾರೆ. ನಮಗೆ ಬೇಕಾದವರ ನಕ್ಷತ್ರ ಗೊತ್ತಿದ್ದರೆ ಅವರು ಹೇಗಿರುತ್ತಾರೋ ಹಾಗೆ ನಾವೂ ನಮ್ಮ ನಡತೆಇಟ್ಟುಕೊಂಡು ಅವರ ಮನಸ್ಸು ಮತ್ತು ಹೃದಯ ಗೆಲ್ಲಬಹುದು ಎಂಬುದು ಇನ್ನೂ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ.

"ಪುಷ್ಯಾ ನಕ್ಷತ್ರ ವಿಶೇಷ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ನಕ್ಷತ್ರ ಟಿಪ್ಸ್ : ಅಜೀರ್ಣತೆ ಆಗಬಾರದೆಂದು ಈ ನಕ್ಷತ್ರದವರು ಹೊತ್ತಿಗೆ ಸರಿಯಾಗಿ ಊಟ ಮಾಡಬೇಕು.

ದೈವಕೃಪೆಗೆ : ಮನೆಯಲ್ಲಿ ಮನೆ ದೇವರ ಫೋಟೋ ಇರಲಿ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Know your future through birth star. Astrologer S.S. Nagnurmath says it is possible to know our exact future by studying birth star mentioned in our horoscope. Here astrologer discusses about characteristics of Punarvasu nakshatra people (Gemini and Cancer zodiac signs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X