Get Updates
Get notified of breaking news, exclusive insights, and must-see stories!

ಶನಿದಶೆಯಲ್ಲಿ ಶುಕ್ರಭುಕ್ತಿ ಬಂದರೆ ಒಳ್ಳೆಯದು!

ಹೌದು, ನಮಗೆ ಶನಿದಶೆಯು ಶುರುವಾದರೆ 19 ವರ್ಷವಿರುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ನವಗ್ರಹಗಳ ದಶಾಕಾಲ ಅನುಭವಿಸಲೇಬೇಕು. ನೀವು ಕೇಳಿರಬಹುದು "ಶುಕ್ರದಶೆ" ಎಂಬ ಮಾತನ್ನು. ಆದರೆ ಕೆಲವೊಬ್ಬರಿಗೆ ಜೀವನದಲ್ಲಿ ಶುಕ್ರದಶೆ ಬರುವುದೇ ಇಲ್ಲ. ಬಂದರೂ ಅವರ ಅಂತ್ಯ ಕಾಲಕ್ಕೆ ಬಂದಿರುತ್ತದೆ. ಅಥವಾ ಬಾಲ್ಯದಲ್ಲಿ ಮುಗಿದು ಹೋಗಿರುತ್ತದೆ! "ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ" ಎಂಬಂತೆ.

ಕೆಲವರಿಗೆ ಮಾತ್ರ ಮಧ್ಯವಯಸ್ಸಿನಲ್ಲಿ 20 ವರ್ಷದ ಶುಕ್ರದಶೆ ಬರುತ್ತದೆ. ಜಾತಕದಲ್ಲಿ ಯಾವ ವಯಸ್ಸಿಗೆ ಯಾವ ದಶೆ ಶುರುವಾಗುತ್ತದೆ ಎಂಬುದನ್ನು ನಾವು ನಿಖರವಾಗಿ ನೋಡಿಕೊಳ್ಳಬಹುದು. ಕಂಕಣಭಾಗ್ಯ ಮತ್ತು ಸಂತಾನಭಾಗ್ಯಕ್ಕಾಗಿ ಶುಕ್ರ ಮತ್ತು ಗುರು ಗ್ರಹಗಳ ಬಲ ಬೇಕಾಗಿರುವುದರಿಂದ ಜಾತಕಗಳ ಮೂಲಕ ಅವರ ಬಲ ಯಾವಾಗ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಜಾತಕದಲ್ಲಿ ಶನಿದೇವ ಉತ್ತಮ ಸ್ಥಾನದಲ್ಲಿದ್ದರೆ ಶನಿದಶೆಯಲ್ಲಿ ಅಪರಿಮಿತ ಹಣ ಸಂಪಾದನೆ ಮಾಡಬಹುದು. ಇದೇ ರೀತಿ ಶನಿದಶೆ ಕೆಲವರಿಗೆ ಜನ್ಮಕಾಲದಿಂದ ಅಥವಾ ಮಧ್ಯವಯಸ್ಸಿನಲ್ಲಿ ಇಲ್ಲವೇ ವೃದ್ಧಾಪ್ಯದಲ್ಲಿ ಬರುತ್ತದೆ. ಶನಿದಶೆಯ ಕಾಲದಲ್ಲಿಯೇ ಸಾಡೇಸಾತಿ, ಅಷ್ಟಮ, ಪಂಚಮ ಶನಿಕಾಟ ಇದ್ದರೆ ಜೀವನಕ್ಕೆ ತೊಂದರೆ ಹೆಚ್ಚೇ ಇರುತ್ತದೆ.

