ಇಡೀ ಕುಟುಂಬವೇ ಕಣ್ವ ಬಡ್ಡಿ ಸ್ಕೀಮ್ ಬಲೆಗೆ ಬಿದ್ದು ಅಲೆದಾಟ
ಬೆಂಗಳೂರು, ಡಿಸೆಂಬರ್ 23 : ಅಣ್ಣನಿಗೆ ಗೊತ್ತಾಗದಂತೆ ತಮ್ಮ ಹೂಡಿಕೆ ಮಾಡಿದ. ತಮ್ಮನಿಗೆ ಗೊತ್ತಾಗದಂತೆ ಅಣ್ಣ ಹೂಡಿಕೆ ಮಾಡಿದ್ದ. ಇಬ್ಬರು ಮಕ್ಕಳಿಗೆ ಗೊತ್ತಾಗದಂತೆ ಅಮ್ಮ ಹೂಡಿಕೆ ಮಾಡಿದ್ದರು ! ಒಬ್ಬರಿಗೊಬ್ಬರು ಹೇಳಿಕೊಳ್ಳದೇ ಇಡೀ ಕುಟುಂಬವೇ ಕಣ್ವದಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದೆ.
ಕಣ್ವ ವಂಚನೆ ಬಯಲಿಗೆ ಬರುವವರೆಗೂ ಹೂಡಿಕೆ ಮಾಡಿರುವ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಇದು ವಿದ್ಯಾರಣ್ಯಪುರದಲ್ಲಿ ನೆಲೆಸಿರುವ ಇಂಜಿನಿಯರ್ ಎಂ.ಎಸ್ ಮೂರ್ತಿ ಅವರ ಕಣ್ವ ಮೋಸದ ಕಥೆ.

ಟೀ ಕುಡಿದು ಬಲೆಗೆ ಬಿದ್ದೆ :
ಜಪಾನ್ ಮೂಲದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. 58 ವರ್ಷ ಆಗಿದ್ದರಿಂದ ನಿವೃತ್ತಿಯಾಗಿದ್ದೆ. ವಿದ್ಯಾರಣ್ಯಪುರದಲ್ಲಿ ನನ್ನ ಮನೆಯಿತ್ತು. ಕೆಲಸವಿಲ್ಲವಲ್ಲಾ ಎಂದು ಬೆಳಗಿನ ಜಾವ ಪಾರ್ಕ್ ಬಳಿ ವಾಕಿಂಗ್ ಹೋಗುತ್ತಿದ್ದೆ. ನನ್ನ ನೋಡಿ ಒಬ್ಬ, ಸರ್ ನೀವು ನಿವೃತ್ತಿ ಇಂಜಿನಿಯರ್ ಅಲ್ಲವೇ ಅಂತ ಕೇಳಿದ. ನಿವೃತ್ತಿ ಉದ್ಯೋಗಿಗಳಿಗೆ ಉದ್ಯೋಗ ಕೊಡುವ ಬಗ್ಗೆ ಒಂದು ಪಾಂಪ್ಲೆಟ್ ನೀಡಿದ. ಟೀ ಕುಡಿಯಲು ಕರೆದುಕೊಂಡು ಹೋಗಿ ಕಣ್ವ ಬಗ್ಗೆ ಸಾಕಷ್ಟು ಹೇಳಿದರೂ, ನಾನು ನಂಬಲಿಲ್ಲ. ಒಮ್ಮೆ ಕರೆ ಮಾಡಿ ಕಣ್ವ ಸಂಸ್ಥೆಯಿಂದ ಉಚಿತ ಪ್ರವಾಸ ಇರುವುದಾಗಿ ಹೇಳಿದ. ಕೆಲಸವೂ ಇರಲಿಲ್ಲ ಅಂತ ನಾನು ಹೋದೆ. ಕೊರಟಗೆರೆ ಸಮೀಪ ಟೆಂಪಲ್ ಬಳಿ ಕರೆದುಕೊಂಡು ಹೋಗಿದ್ದರು. ಅಲ್ಲಿಯೇ ಕಣ್ವ ಸಂಸ್ಥೆಯ ಕಾರ್ಖಾನೆಗೆ ಕರೆದುಕೊಂಡು ಹೋದ್ರು. ಸುಮಾರು 20 ಕ್ಕೂ ಹೆಚ್ಚು ಬಸ್ ನಲ್ಲಿ ನನ್ನಂತೆ ಸಾವಿರಾರು ಜನರು ಬಂದಿದ್ರು. ಅಲ್ಲಿ ನಂಜುಂಡಯ್ಯ ಮತ್ತು ಇತರರು ಬಂದು ಕಣ್ವ ಕಂಪನಿ ಹಾಗೂ ಹೂಡಿಕೆಗೆ ಇರುವ ಅವಕಾಶದ ಬಗ್ಗೆ ಹೇಳಿದ್ರು. ಅದೆಲ್ಲಾ ನೋಡಿ ನನಗೂ ನಂಬಿಕೆ ಬಂತು. ಹೂಡಿಕೆ ಮಾಡುವ ಆಲೋಚನೆ ಮಾಡಿದೆ ಎಂದು ಮೂರ್ತಿ ಕಣ್ವಕ್ಕೆ ಎಂಟ್ರಿಯಾದ ಕಥೆ ವಿವರಿಸಿದರು.

