ವಲಸೆ ಕಾರ್ಮಿಕರ ಡೇಟಾ ಬಳಸಿ ಕೋಟ್ಯಂತರ ರೂಪಾಯಿ ಪಿಂಚಣಿ ವಂಚನೆ: ಸಿಬಿಐ ತನಿಖೆ
ನವದೆಹಲಿ, ಸೆಪ್ಟೆಂಬರ್ 11: ನೌಕರರ ಭವಿಷ್ಯ ನಿಧಿ ಅಥವಾ ಇಪಿಎಫ್ಒ ಸಿಬ್ಬಂದಿಗಳ ವಿರುದ್ದ ಭ್ರಷ್ಟಾಚಾರ ಹಾಗೂ ವಂಚನೆ ಆರೋಪದಲ್ಲಿ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ದೂರು ದಾಖಲು ಮಾಡಿಕೊಂಡಿದೆ.
ಕಳೆದ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಹಲವಾರು ಮಂದಿ ಉದ್ಯೋಗವನ್ನು ಕಳೆದುಕೊಂಡ ಹಿನ್ನೆಲೆ ಮಾರ್ಚ್ ಹಾಗೂ ಜೂನ್ ತಿಂಗಳಿನಲ್ಲಿ ಇಪಿಎಫ್ ಹಣವನ್ನು ಹಿಂಪಡೆಯುವ ನಿಯಮವನ್ನು ಸಡಿಲಿಕೆ ಮಾಡಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸುಮಾರು 2.71 ಕೋಟಿ ರೂಪಾಯಿ ಹಣವನ್ನು ನೌಕರರ ಭವಿಷ್ಯ ನಿಧಿ ಕಚೇರಿ ಸಿಬ್ಬಂದಿಗಳು ಅಕ್ರಮ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಜಾಗರೂಕ ಇಲಾಖೆ ಸಲ್ಲಿಸಿದ ದೂರಿನ ಆಧಾರದಲ್ಲಿ ಈ ಪ್ರರಣವನ್ನು ಸಿಬಿಐ ದಾಖಲು ಮಾಡಿಕೊಂಡಿದೆ. ಕಂದಿವಾಳಿ ಸ್ಥಳೀಯ ಕಚೇರಿಯ ಹಿರಿಯ ಸಾಮಾಜಿಕ ಭದ್ರತಾ ಸಹಾಯಕ ಈ ಹಗರಣದ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ.
ಕಂದಿವಾಳಿ ಸ್ಥಳೀಯ ಕಚೇರಿಯ ಹಿರಿಯ ಸಾಮಾಜಿಕ ಭದ್ರತಾ ಸಹಾಯಕ ಜಂದನ್ ಕುಮಾರ್ ಸಿನ್ಹಾ ಸೇರಿದಂತೆ ಇನ್ನಿಬ್ಬರ ವಿರುದ್ದವು ದೂರು ದಾಖಲು ಮಾಡಲಾಗಿದೆ. ಉತ್ತಮ್ ತರಗಾಯ್ ಹಾಗೂ ವಿಜಯ್ ಜಾರ್ಪೆ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ. ಇವರಿಬ್ಬರು ಕೂಡಾ ಕೊಯಮುತ್ತೂರು ಹಾಗೂ ಚೆನ್ನೈ ಸ್ಥಳೀಯ ಸಂಸ್ಥೆಯ ಸಹಾಯಕ ಭವಿಷ್ಯ ನಿಧಿ ಆಯುಕ್ತರು ಆಗಿದ್ದಾರೆ.

ಆಂತರಿಕ ತನಿಖೆಯಿಂದ ಭ್ರಷ್ಟಾಚಾರ ಬಹಿರಂಗ
ನೌಕರರ ಭವಿಷ್ಯ ನಿಧಿಯ ಜಾಗೃತ ಇಲಾಖೆಗೆ ಈ ಬಗ್ಗೆ ಅನಾಮಧೇಯ ವ್ಯಕ್ತಿಯಿಂದ ಮೇ 18 ರಂದು ಮಾಹಿತಿ ಲಭಿಸಿದೆ. ಈ ಬಳಿಕ ಇಲಾಖೆಯು ಆಂತರಿಕ ಆಡಿಟ್ ಅನ್ನು ನಡೆಸಿದೆ. ಈ ಸಂದರ್ಭದಲ್ಲಿ ಕೋಟ್ಯಾಂತರ ರೂಪಾಯಿ ಹಣ ಹಗರಣವಾಗಿದೆ ಎಂದು ತಿಳಿದು ಬಂದಿದೆ. ಸಿಬ್ಬಂದಿಗಳೇ ಮಾಹಿತಿಯನ್ನು ತಿರುಚಿ ಹಗರಣ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿಯ ಜಾಗೃತ ಇಲಾಖೆಯು ಸಿಬಿಐ ವಿರುದ್ದ ಆಗಸ್ಟ್ 24 ರಂದು ಪ್ರಕರಣ ದಾಖಲು ಮಾಡಿದೆ.