Sade Sati : What is Shani Dasha

ಶನಿದಶೆಯಲ್ಲಿ ಶುಕ್ರಭುಕ್ತಿ ಬಂದರೆ ತುಂಬಾ ಒಳ್ಳೆಯದು ಜೀವನಕ್ಕೆ. ಇದು 3 ವರ್ಷ 2 ತಿಂಗಳುಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಸಾಕಷ್ಟು ಹಣ ಗಳಿಸಿ ಅನೇಕ ಮನೆಗಳ ಮಾಲೀಕರಾಗಬಹುದು, ಕಂಕಣಭಾಗ್ಯ ಕೂಡಿಬರುತ್ತದೆ. ಅಂದವಾಗಿ ಕಾಣಲು ಅವಶ್ಯವಿರುವ ಎಲ್ಲ ವಸ್ತುಗಳನ್ನು ಖರೀದಿ ಮಾಡಲು ಹಣದ ಅನುಕೂಲತೆ ಇರುತ್ತದೆ. ಮನಸ್ಸಿಗೆ ಹಿಡಿಸಿದ ವಾಹನ ಕೊಳ್ಳುವ ಯೋಗವಿರುತ್ತದೆ. ಸಂಸಾರ ಸುಖದಿಂದ ಸಂತಾನಭಾಗ್ಯ ಸಿಗುತ್ತದೆ. ಮನೋರಂಜನಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚುತ್ತದೆ.

ಧರ್ಮಾಸಕ್ತಿ ಹೆಚ್ಚಿ, ಎಲ್ಲ ದೇವರಿಗೂ ಪೂಜೆ, ಪುನಸ್ಕಾರ ಮಾಡಿಸಲು ಸಾಕಷ್ಟು ಅನುಕೂಲವಿರುತ್ತದೆ. ದೇವರಿಗೆಷ್ಟು ಖರ್ಚು ಮಾಡಿದರೂ ಅದರ ದುಪ್ಪಟ್ಟು ಲಾಭ ರೂಪದಲ್ಲಿ ಸಿಗುತ್ತದೆ. ಯಾವಾಗಲೂ ಒಳ್ಳೆಯ ಕೆಲಸ ಮಾಡುವಂತೆ ಮನಸ್ಸು ಪ್ರೇರೇಪಿಸುತ್ತಿರುತ್ತದೆ. ಅಧಿಕಾರದ ಗದ್ದುಗೆ ಏರಲು ದಾರಿ ಸುಲಭವಾಗಿ, ಅನೇಕರು ಸಹಾಯ-ಸಹಕಾರ ಮಾಡುತ್ತ ಸಾಕಷ್ಟು ಬೆಂಬಲ-ಪ್ರೋತ್ಸಾಹ ನೀಡುತ್ತಾರೆ. ಇದರಿಂದ ಅಧಿಕಾರದ ರುಚಿ ಅನುಭವಿಸಲು ಸಾಧ್ಯವಾಗುತ್ತದೆ.

ಈ ಸಂದರ್ಭದಲ್ಲಿ ಶನಿದೇವನ ಪ್ರಿಯವಾದ ವಸ್ತುಗಳಾದ ಖಾದ್ಯತೈಲಗಳು, ಕಬ್ಬಿಣ ಉತ್ಪನ್ನಗಳ ಕಾರಖಾನೆಗಳಿಂದ ಲಾಭ ಸಿಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಜ್ಞಾನ ಸಂಪಾದಿಸಲು ಮನಸ್ಸು ಚಡಪಡಿಸುತ್ತಿರುತ್ತದೆ. ಮನಸ್ಸು ಮತ್ತು ದೇಹ ಯಾವಾಗಲೂ ಉತ್ಸಾಹದಿಂದಿರುತ್ತದೆ.

ಶನಿದಶಾ ಮತ್ತು ಶನಿಭುಕ್ತಿಯು 3 ವರ್ಷ 3 ತಿಂಗಳಿರುತ್ತದೆ. ಈ ಸಮಯದಲ್ಲಿ ಯಾವಾಗಲೂ ರೋಗಿಷ್ಟರ ತರಹ ಅರಿಷ್ಟತನ, ದರಿದ್ರ, ಆಲಸ್ಯ, ಸೋಮಾರಿತನ ಮನೆ ಮಾಡಿರುತ್ತದೆ. ಯಾವ ಕೆಲಸ ಮಾಡಿದರೂ ಅರ್ಧಮರ್ಧವೇ ಆಗುತ್ತವೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುವುದಿಲ್ಲ. ಕೈಯಲ್ಲಿ ದುಡ್ಡೇ ಇರುವುದಿಲ್ಲ. ಒಮ್ಮೊಮ್ಮೆ ಭಿಕ್ಷೆ ಬೇಡಲು ಕೂಡ ಮನಸ್ಸಾಗುತ್ತೆ ಕೆಲವರಿಗೆ. ಸಾಕಷ್ಟು ಯೋಚಿಸಿ, ಮುಂದಾಲೋಚನೆ ಮಾಡಿ ಕೆಲಸ ಮಾಡಿದರೂ ತೊಂದರೆ ಕಾಡುತ್ತಲೇ ಇರುತ್ತದೆ.

ಕಚೇರಿಯಲ್ಲಿ ಕೆಲಸ ಸರಿ ಮಾಡಲು ಮನಸ್ಸಾಗದೇ ಮೇಲಿನವರಿಂದ ಆವಾಗಾವಾಗ ಮಂಗಳಾರತಿ ಆಗುತ್ತಿರುತ್ತದೆ. ಇದರಿಂದ ಮನಸ್ಸು ನೊಂದುಕೊಂಡು ಮುದುಡುತ್ತದೆ. ಇನ್ನು ಶನಿದೇವನು ಜಾತಕದಲ್ಲಿ ಕೆಟ್ಟವನಾಗಿದ್ದರೆ ದೇಹಕ್ಕೆ ಊನ ಮಾಡಲು ಕೂಡ ಹಿಂಜರಿಯುವುದಿಲ್ಲ. ಸಂಸಾರಸ್ಥರಿಗೆ ದಾಂಪತ್ಯ ಸುಖ ಈ ಸಮಯದಲ್ಲಿ ಮುಳ್ಳಿನ ಹಾಸಿಗೆಯಂತಾಗುತ್ತದೆ.

ಆದ್ದರಿಂದ ಶನಿದಶೆ ಅಥವ ಸಾಡೇಸಾತಿಯಲ್ಲಿ ಕಷ್ಟಪಡುವವರು ತಮ್ಮ ಕೈಲಾದಷ್ಟು ಪರಿಹಾರ ಮಾಡಿಕೊಳ್ಳಬೇಕು. ಕೆಲವರಿಗೆ ಪರಿಹಾರ ಮಾಡಿಕೊಳ್ಳುವುದಿರಲಿ ತಮ್ಮ ಆರೋಗ್ಯ ಸರಿಮಾಡಿಕೊಳ್ಳಲು ಕೂಡ ಹಣವಿರುವುದಿಲ್ಲ! ಆದರೆ ಅನಿವಾರ್ಯ ಜೀವನದ ಬಂಡಿ ಸಾಗಲೇಬೇಕು. ಪರಿಹಾರ ಮಾಡಿಕೊಳ್ಳಲು ಹಣವಿದ್ದವರು ಜಿಪುಣತನ ಮಾಡಿ ತಮ್ಮ ಮುಂದಿನ ದಿನಗಳಲ್ಲಿ ಹಣಕ್ಕಾಗಿಯೇ ಪರದಾಡುವಂತಾಗುತ್ತಾರೆ.

ಇನ್ನೊಂದು ವಿಷಯ, ಇಂಗ್ಲಿಷ್ ಪದ್ಧತಿಯ ರಾಶಿ ನೋಡುವವರು ತಮ್ಮ ರಾಶಿಗ್ಯಾವಾಗ ಯಾವ ದಶೆ, ಭುಕ್ತಿ ಇದೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಯಾಕೆಂದರೆ ಇಂಗ್ಲಿಷ್ ಪದ್ಧತಿಯಲ್ಲಿ ಜನ್ಮದಿನಾಂಕ ಆಧರಿಸಿ ರಾಶಿಗಳನ್ನು ಹೆಸರಿಸುತ್ತಾರೆ. ಅವರಿಗೆ ಶನಿದಶೆ, ಶನಿದೇವನ ಸಾಡೇಸಾತಿ ಎಂಬುದೇನೂ ಇಲ್ಲ. ಹೀಗಾಗಿ ಇಂಗ್ಲಿಷ್ ರಾಶಿ ಭವಿಷ್ಯ ನೋಡುವವರು ತಮ್ಮ ಭವಿಷ್ಯದ ಬಗ್ಗೆ ನಿಖರವಾಗಿ ಏನೂ ತಿಳಿಯದಂತವರಾಗಿ ಮಂಗನಂತಾಗುತ್ತಾರೆ. ಇಷ್ಟೇ ಅಲ್ಲ ಶನಿದೇವನ ಸಾಡೇಸಾತಿ ಪೊಳ್ಳು ಎಂದು ತಮ್ಮಷ್ಟಕ್ಕೇ ತಾವೇ ನಿರ್ಧರಿಸಿ ಇತರರಿಗೆ ಸಾಡೇಸಾತಿ ಸುಳ್ಳು ಎಂದು ನಂಬಿಸುತ್ತಾರೆ.

ಇಂಗ್ಲಿಷ್‌ನಲ್ಲಿ ಒಂದು ಗಾದೆಮಾತಿದೆ "ಲೈಫ್ ಬಿಗಿನ್ಸ್ ಆಫ್ಟರ್ ಫಾರ‍್ಟಿ" ಎಂದು. ಇದರರ್ಥ ಜೀವನ ಶುರುವಾಗೋದು ನಲ್ವತ್ತರ ನಂತರವೆಂದು. ಅವರೂ ಸಾಡೇಸಾತಿಯಿಂದ ಜೀವನದ ಪಾಠ ಕಲಿತು ಈ ಗಾದೆಮಾತು ಹುಟ್ಟಿಸಿದ್ದಾರೆ ಎಂದರೆ ತಪ್ಪೇನಲ್ಲ. ಯಾಕೆಂದರೆ ಸಾಡೇಸಾತಿ ಬರೋದು 30 ವರ್ಷಕ್ಕೊಮ್ಮೆ ಎಂಬುದು ನಿಮಗೆ ಗೊತ್ತಿದೆ. ಅವರೂ ಶನಿದೇವನ ಪ್ರಭಾವಕ್ಕೆ ಒಳಗಾಗಿರುತ್ತಾರೆ.

ಇದೇ ರೀತಿ ನಲ್ವತ್ತರ ನಂತರ ವಯೋಸಹಜ ರೋಗಗಳು (ಕಣ್ಣಿನ ಬೇನೆ, ಬೆನ್ನು ನೋವು, ಮರೆವು ಮುಂತಾದವು) ದೇಹದಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತವೆ. ಇಂದಿನ ದಿನಗಳಲ್ಲಿ ಕಣ್ಣಿಗೆ ಕಾಣೋ ದೇವರೆಂದರೆ ವೈದ್ಯರು. ಎಂಥಾ ದೊಡ್ಡವರೇ ಇರಲಿ, ವೈದ್ಯರಿಗೆ ಮಾತ್ರ ನಮ್ಮ ಪಾಲಿನ ದೇವರು ನೀವು ನಮ್ಮವರನ್ನು ಉಳಿಸಿಕೊಡಿ ಎಂದು ಎಲ್ಲರೂ ಅವರಲ್ಲಿ ಕೇಳಿಕೊಳ್ಳುತ್ತಾರೆ. ಆದರೆ ವೈದ್ಯರು ರೋಗಿಗಳು ಕೆಟ್ಟವರು, ಒಳ್ಳೆಯವರು ಎಂಬ ಭೇದ ಮಾಡದೇ ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ನೀಡುತ್ತ ರೋಗಿಗಳ ಪಾಲಿಗೆ ದೇವರೇ ಆಗಿರುತ್ತಾರೆ.