ಬಡ್ಡಿ ಸ್ಕೀಮ್ :
ನಿವೃತ್ತಿಯಾಗಿದ್ದರಿಂದ ನನಗೆ ಲಕ್ಷಾಂತರ ರೂಪಾಯಿ ಹಣ ಬಂದಿತ್ತು. ಅಂಚೆ ಕಚೇರಿಯಲ್ಲಿ ಕಟ್ಟಲು ಹೋಗಿದ್ದೆ. ಅಲ್ಲಿ ಒಬ್ಬ ವ್ಯಕ್ತಿ ಹತ್ತು ಲಕ್ಷಕ್ಕಿಂತೂ ಹೆಚ್ಚು ಹಣ ಕಟ್ಟಲು ಅವಕಾಶ ಇರಲಿಲ್ಲ. ಹೀಗಾಗಿ ಅಲ್ಲಿ ಹತ್ತು ಲಕ್ಷ ರೂ. ಕಟ್ಟಿದ ಬಳಿಕ ಹಣ ಉಳಿದಿತ್ತು. ನನ್ನ ಬಗ್ಗೆ ತಿಳಿದುಕೊಂಡಿದ್ದ ಕಣ್ವ ಸಂಸ್ಥೆಯ ಶರತ್ ಎಂಬಾತ ಬೆನ್ನಿಗೆ ಬಿದ್ದ. ಒಂದು ಲಕ್ಷ ರೂಪಾಯಿಗೆ ತಿಂಗಳಿಗೆ ಒಂದು ಸಾವಿರ ಬಡ್ಡಿ ಬರುತ್ತೆ ಅಂತ ಹೇಳಿದ್ರು. ಮೂರು ಲಕ್ಷ ರೂ. ಉತ್ತರಹಳ್ಳಿ ಕಣ್ವ ಸಂಸ್ಥೆಯಲ್ಲಿ ಹೂಡಿಕೆ ಮಾಡಿದೆ. ಇದಾದ ನಂತರ ವಿದ್ಯಾರಣ್ಯಪುರದಲ್ಲಿ ಎರಡು ಲಕ್ಷ ಹೂಡಿಕೆ ಮಾಡಿದೆ. ಒಂದು ವರ್ಷಕ್ಕೆ ಎಫ್ಡಿ ಇಟ್ಟಿದ್ದ ವಿದ್ಯಾರಣ್ಯಪುರ ಕಣ್ವ ಕಚೇರಿ ಹಣ ವಾಪಸು ಬಂತು. ಆದರೆ, ಉತ್ತರಹಳ್ಳಿಯದ್ದು ಮೂರು ತಿಂಗಳು ಬಡ್ಡಿ ಬಂತು. ಅಮೇಲೆ ನೋಡಿಕೊಳ್ಳಲಿಲ್ಲ, ಬಡ್ಡಿ ಬಂದಿರಲಿಲ್ಲ. ಅಷ್ಟೊತ್ತಿಗೆ ಪತ್ರಿಕೆಗಳಲ್ಲಿ ಕಣ್ವ ಸಂಸ್ಥೆಯ ಗಲಾಟೆ ಬರೋಕೆ ಶುರುವಾಯಿತು.