ವಲಸೆ ಕಾರ್ಮಿಕರ ಡೇಟಾ ಬಳಸಿ ವಂಚನೆ
ಇನ್ನು ಮೂಲಗಳ ಪ್ರಕಾರ, ಈ ಆರೋಪಿಗಳಿಗೆ ಸೈಟ್ನಲ್ಲಿರುವ ವ್ಯವಸ್ಥೆ ಹಾಗೂ ಅದರ ಲೋಪದೋಷಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರು. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲು ವಲಸೆ ಕಾರ್ಮಿಕರ ಡೇಟಾವನ್ನು ಬಳಕೆ ಮಾಡಿದ್ದರು ಎಂದು ಹೇಳಲಾಗಿದೆ. ವಲಸೆ ಕಾರ್ಮಿಕರಿಂದ ಹಾಗೂ ಬಡ ಜನರಿಂದ ಸಂಗ್ರಹ ಮಾಡಿದ್ದ ಬ್ಯಾಂಕ್ ವಿವರ ಹಾಗೂ ಆಧಾರ್ ವಿವರದಲ್ಲಿ ಬೋಗಸ್ ಪಿಎಫ್ ಅಕೌಂಟ್ ಅನ್ನು ಈ ಸಿಬ್ಬಂದಿಗಳು ತೆರೆದಿದ್ದರು. ಇದಕ್ಕಾಗಿ ಸಣ್ಣ ಕಮಿಷನ್ ಅನ್ನು ಕೂಡಾ ಈ ಸಿಬ್ಬಂದಿಗಳು ನೀಡಿದ್ದಾರೆ. ಬಳಿಕ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಮುಚ್ಚಲ್ಪಟ್ಟ ಸಂಸ್ಥೆಗಳ ಉದ್ಯೋಗಿಗಳು ಎಂಬಂತೆ ಈ ವಲಸೆ ಕಾರ್ಮಿಕರನ್ನು ಬಿಂಬಿಸಿದ್ದಾರೆ. ಬಳಿಕ ನಕಲಿ ಕ್ಲೇಮ್ ಮಾಡಿ ಹಣವನ್ನು ಪಡೆದುಕೊಂಡಿದ್ದಾರೆ," ಎಂದು ಆರೋಪ ಮಾಡಲಾಗಿದೆ.

ಚಾಲಕಿತನ ಪ್ರದರ್ಶಿಸಿದ್ದ ಈ ಸಿಬ್ಬಂದಿಗಳು
ಸಾಮಾನ್ಯವಾಗಿ ಐದು ಲಕ್ಷಕ್ಕಿಂತ ಅಧಿಕ ಇಪಿಎಫ್ ಹಣವನ್ನು ಹಿಂದಕ್ಕೆ ಪಡೆಯುವುದಾದರೆ ಮಾತ್ರ ಹಿರಿಯ ಅಧಿಕಾರಿಗಳಿಗೆ ದೃಢೀಕರಣಕ್ಕಾಗಿ ಕಳುಹಿಸಬೇಕಾಗುತ್ತದೆ. ಹಾಗಾಗಿ ಈ ವಿಚಾರದಲ್ಲಿ ಚಾಲಾಕಿತನ ಪ್ರದರ್ಶನ ಮಾಡಿರುವ ಈ ಸಿಬ್ಬಂದಿಗಳು 2-3.5 ಲಕ್ಷ ಹಣವನ್ನು ಮಾತ್ರ ಕ್ಲೇಮ್ ಮಾಡಿಕೊಂಡಿದ್ದಾರೆ. ಈ ಮೂಲಕವಾಗಿ ಹಿರಿಯ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುವುದನ್ನು ತಪ್ಪಿಸಿಕೊಂಡಿದ್ದಾರೆ. ಇನ್ನು ಸಿಬಿಐ ಎಫ್ಐಆರ್ ಪ್ರಕಾರ, "2009 ರಲ್ಲಿ ಮುಚ್ಚಲಾಗಿರುವ ಮುಂಬೈ ಮೂಲದ ವಿಜಯ್ ಕುಮಾರ್ ಜ್ಯುವೆಲ್ಲರಿಯ ಹೆಸರಲ್ಲಿ ಸುಮಾರು 91 ನಕಲಿ ಕ್ಲೇಮ್ ಮಾಡಲಾಗಿದೆ. ಹಾಗೆಯೇ ಇಪಿಎಫ್ ದಾಖಲೆಯಲ್ಲಿ ಈ ಸಂಸ್ಥೆಯು ಇಲ್ಲ.