ನಿಮಗೆ ಗೊತ್ತಿರಬಹುದು ನಮ್ಮ ನಿಮ್ಮೆಲ್ಲರ ಸುತ್ತಮುತ್ತಲೂ ಎರಡು ವರ್ಗದ ಜನರಿದ್ದಾರೆ. ಒಂದು ವರ್ಗ ಕೆಟ್ಟ ಗುಣಗಳವರದು ಇನ್ನೊಂದು ಒಳ್ಳೆಯ ಗುಣಗಳವರದು. ನೀವು ಯಾವ ವರ್ಗದಲ್ಲಿದ್ದೀರಿ ಎಂಬುದನ್ನು ನೀವೇ ಆತ್ಮವಿಮರ್ಶೆ ಮಾಡಿಕೊಳ್ಳಿ. ಅಥವಾ ಇನ್ನೊಬ್ಬರಲ್ಲಿ ಕೇಳಿ ತಿಳಿದುಕೊಳ್ಳಿ ನೀವು ಯಾವ ವರ್ಗದವರು ಎಂದು. ಏಕೆಂದರೆ ಕೆಟ್ಟ ಗುಣಗಳ ವರ್ಗದವರು ಮತ್ತೊಬ್ಬರ ಜೀವನದಲ್ಲಿ ಅಡ್ಡಗಾಲು ಹಾಕುತ್ತಾ ಅವರ ಏಳ್ಗೆ ಸಹಿಸದೆ ತಡೆಯೊಡ್ಡುತ್ತಿರುತ್ತಾರೆ. ಇಂಥವರು ಮಾಡುವ ಪಾಪದ ಕೆಲಸವನ್ನು ಮಹಾತ್ಮನು ನೋಡುತ್ತಲೇ ಇರುತ್ತಾನೆ. ಈ ತರಹ ಅಡ್ಡಗಾಲು ಹಾಕುವವರ ಕಾಲೇ ಅವನ ಟಾರ್ಗೆಟ್ ಆಗಿರುತ್ತದೆ! ಶನಿದೇವನು ತನ್ನ ಕಾಡಾಟದಲ್ಲಿ ತಾನಿಟ್ಟ ಟಾರ್ಗೆಟ್ ಮರೆಯೋದಿಲ್ಲ. ಬೇರೊಬ್ಬರಿಗೆ ಅಡ್ಡಗಾಲು ಹಾಕುವವರಿಗೆ ಆಮೇಲೆ ಗೊತ್ತಾಗುತ್ತೆ ಶನಿದೇವನ ಈ ಶಿಕ್ಷೆ ಯಾಕೆ ಎಂದು.

ಜಾತಕವಿಲ್ಲದವರಿಗೆ ಶನಿಬಲ ಬಂದಿರೋದು ಗೊತ್ತಾಗೋದು ಹೀಗೆ? ಎಂಬುದು ಮುಂದಿನ ಲೇಖನದಲ್ಲಿ.

ವಾಸ್ತು ಟಿಪ್ಸ್ : ಪೂಜೆ, ಧ್ಯಾನ ಮತ್ತು ಓದುವಾಗ ಪೂರ್ವದಿಕ್ಕಿಗೆ ನಿಮ್ಮ ಮುಖವಿರಲಿ.

ಶನಿದೇವನ ಕೃಪೆಗೆ : ಶನಿಯಂತ್ರ ಮನೆಯಲ್ಲಿ ಸ್ಥಾಪಿಸಿ ಪೂಜಿಸಿ. (ಒನ್‌ಇಂಡಿಯಾ ಕನ್ನಡ)

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+