ಸಹೋದರ ಮೋಸ:
ಬಳ್ಳಾರಿಯ ಜಿಂದಾಲ್ ನಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿರುವ ನನ್ನ ಸಹೋದರಿಗೆ ವಿಷಯ ತಿಳಿಸಿದೆ. ಅವಾಗ ಆತನೂ ಕಣ್ವದಲ್ಲಿ ಹೂಡಿಕೆ ಮಾಡಿರುವ ವಿಷಯ ತಿಳಿಸಿದ. ಅಪ್ಪ ಪಶು ವೈದ್ಯ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದವರು. ಅವರು ತೀರಿಕೊಂಡಿದ್ದಾರೆ. ಅವರಿಗೆ ಬರುವ ಪಿಂಚಣಿ ಹಣದಲ್ಲಿ ನಮ್ಮ ಇಬ್ಬರಿಗೂ ಗೊತ್ತಿಲ್ಲದಂತೆ ತಾಯಿ ಕಣ್ವ ಸಂಸ್ಥೆಗೆ ಪ್ರತಿ ತಿಂಗಳು ಹಣ ಕಟ್ಟಿದ್ದಾರೆ. ನನ್ನ ಪತ್ನಿ, ನನ್ನ ಸಹೋದರ ಕುಟುಂಬ, ನಾನು, ಅಮ್ಮ ಎಲ್ಲರ ಹಣ ಹೂಡಿಕೆ ಮಾಡಿದ್ದು, ಲಕ್ಷಾಂತರ ರೂಪಾಯಿ ಬರಬೇಕಿದೆ. ನಾನು ಕಣ್ವದಲ್ಲಿ ಹಣ ಹಾಕುವಾಗ ನನ್ನ ಸ್ನೇಹಿತರು ಎಚ್ಚರಿಸಿದ್ದರು. ನಾನೇ ಖುದ್ದು ನೋಡಿ ಬಂದಿದ್ದರಿಂದ ಏನೂ ಆಗಲ್ಲ ಎಂಬ ನಂಬಿಕೆಯಿತ್ತು. ನನ್ನ ಬಳಿ ಹಣ ಕಟ್ಟಿಸಿಕೊಂಡ ಶರತ್ ಎಂಬಾತನನ್ನು ಹುಡುಕಾಡಿದೆ. ಇತ್ತೀಚೆಗೆ ಸಿಕ್ಕಿದ್ದು, ಅವನು ಜಮಾಟೋದಲ್ಲಿ ಫುಡ್ ಡೆಲವರಿ ಮಾಡ್ತಿದ್ದಾನೆ. ಕೇಳಿದ್ದಕ್ಕೆ ನಾನು ಮೋಸ ಹೋಗಿದ್ದೀನಿ ಎಂದ. ನಮ್ಮ ಹಣೆ ಬರಹ ಸರಿಯಿರಲಿಲ್ಲ ಅಂತ ಅನ್ನಿಸುತ್ತೆ. ಗೊತ್ತಿದ್ದು ಹಳ್ಳಕ್ಕೆ ಬಿದ್ದೆವು ಎಂದು ಮೂರ್ತಿ ತಾನು ಮೋಸ ಹೋದ ಕಥೆಯನ್ನು ಒನ್ ಇಂಡಿಯಾ ಕನ್ನಡಕ್ಕೆ ವಿವರಿಸಿದರು.

500 ಕ್ಕೂ ಹೆಚ್ಚು ಜನರಿಂದ ದೂರು:
ಕಣ್ವ ಸಮೂಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವರು ಇದೀಗ ಸಾಲುಗಟ್ಟಿ ಸಿಐಡಿ ಅಧಿಕಾರಿಗಳ ಮುಂದೆ ದೂರು ಸಲ್ಲಿಸುತ್ತಿದ್ದಾರೆ. ಕಳೆದ ಮೂರು ದಿನದಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚು ಮಂದಿ ದೂರು ಸಲ್ಲಿಸಿದ್ದು, ವಂಚನೆ ಪ್ರಕರಣ 226 ಕೋಟಿ ರೂ. ದುಪ್ಪಟ್ಟು ಆಗುವ ಸಾಧ್ಯತೆಯಿದೆ. ಇನ್ನೂ ದೂರುಗಳು ಜಾಸ್ತಿಯಾಗುವ ಸಾಧ್ಯತೆಯಿದೆ.












Click it and Unblock the Notifications