ಈವರೆಗೆ 2,71,45,513 ರೂಪಾಯಿ ವಂಚನೆ
ಮಾರ್ಚ್ 2020 ರಲ್ಲಿ ಜೂನ್ 2021 ರವರೆಗೆ ಸುಮಾರು 2,71,45,513 ರೂಪಾಯಿ ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಬೋಗಸ್ ಅಕೌಂಟ್ಗಳನ್ನು ಬಳಸಿಕೊಂಡು ಚಂದನ್ ಕುಮಾರ್ ಸಿನ್ಹಾ ಹಣವನ್ನು ಕ್ಲೇಮ್ ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ದಾಖಲು ಮಾಡಲಾಗಿದೆ. ಇನ್ನು ಈ ವಂಚನೆಯು ಬರೀ ಬಿ ವಿಜಯ್ ಕುಮಾರ್ ಜ್ಯುವೆಲ್ಲರಿಯಲ್ಲಿ ಮಾತ್ರ ನಡೆದಿಲ್ಲ. ಹೀಗಿಯೆ ಹಲವಾರು ಸಂಸ್ಥೆಗಳ ಹೆಸರಿನಲ್ಲಿ ಸುಮಾರು 800 ಬೋಗಸ್ ಅಕೌಂಟ್ಗಳನ್ನು ತೆರೆಯಲಾಗಿದೆ. "ಮುಂಬೈ, ಗೋರಾಕ್ಪುರ. ನಾಸಿಕ್, ಪಾಟ್ನಾ, ಗಾಝಿಯಾಬಾದ್ ಹಾಗೂ ಮಥುರಾದಲ್ಲಿ ಹೀಗೆ ಹಲವಾರು ಪ್ರದೇಶವನ್ನು ಉಲ್ಲೇಖ ಮಾಡಿ ಈ ಬೋಗಾಸ್ ಅಕೌಂಟ್ ಅನ್ನು ತೆರೆಯಲಾಗಿದೆ. ಈ ಮೂಲಕ ಕೋಟ್ಯಾಂತರ ರೂಪಾಯಿ ಹಣವನ್ನು ವಂಚನೆ ಮಾಡಲಾಗಿದೆ," ಎಂದು ಇಪಿಎಫ್ ದೂರಿನಲ್ಲಿ ಹೇಳಿದೆ. ಇಪಿಎಫ್ಒ ಹಲವಾರು ಬ್ಯಾಂಕ್ಗಳಿಗೆ ಈ ವಂಚನೆ ವಿಚಾರದಲ್ಲಿ ಪತ್ರ ಬರೆದಿದೆ. ಹಾಗೆಯೇ ಸುಮಾರು 800 ಬ್ಯಾಂಕ್ ಖಾತೆಗಳ ಬ್ಲಾಕ್ ಮಾಡಲು ಸೂಚನೆ ನೀಡಿದೆ. ಇನ್ನು ಇದಕ್ಕೂ ಮುನ್ನವೇ ಈ ಅಕೌಂಟ್ನಿಂದ ಹಣವನ್ನಿ ವಿತ್ಡ್ರಾ ಮಾಡಲಾಗಿದೆ ಎಂದು ಹೇಳಲಾಗಿದೆ. "ಚಂದನ್ ಕುಮಾರ್ ಸಿನ್ಹಾರ ಬ್ಯಾಂಕ್ ಖಾತೆಯಲ್ಲಿ 2019 ರ ಎಪ್ರಿಲ್ನಿಂದ 2021 ರ ಜುಲೈವರೆಗೆ ಸುಮಾರು 30,36,560 ಹಣದ ವ್ಯವಹಾರ ನಡೆದಿದೆ. ಆದರೆ ಆತನ ವೇತನವು 12,90,057 ಆಗಿದೆ," ಎಂದು ಮೂಲಗಳು ಹೇಳಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications